ಕರ್ನಾಟಕ

karnataka

ಸರ್ಕಾರ ಯಾವ ಮುಖ ಇಟ್ಟುಕೊಂಡು ಲಸಿಕೆ ಅಭಿಯಾನ ಘೋಷಣೆ ಮಾಡಿತು: ಎಸ್​ಆರ್​ಪಿ ಪ್ರಶ್ನೆ

By

Published : May 1, 2021, 11:53 AM IST

ರಾಜ್ಯದಲ್ಲಿ ಆ್ಯಕ್ಸಿಜನ್ ಕೊರತೆಯಿದೆ, ರೆಮ್​ಡಿಸಿವರ್ ಕೊರತೆಯಿದೆ, ವೆಂಟಿಲೇಟರ್​ಗಳ ಕೊರತೆಯಿದೆ, ಈಗ ವ್ಯಾಕ್ಸಿನ್ ಕೊರತೆ ತೀವ್ರವಾಗಿ ಕಾಡುತ್ತಿದೆ. ಇಷ್ಟಾದರೂ ಬಿಜೆಪಿಯ ಯಾವೊಬ್ಬ ನಾಯಕರೂ ಕೇಂದ್ರ ಸರ್ಕಾರದಿಂದ ಇವುಗಳನ್ನು ಕೇಳಿ ಪಡೆಯುವ ಧೈರ್ಯ ಮಾಡುತ್ತಿಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಅಸಮಾಧಾನ ಹೊರಹಾಕಿದ್ದಾರೆ.

ಎಸ್.ಆರ್. ಪಾಟೀಲ್
s r patil

ಬೆಂಗಳೂರು: ಲಸಿಕೆ ಸಂಗ್ರಹ ಮಾಡಿಕೊಳ್ಳದ ಸರ್ಕಾರ ಏಕೆ ಲಸಿಕೆ ಅಭಿಯಾನ ಘೋಷಿಸಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನಾನೂ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಲವು ನಾಯಕರು ಲಸಿಕೆ ಕೊರತೆಯ ಬಗ್ಗೆ ಎಚ್ಚರಿಕೆ ನೀಡಿದ್ದೆವು. ಆದರೆ ಬಿಜೆಪಿ ಸರ್ಕಾರ ಇಷ್ಟು ದಿನ ಲಸಿಕೆ ದಾಸ್ತಾನು ಬೇಕಾದಷ್ಟಿದೆ ಎಂದು ಸುಳ್ಳು ಹೇಳುತ್ತಿತ್ತು. ಇವತ್ತು ಮೊದಲ ಬಾರಿಗೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಸತ್ಯ ಹೇಳಿದ್ದಾರೆ ಎಂದಿದ್ದಾರೆ.

ಲಸಿಕೆಯನ್ನೇ ದಾಸ್ತಾನು ಮಾಡಿಕೊಳ್ಳದ ಸರ್ಕಾರ ಯಾವ ಮುಖ ಇಟ್ಟುಕೊಂಡು ಲಸಿಕೆ ಅಭಿಯಾನ ಘೋಷಣೆ ಮಾಡಿತು. ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರ, ಇಡೀ ರಾಜ್ಯದಲ್ಲಿ ದಾಸ್ತಾನಿರುವುದು ಕೇವಲ 5 ಲಕ್ಷ ಡೋಸ್ ಲಸಿಕೆ ಅಷ್ಟೇ. ಈಗ ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ಅಭಿಯಾನ ಇಲ್ಲ ಅಂತಾ ಸರ್ಕಾರ ಹೇಳಿದೆ ಎಂದು ಎಸ್​ ಆರ್​ ಪಾಟೀಲ್​ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದ ಮುಖ್ಯಮಂತ್ರಿಯಾಗಲಿ, ಸಚಿವರುಗಳಿಗಾಗಲಿ, ರಾಜ್ಯದ 25 ಮಂದಿ ಬಿಜೆಪಿ ಸಂಸದರಿಗಾಗಲೀ ಕೇಂದ್ರ ಸರ್ಕಾರವನ್ನು ಪ್ರಶ್ನಿಸುವಷ್ಟು ಬೆನ್ನು ಮೂಳೆ ಗಟ್ಟಿಯಿಲ್ಲ. ಎರಡೂ ಕಡೆ ಬಿಜೆಪಿಯ ಸರ್ಕಾರವಿದ್ದರೆ ಡಬಲ್ ಎಂಜಿನ್ ರೀತಿ ಕೆಲಸ ಆಗುತ್ತೆ ಎಂದಿದ್ದರು. ಈಗ ನೋಡಿ ಪರಿಸ್ಥಿತಿ ಎಲ್ಲಿಗೆ ಬಂದಿದೆ ಎಂದು ಟೀಕಿಸಿದ್ದಾರೆ.

ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಿದೆ, ರೆಮಿಡಿಸಿವರ್ ಕೊರತೆಯಿದೆ, ವೆಂಟಿಲೇಟರ್​ಗಳ ಕೊರತೆಯಿದೆ, ಈಗ ವ್ಯಾಕ್ಸಿನ್ ಕೊರತೆ ತೀವ್ರವಾಗಿ ಕಾಡುತ್ತಿದೆ. ಇಷ್ಟಾದರೂ ಬಿಜೆಪಿಯ ಯಾವೊಬ್ಬ ನಾಯಕರೂ ಕೇಂದ್ರ ಸರ್ಕಾರದಿಂದ ಇವುಗಳನ್ನು ಕೇಳಿ ಪಡೆಯುವ ಧೈರ್ಯ ಮಾಡುತ್ತಿಲ್ಲ.

ಇದನ್ನೂ ಓದಿ:ಬೆಂಗಳೂರಿಗೆ ಕೋವಿಡ್​ ಕಂಟಕ.. ರಾಜಧಾನಿಯಲ್ಲಿ 21,602 ಸೋಂಕಿತರು ಪತ್ತೆ!

ಕೊರೊನಾ ತಡೆಗಟ್ಟಲು ರಾಜ್ಯದಲ್ಲಿ 14 ದಿನಗಳ ‘ಜನತಾ ಕರ್ಫ್ಯೂ’ ಹೆಸರಿನಲ್ಲಿ ಪರೋಕ್ಷವಾಗಿ ಲಾಕ್​​ಡೌನ್​​​ ಹೇರಿದೆ. ಲಾಕ್​ಡೌನ್​ನಿಂದ ಬಡವರು, ಕೂಲಿ ಕಾರ್ಮಿಕರು, ಮಧ್ಯಮ ವರ್ಗದವರು ಸಂಕಷ್ಟ ಅನುಭವಿಸುವಂತಾಗಿದೆ. ಲಾಕ್​ಡೌನ್​​ನಿಂದ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದ್ದು, ಜನಸಾಮಾನ್ಯರು ಆರ್ಥಿಕವಾಗಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊರೊನಾ ಸಂಕಷ್ಟ ಕಾಲದಲ್ಲಿ ರಾಜ್ಯದ ಪ್ರತಿಯೊಬ್ಬರಿಗೂ 5 ಕೆ.ಜಿ ಅಕ್ಕಿ ವಿತರಿಸಬೇಕು ಎಂದು ರಾಜ್ಯ ಸರ್ಕಾರವನ್ನ ಆಗ್ರಹಿಸುತ್ತೇನೆ. ಪಡಿತರ ಅಕ್ಕಿ ಕಡಿತಗೊಳಿಸಬಾರದು ಎಂದು ಆಗ್ರಹಿಸುತ್ತೇನೆ ಎಂದಿದ್ದಾರೆ.

ABOUT THE AUTHOR

...view details