ಬೆಂಗಳೂರು:ಪರಿಶಿಷ್ಟ ಜಾತಿ ಹಾಗೂ ಪಂಗಡದ ಯುವಕರಲ್ಲಿ ಉದ್ಯಮಶೀಲತೆ ಹಾಗೂ ಸ್ವ ಉದ್ಯೋಗ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಪ್ರಾರಂಭಿಸಿರುವ ಮಹತ್ವಾಕಾಂಕ್ಷೆಯ 'ಸಮೃದ್ಧಿ ಯೋಜನೆ' ನಿರೀಕ್ಷಿತ ಫಲ ನೀಡುವಲ್ಲಿ ವಿಫಲವಾಗಿದೆ.
ಎರಡು ವರ್ಷಗಳ ಹಿಂದೆ ಮೈತ್ರಿ ಸರ್ಕಾರದಲ್ಲಿ ಸಿಎಂ ಕುಮಾರಸ್ವಾಮಿ ಚಾಲನೆ ನೀಡಿದ್ದ ಈ ಯೋಜನೆ ಎರಡು ವರ್ಷಗಳ ಬಳಿಕ ನಿರೀಕ್ಷಿತ ಪ್ರಗತಿ ಕಾಣಲು ಸಾಧ್ಯವಾಗಿಲ್ಲ. ಈ ಯೋಜನೆ ಮೂಲಕ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಉದ್ಯಮಶೀಲತೆ ಉತ್ತೇಜಿಸುವುದು ಪ್ರಮುಖ ಉದ್ದೇಶವಾಗಿತ್ತು. ಸಮಾಜ ಕಲ್ಯಾಣ ಇಲಾಖೆ ಫಲಾನುಭವಿಗಳಿಗೆ ಸಣ್ಣ ಪಟ್ಟಣ, ನಗರಗಳಲ್ಲಿ ಮಳಿಗೆ ಅಥವಾ ಫ್ರಾಂಚೈಸ್ ಸ್ಥಾಪಿಸಲು 10 ಲಕ್ಷ ರೂ. ಹಣಕಾಸು ನೆರವನ್ನು ಈ ಯೋಜನೆ ಮೂಲಕ ನೀಡುತ್ತದೆ. ಈ ಯೋಜನೆಗಾಗಿ 2018ರಲ್ಲಿ 275 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಕನಿಷ್ಠ 25,000 ಫಲಾನುಭವಿಗಳಿಗೆ ಯೋಜನೆಯ ಫಲ ನೀಡುವ ಗುರಿ ಹೊಂದಲಾಗಿತ್ತು. ಆದರೆ ಯೋಜನೆ ಕಾರ್ಯರೂಪಕ್ಕೆ ಬಂದು ಎರಡು ವರ್ಷ ಆದರೂ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ.
ಯೋಜನೆಯ ಪ್ರಗತಿ ಹೇಗಿದೆ?:
ಯೋಜನೆ ಕಾರ್ಯರೂಪಕ್ಕೆ ಬಂದ ಬಳಿಕ ಈವರೆಗೆ ಸುಮಾರು 34,182 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಇದರಲ್ಲಿ ವಿವಿಧ ಷರತ್ತುಗಳನುಸಾರ ಕೇವಲ 2,500 ಫಲಾನುಭವಿಗಳನ್ನು ಯೋಜನೆಗಾಗಿ ಅಂತಿಮಗೊಳಿಸಲಾಗಿದೆ.
ಸಮಾಜ ಕಲ್ಯಾಣ ಇಲಾಖೆ ನೀಡಿದ ಅಂಕಿಅಂಶದ ಪ್ರಕಾರ, ಈವರೆಗೆ ಕೇವಲ 177 ಫಲಾನುಭವಿಗಳು ಮಾತ್ರ ತಮ್ಮ ಮಳಿಗೆಯನ್ನು ಪ್ರಾರಂಭಿಸಿದ್ದಾರೆ. ಈ ಪೈಕಿ ಬೆಂಗಳೂರು ನಗರ ಜಿಲ್ಲೆಯಲ್ಲಿ 22 ಮಂದಿ ಮಳಿಗೆ ಪ್ರಾರಂಭಿಸಿದ್ದರೆ, ಬಳ್ಳಾರಿ 17, ಚಿಕ್ಕಬಳ್ಳಾಪುರ 16 ಮಂದಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ. 30 ಜಿಲ್ಲೆಗಳ ಪೈಕಿ 24 ಜಿಲ್ಲೆಗಳಲ್ಲಿ ಫಲಾನುಭವಿಗಳ ಸಂಖ್ಯೆ ಕೇವಲ ಏಕ ಅಂಕಿಯಲ್ಲಿದ್ದರೆ, ಚಾಮರಾಜನಗರ, ಕೊಡಗು, ರಾಮನಗರ ಜಿಲ್ಲೆಯಲ್ಲಿ ಈವರೆಗೆ ಅಧಿಕಾರಿಗಳು ಯೋಜನೆಯ ಫಲಾನುಭವಿಗಳಾಗಿ ಕೇವಲ ಒಬ್ಬರನ್ನು ಮಾತ್ರ ಗುರುತಿಸಿದ್ದಾರೆ.