ಕರ್ನಾಟಕ

karnataka

By

Published : May 8, 2020, 2:57 PM IST

ETV Bharat / state

ಪ್ರತಿಪಕ್ಷಗಳು, ರೈತ ಮುಖಂಡರ ಸಭೆಯಲ್ಲಿ ಸಿಎಂಗೆ ಸಿದ್ದರಾಮಯ್ಯ ಒತ್ತಾಯವೇನು?

ಕೊರೊನಾ ಪ್ಯಾಕೇಜ್​ನಲ್ಲಿ ಕಾರ್ಮಿಕರಿಗೆ ಒಂದು ಬಾರಿಗೆ ಐದು ಸಾವಿರ ರೂ ಕೊಡುವ ಬದಲು ಕೊರೊನಾ ಮುಗಿಯುವವರೆಗೆ ಪ್ರತಿ ತಿಂಗಳು ಎರಡು ಸಾವಿರ ರೂ ಕೊಡಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಿಎಂ ಯಡಿಯೂರಪ್ಪಗೆ ಸಲಹೆ ನೀಡಿದ್ದಾರೆ.

meeting
ಸಭೆ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿರುವ ಕೊರೊನಾ ಪ್ಯಾಕೇಜ್ ಸ್ವಾಗತಾರ್ಹ. ಆದರೆ, ಹಲವಾರು ಮಂದಿಯನ್ನು ಪ್ಯಾಕೇಜ್‌ನಿಂದ ಹೊರಗಿಡಲಾಗಿದೆ. ಅವರನ್ನೂ ಪ್ಯಾಕೇಜ್ ವ್ಯಾಪ್ತಿಗೆ ಸೇರಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

'ಕೊರೊನಾ ಸೋಂಕನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ'

ಮುಖ್ಯಮಂತ್ರಿಗಳ ಜೊತೆಗಿನ ಪ್ರತಿಪಕ್ಷಗಳು, ರೈತ ಮುಖಂಡರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ವಿವಿಧ ವರ್ಗಗಳ ಅನೇಕ ಜನರು ಭೇಟಿಯಾಗಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ಅದನ್ನು ಸರ್ಕಾರದ ಗಮನಕ್ಕೆ ತರುವುದು ವಿರೋಧ ಪಕ್ಷದ ನಾಯಕನಾಗಿ ನನ್ನ ಕರ್ತವ್ಯ. ಕೇಂದ್ರ ಸರ್ಕಾರ ಲಾಕ್​ಡೌನ್​ ಘೋಷಣೆಗೆ ಮುನ್ನ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೆ ಕೊರೊನಾ ಸೋಂಕು ರಾಜ್ಯದಲ್ಲಿ ಉಲ್ಬಣ ಆಗುತ್ತಿರಲಿಲ್ಲ. ವಿಮಾನಗಳ ಹಾರಾಟ ಮೊದಲೇ ನಿಲ್ಲಿಸಿ ವಲಸೆ ಕಾರ್ಮಿಕರಿಗೆ ಸೌಲಭ್ಯಗಳನ್ನು ಒದಗಿಸಬೇಕಿತ್ತು. ಕೊರೊನಾ ಸೋಂಕನ್ನು 'ರಾಷ್ಟ್ರೀಯ ವಿಪತ್ತು' ಎಂದು ಘೋಷಿಸಬೇಕು.

'ಕೇಂದ್ರದಿಂದ ಹಣಕಾಸು ನೆರವು ಕೇಳಿ'

ಹಾಗೆಯೇ ಪಿಎಂ ಕೇರ್ಸ್‌ನಲ್ಲಿ 35 ಸಾವಿರ ಕೋಟಿ ರೂ ಇದೆ. ಅದರಲ್ಲಿ ನಯಾಪೈಸೆ ರಾಜ್ಯಕ್ಕೆ ಬಂದಿಲ್ಲ. ರಾಜ್ಯದಿಂದ ಹೋಗಿರುವ ಹಣವನ್ನಾದರೂ ನಮಗೆ ಕೇಂದ್ರ ಕೊಡಬೇಕಿತ್ತು. ಜನರ ಬಳಿ ಹಣವಿಲ್ಲ ಎಂದರೆ ಖರೀದಿ ಮಾಡುವ ಶಕ್ತಿ ಇರುವುದಿಲ್ಲ. ಖರೀದಿ ಇಲ್ಲ ಎಂದಾದರೆ ಮಾರುಕಟ್ಟೆಯಲ್ಲಿ ಯಾವುದಕ್ಕೂ ಬೇಡಿಕೆ ಇರದು. ಖರೀದಿ ಶಕ್ತಿ ಜನರಿಗೆ ಬಂದರೆ ಆರ್ಥಿಕ ಚಟುವಟಿಕೆಗಳು ಬೆಳೆಯುತ್ತವೆ ಎಂದು ತಜ್ಞರು ಹೇಳಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರವನ್ನು ನೆರವಿಗೆ ಒತ್ತಾಯಿಸಿ ಎಂದು ಸಲಹೆ ನೀಡಿದರು.

'ಕಾರ್ಮಿಕರಿಗೆ ಲಾಕ್‌ಡೌನ್ ಮುಗಿಯುವರೆಗೆ 2 ಸಾವಿರ ರೂ ಕೊಡಿ'

ಕಾರ್ಮಿಕರಿಗೆ ಒಂದು ಬಾರಿಗೆ ಐದು ಸಾವಿರ ರೂ ಕೊಡುವ ಬದಲು ಕೊರೊನಾ ಮುಗಿಯುವವರೆಗೆ ಪ್ರತಿ ತಿಂಗಳು ಎರಡು ಸಾವಿರ ಕೊಡಿ. ವಿವಿಧ ಸಂಸ್ಥೆಗಳಲ್ಲಿ‌ ಸರ್ಕಾರದ ಹಣ ಇದೆ. ಆದಾಯ ಎಂದು ಹೇಳಿ ಕೇಂದ್ರ ಅದನ್ನು ವಶಪಡಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಇರುವ ಹಣವನ್ನು ಸಂತ್ರಸ್ತರಿಗಾಗಿ ಖರ್ಚು ಮಾಡಿ.‌ ಕೊರೊನಾ ಸೋಂಕು‌ ಪರೀಕ್ಷೆ ಪ್ರಮಾಣ ಹೆಚ್ಚು ಮಾಡಿ. ಪಿಪಿಇ ಕಿಟ್, ಟೆಸ್ಟಿಂಗ್ ಕಿಟ್​ಗಳು ಎಲ್ಲ ಜಿಲ್ಲೆಗಳಲ್ಲಿ ಇರಲಿ ಎಂದರು.

ಜೂನ್, ಜುಲೈ ತಿಂಗಳಲ್ಲಿ ಸೋಂಕು ತೀವ್ರವಾಗುವ ಸಾಧ್ಯತೆ ಇದೆ ಎಂದು ಇಂದು ತಜ್ಞ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮುಂಜಾಗ್ರತೆ ವಹಿಸಿ, ಅಗತ್ಯ ಸಿದ್ಧತೆ ಮಾಡಿಕೊಳ್ಳಿ. ಆಶಾ ಕಾರ್ಯಕರ್ತರಿಗೆ ಪ್ರೋತ್ಸಾಹ ಧನ ಕೊಡಿ. ಹೂವು, ಹಣ್ಣು, ತರಕಾರಿ ಬೆಳೆದು ನಷ್ಟ ಆದವರಿಗೆ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ಪರಿಹಾರ ಕೊಡಿ. ಅಕ್ಕಸಾಲಿಗರು, ಬಡಗಿಗಳು, ಚಮ್ಮಾರರು, ದರ್ಜಿಗಳು, ಕಮ್ಮಾರರು ಸೇರಿದಂತೆ ವಿವಿಧ ವರ್ಗದ ಜನರನ್ನೂ ಪ್ಯಾಕೇಜ್ ನಲ್ಲಿ ಸೇರಿಸಿ ಎಂದು ಸಿಎಂಗೆ ಮನವಿ ಮಾಡಿದರು.

ABOUT THE AUTHOR

...view details