ಕರ್ನಾಟಕ

karnataka

ETV Bharat / state

ಪ್ರವೀಣ್ ಹತ್ಯೆ: ರಾಜ್ಯಾದ್ಯಂತ ಬಿಜೆಪಿ ಮುಖಂಡರಿಂದ ರಾಜೀನಾಮೆ ಪರ್ವ - etv bharat kannada

ಪ್ರವೀಣ್​ ಹತ್ಯೆ ಹಿಂದು ಹೋರಾಟಗಾರರಿಗೆ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಆಕ್ರೋಶ ಉಂಟು ಮಾಡಿದ್ದು, ಈ ಸರ್ಕಾರದಲ್ಲಿ ಹಿಂದು ಹೋರಾಟಗಾರರಿಗೆ ಬದುಕಿಲ್ಲ ಎಂದು ಕಿಡಿಕಾರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದಾರೆ.

ಮುಖಂಡ ಪ್ರವೀಣ್ ಹತ್ಯೆ
ಮುಖಂಡ ಪ್ರವೀಣ್ ಹತ್ಯೆ

By

Published : Jul 27, 2022, 6:52 PM IST

Updated : Jul 27, 2022, 10:04 PM IST

ಬೆಂಗಳೂರು: ಹಿಂದು ಕಾರ್ಯಕರ್ತರ ಮೇಲೆ ನಡೆಯುತ್ತಿರುವ ಕೊಲೆ ಪ್ರಕರಣದಲ್ಲಿ ಆರೋಪಿಗಳ ಮೇಲೆ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗದ ವೈಖರಿ ಖಂಡಿಸಿ ಸ್ವತಃ ಬಿಜೆಪಿ ಪಕ್ಷದ ಕಾರ್ಯಕರ್ತರು, ಮುಖಂಡರು ರಾಜೀನಾಮೆ ನೀಡಿ ಪಕ್ಷವನ್ನು ಎಚ್ಚರಿಸಲು ಮುಂದಾಗಿದ್ದಾರೆ. ಹಾಗಿದ್ರೆ ಯಾವ ಜಿಲ್ಲೆಯಲ್ಲಿ ಯಾರ್ಯಾರು ರಾಜೀನಾಮೆ ನೀಡಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಗಂಗಾವತಿ ಬಿಜೆಪಿ ಮುಖಂಡ

ಗಂಗಾವತಿಬಿಜೆಪಿ ನಗರ ಯುವ ಘಟಕದ ಅಧ್ಯಕ್ಷ ಸೇರಿದಂತೆ ಇತರೆ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಗಂಗಾವತಿ ನಗರ ಘಟಕದ ಯುವ ಮೋರ್ಚಾ ಅಧ್ಯಕ್ಷ ಕೆ. ವೆಂಟಕೇಶ ಚಿಕ್ಕಜಂತಕಲ್, ಪ್ರವೀಣ ನೆಟ್ಟಾರ ಅವರ ಹತ್ಯೆ ಖಂಡಿಸಿ ತಮ್ಮ ರಾಜೀನಾಮೆಯನ್ನು ನಗರ ಘಟಕದ ಅಧ್ಯಕ್ಷ ಕಾಶಿನಾಥ ಚಿತ್ರಗಾರ ಅವರಿಗೆ ರವಾನಿಸಿದ್ದಾರೆ.

ಪಕ್ಷ ಅಧಿಕಾರದಲ್ಲಿದ್ದರೂ ನಮಗೆ ರಕ್ಷಣೆ ಇಲ್ಲವಾಗಿದ್ದು, ಕೊಲೆಗಡುಕರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಭರವಸೆ ಕೇವಲ ಭರವಸೆಯಾಗಿಯೇ ಉಳಿದಿದೆ. ಹೀಗಾಗಿ ಪ್ರವೀಣ್​​ ಹತ್ಯೆ ಖಂಡಿಸಿ ಸಾಮೂಹಿಕ ರಾಜೀನಾಮೆಗೆ ಮುಂದಾಗಿದ್ದೇವೆ ಎಂದು ವೆಂಕಟೇಶ್​ ತಮ್ಮ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.

ಮೈಸೂರು ಬಿಜೆಪಿ ಮುಖಂಡರಿಂದ ರಾಜೀನಾಮೆ ಪತ್ರ

ಮೈಸೂರು: ಮೈಸೂರಿನ ಎನ್.ಆರ್.ಕ್ಷೇತ್ರದ ಯುವಮೋರ್ಚಾ ಅಧ್ಯಕ್ಷ ಸೇರಿದಂತೆ ನಾಲ್ವರು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ.ಅಧ್ಯಕ್ಷ ಡಿ.ಲೋಹಿತ್, ಪ್ರಧಾನ ಕಾರ್ಯದರ್ಶಿಗಳಾದ ಧನರಾಜ್, ನವೀನ್ ಶೆಟ್ಟಿ, ಕಾರ್ಯದರ್ಶಿಗಳಾದ ಎಂ.ರಾಜು,ಜಿ.ಅರುಣ್ ಅವರು ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ, ಬೇಸರದಿಂದ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಮೈಸೂರಿನ ಬಿಜೆಪಿ ಕಾರ್ಯಕರ್ತರು

ಪ್ರವೀಣ್ ನೆಟ್ಟಾರು ಕೊಲೆಯಿಂದ ಬಿಜೆಪಿ ಯುವಸಮೂಹಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.ಅಲ್ಲದೆ, ಹಿಂದೆಲ್ಲ ನಡೆದಂತಹ ಕೊಲೆಗಳಿಗೆ ಯಾವ ರೀತಿಯಲ್ಲಿ ನ್ಯಾಯ ಸಿಕ್ಕಿದೆ ಎನ್ನುವುದು ನಮ್ಮ ಕಣ್ಣ ಮುಂದೆಯೇ ಇದೆ. ಕಠಿಣ ಕ್ರಮ ಎನ್ನುವ ಭರವಸೆ ಭರವಸೆಯಾಗಿಯೇ ಉಳಿದಿರುವುದರಿಂದ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.

ಕಲಬುರಗಿ: ಹತ್ಯೆ ಖಂಡಿಸಿ ಕಲಬುರಗಿಯಲ್ಲಿ ಹಿಂದು ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಹಿಂದೂ ಜಾಗೃತಿ ಸೇನೆ ಸಂಘಟನೆಯ ನೇತೃತ್ವದಲ್ಲಿ ನಗರದ ಎಸ್​​ವಿಪಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದರೂ ಸಹ ಹಿಂದು ಕಾರ್ಯಕರ್ತರ ಹತ್ಯೆ ತಡೆಯಲು ಸಾಧ್ಯವಾಗುತ್ತಿಲ್ಲ. ಕಾರ್ಯಕರ್ತರ ರಕ್ಷಣೆ ಮಾಡುವಲ್ಲಿ ವಿಫಲವಾದ ರಾಜ್ಯ ಬಿಜೆಪಿ ಸರ್ಕಾರವನ್ನು ವಜಾಗೊಳಿಸುವಂತೆ ಆಗ್ರಹಿಸಿದರು.

ಬೆಳಗಾವಿ: ಬೆಳಗಾವಿಯಲ್ಲೂ ಬಿಜೆಪಿ ಪದಾಧಿಕಾರಿಗಳ ರಾಜೀನಾಮೆ ಪರ್ವ ಶುರುವಾಗಿದೆ. ಬಿಜೆಪಿ ಅರಭಾವಿ ಮಂಡಲ ಸಾಮಾಜಿಕ ಜಾಲತಾಣ ಸದಸ್ಯ ಸ್ಥಾನಕ್ಕೆ ಅವಿನಾಶ್ ಹಿರೇಮಠ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ರಾಜೀನಾಮೆ ಪತ್ರವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಹಿಂದೆ ಎಲ್ಲಾ ಹಿಂದೂಪರ ಕಾರ್ಯಕರ್ತರ ಹತ್ಯೆಯಾದಾಗ 'ಕಠಿಣ ಕ್ರಮ' ಜರುಗಿಸಿದ್ದೀರಿ ಎಂಬುದು ನಮ್ಮ ಕಣ್ಮುಂದೆ ಇದೆ. 'ಕಠಿಣ ಕ್ರಮ' ಎನ್ನುವುದು ಭರವಸೆ ಆಗಿಯೇ ಇದೆ ಎಂಬುದಕ್ಕೆ ಈ ರಾಜೀನಾಮೆ ಎಂದು ಉಲ್ಲೇಖ ಮಾಡಿದ್ದಾರೆ.

ಇನ್ನು ಅರಭಾವಿ ಕ್ಷೇತ್ರದ ಬಿಜೆಪಿ ಸಾಮಾಜಿಕ ಜಾಲತಾಣದ ಸದಸ್ಯ ಸ್ಥಾನಕ್ಕೆ ಅವಿನಾಶ್ ಹಿರೇಮಠ್ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಕೇವಲ ಒಂದು ರಾಜಕೀಯ ಪಕ್ಷವಲ್ಲ. ಈ ಪಕ್ಷಕ್ಕೆ ತನ್ನದೇ ಆದ ಇತಿಹಾಸ ಹಾಗೂ ಸೈದ್ಧಾಂತಿಕ ವಿಚಾರ ಇದೆ. ಇಂಥ ಪಕ್ಷದ ಅನೇಕ ಕಾರ್ಯಕರ್ತರ ಬಲಿದಾನ ನಡೆದಿದ್ದು, ಸೈದ್ಧಾಂತಿಕ ವಿಚಾರಧಾರೆಗೆ ಹೋರಾಡುವ ದುರ್ಗತಿ ಬಂದೊದಗಿದೆ ಎಂದಿದ್ದಾರೆ.

ಇದರಿಂದ ಬಿಜೆಪಿ ಕಾರ್ಯಕರ್ತರಲ್ಲಿ ನೋವುಂಟಾಗಿದೆ. ಈ ಕುರಿತಂತೆ ಸರ್ಕಾರ ಪ್ರತೀಬಾರಿ ಹಿಂದೂ ಕಾರ್ಯಕರ್ತರ ಕೊಲೆಯಾದಾಗಲೂ ಕೂಡ ಕಠಿಣ ಕ್ರಮ ಜುರುಗಿಸಿದ್ದೀನಿ ಎಂದು ಹೇಳುತ್ತ ಬಂದಿದ್ದಾರೆ. ಈ ಹೇಳಿಕೆ ಕೇವಲ ಭರವಸೆಯಾಗಿ ಉಳಿದಿರುವ ಕಾರಣ ಅರಭಾವಿ ಮಂಡಲ ಸಾಮಾಜಿಕ ಜಾಲತಾಣದ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದೇನೆ ಎಂದು ತಮ್ಮ ರಾಜೀನಾಮೆ ಪತ್ರವನ್ನು ಬಿಜೆಪಿ ಅರಭಾವಿ ಮಂಡಲಾಧ್ಯಕ್ಷ ಮಹಾದೇವ ಅಕ್ಕಿ ಅವರಿಗೆ ಸಲ್ಲಿಸಿದ್ದಾರೆ.

ಬಾಗಲಕೋಟೆ: ಹತ್ಯೆ ಖಂಡಿಸಿ ಬಾಗಲಕೋಟೆ ಜಿಲ್ಲೆಯಲ್ಲಿಯೂ ಕಾರ್ಯಕರ್ತರ ರಾಜೀನಾಮೆ ಪರ್ವ ಮುಂದುವರೆದಿದೆ. ಶಾಸಕ ಸಿದ್ದು ಸವದಿ ಪುತ್ರನಿಂದ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಿದ್ದು ಸವದಿ ಪುತ್ರ ವಿದ್ಯಾಧರ ಸವದಿ ಅವರು ರಾಜೀನಾಮೆ ನೀಡಿದ್ದಾರೆ. ಇವರು ಬಾಗಲಕೋಟೆ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲಗೆ ರಾಜೀನಾಮೆ ಪತ್ರ ಬರೆದಿದ್ದು, ಅದನ್ನು ಫೇಸ್ ಬುಕ್ ನಲ್ಲಿ ಹಾಕಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ದಾವಣಗೆರೆ ಮುಖಂಡರಿಂದ ರಾಜೀನಾಮೆ ಪತ್ರ

ದಾವಣಗೆರೆ: ದಕ್ಷಿಣ ಕನ್ನಡ ಜಿಲ್ಲೆಯ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ಕೊಲೆಯಾದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲೂ ಯುವ ಮೋರ್ಚಾ ಕಾರ್ಯಕರ್ತರು ಸಾಮೂಹಿಕ ರಾಜೀನಾಮೆ ನೀಡಿ ರಾಜೀನಾಮೆ ಪತ್ರವನ್ನು ಬಿಜೆಪಿ ಜಿಲ್ಲಾಧ್ಯಕ್ಷರಾದ ವೀರೇಶ್ ಹನಗವಾಡಿಯವರಿಗೆ ರವಾನಿಸಿದ್ದಾರೆ. ಬಿಜೆಪಿ ಪಕ್ಷದಲ್ಲಿ ಹಿಂದೂ ಕಾರ್ಯಕರ್ತನಿಗೆ ರಕ್ಷಣೆ ಇಲ್ಲ ಎಂದ ಮೇಲೆ ಯುವ ಮೋರ್ಚಾದಲ್ಲಿ ಇದ್ದು ಏನ್ ಪ್ರಯೋಜನ? ಎಂದು ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಆರ್ ಎಲ್ ಶಿವಪ್ರಕಾಶ್ ಸೇರಿದ್ದಂತೆ ಜಿಲ್ಲೆಯ ಎಂಟು ಮಂಡಲದ ಅಧ್ಯಕ್ಷರೊಳಗೊಂಡು ಎಲ್ಲಾ ಪದಾಧಿಕಾರಿಗಳು ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ.

ದಾವಣಗೆರೆ ಬಿಜೆಪಿ ಮುಖಂಡರು

ಟೈರ್ ಸುಟ್ಟು ಪ್ರತಿಭಟನೆ, ಸರ್ಕಾರದ ವಿರುದ್ಧ ಆಕ್ರೋಶ:ದಾವಣಗೆರೆಯ ಜಯದೇವ ವೃತ್ತದಲ್ಲಿ ಹಾಗೂ ಹೊನ್ನಾಳಿ ಸಂಗೊಳಿ ರಾಯಣ್ಣ ವೃತ್ತದಲ್ಲಿ ಟೈಯರ್​​ಗೆ ಬೆಂಕಿ ಹಾಕಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಪ್ರವೀಣ್ ಹತ್ಯೆ ಖಂಡಿಸಿದ್ರು. ಇದಲ್ಲದೇ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಕೂಡ ಪ್ರತಿಭಟಿಸಿ ಪ್ರವೀಣ್ ಹತ್ಯೆ ನಡೆಸಿದವರ ವಿರುದ್ಧ ಕಠಿಣ ಕ್ರಮ‌ಕೈಗೊಳ್ಳುವಂತೆ ಒತ್ತಾಯಿಸಿದರು.

ಚಿತ್ರದುರ್ಗ: ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಕೋಷ್ಟಕ್ಕೆ ರಮೇಶ್ ಗೂಳಿಹಟ್ಟಿ ರಾಜೀನಾಮೆ ನೀಡಿದ್ದಾರೆ.ಹಂತಕರನ್ನು ಬಂಧಿಸಿ, ಶಿಕ್ಷಿಸುವಂತೆ ಆಗ್ರಹ ಮಾಡಿದ್ದಾರೆ.

ಚಿತ್ರದುರ್ಗದ ಮುಖಂಡರಿಂದ ರಾಜೀನಾಮೆ

ಇದನ್ನೂ ಓದಿ:Praveen murder case: ಅಂತಿಮ ದರ್ಶನಕ್ಕೆ ಬಂದಿದ್ದ ಕಟೀಲ್​ ವಿರುದ್ಧ ಹಿಂದೂ ಕಾರ್ಯಕರ್ತರ ಆಕ್ರೋಶ: ಕಲ್ಲು ತೂರಾಟ, ಲಾಠಿಚಾರ್ಜ್

Last Updated : Jul 27, 2022, 10:04 PM IST

ABOUT THE AUTHOR

...view details