ಕರ್ನಾಟಕ

karnataka

By

Published : Jul 7, 2023, 5:07 PM IST

Updated : Jul 7, 2023, 6:00 PM IST

ETV Bharat / state

ಇದು ಪೂರ್ಣ ಬಜೆಟ್​, ಪಂಚ ಗ್ಯಾರಂಟಿಗಳಿಗೆ ಅಗತ್ಯ ಹಣ ಮೀಸಲು: ಸಿಎಂ ಸಿದ್ದರಾಮಯ್ಯ

ಬಜೆಟ್​ ಮಂಡನೆಯ ಬಳಿಕ ಸಿಎಂ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿ ನಡೆಸಿ ಆಯವ್ಯಯದ ವಿವರಗಳನ್ನು ನೀಡಿದರು.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಸುದ್ದಿಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ ಮಾತು

ಬೆಂಗಳೂರು:ಕಾಂಗ್ರೆಸ್​ ಸರ್ಕಾರ ನುಡಿದಂತೆ ನಡೆದಿದೆ. ನೀಡಿದ ಭರವಸೆಗಳನ್ನು ಬಜೆಟ್​ನಲ್ಲಿ ಮಂಡಿಸಲಾಗಿದೆ. ಇದು ಪೂರ್ಣ ಪ್ರಮಾಣದ ಬಜೆಟ್​ ಆಗಿದೆ. ಪಂಚ ಗ್ಯಾರಂಟಿಗಳ ಸಮೇತ ಎಲ್ಲ ಯೋಜನೆಗಳಿಗೆ ಅನುದಾನವನ್ನು ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಬಜೆಟ್​​​ ಬಗ್ಗೆ ವಿವರಣೆ ನೀಡಿದರು.

ಬಜೆಟ್​ ಮಂಡನೆ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, 2022-23 ನೇ ಸಾಲಿನಲ್ಲಿ 2 ಲಕ್ಷ 65 ಸಾವಿರ 720 ಕೋಟಿ ರೂಪಾಯಿ ಬಜೆಟ್​ ಮಂಡಿಸಲಾಗಿತ್ತು. ನಾವು 3 ಲಕ್ಷ 27 ಸಾವಿರ 747 ಕೋಟಿ ರೂಪಾಯಿ ಗಾತ್ರದ ಬಜೆಟ್​ ಮಂಡಿಸಿದ್ದೇವೆ. ಪಂಚ ಗ್ಯಾರಂಟಿಗಳಿಗಾಗಿ 35 ಸಾವಿರದ 410 ಕೋಟಿ ರೂಪಾಯಿ ಈ ಅವಧಿಗೆ(ಜುಲೈನಿಂದ ಮಾರ್ಚ್​ವರೆಗೆ) ಹಣ ಬೇಕು. ಒಂದು ವರ್ಷಕ್ಕೆ ಪಂಚ ಗ್ಯಾರಂಟಿಗಾಗಿ 52 ಸಾವಿರ ಕೋಟಿಗೂ ಹೆಚ್ಚು ಹಣ ಅಗತ್ಯವಿದೆ. ಇದೆಲ್ಲವನ್ನೂ ಬಜೆಟ್​ನಲ್ಲಿ ನೀಡಲಾಗಿದೆ ಎಂದು ಅವರು ಹೇಳಿದರು.

ಪ್ರಧಾನಿ ಮೋದಿ ಅವರು ಸೇರಿದಂತೆ ಬಿಜೆಪಿಗರು ಉಚಿತ ಗ್ಯಾರಂಟಿಗಳನ್ನು ಟೀಕಿಸುತ್ತಿದ್ದಾರೆ. ಗ್ಯಾರಂಟಿಗಳ ಜಾರಿಗೆ ಬೇಕಾದ ಹಣವನ್ನು ಕ್ರೋಢೀಕರಣ ಮಾಡುತ್ತೇವೆ ಎಂದು ನಾವು ಹೇಳಿದ್ದೆವು. ಕೊಟ್ಟ ಮಾತಿನಂತೆಯೇ ನಾವು ನಡೆದುಕೊಂಡಿದ್ದೇವೆ. ಬಜೆಟ್​ನಲ್ಲಿ ಈ ಎಲ್ಲಾ ಐದು ಗ್ಯಾರಂಟಿಗಳಿಗೆ ಹಣವನ್ನು ಮೀಸಲಿಡಲಾಗಿದೆ ಎಂದು ಅವರು ಹೇಳಿದರು.

ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದ ವಿಪಕ್ಷಗಳು ಟೀಕಿಸಿದ್ದವು. ಆ ರೀತಿ ಆಗದಂತೆಯೆ ಬಜೆಟ್​ ಮಂಡಿಸಿದ್ದೇವೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳಂತೆ 76 ಕಾರ್ಯಕ್ರಮಗಳನ್ನು ಬಜೆಟ್​ನಲ್ಲಿ ಘೋಷಣೆ ಮಾಡಲಾಗಿದೆ. ಬಜೆಟ್​ನಲ್ಲಿ ಈ ಎಲ್ಲದಕ್ಕೂ ಅನುದಾನ ಮೀಸಲಿಡಲಾಗಿದೆ ಎಂದರು.

ಆ.16 ಕ್ಕೆ ಖಾತೆಗೆ ಗೃಹಲಕ್ಷ್ಮಿ ಹಣ:ಗೃಹಲಕ್ಷ್ಮಿ ಯೋಜನೆಯಲ್ಲಿ 1 ಕೋಟಿ 30 ಲಕ್ಷ ಕುಟುಂಬಗಳು ಬರುತ್ತವೆ. ಈ ಅವಧಿಗೆ 17,500 ಕೋಟಿ ರೂಪಾಯಿ ಬೇಕು. ಯೋಜನೆಗಾಗಿ ವರ್ಷಕ್ಕೆ 26,250 ವರ್ಷಕ್ಕೆ ಬೇಕು. ಜುಲೈ 16 ರಿಂದ ಆರಂಭವಾಗಿ ಆಗಸ್ಟ್​ 15 ರವರೆಗೆ ಅರ್ಜಿ ಹಾಕಲು ಅವಕಾಶವಿದೆ. ಕುಟುಂಬದ ಯಜಮಾನಿಗೆ ಆಗಸ್ಟ್​ 16 ರಿಂದ 2 ಸಾವಿರ ರೂಪಾಯಿ ಹಣವನ್ನು ಖಾತೆಗೆ ಹಾಕಲಾಗುವುದು. 1 ಕೋಟಿ 30 ಲಕ್ಷ ಫಲಾನುಭವಿಗಳಿದ್ದಾರೆ. ಮನೆಯ ಯಜಮಾನಿ ಅತ್ತೆ ಅಥವಾ ಸೊಸೆ ಯಾರೇ ಆಗಿದ್ದರೂ ಅವರಿಗೆ ಹಣ ಸಿಗಲಿದೆ ಎಂದರು.

ಗೃಹ ಜ್ಯೋತಿ ಯೋಜನೆ:ಗೃಹ ಬಳಕೆಯ ವಿದ್ಯುತ್​ ಯೋಜನೆ ಈಗ ಬಳಸುತ್ತಿರುವ ಶೇಕಡಾ 99 ರಷ್ಟು ಫಲಾನುಭವಿಗಳಿಗೆ ಯೋಜನೆ ಸಿಗಲಿದೆ. ಈಗಾಗಲೇ ಕಾರ್ಯಕ್ರಮ ಜಾರಿಗೆ ಬಂದಿದೆ. ಜೂನ್​ 18 ರಿಂದ ಅರ್ಜಿ ಕರೆಯಲಾಗಿದೆ 1 ಕೋಟಿಗೂ ಹೆಚ್ಚು ಜನರ ನೋಂದಾಯಿಸಿಕೊಳ್ಳಲಾಗಿದೆ. ಈ ಯೋಜನೆಗೆ ಈ ಅವಧಿಗೆ(ಜುಲೈ- ಮಾರ್ಚ್​) 9 ಸಾವಿರ ಕೋಟಿ ಬೇಕು. 13,500 ಕೋಟಿ ರೂಪಾಯಿ ವರ್ಷಕ್ಕೆ ಬೇಕು ಎಂದರು.

ಶಕ್ತಿ ಯೋಜನೆ:ಜೂನ್​ 11 ರಿಂದ ಯೋಜನೆ ಆರಂಭಿಸಲಾಗಿದೆ. ಪ್ರತಿದಿನ 49.6 ಲಕ್ಷ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ. 20 ದಿನಗಳಲ್ಲಿ 13.65 ಕೋಟಿ ಜನರು ಪ್ರಯಾಣಿಸಿದ್ದಾರೆ. ಇದಕ್ಕಾಗಿ ಈ ಅವಧಿಗೆ 2,800 ಕೋಟಿ ಹಣ ಬೇಕಿದೆ. ಇಡೀ ವರ್ಷಕ್ಕೆ 4000 ಕೋಟಿ ವೆಚ್ಚ ತಗುಲುತ್ತದೆ.

ಅನ್ನಭಾಗ್ಯ:ಹಿಂದಿನ ಕಾಂಗ್ರೆಸ್​ ಸರ್ಕಾರದಲ್ಲಿ 7 ಕೆಜಿ ಅಕ್ಕಿ ನೀಡಲಾಗುತ್ತಿತ್ತು. ಈಗ 10 ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿದ್ದೇವೆ. ಬಿಪಿಎಲ್​, ಅಂತ್ಯೋದಯ ಸೇರಿದಂತೆ 4.42 ಕೋಟಿ ಫಲಾನುಭವಿಗಳಿಗೆ ಈ ಯೋಜನೆಯ ಲಾಭ ಸಿಗಲಿದೆ. ಇದಕ್ಕಾಗಿ ಈ ಅವಧಿಗೆ 10,275 ಕೋಟಿ ಬೇಕಿದೆ. ಹಸಿವು ಮುಕ್ತ ಕರ್ನಾಟಕಕ್ಕಾಗಿ ಸರ್ಕಾರ ಪಣ ತೊಟ್ಟಿದೆ ಎಂದು ಅವರು ತಿಳಿಸಿದರು.

2.28 ಲಕ್ಷ ಮೆಟ್ರಿಕ್ ಟನ್​ ಅಕ್ಕಿಗಾಗಿ ಎಫ್​ಸಿಐಗೆ ಪತ್ರ ಬರೆದಿದ್ದೆವು. ಆದರೆ, ಕೇಂದ್ರ ಸರ್ಕಾರ ರಾಜಕೀಯಗೊಳಿಸಿ ಅಕ್ಕಿ ನೀಡುವುದನ್ನು ವಿರೋಧಿಸಿತು. ಅಕ್ಕಿ ಸಿಗದ ಕಾರಣ ಹಣ ನೀಡಲಾಗುತ್ತಿದೆ. ಜುಲೈ 10 ನೇ ತಾರೀಖಿನಿಂದ ಪ್ರತಿ ಫಲಾನುಭವಿಗಳಿಗೆ 170 ರೂಪಾಯಿ ನೀಡಲಾಗುವುದು. ಮುಂದೆ ಅಕ್ಕಿ ಸಿಗುವವರೆಗೆ ಇದು ಮುಂದುವರಿಯಲಿದೆ. ನೇರವಾಗಿ ಖಾತೆಗೆ ಹಣ ಹಾಕಲಾಗುವುದು. ಅಕ್ಕಿ ಸಿಕ್ಕ ಬಳಿಕ 10 ಕೆಜಿ ಅಕ್ಕಿ ನೀಡಲಾಗುವುದು ಎಂದರು.

ಯುವ ನಿಧಿ:ತೇರ್ಗಡೆಯಾದ ಪದವೀಧರ, ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಗಿದ ಬಳಿಕ 6 ತಿಂಗಳೊಳಗೆ ಕೆಲಸ ಸಿಗದಿದ್ದಲ್ಲಿ ಮುಂದಿನ 24 ತಿಂಗಳವರೆಗೆ (2 ವರ್ಷ) ಕ್ರಮವಾಗಿ 3 ಸಾವಿರ, 1500 ಸಾವಿರ ಪ್ರತಿ ತಿಂಗಳು ನೀಡಲಾಗುವುದು. ಈ ವರ್ಷ ಇದಕ್ಕೆ 1 ಸಾವಿರ ಕೋಟಿ ಖರ್ಚಾಗಲಿದೆ. 3 ಲಕ್ಷ 70 ಸಾವಿರ ಫಲಾನುಭವಿಗಳಿದ್ದಾರೆ. 6 ತಿಂಗಳಲ್ಲಿ ಕೆಲಸ ಸಿಕ್ಕಲ್ಲಿ ಅಂಥವರಿಗೆ ಯೋಜನೆ ರದ್ದಾಗಲಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.

ಇದನ್ನೂ ಓದಿ:ಬಜೆಟ್​ ಮಂಡನೆಗೆ ಮೊದಲು ದೇವಸ್ಥಾನದಲ್ಲಿ ಪೂಜೆ ಸಲ್ಲಿಸದೇ ಸಂಪ್ರದಾಯ ಮುರಿದ ಸಿಎಂ ಸಿದ್ದರಾಮಯ್ಯ

Last Updated : Jul 7, 2023, 6:00 PM IST

ABOUT THE AUTHOR

...view details