ಬೆಂಗಳೂರು: ಆಗಸ್ಟ್ ವಾರಾಂತ್ಯದಲ್ಲಿ 9,10 ಹಾಗೂ ಪಿಯುಸಿ ತರಗತಿ ಆರಂಭಿಸಲು ಸರ್ಕಾರ ಅವಕಾಶ ಕಲ್ಪಿಸಿಕೊಟ್ಟಿದೆ. ಆದರೆ, ಪ್ರಾಥಮಿಕ ಶಿಕ್ಷಣದ ತರಗತಿಗಳ ಆರಂಭಕ್ಕೆ ಇನ್ನು ಗ್ರೀನ್ ಸಿಗ್ನಲ್ ನೀಡಿಲ್ಲ. ಹೀಗಾಗಿ ಶೇ30ರಷ್ಟಾದರೂ ಪಠ್ಯ ಕಡಿತ ಮಾಡಬೇಕೆಂದು ರೂಪ್ಸಾ ಒತ್ತಾಯಿಸಿದೆ.
ಕೋವಿಡ್ ಹಿನ್ನೆಲೆ ಶೇ.30 ರಷ್ಟು ಪಠ್ಯಕಡಿತಕ್ಕೆ ಖಾಸಗಿ ಶಾಲಾಡಳಿತ ಆಗ್ರಹ - Bengaluru education news
ಕೋವಿಡ್ ಕಾರಣದಿಂದಾಗಿ ಪ್ರಾಥಮಿಕ ಶಿಕ್ಷಣದ ಭೌತಿಕ ತರಗತಿಗಳನ್ನು ನಡೆಸಲಾಗಿಲ್ಲ. ಇದರಿಂದ ಬಹುತೇಕ ವಿದ್ಯಾರ್ಥಿಗಳು ಆತಂಕದಲ್ಲಿದ್ದಾರೆ. ಆದ ಕಾರಣ ಶೇಕಡಾ 30ರಷ್ಟು ಪಠ್ಯಕಡಿತಗೊಳಿಸಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ಸಹಕಾರಿಯಾಗುವಂತೆ ರೂಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಅವರು ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.
ಈ ಕುರಿತು ಮಾತಾನಾಡಿದ ರೂಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ, ಕಳೆದ ಶೈಕ್ಷಣಿಕ ವರ್ಷದಂತೆ ಈ ವರ್ಷವೂ ಕೋವಿಡ್ ಕಾರಣದಿಂದ ಶಾಲೆಗಳಲ್ಲಿ ಎರಡು ತಿಂಗಳಿಂದ ಭೌತಿಕ ತರಗತಿ ನಡೆಸಲಾಗಿಲ್ಲ. ಬಹುತೇಕ ವಿದ್ಯಾರ್ಥಿಗಳಿಗೆ ಪಾಠ ಕೇಳುವ ಪರಿಕರಗಳಿಲ್ಲ ಮತ್ತು ಇಂದಿಗೂ ಪಠ್ಯಪುಸ್ತಕಗಳ ವಿತರಣೆ ಆಗಿಲ್ಲ. ಇಷ್ಟೆಲ್ಲ ಸಮಸ್ಯೆಗಳ ನಡುವೆ ವಿದ್ಯಾರ್ಥಿಗಳು ಆತಂಕದಲ್ಲಿದ್ದಾರೆ.
ಈ ನಿಟ್ಟಿನಲ್ಲಿ ಪಠ್ಯ ಕಡಿತದ ವಿಚಾರವಾಗಿ ಇಲಾಖೆ ಸ್ಪಷ್ಟಪಡಿಸಿದರೆ ಶಿಕ್ಷಕರು ಯಾವ ಪಾಠಗಳನ್ನು ಬೋಧನೆ ಮಾಡಬೇಕು ಎನ್ನುವ ಸ್ಪಷ್ಟತೆ ಸಿಗುತ್ತೆ. ಇದರಿಂದ ಮಕ್ಕಳು ಸಹ ನಿರಾತಂಕವಾಗಿ ಅಧ್ಯಯನ ಮಾಡಬಹುದು. ಹೀಗಾಗಿ, ಕನಿಷ್ಠ 30ರಷ್ಟು ಪಠ್ಯ ಕಡಿತ ಮಾಡಿ ಆದೇಶ ಹೊರಡಿಸಿ ಎಂದು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.