ಬೆಂಗಳೂರು: ಕಂದಾಯ ಹಾಗೂ ಪೊಲೀಸ್ ಇಲಾಖೆಯಲ್ಲಿ ಬಳಸಲಾಗುತ್ತಿರುವ ಪರ್ಷಿಯನ್ ಪದಗಳ ಬಳಕೆಗೆ ಪರ್ಯಾಯವಾಗಿ ಕನ್ನಡ ಪದಗಳನ್ನು ಬಳಸುವ ಪರಿಪಾಠವನ್ನು ಆರಂಭಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಮನವಿ ಮಾಡಿದ್ದಾರೆ.
ತಹಸೀಲ್ದಾರ್, ದಫೇದಾರ್, ಶಿರಸ್ತೇದಾರ್ ಪದಗಳನ್ನು ನಿಷೇಧಿಸಿ: ಶೋಭಾ ಕರಂದ್ಲಾಜೆ - bangalore news
ತಹಸೀಲ್ದಾರ್, ದಫೇದಾರ್ , ಶಿರಸ್ತೇದಾರ್ ಇದ್ಯಾವುದು ಕನ್ನಡದ ಪದಗಳಲ್ಲ. ರಾಜ್ಯ ಸರ್ಕಾರ ಇಂದು ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತಿರುವ ಸಂದರ್ಭದಲ್ಲಿ ಈ ಎಲ್ಲಾ ಪದಗಳಿಗೂ ಪರ್ಯಾಯವಾಗಿ ಕನ್ನಡ ಶಬ್ದಗಳನ್ನು ಬಳಕೆ ಮಾಡಬೇಕು ಎಂದು ಮನವಿ ಮಾಡಿದರು.

ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡವನ್ನು ಉಳಿಸಿ ಬೆಳೆಸಬೇಕು. ಈ ನಿಟ್ಟಿನಲ್ಲಿ ಇಂದು ಕರ್ನಾಟಕದಲ್ಲಿ ಅತ್ಯಂತ ಪ್ರಮುಖ ಶಬ್ದಗಳು ಪರ್ಷಿಯನ್ ಭಾಷೆಯಲ್ಲಿವೆ. ತಹಸೀಲ್ದಾರ್, ದಫೇದಾರ್, ಶಿರಸ್ತೇದಾರ್ ಇದ್ಯಾವುದೂ ಕನ್ನಡದ ಪದಗಳಲ್ಲ. ರಾಜ್ಯ ಸರ್ಕಾರ ಇಂದು ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತಿರುವ ಸಂದರ್ಭದಲ್ಲಿ ಈ ಎಲ್ಲಾ ಪದಗಳಿಗೂ ಪರ್ಯಾಯವಾಗಿ ಕನ್ನಡ ಶಬ್ದಗಳನ್ನು ಬಳಕೆ ಮಾಡಬೇಕು. ಅದಕ್ಕಾಗಿ ಕನ್ನಡ ಪದಗಳನ್ನು ತಜ್ಞರಿಂದ ಹುಡುಕಿಸಿ ಮುಂದಿನ ಕನ್ನಡ ರಾಜ್ಯೋತ್ಸವ ಆಚರಣೆಗೆ ವೇಳೆಗೆ ಕನ್ನಡ ಎಂದು ಭಾವಿಸಿ ಬಳಸುತ್ತಿರುವ ಎಲ್ಲಾ ಪರ್ಷಿಯನ್ ಪದಗಳನ್ನು ತೆಗೆದುಹಾಕಬೇಕು ಎಂದು ಆಗ್ರಹ ಮಾಡಿದರು.
ಸಿಬಿಎಸ್ಸಿ, ಐಸಿಎಸ್ಸಿ ಸೇರಿದಂತೆ ಕೆಲ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡವನ್ನೇ ಕಲಿಸುತ್ತಿಲ್ಲ, ಕರ್ನಾಟಕದಲ್ಲಿ ಇದ್ದರೂ ಕನ್ನಡ ಕಲಿಯದೇ ಬದುಕಬಹುದು ಎನ್ನುವ ಭ್ರಮೆಯಲ್ಲಿದ್ದಾರೆ. ಯಾವುದೇ ಶಿಕ್ಷಣ ವ್ಯವಸ್ಥೆಯಲ್ಲಿ ಕರ್ನಾಟಕದಲ್ಲಿ ಕನ್ನಡವನ್ನು ಒಂದು ವಿಷಯವಾಗಿ ಹಾಗೂ ಕಡ್ಡಾಯವಾಗಿ ಅಧ್ಯಯನ ಮಾಡಲೇಬೇಕು ಎನ್ನುವ ಕಾನೂನನ್ನು ಮಾಡಬೇಕು ಎಂದರು.