ಕರ್ನಾಟಕ

karnataka

ETV Bharat / state

ಮೈಸೂರಿನಲ್ಲಿ ಲೈಂಗಿಕ ಕಾರ್ಯಕರ್ತೆ ಕೊಲೆ ಪ್ರಕರಣ; ಅಪರಾಧಿಗೆ ಜೀವಾವಧಿ ಶಿಕ್ಷೆ - ಮೈಸೂರಿನ ಸೆಷೆನ್ಸ್​​ ನ್ಯಾಯಾಲಯ

ಮೈಸೂರಿನಲ್ಲಿ ಲೈಂಗಿಕ ಕಾರ್ಯಕರ್ತೆಯೊಬ್ಬರನ್ನು ಹತ್ಯೆಗೈದು ಚಿನ್ನಾಭರಣ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಸಿ.ಗಿರೀಶ್ ಎಂಬ ಅಪರಾಧಿಗೆ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತು.

high court
ಹೈಕೋರ್ಟ್​

By ETV Bharat Karnataka Team

Published : Oct 5, 2023, 9:32 PM IST

Updated : Oct 6, 2023, 11:13 AM IST

ಬೆಂಗಳೂರು:ಕಳೆದ ಹತ್ತು ವರ್ಷಗಳ ಹಿಂದೆ ಮೈಸೂರಿನಲ್ಲಿ ಲೈಂಗಿಕ ಕಾರ್ಯಕರ್ತೆಯನ್ನು ಹತ್ಯೆ ಮಾಡಿ ಚಿನ್ನಾಭರಣ ದೋಚಿದ್ದ ಪ್ರಕರಣದಡಿ ಮಂಡ್ಯ ಜಿಲ್ಲೆಯ ಕೊರಮೇನಹಳ್ಳಿಯ ಕೆ.ಸಿ.ಗಿರೀಶ್ ಎಂಬಾತನಿಗೆ ಹೈಕೋರ್ಟ್ ಜೀವಾವಧಿ ಶಿಕ್ಷೆ ನೀಡಿ ಆದೇಶಿಸಿದೆ. ಅತ್ಯಾಚಾರ ಮತ್ತು ದರೋಡೆ, ಕೊಲೆ ಆರೋಪದಲ್ಲಿ ಅಪರಾಧಿಯನ್ನು ಖುಲಾಸೆಗೊಳಿಸಿದ ಮೈಸೂರಿನ ಸೆಷೆನ್ಸ್​​ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮೈಸೂರಿನ ಲಕ್ಷರ್​ ಪೊಲೀಸ್​ ಠಾಣೆ ಸಿಬ್ಬಂದಿ ಕ್ರಿಮಿನಲ್​ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್​.ಬಿ.ಪ್ರಭಾಕರ್​ ಶಾಸ್ತ್ರಿ ಮತ್ತು ನ್ಯಾಯಮೂರ್ತಿ ಅನಿಲ್​ ಬಿ.ಕಟ್ಟಿ ಅವರಿದ್ದ ನ್ಯಾಯಪೀಠ ಮೇಲ್ಮನವಿಯನ್ನು ಪುರಸ್ಕರಿಸಿ ವಿಚಾರಣೆ ನಡೆಸಿತು. ಅತ್ಯಾಚಾರ ಆರೋಪದಿಂದ ಆರೋಪಿಯನ್ನು ಮುಕ್ತಗೊಳಿಸಿರುವ ಆದೇಶವನ್ನು ದೃಢಪಡಿಸಿದೆ. ಆದರೆ ಕೊಲೆ ಮತ್ತು ದರೋಡೆ ಆರೋಪದಡಿ ಜೀವಾವಧಿ ಶಿಕ್ಷೆ ವಿಧಿಸಿತು.

ಅಲ್ಲದೇ ಜೀವಾವಧಿ ಶಿಕ್ಷೆ, 30 ಸಾವಿರ ರೂ ದಂಡ ಹಾಗೂ ಕೊಲೆ ಮಾಡುವ ಮುನ್ನ ಆಕೆಯನ್ನು ಅಪಹರಣ ಮಾಡಿದ್ದಕ್ಕೆ 7 ವರ್ಷ ಕಠಿಣ ಶಿಕ್ಷೆ ಹಾಗೂ 10 ಸಾವಿರ ರೂ.ಗಳ ದಂಡ ವಿಧಿಸಿದೆ. ಈ ಎರಡು ಶಿಕ್ಷೆಗಳನ್ನು ಏಕಕಾಲಕ್ಕೆ ಅನುಭವಿಸಬೇಕು. ದಂಡದ ಮೊತ್ತದಲ್ಲಿ 35 ಸಾವಿರ ರೂಪಾಯಿಯನ್ನು ಮೃತ ಮಹಿಳೆಯ ಮಗನಿಗೆ ನೀಡಬೇಕು. ಇನ್ನುಳಿದ 5 ಸಾವಿರ ರೂ. ರಾಜ್ಯ ಸರ್ಕಾರಕ್ಕೆ ಪಾವತಿ ಮಾಡುವಂತೆ ಸೂಚನೆ ನೀಡಿರುವ ನ್ಯಾಯಪೀಠ, ಮುಂದಿನ 45 ದಿನಗಳಲ್ಲಿ ವಿಚಾರಣಾ ನ್ಯಾಯಾಲಯದ ಮುಂದೆ ಶರಣಾಗಬೇಕು ಎಂದು ಸೂಚನೆ ನೀಡಿದೆ. ಸರ್ಕಾರದ ಪರವಾಗಿ ವಕೀಲ ತೇಜಸ್​ ವಾದ ಮಂಡಿಸಿದ್ದರು.

ಪ್ರಕರಣವೇನು?: ಅಪರಾಧಿ ಗ್ರಾಹಕರಂತೆ ಲೈಂಗಿಕ ಕಾರ್ಯಕರ್ತೆಯನ್ನು ಲಾಡ್ಜ್‌ಗೆ ಕರೆದೊಯ್ದಿದ್ದನು. ಆಕೆಯೂ ಕೂಡ ಆತನನ್ನು ಗ್ರಾಹಕನಂತೆ ಪರಿಗಣಿಸಿದ್ದಳು. ಆಕೆ ಸಾವಿಗೂ ಮುನ್ನ ಎಷ್ಟು ಬಾರಿ ಬಲವಂತದ ಲೈಂಗಿಕತೆಗೆ ಒಳಗಾಗಿದ್ದಳು ಎಂಬುದನ್ನು ಪುರಾವೆಗಳು ಹೇಳುವುದಿಲ್ಲ. ಮೃತಪಟ್ಟ ಮಹಿಳೆ ಲೈಂಗಿಕ ಕಾರ್ಯಕರ್ತೆ ಎಂಬ ಕಾರಣಕ್ಕಾಗಿ ಆರೋಪಿ ಆಕೆಯನ್ನು ಕೊಲೆ ಮಾಡುವ ಮೊದಲು ಅತ್ಯಾಚಾರ ಮಾಡಿದ್ದಾನೆ ಎಂದು ತೀರ್ಮಾನಿಸುವುದು ಸುರಕ್ಷಿತವಲ್ಲ. ಐಪಿಸಿ ಸೆಕ್ಷನ್ 302 ಮತ್ತು 397ರಡಿ ಶಿಕ್ಷಾರ್ಹ ಅಪರಾಧಕ್ಕೆ ಗುರಿಪಡಿಸಲು ಪ್ರಾಸಿಕ್ಯೂಷನ್ ಸಮರ್ಥವಾಗಿದ್ದರೂ, ಐಪಿಸಿ ಸೆಕ್ಷನ್ 376 ಅಡಿ ಶಿಕ್ಷಾರ್ಹ ಅಪರಾಧವನ್ನು ಸಾಬೀತುಪಡಿಸಲು ವಿಫಲವಾಗಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

2010ರ ಸೆಪ್ಟೆಂಬರ್ 18ರಂದು ಸಂತ್ರಸ್ತೆ ಮೈಸೂರಿನ ಎಸ್‌ಆರ್ ರಸ್ತೆಯಲ್ಲಿ ಗ್ರಾಹಕರೊಂದಿಗೆ ವ್ಯವಹರಿಸುತ್ತಿರುವಾಗ ಅಪರಾಧಿ ಗಿರೀಶ ಆಕೆಯನ್ನು ಆಟೊದಲ್ಲಿ ಸಬ್ ಅರ್ಬನ್ ಬಸ್ ನಿಲ್ದಾಣದ ಪಕ್ಕದಲ್ಲಿರುವ ಲಾಡ್ಜ್‌ಗೆ ಕರೆದೊಯ್ದಿದ್ದ. ದೇವಸ್ಥಾನಕ್ಕೆ ಬಂದಿದ್ದ ಪತಿ-ಪತ್ನಿ ಎಂದು ಪರಿಚಯಿಸಿಕೊಂಡು ಲಾಡ್ಜ್ ರಿಜಿಸ್ಟರ್‌ನಲ್ಲಿ ಹೆಸರನ್ನು ರವಿ ಎಂದು ನಮೂದು ಮಾಡಿ ಕೊಠಡಿ ಪಡೆದಿದ್ದ. ಅಂದು ರಾತ್ರಿ ಕೊಠಡಿಗೆ ಆಹಾರ ಮತ್ತು ಪಾನೀಯಗಳನ್ನು ತರಿಸಿಕೊಂಡಿದ್ದರು.

ಇಬ್ಬರ ನಡುವೆ ದೈಹಿಕ ಸಂಭೋಗದ ಬಳಿಕ ಅಪರಾಧಿ ಗಿರೀಶ್,​ ಮಹಿಳೆಯನ್ನು ಕತ್ತು ಹಿಸುಕಿ ಕೊಂದು ಆಕೆಯ ಚಿನ್ನಾಭರಣ, ನೋಕಿಯಾ ಮೊಬೈಲ್ ಫೋನ್ ಮತ್ತು ಸ್ವಲ್ಪ ಹಣವನ್ನೂ ಪಡೆದು ಪರಾರಿಯಾಗಿದ್ದ. ಚಿನ್ನಾಭರಣಗಳನ್ನು ಗಿರಿವಿ ಇಟ್ಟು ಹಣ ಪಡೆದುಕೊಂಡಿದ್ದನು.
ಮರುದಿನ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿತ್ತು. ಲಕ್ಷರ್​ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದರು. ತನಿಖೆಯ ಬಳಿಕ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣ ವಿಚಾರಣೆ ನಡೆಸಿದ ಮೈಸೂರಿನ ಏಳನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ಏಪ್ರಿಲ್ 25, 2016 ರಂದು ಆರೋಪಿಯನ್ನು ಖುಲಾಸೆಗೊಳಿಸಿ ಆದೇಶಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಪೊಲೀಸ್​ ಪ್ರಾಸಿಕ್ಯೂಷನ್​ ಹೈಕೋರ್ಟ್ ಮೆಟ್ಟಿಲೇರಿತ್ತು.

ಇದನ್ನೂಓದಿ:ಸರ್ಕಾರದ ಅಂಗಸಂಸ್ಥೆಗಳ ವ್ಯಾಜ್ಯಗಳನ್ನು ತಾವೇ ಬಗೆಹರಿಸಿಕೊಳ್ಳಬೇಕು: ಹೈಕೋರ್ಟ್

Last Updated : Oct 6, 2023, 11:13 AM IST

ABOUT THE AUTHOR

...view details