ಬೆಂಗಳೂರು: ಸ್ಕೂಟರ್ ಸವಾರನನ್ನು ಬಿಎಂಟಿಸಿ ಬಸ್ ಬಲಿ ಪಡೆದಿದೆ. ಕಬ್ಬನ್ ಪಾರ್ಕ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಯ್ಯ ಜಂಕ್ಷನ್ನಿಂದ ಕ್ವೀನ್ಸ್ ರಸ್ತೆಯಲ್ಲಿ ಚಲಿಸುವಾಗ ಇಂದು ಸಂಜೆ ಈ ದುರ್ಘಟನೆ ನಡೆದಿದೆ. ಬಸ್ ಚಕ್ರ ಸವಾರನ ಮೇಲೆ ಹರಿದ ಪರಿಣಾಮ, ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ಸವಾರನ ಹೆಸರು ತಿಳಿದುಬಂದಿಲ್ಲ. ಸುಮಾರು 40 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ.
ಇಂದು ಸಂಜೆ ಸಿದ್ದಯ್ಯ ಜಂಕ್ಷನ್ನಿಂದ ಕ್ವೀನ್ಸ್ ರಸ್ತೆ ಕಡೆ ಬರುವಾಗ ಟಿವಿಎಸ್ ಜ್ಯೂಪಿಟರ್ ಸ್ಕೂಟರ್ನಲ್ಲಿ ಚಲಿಸುತ್ತಿದ್ದ ವ್ಯಕ್ತಿಗೆ ಬಸ್ ಗುದ್ದಿದೆ. ನಿಯಂತ್ರಣ ಕಳೆದುಕೊಂಡು ಬಿದ್ದ ಸವಾರನ ಮುಖದ ಮೇಲೆ ಬಸ್ ಹಿಂಬದಿ ಚಕ್ರ ಹರಿದು ಹೋಗಿದೆ. ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಕಬ್ಬನ್ ಪಾರ್ಕ್ ಸಂಚಾರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ಶವವನ್ನ ರವಾನಿಸಲಾಗಿದೆ. ಮೃತನ ಹೆಸರು, ಮನೆ-ವಿಳಾಸ ತಿಳಿದುಬಂದಿಲ್ಲ. ಈ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಘಟನೆಗೆ ಕಾರಣನಾದ ಚಾಲಕನನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕಳೆದ ತಿಂಗಳು ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಇಬ್ಬರು ಸಾವು: ರಸ್ತೆ ದಾಟುತ್ತಿದ್ದಾಗ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಇಬ್ಬರು ಪಾದಚಾರಿಗಳು (ಜೂನ್ 15-2023) ಮೃತಪಟ್ಟಿದ್ದರು. ರಿಂಗ್ ರಸ್ತೆಯ ಲಗ್ಗೆರೆ ಬಳಿಯ ಕೆಂಪೇಗೌಡ ಆರ್ಚ್ ಬಳಿ ಘಟನೆ ನಡೆದಿತ್ತು. ಕೊಪ್ಪಳ ಮೂಲದ ಕುಂಟ್ಯಪ್ಪ ಪೂಜಾರ್ (35) ಮತ್ತು ತುರುವೆಕೆರೆ ಬಳಿಯ ವಿಟ್ಲಪುರ ಮೂಲದ ತಿಮ್ಮೆಗೌಡ (25) ಮೃತರು. ಲಗ್ಗೆರೆ ರಿಂಗ್ ರಸ್ತೆಯ ಕೆಂಪೇಗೌಡ ಆರ್ಚ್ ಬಳಿಯ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಬುಧವಾರ ರಾತ್ರಿ 7.30ರಲ್ಲಿ ಅಪಘಾತ ಸಂಭವಿಸಿತ್ತು.