ಬೆಂಗಳೂರು: ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರದ ಬಗ್ಗೆ ಮಾತಾಡಲು ಇಷ್ಟಪಡಲ್ಲ ಆದರೆ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬಗ್ಗೆ ಉಗ್ರಪ್ಪ ಮತ್ತು ಸಲೀಂ ಮಾತುಕತೆ ವಿಚಾರವನ್ನು ಸ್ವತಂತ್ರ ಏಜೆನ್ಸಿಯಿಂದ ತನಿಖೆ ಮಾಡಿಸಬೇಕು ಎಂದು ಕೇಂದ್ರದ ಮಾಜಿ ಸಚಿವ ಡಿ ವಿ ಸದಾನಂದಗೌಡ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಕುಮಾರ್ ಬಗ್ಗೆ ಅವರ ಪಕ್ಷದವರೇ ಮಾತನಾಡುತ್ತಿರುವುದು ನೋಡಿದರೆ ಅವರ ಪಕ್ಷದಲ್ಲೇ ಷಡ್ಯಂತ್ರ ನಡೆಯುತ್ತಿರುವುದು ಗೊತ್ತಾಗುತ್ತದೆ. ಕಾಂಗ್ರೆಸ್ ಈಗಾಗಲೇ ಸಿದ್ದರಾಮಯ್ಯ, ಡಿಕೆಶಿ ಅಂತಾ ವರ್ಟಿಕಲ್ ಆಗಿ ಡಿವೈಡ್ ಆಗಿದೆ. ಅದಕ್ಕೆ ಪ್ರೂಫ್ಗಳು ದಿನಾ ಒಂದೊಂದು ಕಾಣುತ್ತಾ ಇದೆ. ಕಾಂಗ್ರೆಸ್ ಪಕ್ಷ ಈಗಾಗಲೇ ಅಧಃಪತನದ ಅಂಚಿಗೆ ಹೋಗಿದೆ.
ಇದರ ಹಿಂದೆ ಯಾರಿದ್ದಾರೆ ಅಂತಾ ನಾನು ಹೇಳಲ್ಲ. ಪಕ್ಷದ ಕಚೇರಿಯಲ್ಲೇ ಕುಳಿತುಕೊಂಡು ಪಕ್ಷದ ನಾಯಕರ ವಿರುದ್ಧ ಮಾತಾಡಬೇಕಾದರೇ, ಅದರ ಹಿಂದೆ ಸ್ವಲ್ಪ ಬಲಿಷ್ಠರಾದವರು ಯಾರಾದರೂ ಇರಲೇಬೇಕಲ್ವಾ, ಅದು ಯಾರು ಏನು ಅಂತಾ ಅವರೇ ತಿಳಿದುಕೊಳ್ಳಲಿ ಎಂದರು.
ಉಪಚುನಾವಣೆ ಪ್ರಚಾರ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ದಸರಾ ಉತ್ಸವ ಮುಗಿದ ಬಳಿಕ ಪ್ರಚಾರಕ್ಕೆ ಹೋಗುತ್ತೇವೆ. ಪಕ್ಷದ ನಿರ್ದೇಶನದ ಪ್ರಕಾರ ಹೋಗುತ್ತೇವೆ. ಉಪಚುನಾವಣೆ ಬರದೇ ಇರುತ್ತಿದ್ದರೆ ಕೋರ್ ಕಮಿಟಿಯಲ್ಲಿ ನಿರ್ಧಾರ ಆದಂತೆ ರಾಜ್ಯ ಪ್ರವಾಸಕ್ಕೆ ಹೋಗಬೇಕಿತ್ತು. ನಮಗೆ ಉಪಚುನಾವಣೆ ಕ್ಷೇತ್ರಗಳು ಕೂಡಾ ಸವಾಲಿನ ಕ್ಷೇತ್ರಗಳು, ಉಪಚುನಾವಣೆ ಮುಗಿದ ಬಳಿಕ ಪ್ರವಾಸದ ದಿನಾಂಕ ನಿಗದಿಯಾಗುತ್ತದೆ ಎಂದರು.