ಬೆಂಗಳೂರು:ತಮಿಳಿನ ಖ್ಯಾತ ನಿರ್ದೇಶಕ ವೆಟ್ರಿಮಾರನ್ ನಿರ್ದೇಶನದ ಪ್ಯಾನ್ ಇಂಡಿಯಾ ಚಿತ್ರ ‘ವಿಡುದಲೈ’ ಕೆಲವು ದಿನಗಳ ಹಿಂದೆ ದೇಶಾದ್ಯಂತ ಬಿಡುಗಡೆಯಾಗಿ ಜನಮನ್ನಣೆ ಪಡೆಯುತ್ತಿದೆ. ಈ ಚಿತ್ರದ ವಿಶೇಷತೆಯೆಂದರೆ, ತಮಿಳಿನ ಖ್ಯಾತ ನಟರಾದ ವಿಜಯ್ ಸೇತುಪತಿ, ಸೂರಿ, ಗೌತಂ ವಾಸುದೇವ ಮೆನನ್ ಮುಂತಾದವರ ಜೊತೆಗೆ ಕನ್ನಡದ ಆ ದಿನಗಳು ಖ್ಯಾತಿಯ ಸರ್ದಾರ್ ಸತ್ಯ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವುದು.
ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಎಸ್ ಐ ವೆಲ್ ಮುರಗನ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸತ್ಯ, ತಮ್ಮ ಅಭಿನಯದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆ ದಿನಗಳು ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸತ್ಯ, ಆ ನಂತರ ‘ಸ್ಲಂ ಬಾಲ’, ‘ರಾಜಧಾನಿ’, ‘ದ್ಯಾವ್ರೇ’, ‘ಚಂಬಲ್’ ಮುಂತಾದ ಚಿತ್ರಗಳಲ್ಲಿ ತಮ್ಮ ಅಭಿನಯದಿಂದ ಗುರುತಿಸಿಕೊಂಡವರು. ಆ ನಂತರ ‘ಗುಂಡ್ರು ಗೋವಿ’ ಮೂಲಕ ಹೀರೋ ಆಗಿಯೂ ಮಿಂಚಿದ್ದ ಅವರು, ಇತ್ತೀಚಿನ ವರ್ಷಗಳಲ್ಲಿ ತಮ್ಮದೇ ಸಾಯಿನಿರ್ಮಲ ಪ್ರೊಡಕ್ಷನ್ಸ್ ಸಂಸ್ಥೆಯಡಿ ‘ಪದ್ಮಾವತಿ’, ‘ಕನ್ನಡ ಕೋಗಿಲೆ’ ಮುಂತಾದ ಜನಪ್ರಿಯ ಕಾರ್ಯಕ್ರಮಗಳನ್ನು ನಿರ್ಮಿಸಿದರು, ಈಗ ದೊಡ್ಡ ಮಟ್ಟದಲ್ಲಿ ‘ವಿಡುದಲೈ’ ನಲ್ಲಿ ನಟಿಸಿದ್ದಾರೆ.
ವೆಟ್ರಿಮಾರನ್ ಒಳ್ಳೆಯ ಸ್ನೇಹಿತರು: ವೆಟ್ರಿಮಾರನ್ ನಿರ್ದೇಶನದ ‘ವಿಡುದಲೈ’ ಚಿತ್ರದಲ್ಲಿ ನಟಿಸುವುದಕ್ಕೆ ಮುಖ್ಯ ಕಾರಣ ನಿರ್ದೇಶಕ ಜೇಕಬ್ ವರ್ಗೀಸ್ ಎನ್ನುವ ಸತ್ಯ, ‘ನನ್ನ ಮತ್ತು ಜೇಕಬ್ ನಡುವೆ ಒಳ್ಳೆಯ ಬಾಂಧವ್ಯವಿದೆ. ಅವರ ‘ಚಂಬಲ್’ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ನಾನು ನಟಿಸಿದ್ದೆ. ಅವರು ಮತ್ತು ವೆಟ್ರಿಮಾರನ್ ಒಳ್ಳೆಯ ಸ್ನೇಹಿತರು. ಒಮ್ಮೆ ವೆಟ್ರಿಮಾರನ್ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ಅವರು ಒಂದು ನಿಮಿಷ ನನ್ನನ್ನು ಸೂಕ್ಷ್ಮವಾಗಿ ಗಮನಿಸಿದರು. ಅದಾಗಿ ಮೂರು ತಿಂಗಳಲ್ಲಿ ನಾನು ವಿಡುದಲೈ ಚಿತ್ರದ ಭಾಗವಾಗಿದ್ದೆ’ ಎಂದು ನೆನಪಿಸಿಕೊಳ್ಳುತ್ತಾರೆ ಸತ್ಯ.
ತಮಿಳು ಚಿತ್ರವೊಂದರಲ್ಲಿ ನಟಿಸಬೇಕು ಎಂಬುದು ಸತ್ಯ ಅವರ ತಂದೆ - ತಾಯಿಯ ಆಸೆಯಾಗಿತ್ತಂತೆ. ‘ನಾನು ಮೂಲತಃ ಚಾಮರಾಜನಗರದವನು. ಕನ್ನಡದ ಜೊತೆಗೆ ತಮಿಳು ಸಹ ಬರುತ್ತದೆ. ಅಷ್ಟೇ ಅಲ್ಲ, ನನಗೆ ಐದು ಭಾಷೆಗಳು ಚೆನ್ನಾಗಿ ಮಾತನಾಡುವುದಕ್ಕೆ ಬರುತ್ತದೆ. ನಾನು ನಾಯಕನಾಗಿ ನಟಿಸಿದ ‘ಗುಂಡ್ರು ಗೋವಿ’ ಅಷ್ಟೇನೂ ಯಶಸ್ವಿಯಾಗಲಿಲ್ಲ. ಎರಡನೆಯ ಚಿತ್ರ ‘ಬೀರ’ ಬಿಡುಗಡೆಯಾಗಲೇ ಇಲ್ಲ. ಆ ಚಿತ್ರಕ್ಕಾಗಿ ಮೂರು ವರ್ಷ ಕಷ್ಟಪಟ್ಟಿದ್ದೆ. ಆದರೆ, ಚಿತ್ರ ಬಿಡುಗಡೆಯಾಗದಿದ್ದರಿಂದ ನನ್ನ ಶ್ರಮವೆಲ್ಲ ವ್ಯರ್ಥವಾಯಿತು. ಈ ಮಧ್ಯೆ, ನನಗೆ ಕನ್ನಡದಲ್ಲಿ ಸರಿಯಾಗಿ ಕೆಲಸ ಸಿಗುತ್ತಿರಲಿಲ್ಲ, ಸಿಕ್ಕರೂ ದುಡ್ಡು ಸಿಗುತ್ತಿರಲಿಲ್ಲ. ಆಗ ಹೆಂಡತಿ ನಿರ್ಮಲಾ ಆಸೆಯ ಮೇರೆಗೆ ಸಾಯಿ ನಿರ್ಮಲಾ ಪ್ರೊಡಕ್ಷನ್ಸ್ ಎಂಬ ನಿರ್ಮಾಣ ಸಂಸ್ಥೆ ಪ್ರಾರಂಭಿಸಿದೆ. ಅಲ್ಲಿ ಸಾಕಷ್ಟು ಯಶಸ್ಸನ್ನೂ ಕಂಡೆ. ಎರಡ್ಮೂರು ವರ್ಷಗಳ ಕಾಲ ಹಗಲು-ರಾತ್ರಿ ಎನ್ನದೇ ಕೆಲಸ ಮಾಡಿದ್ದೇವೆ.
ತಮಿಳಿಗೆ ಹೋಗು ಎಂದು ಸಲಹೆ ನೀಡಿದ್ದೇ ತಾಯಿ: ಇದುವರೆಗೂ 1500 ದಿನಕ್ಕೂ ಹೆಚ್ಚು ಚಿತ್ರೀಕರಣ ಮಾಡಿರುವ ಸಂಸ್ಥೆ ನಮ್ಮದು. ನಮ್ಮ ಸಂಸ್ಥೆಯಲ್ಲಿ ನೂರಾರು ಜನ ಕೆಲಸ ಮಾಡಿದ್ದಾರೆ. ಸಾವಿರಾರು ಜನ ಊಟ ಮಾಡಿದ್ದಾರೆ. ಇದೆಲ್ಲವೂ ಖುಷಿ ಇದ್ದರೂ, ನಟನಾಗಿ ಏನಾದರೂ ಸಾಧಿಸಬೇಕು ಎಂಬ ಆಸೆ ಮಾತ್ರ ಹಾಗೆಯೇ ಹಸಿ ಹಸಿ ಯಾಗಿತ್ತು. ನನ್ನ ಪ್ರತಿಭೆ ವ್ಯರ್ಥವಾಗುತ್ತಿರುವುದನ್ನು ನೋಡಿ, ಇಲ್ಲಿ ಸಾಧ್ಯವಾಗದಿದ್ದರೆ ತಮಿಳಿಗೆ ಹೋಗು ಎಂದು ಸಲಹೆ ನೀಡಿದ್ದೇ ನನ್ನ ತಾಯಿ.
ಅಲ್ಲಿಯವರೆಗೂ ಕನ್ನಡದಲ್ಲೇ ನಟಿಸುತ್ತಿದ್ದೆ. ಆ ನಂತರ ತಮಿಳಿನಲ್ಲಿ ಅವಕಾಶ ಸಿಗುತ್ತದಾ ಎಂದು ಪ್ರಯತ್ನ ಮಾಡಿದೆ. ಆಗ ವೆಟ್ರಿಮಾರನ್ ಪರಿಚಯವಾಯಿತು. ಈಗ ನನ್ನ ಮೊದಲ ಚಿತ್ರ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದೆ. ಆದರೆ, ಅದನ್ನು ನೋಡಲು ನನ್ನ ತಂದೆ - ತಾಯಿ ಇಬ್ಬರೂ ಇಲ್ಲ. Viduthalai ಚಿತ್ರೀಕರಣದ ಸಂದರ್ಭದಲ್ಲಿ 20 ದಿನಗಳ ಅಂತರದಲ್ಲಿ ಇಬ್ಬರೂ ನಿಧನರಾದರು. ಅವರ ಆಸೆಯೇನೋ ಈಡೇರಿಸಿದೆ. ಆದರೆ, ಅದನ್ನು ನೋಡಲು ಅವರೇ ಇಲ್ಲವಲ್ಲ ಎಂಬ ಬೇಸರವಿದೆ.