ಕರ್ನಾಟಕ

karnataka

ETV Bharat / state

ಮೀನುಗಾರಿಕೆ ಅಭಿವೃದ್ಧಿ ನಿಗಮದ ಮೂಲಕ ಮನೆಗಳ ನಿರ್ಮಾಣಕ್ಕೆ ಕ್ರಮ: ಕೋಟಾ ಶ್ರೀನಿವಾಸ ಪೂಜಾರಿ - ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸುದ್ದಿ

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಮತ್ಸ್ಯತ್ರಯ ಯೋಜನೆಯನ್ನು ರಾಜೀವ್‍ ಗಾಂಧಿ ವಸತಿ ನಿಗಮದಿಂದ ವಾಪಸ್ ಪಡೆದು ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಮೂಲಕ ಮನೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

shrinivas-pujari
ಕೋಟಾ ಶ್ರೀನಿವಾಸ ಪೂಜಾರಿ

By

Published : Mar 16, 2020, 5:13 PM IST

ಬೆಂಗಳೂರು: ಮತ್ಸ್ಯತ್ರಯ ಯೋಜನೆಯನ್ನು ರಾಜೀವ್‍ ಗಾಂಧಿ ವಸತಿ ನಿಗಮದಿಂದ ವಾಪಸ್ ಪಡೆದು ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಮೂಲಕ ಮನೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಜರಾಯಿ ಹಾಗೂ ಮೀನುಗಾರಿಕೆ ಸಚಿವ ಕೋಟಾ ಶ್ರೀನಿವಾಸಪೂಜಾರಿ ಹೇಳಿದರು.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಶಾಸಕ ಲಾಲಾಜಿ ಆರ್.ಮೆಂಡನ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 2017-18ನೇ ಸಾಲಿನಲ್ಲಿ ಮೂರು ಸಾವಿರ ಮನೆಗಳನ್ನು ನಿರ್ಮಾಣ ಮಾಡಲು ರಾಜೀವ್‌ ಗಾಂಧಿ ವಸತಿ ನಿಗಮಕ್ಕೆ ವಹಿಸಿ 2,470 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಆದರೆ, ನಿಗಮದಿಂದ ಮನೆ ನಿರ್ಮಾಣ ಕಾರ್ಯ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ವಾಪಸ್ ಪಡೆಯಲಾಗುತ್ತಿದೆ.

ಬಸವ ವಸತಿ ಯೋಜನೆಗೆ ನೀಡಲಾಗುವ ಪ್ರಮಾಣದಲ್ಲೇ ಮೀನುಗಾರರ ವಸತಿ ಯೋಜನೆಗೂ ಅನುದಾನ ಒದಗಿಸಲಾಗಿದೆ. ಅನುದಾನ ಹೆಚ್ಚಳ ಮಾಡಬೇಕೆಂಬ ಬೇಡಿಕೆ ಬಗ್ಗೆ ಸಂಪುಟಸಭೆಯಲ್ಲಿ ಒಪ್ಪಿಗೆ ಪಡೆದು ಪರಿಶೀಲನೆ ಮಾಡಲಾಗುವುದು ಎಂದು ಹೇಳಿದರು.

ದೇವಾಲಯಗಳ ಅಭಿವೃದ್ಧಿಗೆ ಹಣ:

ರಾಜ್ಯದಲ್ಲಿರುವ ಮುಜರಾಯಿ ಮತ್ತು ಮುಜರಾಯಿಯೇತರ ದೇವಾಲಯಗಳ ಅಭಿವೃದ್ಧಿಗೆ ಕಳೆದ ಮೂರು ವರ್ಷಗಳಲ್ಲಿ 291.87 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ದೇವಾಲಯಗಳ ದುರಸ್ತಿ, ಜೀರ್ಣೋದ್ಧಾರ, ಆರಾಧನಾ ಯೋಜನೆ, ಪರಿಶಿಷ್ಟ ಜಾತಿ ಉಪ ಯೋಜನೆ, ಗಿರಿಜನ ಉಪ ಯೋಜನೆಯಡಿ ಹಣ ಬಿಡುಗಡೆ ಮಾಡಲಾಗಿದೆ ಎಂದರು.

ಒಂದು ಕೋಟಿ ರೂ.ವರೆಗಿನ ದೇವಾಲಯದ ಅಭಿವೃದ್ಧಿ ಕಾರ್ಯಗಳಿಗೆ ಹಣವನ್ನು ಜಿಲ್ಲಾಧಿಕಾರಿಯೇ ಮಂಜೂರು ಮಾಡಬಹುದು. ಒಂದು ಕೋಟಿಗಿಂತ ಹೆಚ್ಚಿದ್ದರೆ ಮುಜರಾಯಿ ಆಯುಕ್ತರು ಮಂಜೂರಾತಿ ನೀಡಬೇಕಾಗುತ್ತದೆ. ದೇವಾಲಯಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಣ ಬಿಡುಗಡೆ ವಿಳಂಬವಾಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗುವುದು. ಮುಜರಾಯಿ ಇಲಾಖೆಯ ಸೇವೆಗಳನ್ನು ಸಕಾಲ ಹಾಗೂ ಇ-ಆಡಳಿತದಡಿ ತರಲು ಚರ್ಚಿಸಲಾಗಿದೆ ಎಂದರು.

ABOUT THE AUTHOR

...view details