ಕರ್ನಾಟಕ

karnataka

By

Published : Feb 3, 2021, 7:31 PM IST

Updated : Feb 3, 2021, 8:20 PM IST

ETV Bharat / state

ಯಡಿಯೂರಪ್ಪ ಎಂಜಿನ್ ಆಫ್ ಆಗಿರುವ ಬಸ್ ಡ್ರೈವ್ ಮಾಡುತ್ತಿದ್ದಾರೆ: ಸಿದ್ದರಾಮಯ್ಯ

ಇಂದು ಕಲಾಪದಲ್ಲಿ ಬಿಜೆಪಿ ಸರ್ಕಾರ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗಿದ್ದು, ಸಿಎಂ ಯಡಿಯೂರಪ್ಪ, ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ.

ಸಿದ್ದರಾಮಯ್ಯ
Siddaramaiah

ಬೆಂಗಳೂರು: ಯಡಿಯೂರಪ್ಪ ಎಂಜಿನ್ ಆಫ್ ಆಗಿರುವ ಬಸ್ ಡ್ರೈವ್ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.

ಬಿಜೆಪಿ ವಿರುದ್ದ ಗುಡುಗಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ರಾಜ್ಯಪಾಲರ ಭಾಷಣಕ್ಕೆ ವಂದನೆ ಸೂಚಿಸುವ ನಿರ್ಣಯದ ಮೇಲೆ ಮಾತು ಮುಂದುವರೆಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ನಮ್ಮ ಸರ್ಕಾರವನ್ನು ಟೇಕಾಫ್ ಆಗಿಲ್ಲ ಅಂತಾ ಟೀಕಿಸುತ್ತಿದ್ದರು‌. ಈಗ ಯಾವ ಶಾಸಕರನ್ನಾದರೂ ಕೇಳಿ, ಯಾರಿಗಾದರೂ ಯಾವುದಾದರೂ ಅನುದಾನ ಬಂದಿದೆಯಾ? ಯಾರು ಕೇಳಿದರು ಕೊರೊನಾ ನೆಪ ಹೇಳಿ ದುಡ್ಡಿಲ್ಲ ಎನ್ನುತ್ತಾರೆ‌. ಈ ವರ್ಷ ಡಿಸೆಂಬರ್​​ವರೆಗೆ 63,000 ಕೋಟಿ ರೂ. ಸಾಲ ತೆಗೆದುಕೊಂಡಿದ್ದಾರೆ. ಎಲ್ಲಿ ಹೋಯ್ತು ದುಡ್ಡು, ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಆರೋಗ್ಯ ಇಲಾಖೆಯಲ್ಲಿ 1,500 ಕೋಟಿ ಮಾತ್ರ ಖರ್ಚಾಗಿದೆ. ಹಾಗಾದರೆ ಉಳಿದ ಹಣ ಎಲ್ಲಿ ಹೋಯ್ತು ಎಂದು ಪ್ರಶ್ನಿಸಿದರು.

ಆರ್ಥಿಕ ನಿರ್ವಹಣೆಯಲ್ಲಿ ವಿಫಲವಾಗಲು ಕೇಂದ್ರ ಸರ್ಕಾರ ಮುಖ್ಯ ಕಾರಣ:

ಈ ವರ್ಷದ ಬಜೆಟ್ ಪ್ರಕಾರ 52,000 ಕೋಟಿ ರೂ. ಸಾಲ ಮಾಡಬೇಕಿತ್ತು. ಆದರೆ 35,000 ಕೋಟಿ ಹೆಚ್ಚುವರಿಯಾಗಿ ತೆಗೆದುಕೊಂಡಿದ್ದೀರಿ. ಸರ್ಕಾರ ಆರ್ಥಿಕ ನಿರ್ವಹಣೆಯಲ್ಲಿ ವಿಫಲವಾಗಲು ಮುಖ್ಯ ಕಾರಣ ಕೇಂದ್ರ ಸರ್ಕಾರ. ಕೇಂದ್ರದ ತೆರಿಗೆ ಬಾಕಿ ಶೇ. 39.9ರಷ್ಟು ಕೊರತೆಯಾಗಿದ್ದೇ ಎಲ್ಲಾ ಸಮಸ್ಯೆಗಳಿಗೆ ಕಾರಣವಾಯ್ತು. ಕೇಂದ್ರ ಪ್ರಾಯೋಜಕತ್ವದ ಗ್ರಾಂಟ್​​ಗಳಲ್ಲಿ ಶೇ. 24 ಹಾಗೂ ಸ್ಪೆಷಲ್ ಗ್ರಾಂಟ್ 5,495 ಕೋಟಿ ರೂ. ಏಕೆ ಬರಲಿಲ್ಲ ಎಂದು ಕಿಡಿಕಾರಿದರು.

ನಾನು ಮುಖ್ಯಮಂತ್ರಿಯಾಗಿದ್ರೆ ಧರಣಿ ಮಾಡುತ್ತಿದ್ದೆ:

ಕೇಂದ್ರಕ್ಕೆ ಕರ್ನಾಟಕವೊಂದೇ 2.50 ಲಕ್ಷ ಕೋಟಿ ತೆರಿಗೆ ನೀಡುತ್ತಿದೆ. ಆದರೆ ಅದಕ್ಕೆ ಪ್ರತಿಯಾಗಿ ಕರ್ನಾಟಕಕ್ಕೆ ಕೇಂದ್ರದಿಂದ ಬರುತ್ತಿರುವುದು ಎಷ್ಟು? ಪೆಟ್ರೋಲ್ ಸೆಸ್ 23.77 ರೂ., ಡೀಸೆಲ್ ಸೆಸ್ 31.84 ರೂ. ಹೆಚ್ಚಳ ಮಾಡಲಾಗಿದೆ. ಇದು ಕೇಂದ್ರ ಸರ್ಕಾರ ಮಾಡುತ್ತಿರುವ ಸುಲಿಗೆಯಾಗಿದೆ. ಯಾರ ಜೇಬಿಗೆ ಕೇಂದ್ರ ಸರ್ಕಾರ ಕೈ ಹಾಕಿದೆ ಅರ್ಥ ಮಾಡಿಕೊಳ್ಳಿ. ಪೆಟ್ರೋಲ್ ಬೆಲೆ 90 ರೂ., ಡೀಸೆಲ್ ಬೆಲೆ 80 ರೂ.ಗೆ ಬಂದು ಮುಟ್ಟಿದೆ. ಪೆಟ್ರೋಲ್ ಕಚ್ಚಾ ತೈಲದ ಬೆಲೆ ಬ್ಯಾರಲ್​​ಗೆ 50 ಡಾಲರ್​​ಗಿಂತ ಕಮ್ಮಿ ಇದೆ. ಆದರೂ ಇಷ್ಟೊಂದು ಪ್ರಮಾಣದಲ್ಲಿ ಬೆಲೆ ಏರಿಕೆ ಏಕೆ? ಯುಪಿಎ ಸರ್ಕಾರದ ಅವಧಿಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರಲ್​ಗೆ 100 ಡಾಲರ್ ಇದ್ದಾಗಲೂ ಪೆಟ್ರೋಲ್ ಬೆಲೆ ಇಷ್ಟೊಂದು ಏರಿಕೆಯಾಗಿರಲಿಲ್ಲ. ಈಗ ಮತ್ತೆ ಪೆಟ್ರೋಲ್ ಮೇಲೆ ಸೆಸ್ ಹಾಕಿದ್ದಾರೆ. ಅಬಕಾರಿ ಸುಂಕ ಹತ್ತು ಪಟ್ಟು ಹೆಚ್ಚಿಸಲಾಗಿದೆ. ನಮ್ಮ ಸರ್ಕಾರ ಇದ್ದಿದ್ದು ನಾನೇ ಮುಖ್ಯಮಂತ್ರಿ ಆಗಿದ್ದಿದ್ದರೆ ತೆರಿಗೆ ಪಾಲು ಕೊಡದ ಕೇಂದ್ರ ಸರ್ಕಾರದ ವಿರುದ್ಧ ಪಾರ್ಲಿಮೆಂಟ್ ಮುಂದೆ ಧರಣಿ ಮಾಡುತ್ತಿದ್ದೆ ಎಂದು ಕಿಡಿಕಾರಿದರು.

ಓದಿ: ಜಾಮೀನಿನ ಮೇಲೆ ಹೊರಗಿರುವ ಯಡಿಯೂರಪ್ಪ ಸಿಎಂ ಹುದ್ದೆಯಲ್ಲಿ ಮುಂದುವರೆಯುವುದು ಸರಿಯೇ: ಸಿದ್ದರಾಮಯ್ಯ ಪ್ರಶ್ನೆ

ಬಡವರ ಊಟಕ್ಕೆ ಕಲ್ಲು:

ಕುರಿ ಸತ್ತರೆ ಪರಿಹಾರ ಕೊಡುವ ಅನುಗ್ರಹ ಕಾರ್ಯಕ್ರಮ ಯಾಕೆ ನಿಲ್ಲಿಸಿದ್ದೀರಿ ಎಂದು ಪ್ರಶ್ನಿಸಿದರು. ಕುರಿ ಬಿಟ್ಟು ಬೇರೆ ಕೇಳಿ ಎಂದು ಸಿಎಂ ಚಟಾಕಿ ಹಾರಿಸಿದರು. ಆಗ ಸಿದ್ದರಾಮಯ್ಯ, ಕುರಿ ಬಗ್ಗೆ ಯಾಕೆ ಕೇಳಬಾರದು ಎಂದು ಪ್ರಶ್ನಿಸಿದರು. ಇಂದಿರಾ ಗಾಂಧಿಯವರ ಹೆಸರು ಇಟ್ಟ ಕಾರಣಕ್ಕೆ ಇಂದಿರಾ ಕ್ಯಾಂಟೀನ್ ನಿಲ್ಲಿಸಿದ್ದೀರಿ‌. ನೀರು ಕಟ್ ಮಾಡಿದ್ದೀರಿ. ಹೊಟ್ಟೆ ತುಂಬಾ ಬಡವರು ಊಟ ಮಾಡುತ್ತಿದ್ದಕ್ಕೂ ಕಲ್ಲು ಹಾಕಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.

Last Updated : Feb 3, 2021, 8:20 PM IST

ABOUT THE AUTHOR

...view details