ಕರ್ನಾಟಕ

karnataka

By

Published : Jan 7, 2023, 10:34 PM IST

ETV Bharat / state

ರಾಮನಗರ ಜಿಲೆಟಿನ್ ಸ್ಫೋಟ ಪ್ರಕರಣ..ಮಾರಾಟ ಪರವಾನಗಿ ಪಡೆದ ವ್ಯಕ್ತಿ ಹೊಣೆಯಲ್ಲ: ಹೈಕೋರ್ಟ್

ಕ್ರಿಮಿನಲ್ ಕಾನೂನಿನ ಅಡಿ ಉದ್ಯೋಗಿ ಎಸಗುವ ಯಾವುದೇ ಅಪರಾಧ ಕೃತ್ಯಕ್ಕೆ ಉದ್ಯೋಗದಾತ ಅಥವಾ ಮಾಲೀಕರನ್ನು ಹೊಣೆಗಾರರನ್ನಾಗಿ ಮಾಡಲು ಆಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

sale-license-holder-is-not-responsible-in-ramanagar-gelatin-explosion-case
ರಾಮನಗರ ಜಿಲೆಟಿನ್ ಸ್ಫೋಟ ಪ್ರಕರಣ

ಬೆಂಗಳೂರು:ಸ್ಫೋಟಕ ಮಾರಾಟ ಪರವಾನಗಿಗೆ ಅನುಮತಿ ಪಡೆದವರ ಬಳಿ ಕೆಲಸ ಮಾಡುವ ನೌಕರರು ಮಾಲೀಕರಿಗೆ ಅರಿವಿಲ್ಲದಂತೆ ಅಕ್ರಮವಾಗಿ ಜಿಲೆಟಿನ್ ಕಡ್ಡಿಗಳ ಮಾರಾಟ ಮಾಡಿದಲ್ಲಿ ಅದಕ್ಕೆ ಪರವಾನಗಿದಾರರನ್ನು ಹೊಣೆಗಾರರನ್ನಾಗಿ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್ ಹೇಳಿದೆ. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಎಸ್‌ಎಲ್‌ಎನ್ ಕಂಪನಿಯ ಪಿ. ಸುನೀಲ್ ಕುಮಾರ್ ಮತ್ತವರ ತಂದೆ ಎಂ. ಪ್ರಕಾಶ್ ರಾವ್ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಪೀಠ ಈ ಆದೇಶ ಮಾಡಿದೆ.

ಅಲ್ಲದೆ, ಕಾರಿನಲ್ಲಿದ್ದ ಜಿಲೆಟಿನ್ ಸ್ಫೋಟಗೊಂಡ ಪ್ರಕರಣವೊಂದರಲ್ಲಿ ಮೃತ ವ್ಯಕ್ತಿಗೆ ಅಕ್ರಮವಾಗಿ ಸ್ಫೋಟಕ ಮಾರಾಟ ಮಾಡಿದ ಆರೋಪದಲ್ಲಿ ಅರ್ಜಿದಾರರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ನ್ಯಾಯಾಲಯ ರದ್ದುಪಡಿಸಿ ಆದೇಶಿಸಿದೆ. ಪ್ರಕರಣದಲ್ಲಿ ಅರ್ಜಿದಾರರ ಬಳಿ ಕೆಲಸ ಮಾಡುತ್ತಿದ್ದ ಹರೀಶ್ ಕುಮಾರ್ (3ನೇ ಆರೋಪಿ) ಎಂಬ ನೌಕರ ಜಿಲೆಟಿನ್ ಕಡ್ಡಿಗಳನ್ನು ಮಾರಾಟ ಮಾಡಿದ್ದಾನೆ.

ಈ ಸಂದರ್ಭದಲ್ಲಿ ಅರ್ಜಿದಾರರಿಬ್ಬರೂ ಮಳಿಗೆಯಲ್ಲಿರಲಿಲ್ಲ. ಮಾಲೀಕರು ಇಲ್ಲದ ಸಂದರ್ಭದಲ್ಲಿ ಅವರಿಗೆ ತಿಳಿಯದಂತೆ ಸ್ಫೋಟಕಗಳನ್ನು ಮಾರಾಟ ಮಾಡುತ್ತಿದ್ದ ವಿಚಾರವನ್ನು ಸ್ವತಃ 3ನೇ ಆರೋಪಿ ಒಪ್ಪಿಕೊಂಡಿದ್ದಾನೆ. ಅರ್ಜಿದಾರರ ಗಮನಕ್ಕೆ ಬಾರದೆಯೇ ಸ್ಫೋಟಕ ಮಾರಾಟವಾಗಿರುವಾಗ, ಅರ್ಜಿದಾರರು ಪರವಾನಗಿಯನ್ನು ಉಲ್ಲಂಸಿದ್ದಾರೆ ಎನ್ನುವುದನ್ನು ಒಪ್ಪಲಾಗದು ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.

ಪ್ರಕರಣ ರದ್ದು: ಘಟನೆಗೆ ಕಾರಣವಾದ ಜಿಲೆಟಿನ್ ಕಡ್ಡಿಗಳನ್ನು ಅರ್ಜಿದಾರರ ಅಂಗಡಿಯಿಂದಲೇ ಖರೀದಿಸಲಾಗಿದ್ದರೂ, ಅದು ಅವರ ಗಮನಕ್ಕೆ ಬಂದಿಲ್ಲ. ಮಾಲೀಕರ ಪರವಾಗಿ ಯಾವುದೇ ರಸೀದಿಯನ್ನೂ ನೀಡಲಾಗಿಲ್ಲ. ಹೀಗಿರುವಾಗ, ಅರ್ಜಿದಾರರನ್ನು ಪ್ರಕರಣದಲ್ಲಿ ಸಿಲುಕಿಸಿರುವುದು ಸರಿಯಲ್ಲ. ಉದ್ಯೋಗಿ ಎಸಗುವ ಯಾವುದೇ ಅಪರಾಧ ಕೃತ್ಯಕ್ಕೆ ಕ್ರಿಮಿನಲ್ ಕಾನೂನಿನ ಅಡಿಯಲ್ಲಿ ಉದ್ಯೋಗದಾತ ಅಥವಾ ಮಾಲೀಕರನ್ನು ಹೊಣೆಗಾರರನ್ನಾಗಿಸಲು ಆಗದು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಅರ್ಜಿದಾರರ ವಿರುದ್ಧ ಸ್ಫೋಟಕ ವಸ್ತುಗಳ ಕಾಯ್ದೆ ಹಾಗೂ ಸ್ಫೋಟಕ ಕಾಯ್ದೆ ಹಾಗೂ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸಿದೆ.

ಪ್ರಕರಣದ ಹಿನ್ನೆಲೆ ಏನು?: ಬೆಂಗಳೂರಿನ ಕಬ್ಬನ್‌ಪೇಟೆಯ ನಿವಾಸಿಗಳಾಗಿರುವ ಅರ್ಜಿದಾರರು ಕನಕಪುರ ತಾಲೂಕಿನ ಪಡುವನಗೆರೆ ಗ್ರಾಮದಲ್ಲಿ ಎಸ್‌ಎಲ್‌ಎನ್ ಕಂಪನಿ ನಡೆಸುತ್ತಿದ್ದು, ಕ್ವಾರಿ ಗುತ್ತಿಗೆದಾರರಿಗೆ ಸ್ಫೋಟಕ ಮಾರಾಟ ಮಾಡಲು ಪರವಾನಗಿ ಪಡೆದಿದ್ದಾರೆ. ಈ ನಡುವೆ ಸಾತನೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಿಂತಿದ್ದ ಕಾರೊಂದು ಸ್ಫೋಟಗೊಂಡು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನಡೆದಿತ್ತು. ಈ ಸಂಬಂಧ 2021ರ ಆಗಸ್ಟ್ 16ರಂದು ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಅರ್ಜಿದಾರರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದರು.

ಇದನ್ನೂ ಓದಿ:ಪ್ರಿಯಕರನೊಂದಿಗೆ ಸೇರಿ ಗಂಡನ ಹತ್ಯೆ: ಆರು ತಿಂಗಳ ಬಳಿಕ ತಾಯಿಗೆ ಉರುಳಾದ ಮಕ್ಕಳ ಹೇಳಿಕೆ

ಪ್ರಕರಣದ ವಿಚಾರಣೆ ವೇಳೆ, ಕಾರಿನಲ್ಲಿ ಸಾಗಿಸುತ್ತಿದ್ದ ಜಿಲೆಟಿನ್ ಕಡ್ಡಿಗಳು ಸ್ಫೋಟಗೊಂಡು, ಅದರಲ್ಲಿದ್ದ ಮಹೇಶ್ ಎಂಬ ವ್ಯಕ್ತಿ ಸಾವಿಗೀಡಾಗಿರುವುದು ಕಂಡು ಬಂದಿತ್ತು. ಈ ಸಂಬಂಧ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರಿಗೆ, ಅರ್ಜಿದಾರರು ಸ್ಫೋಟಕ ಮಾರಾಟ ಪರವಾನಗಿ ಪಡೆದಿರುವ ವಿಚಾರ ಹಾಗೂ ಮೃತ ಮಹೇಶ್ ಅರ್ಜಿದಾರರ ಮಳಿಗೆಯಿಂದ ಜಿಲೆಟಿನ್ ಕಡ್ಡಿಗಳನ್ನು ಖರೀದಿಸಿದ್ದ ವಿಚಾರ ತಿಳಿದುಬಂದಿತ್ತು. ಇದರಿಂದ, ಪೊಲೀಸರು ಅರ್ಜಿದಾರರನ್ನು 4 ಹಾಗೂ 5ನೇ ಆರೋಪಿಗಳನ್ನಾಗಿಸಿ, ಅವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದರಿಂದ, ಅರ್ಜಿದಾರರು ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ:ಕೊರೊನಾ ನಿಯಮ ಉಲ್ಲಂಘಿಸಿ ಐಟಿ ಇಲಾಖೆ ಎದುರು ಪ್ರತಿಭಟನೆ: ಕಾಂಗ್ರೆಸ್ ನಾಯಕರಿಗೆ ಸಮನ್ಸ್

ABOUT THE AUTHOR

...view details