ಕರ್ನಾಟಕ

karnataka

By

Published : Feb 20, 2023, 3:33 PM IST

Updated : Feb 20, 2023, 4:30 PM IST

ETV Bharat / state

ಡಿ.ರೂಪಾ ವಿರುದ್ಧ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ ರೋಹಿಣಿ ಸಿಂಧೂರಿ

ಐಪಿಎಸ್ ಅಧಿಕಾರಿ ರೂಪಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದರು.

rohini sindhuri
ರೋಹಿಣಿ ಸಿಂಧೂರಿ

ಮಾಧ್ಯಮಗಳೊಂದಿಗೆ ಮಾತನಾಡಿದ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ

ಬೆಂಗಳೂರು: ಐಪಿಎಸ್ ಅಧಿಕಾರಿ ಡಿ.ರೂಪಾ ವಿರುದ್ಧ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ(ಸಿಎಸ್) ವಂದಿತಾ ಶರ್ಮಾ ಅವರಿಗೆ ಇಂದು ದೂರು ನೀಡಿದರು. ನಾಲ್ಕು ಪುಟಗಳ ದೂರು ಸಲ್ಲಿಸಿದ ಸಿಂಧೂರಿ, ರೂಪಾ ಮಾಡಿರುವ ಆರೋಪಗಳ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ.

ಕ್ರಮಕ್ಕೆ ಆಗ್ರಹ: ತನ್ನ ವಿರುದ್ಧ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಆಧಾರರಹಿತ, ಸುಳ್ಳು ಹಾಗೂ ವೈಯಕ್ತಿಕ ಆರೋಪ ಮಾಡಿ ಸೇವಾ ನಿಯಮ ಉಲ್ಲಂಘಿಸಿದ ಐಪಿಎಸ್ ಅಧಿಕಾರಿ ರೂಪಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ರೂಪಾ ಮಾಡಿರುವ ಆರೋಪದ ಲಿಂಕ್​ಗಳನ್ನು ಲಗತ್ತಿಸಿದ್ದಾರೆ.

ಸಿಂಧೂರಿ ಪ್ರತಿಕ್ರಿಯೆ: ವಿಧಾನಸೌಧದಲ್ಲಿ ದೂರು ನೀಡಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, "ಸರ್ಕಾರಿ ಅಧಿಕಾರಿಗಳು, ನೌಕರರು ಮಾಧ್ಯಮದವರ ಮುಂದೆ ಬರಬಾರದು ಅಂತ ನಿಯಮ ಇದೆ. ರೂಪಾ ಅವರು ಇಲ್ಲಸಲ್ಲದ ಆರೋಪ‌ ಮಾಡಿದ್ದಾರೆ. ಸಿಎಸ್‌ಗೆ ದೂರು ಕೊಡಲು ಬಂದಿದ್ದೇನೆ, ದೂರು ನೀಡಿದ್ದೇನೆ. ಅವರ ಕಾರ್ಯವ್ಯಾಪ್ತಿಯೇ ಬೇರೆ. ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ನಾನು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿಲ್ಲ. ವೈಯಕ್ತಿಕ ಆರೋಪದ ಬಗ್ಗೆ ನನ್ನ ಗಂಡ‌ ಮಾತನಾಡಿದ್ದಾರೆ. ಹಾಗಾಗಿ ನಾನು ಮಾತನಾಡಿಲ್ಲ, ನಾನು ಸಿಎಸ್‌ಗೆ ವರದಿ ನೀಡಿದ್ದೇನೆ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಆರೋಪ ಮಾಡಬಾರದು. ಏನು ಆಗುತ್ತಿದೆ ಎಂಬುದನ್ನು ಹೇಳುವುದಕ್ಕೆ ಸಿಎಸ್​ರನ್ನು ಭೇಟಿಯಾಗಿದ್ದೇನೆ. ಎಲ್ಲವನ್ನೂ ಮುಖ್ಯ ಕಾರ್ಯದರ್ಶಿಗೆ ಹೇಳಿದ್ದೇನೆ" ಎಂದು ತಿಳಿಸಿದರು.

ದೂರಿನಲ್ಲೇನಿದೆ?: "ಒಬ್ಬ ಸರ್ಕಾರಿ ಅಧಿಕಾರಿ ವಿರುದ್ಧ ಇನ್ನೊಬ್ಬ ಅಧಿಕಾರಿ ಏನಾದರೂ ದೂರು ನೀಡಬೇಕಾದರೆ, ಅದಕ್ಕೆ ಸೂಕ್ತ ವೇದಿಕೆ ಇದೆ. ಆದರೆ ನೇರವಾಗಿ ಮಾಧ್ಯಮದವರ ಮುಂದೆ ಸುಳ್ಳು ಆರೋಪ ಮಾಡಿ, ವ್ಯಕ್ತಿಗತವಾಗಿ ನಿಂದನೆ ಮಾಡುವುದು ಸರಿಯಲ್ಲ. ರೂಪಾ ನನ್ನ ವಿರುದ್ಧ 20 ಆರೋಪಗಳನ್ನು ಮಾಡಿದ್ದಾರೆ. 2020ರ ಮೇ ತಿಂಗಳಿನಲ್ಲಿ ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಕೋವಿಡ್ ಸೋಂಕಿತರು ಸಾವಿಗೀಡಾದ ಬಗ್ಗೆ ರೂಪಾ ತಮ್ಮ ವಿರುದ್ಧ ಆರೋಪಿಸಿದ್ದಾರೆ. ಹೈಕೋರ್ಟ್ ನೇಮಿಸಿದ ಸಮಿತಿ ಹಾಗೂ ರಾಜ್ಯ ಸರ್ಕಾರ ನೇಮಿಸಿದ ಆಯೋಗ ಚಾಮರಾಜನಗರ ಆಸ್ಪತ್ರೆಯಲ್ಲಿನ ಘಟನೆಯಲ್ಲಿ ತನ್ನ ಯಾವ ಪಾತ್ರವೂ ಇಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದೆ. ಆದರೂ ರೂಪಾ ತನ್ನ ವಿರುದ್ಧ ಸುಳ್ಳು ಆರೋಪ ಹೊರಿಸಿದ್ದಾರೆ.

ಮಂಡ್ಯ ಜಿಲ್ಲಾ ಪಂಚಾಯಿತಿಯ ಸಿಇಒ ಆಗಿದ್ದಾಗ ಶೌಚಾಲಯ ನಿರ್ಮಿಸಿದ ನನ್ನ ಕೆಲಸ ಸಾರ್ವಜನಿಕ ವಲಯದಲ್ಲಿದೆ. ನನ್ನ ಕೆಲಸಕ್ಕಾಗಿ ಭಾರತ ಸರ್ಕಾರ ನನಗೆ ಗೌರವ ಸಲ್ಲಿಸಿದೆ. ಈ ಬಗ್ಗೆ ಐಪಿಎಸ್ ಅಧಿಕಾರಿ ರೂಪಾ ಅವರು ಸಾಲಗಳ ಆರೋಪ ಮಾಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಜಾತಿ ಹಾಗೂ ನನ್ನ ಹುಟ್ಟು ಸ್ಥಳದ ಬಗ್ಗೆ ರೂಪಾ ಆಧಾರರಹಿತ ಆರೋಪ ಮಾಡಿದ್ದಾರೆ. ಇದು ಸೇವಾ ನಿಯಮದ ವಿರುದ್ಧವಾಗಿದೆ. ಮೈಸೂರು ಡಿಸಿಯಾಗಿ ನಾನು ತೆಗೆದುಕೊಂಡ ಕ್ರಮಗಳು ನನ್ನ ಕರ್ತವ್ಯದ ಭಾಗವಾಗಿದೆ. ಆದರೆ ರೂಪ ನನ್ನ ವಿರುದ್ಧ ಉದ್ದೇಶಪೂರ್ವಕವಾಗಿ ಆರೋಪ ಮಾಡಿದ್ದಾರೆ."

ಇದನ್ನೂ ಓದಿ:ಸಂಧಾನಕ್ಕೆ ಹೋಗಿ ಏನು ಮುಚ್ಚಿಡುವುದಕ್ಕೆ ಪ್ರಯತ್ನ ಮಾಡ್ತಿದ್ದಾರೆ? ಸಿಂಧೂರಿಗೆ ರೂಪಾ ಪ್ರಶ್ನೆ

"ನಾನು ಮೂವರು ಐಎಎಸ್ ಅಧಿಕಾರಿಗಳಿಗೆ ನನ್ನ ಫೋಟೋ ಕಳಿಸಿದ್ದೇನೆ ಎಂದು ರೂಪಾ ಆಧಾರರಹಿತ ಆರೋಪ ಮಾಡಿದ್ದಾರೆ. ಈ ಸುಳ್ಳು ಆರೋಪದ ಸಂಬಂಧ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅವರು ತಮ್ಮ ಆರೋಪದಲ್ಲಿ ಸರ್ಕಾರದ ಕ್ರಮವನ್ನೇ ಪ್ರಶ್ನಿಸಿದ್ದಾರೆ. ಇನ್ನು ಜಾಲಹಳ್ಳಿಯಲ್ಲಿರುವ ಆಸ್ತಿ ಬಗ್ಗೆ ರೂಪಾ ಪ್ರಸ್ತಾಪಿಸಿದ್ದಾರೆ. ಆ ಆಸ್ತಿ ನನ್ನ ಪತಿಯ ತಾಯಿಗೆ ಸೇರಿದ್ದಾಗಿದೆ. ಅದು ನನಗಾಗಲಿ, ನನ್ನ ಪತಿಗಾಗಲಿ ಸೇರಿದ್ದಲ್ಲ."

Last Updated : Feb 20, 2023, 4:30 PM IST

ABOUT THE AUTHOR

...view details