ಕರ್ನಾಟಕ

karnataka

ETV Bharat / state

ಪ್ರಲ್ಹಾದ ಜೋಶಿ ಕಚೇರಿಯಲ್ಲಿ ಲಂಚ ಸ್ವೀಕಾರ- ಭೋಜೇಗೌಡ ಆರೋಪ: ಮಾನನಷ್ಟ ಮೊಕದ್ದಮೆ ಹೂಡುವೆ- ಜೋಶಿ - ETV Bharath Karnataka

ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ಮೇಲೆ ಜೆಡಿಎಸ್​ ಪ್ರಹಾರ ಆರಂಭಿಸಿದೆ. ಇತ್ತೀಚೆಗಷ್ಟೇ ಕುಮಾರಸ್ವಾಮಿ ದೇಶಸ್ಥ ಬ್ರಾಹ್ಮಣರು ಎಂದು ಹೇಳಿದರೆ, ಇಂದು ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಎಸ್.ಎಲ್. ಭೋಜೇಗೌಡ ಲಂಚದ ಆರೋಪ ಮಾಡಿದ್ದಾರೆ.

S L Bhojegowda
ಭೋಜೇಗೌಡ ಗಂಭೀರ ಆರೋಪ

By

Published : Feb 7, 2023, 11:03 PM IST

ಬೆಂಗಳೂರು: ರಾಷ್ಟ್ರೀಯ ವೈದ್ಯಕೀಯ ಶಿಕ್ಷಣ ಮಂಡಳಿಗೆ ಸದಸ್ಯರ ನೇಮಕ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಚೇರಿಯಲ್ಲಿ 2.5 ಕೋಟಿ ರೂ. ಲಂಚ ಸ್ವೀಕರಿಸಲಾಗಿದೆ ಎಂದು ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಎಸ್.ಎಲ್. ಭೋಜೇಗೌಡ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಿನ ಜೆಡಿಎಸ್ ಕಚೇರಿ ಜೆ.ಪಿ. ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರದ ಅಧೀನದಲ್ಲಿರುವ ಎನ್ಎಂಸಿ ಸದಸ್ಯರನ್ನಾಗಿ ನೇಮಿಸಲು ಶಿವಮೊಗ್ಗದ ವೈದ್ಯರೊಬ್ಬರಿಂದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಕಚೇರಿಯಲ್ಲಿ ಲಂಚ ಪಡೆಯಲಾಗಿದೆ. ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ. ಹರೀಶ್ ಅಯ್ಯಣ್ಣ ಎಂಬುವವರನ್ನು ಎನ್ಎಂಸಿ ಸದಸ್ಯರನ್ನಾಗಿ ನೇಮಿಸುವುದಕ್ಕಾಗಿ ಪ್ರಲ್ಹಾದ ಜೋಶಿಯವರ ಕಚೇರಿಯ ಸಿಬ್ಬಂದಿಗೆ 2.5 ಕೋಟಿ ಲಂಚ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಜೋಶಿ ಅವರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿತೇಂದ್ರ ಕುಮಾರ್ ಎಂಬುವವರ ಬ್ಯಾಂಕ್ ಖಾತೆಗೆ 2021ರ ಜುಲೈನಲ್ಲಿ 2 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ. ಉಳಿದ 50 ಲಕ್ಷ ರೂ. ನಗದು ರೂಪದಲ್ಲಿ ನೀಡಲಾಗಿದೆ. ಹರೀಶ್ ಅಯ್ಯಣ್ಣ ಅವರನ್ನು ಎನ್ಎಂಸಿ ಸದಸ್ಯರನ್ನಾಗಿ ನೇಮಕ ಮಾಡಬೇಕೆಂಬ ಕೋರಿಕೆಯನ್ನು ಪರಿಗಣಿಸುವುದಾಗಿ ಆಗ ಕೇಂದ್ರ ಆರೋಗ್ಯ ಸಚಿವರಾಗಿದ್ದ ಡಾ. ಹರ್ಷವರ್ಧನ್ ಅವರು ಪ್ರಲ್ಹಾದ ಜೋಶಿಯವರಿಗೆ ಪತ್ರವನ್ನೂ ಬರೆದಿದ್ದರು ಎಂದು ಬ್ಯಾಂಕ್ ಪಾಸ್ ಪುಸ್ತಕ ಹಾಗೂ ಕೇಂದ್ರ ಸಚಿವರ ಪತ್ರಗಳನ್ನು ತೋರಿಸಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ನಮ್ಮ ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡರ ಕುಟುಂಬದ ಕುರಿತು ಅತ್ಯಂತ ಲಘುವಾಗಿ ಮಾತನಾಡಿದ್ದಾರೆ. ಆದರೆ, ಅವರ ಕಚೇರಿಯಲ್ಲೇ ಲಂಚದ ಕಳ್ಳ ವ್ಯವಹಾರ ನಡೆದಿರುವ ಕುರಿತು ಏನು ಹೇಳುತ್ತಾರೆ? ಅವರ ಕಚೇರಿಯಲ್ಲಿ ಏನು ನಡೆಯುತ್ತಿದೆ ಎನ್ನುವುದು ರಾಜ್ಯಕ್ಕೆ ಗೊತ್ತಾಗಬೇಕು. ಪರಿಶುದ್ಧರು ಎಂದು ಹೇಳುವ ಅವರ ಭ್ರಷ್ಟಾಚಾರ ಇಲ್ಲಿದೆ. ಹಣಕ್ಕಾಗಿ ಕೇಂದ್ರ ಸಚಿವರ ಕಚೇರಿಯನ್ನು ಬಿಕರಿಗೆ ಇಡಲಾಗಿದೆ ಎಂದು ಆರೋಪ ಮಾಡಿದರು.

ತನಿಖೆಗೆ ಒತ್ತಾಯ: ಈ ಪ್ರಕರಣದ ಉನ್ನತಮಟ್ಟದ ತನಿಖೆ ಆಗಬೇಕು. ಹಣ ನೀಡಿದವರು ಮತ್ತು ಪಡೆದವರು ಯಾರು? ಬಹುಕೋಟಿ ರೂಪಾಯಿ ಹಗರಣದ ನಿಜವಾದ 'ಕಿಂಗ್​ ಪಿನ್​' ಯಾರು? ಇದರಲ್ಲಿ ಪ್ರಲ್ಹಾದ ಜೋಶಿಯವರ ಪಾತ್ರ ಏನು? ಎಂಬುದು ತನಿಖೆಯಿಂದ ಹೊರಬರಬೇಕು ಎಂದು ಭೋಜೇಗೌಡ ಒತ್ತಾಯಿಸಿದರು.

ಹರೀಶ್ ಅಣ್ಣಯ್ಯ ಅವರಿಗೆ ಆರಂಭದಲ್ಲಿ ಎನ್ಎಂಸಿ ಸದಸ್ಯರನ್ನಾಗಿ ನೇಮಿಸುವ ಆಮಿಷವೊಡ್ಡಿ ಹಣ ಪಡೆಯಲಾಗಿತ್ತು. ನಂತರ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರನ್ನಾಗಿ ಮಾಡುವ ಭರವಸೆ ನೀಡಲಾಗಿತ್ತು. ಕೇಂದ್ರ ಆರೋಗ್ಯ ಸಚಿವರು ಜೋಶಿಯವರಿಗೆ ಬರೆದಿರುವ ಪತ್ರಕ್ಕೂ ಹಗರಣಕ್ಕೂ ಇರುವ ನಂಟಿನ ಕುರಿತು ಕೂಡ ತನಿಖೆ ನಡೆಸಬೇಕು ಎಂದು ಅವರು ಬಲವಾಗಿ ಪ್ರತಿಪಾದಿಸಿದರು.

ತೇಜೋವಧೆ:ಈ ಆರೋಪಕ್ಕೆ ಟ್ವಿಟ್ಟರ್​​ನಲ್ಲಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು,"ಸಾರ್ವಜನಿಕರನ್ನು ದಾರಿ ತಪ್ಪಿಸಲಾಗುತ್ತಿದೆ. ಮೊದಲನೆಯದಾಗಿ, ಈ ಪತ್ರವನ್ನು ವೈದ್ಯರಿಗೆ ಬರೆಯಲಾಗಿದೆ ಮತ್ತು ನಾನು ಖಂಡಿತವಾಗಿಯೂ ವೈದ್ಯನಲ್ಲ. ನನ್ನ ಕಚೇರಿಯಲ್ಲಿ ಅಂತಹ ಉದ್ಯೋಗಿ ಇಲ್ಲ. ನಿಮಗೆ ತುಂಬಾ ವಿಶ್ವಾಸವಿದ್ದರೆ, ಈ ಪತ್ರದ ಹೆಸರು ಮತ್ತು ವಿಷಯವನ್ನು ಏಕೆ ಮಸುಕುಗೊಳಿಸಿದ್ದೀರಿ?" ಎಂದು ಪ್ರಶ್ನಿಸಿದ್ದಾರೆ.

"ತಳ ಬುಡವಿಲ್ಲದ ಹಾಗೂ ಜನರನ್ನು ದಾರಿ ತಪ್ಪಿಸುವ ಆಪಾದನೆ ಇದು ಮೊದಲನೆಯದಾಗಿ ಆ ಪತ್ರ ವೈದ್ಯರೊಬ್ಬರಿಗೆ ಬರೆಯಲಾಗಿದೆ, ಖಂಡಿತವಾಗಿಯೂ ಅದು ನಾನಂತೂ ಅಲ್ಲ. ಅವರು ಹೇಳಿರುವ ಹೆಸರಿನ ಉದ್ಯೋಗಿ ನಮ್ಮ ಕಚೇರಿಯಲ್ಲಿ ಇಲ್ಲ. ಈ ತರಹದ ಆಧಾರರಹಿತ ಆಪಾದನೆಯನ್ನು ನಾನು ಗಂಭೀರವಾಗಿ ಪರಿಗಣಿಸುತ್ತೇನೆ. ಇದು ನನ್ನ ತೇಜೋವಧೆ ಮಾಡುವ ಹುನ್ನಾರವಾಗಿದ್ದು, ಮಾನ ನಷ್ಟ ಮೊಕದ್ದಮೆ ದಾಖಲಿಸುವ ಬಗ್ಗೆ ನಾನು ಯೋಚಿಸುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಪ್ರಹ್ಲಾದ್ ಜೋಶಿ ನಮ್ಮ ಬ್ರಾಹ್ಮಣರಲ್ಲ, ಅವರನ್ನು ಮುಂದಿನ‌ ಸಿಎಂ ಮಾಡಲು ಆರ್​ಎಸ್ಎಸ್ ನಿರ್ಧರಿಸಿದೆ: ಹೆಚ್​ಡಿಕೆ

ABOUT THE AUTHOR

...view details