ಕರ್ನಾಟಕ

karnataka

ETV Bharat / state

ಶಕ್ತಿಕೇಂದ್ರವಾದ ಸಿದ್ದರಾಮಯ್ಯ ನಿವಾಸ: ಪ್ರತಿಪಕ್ಷ ನಾಯಕನ ಮೇಲುಗೈ, ಮತ್ತೊಂದು ನಿದರ್ಶನ

ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯ ನಿರ್ಣಾಯಕ ಪಾತ್ರ ವಹಿಸುತ್ತಾರೆ ಎಂಬುದಕ್ಕೆ ಅವರ ನಿವಾಸದಲ್ಲಿ ಇಂದು ನಡೆದ ಚರ್ಚೆ ಪುಷ್ಟಿ ನೀಡಿದೆ.

By

Published : Apr 14, 2023, 6:59 PM IST

Etv Bharatsiddaramaiah-is-a-supreme-leader-of-congress
ಶಕ್ತಿಕೇಂದ್ರವಾದ ಸಿದ್ದರಾಮಯ್ಯ ನಿವಾಸ: ಪ್ರತಿಪಕ್ಷ ನಾಯಕನ ಮೇಲುಗೈಗೆ ಮತ್ತೊಂದು ನಿದರ್ಶನ

ಬೆಂಗಳೂರು: ರಾಜ್ಯ ಕಾಂಗ್ರೆಸ್​ನಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವರ್ಚಸ್ಸು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂಬುದಕ್ಕೆ ಇಂದು ಸಹ ಒಂದು ನಿದರ್ಶನ ಲಭಿಸಿತು. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರೂ ನಾಯಕರು ಕಾಂಗ್ರೆಸ್ ಶಕ್ತಿ ಕೇಂದ್ರವಾಗಿ ಗುರುತಿಸಿಕೊಳ್ಳುತ್ತಲೇ ಬಂದಿದ್ದಾರೆ. ಒಮ್ಮೊಮ್ಮೆ ಒಬ್ಬೊಬ್ಬರ ಕೈ ಮೇಲಾಗುತ್ತಾ ಇರುತ್ತದೆ. ವಲಸಿಗರಾಗಿರುವ ಸಿದ್ದರಾಮಯ್ಯ ಹಾಗೂ ಮೂಲ ಕಾಂಗ್ರೆಸ್ಸಿಗರಾಗಿರುವ ಡಿ.ಕೆ.ಶಿವಕುಮಾರ್ ನಡುವೆ ಆಗಾಗ ಪ್ರತಿಷ್ಠೆ ಪಣಕ್ಕಿಡುವ ಸನ್ನಿವೇಶಗಳು ಗೋಚರಿಸುತ್ತಿರುತ್ತವೆ. ಇಂದೂ ಸಹ ಅಂಥದ್ದೇ ಒಂದು ಸನ್ನಿವೇಶ ನಿರ್ಮಾಣವಾಯಿತು.

ಬಿಜೆಪಿಯಿಂದ ಕಾಂಗ್ರೆಸ್​ಗೆ ವಲಸೆ ಬಂದಿರುವ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಕೈ ನಾಯಕರ ಜೊತೆ ಸಮಾಲೋಚನೆ ನಡೆಸಲು ಆಗಮಿಸಿದ ಸ್ಥಳ ವಿಶೇಷವಾಗಿ ಗಮನ ಸೆಳೆಯಿತು. ಕಾಂಗ್ರೆಸ್ ಪಕ್ಷದಲ್ಲಿ ಈಗಲೂ ಸಿದ್ದರಾಮಯ್ಯ ಅವರೇ ನಿರ್ಣಾಯಕ ನಾಯಕ. ಪಕ್ಷದಲ್ಲಿ ಇರುವ ನಾಯಕರು ಹಾಗೂ ಹೊರಗಿನಿಂದ ಬರುವವರು ಇವರನ್ನೇ ನಂಬಿಕೊಂಡು ಬರುತ್ತಿದ್ದಾರೆ ಎಂಬುದು ಇಂದು ಸಾಬೀತಾಯಿತು.

ಬಿಜೆಪಿ ಪಕ್ಷವನ್ನ ತ್ಯಜಿಸಿ ಕಾಂಗ್ರೆಸ್ ಸೇರಲು ನಿರ್ಧರಿಸಿದ್ದ ಲಕ್ಷ್ಮಣ್​ ಸವದಿ ಮೊದಲು ಮಾತುಕತೆಗೆ ಆಗಮಿಸಿದ್ದು ಸಿದ್ದರಾಮಯ್ಯ ಸರ್ಕಾರಿ ನಿವಾಸಕ್ಕೆ. ಬೆಂಗಳೂರಿನ ಶಿವಾನಂದ ವೃತ್ತ ಸಮೀಪ ಇರುವ ಸಿದ್ದರಾಮಯ್ಯ ಸರ್ಕಾರಿ ನಿವಾಸಕ್ಕೆ ಲಕ್ಷ್ಮಣ್ ಸವದಿ ಭೇಟಿ ನೀಡಿದ ಸಂದರ್ಭ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಆಗಮಿಸಿ ಮಾತುಕತೆ ನಡೆಸಿದರು. ಸಭೆ ನಡೆಸಲು ಬೇರೆ ಬೇಕಾದಷ್ಟು ಸ್ಥಳ ಇದ್ದರೂ ಪ್ರತಿಪಕ್ಷ ನಾಯಕರ ನಿವಾಸಕ್ಕೆ ಸವದಿ ತೆರಳಿರುವುದು ಗಮನ ಸೆಳೆಯಿತು.

ರಾಜ್ಯ ವಿಧಾನಸಭೆ ಚುನಾವಣೆ ಘೋಷಣೆಯಾಗುವ ಮುನ್ನ ಹಾಗೂ ನಂತರದ ದಿನಗಳಲ್ಲಿ ಮುಂದಿನ ಸಿಎಂ ವಿಚಾರವಾಗಿ ಚರ್ಚೆ ಬಂದಾಗಲೆಲ್ಲ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೆಸರುಗಳು ಮುಂಚೂಣಿಯಲ್ಲಿ ಕೇಳಿ ಬರುತ್ತಿದ್ದವು. ಶಾಸಕಾಂಗ ಪಕ್ಷದ ನಾಯಕರು ಆಗಿರುವ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಶಾಸಕರು ಹಾಗೂ ಹಿರಿಯ ನಾಯಕರು ದೊಡ್ಡಮಟ್ಟದ ವಿಶ್ವಾಸವನ್ನು ಹೊಂದಿದ್ದರೆ, ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷದ ಚುಕ್ಕಾಣಿ ಹಿಡಿದಿರುವ ಡಿ.ಕೆ.ಶಿವಕುಮಾರ್ ಹೊಸದೊಂದು ನಿರೀಕ್ಷೆಯನ್ನು ಮೂಡಿಸುವ ನಾಯಕರಾಗಿ ಬೆಳೆದಿದ್ದಾರೆ.

ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ವಿಚಾರದಲ್ಲಿಯೂ ಸಹ ಸಿದ್ದರಾಮಯ್ಯ ತಮ್ಮವರಿಗೆ ಟಿಕೆಟ್ ಕೊಡಿಸುವಲ್ಲಿ ದೊಡ್ಡಮಟ್ಟದ ಯಶಸ್ಸು ಕಂಡಿದ್ದಾರೆ. ಹೈಕಮಾಂಡ್ ನಾಯಕರ ಮಟ್ಟದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿರುವ ಅವರು ಅಂತಹಂತವಾಗಿ ಕೆಪಿಸಿಸಿ ಅಧ್ಯಕ್ಷರಿಗಿಂತಲೂ ತಾವೇ ಮುಂದು ಎಂಬ ರೀತಿ ಬಿಂಬಿಸಿಕೊಳ್ಳುತ್ತಿದ್ದಾರೆ.

ಮತದಾರರು ಈ ಸಾರಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡುತ್ತಾರೆ ಎನ್ನುವುದು ಇನ್ನೂ ದೃಢಪಟ್ಟಿಲ್ಲ. ಸಮೀಕ್ಷೆಗಳು ಸಹ ಸ್ಪಷ್ಟ ಉತ್ತರವನ್ನು ತೋರಿಸುತ್ತಿಲ್ಲ. ಈ ನಡುವೆ ಒಂದೊಮ್ಮೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಗಾದಿಗೆ ನಡೆದಿರುವ ತೀವ್ರ ಪೈಪೋಟಿಯಲ್ಲಿ ಇಂದಿನ ಬೆಳವಣಿಗೆ ಸಿದ್ದರಾಮಯ್ಯರನ್ನ ಕೊಂಚ ಮುಂದಕ್ಕೆ ತಂದು ನಿಲ್ಲಿಸಿದೆ. ಅಂತಿಮವಾಗಿ ಯಾರ ಕೈ ಮೇಲಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:ಮುಸ್ಲಿಂ ಮೀಸಲಾತಿ ರದ್ದತಿಗೆ ಸುಪ್ರೀಂ ಕೋರ್ಟ್ ತಪರಾಕಿ ನಿರೀಕ್ಷಿತ: ಸಿದ್ದರಾಮಯ್ಯ

ABOUT THE AUTHOR

...view details