ಬೆಂಗಳೂರು :ವಿದೇಶ ಪ್ರವಾಸಕ್ಕೆ ತೆರಳಿದ್ದ ರಾಕ್ ಲೈನ್ ವೆಂಕಟೇಶ್ ಸಹೋದರನ ಮನೆಯಲ್ಲಿ ಕಳ್ಳತನ ಎಸಗಿದ್ದ 7 ಜನ ಆರೋಪಿಗಳನ್ನು ಮಹಾಲಕ್ಷ್ಮಿ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ನೇಪಾಳ ಮೂಲದ ಉಪೇಂದ್ರ ಬಹದ್ದೂರ್ ಶಾಹಿ, ನಾರಾ ಬಹದ್ದೂರ್ ಶಾಹಿ, ಖಾಕೇಂದ್ರ ಬಹದ್ದೂರ್ ಶಾಹಿ, ಕೋಮಲ್ ಶಾಹಿ, ಸ್ವಸ್ತಿಕ್ ಶಾಹಿ, ಪಾರ್ವತಿ ಶಾಹಿ ಹಾಗೂ ಶಾದಲ ಶಾಹಿ ಎಂದು ಗುರುತಿಸಲಾಗಿದೆ.
ಬಂಧಿತರ ಪೈಕಿ ಆರೋಪಿಯೊಬ್ಬ ಭ್ರಮರೇಶ್ ಮನೆಯ ಪಕ್ಕದಲ್ಲೇ ನಿರ್ಮಾಣ ಹಂತದ ಕಟ್ಟಡದ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದ. ಆತನೊಂದಿಗೆ ಉಳಿದ ಐವರು ಆರೋಪಿಗಳು ವಾಸವಿದ್ದರು. ಮಹಾಲಕ್ಷ್ಮಿ ಲೇಔಟ್ನ ನಾಗಪುರ ವಾರ್ಡಿನಲ್ಲಿ ವಾಸವಿರುವ ರಾಕ್ಲೈನ್ ವೆಂಕಟೇಶ್ ಸಹೋದರ ಭ್ರಮರೇಶ್ ಅಕ್ಟೋಬರ್ 21ರಂದು ಕುಟುಂಬ ಸಮೇತರಾಗಿ ವಿದೇಶ ಪ್ರವಾಸಕ್ಕೆ ತೆರಳಿದ್ದರು. ಅಕ್ಟೋಬರ್ 29ರಂದು ಮರಳಿ ಮನೆಗೆ ಬಂದಾಗ ಕಳ್ಳತನವಾಗಿರುವುದು ತಿಳಿದುಬಂದಿತ್ತು.
ಮೂರು ತಿಂಗಳುಗಳಿಂದಲೂ ಆರೋಪಿಗಳು ಭ್ರಮರೇಶ್ ಮನೆಯ ಮೇಲೆ ಕಣ್ಣಿಟ್ಟಿದ್ದರು. ಭ್ರಮರೇಶ್ ಕುಟುಂಬ ಸಮೇತ ವಿದೇಶ ಪ್ರವಾಸಕ್ಕೆ ತೆರಳಿರುವುದನ್ನು ಅರಿತು ಖದೀಮರು ಕಳ್ಳತನ ಕೃತ್ಯಕ್ಕೆ ಸಂಚು ರೂಪಿಸಿದ್ದರು. ಅದರಂತೆ ತಾವಿದ್ದ ನಿರ್ಮಾಣ ಹಂತದ ಕಟ್ಟಡದಿಂದ ಭ್ರಮರೇಶ್ ಮನೆಯ ಕಟ್ಟಡಕ್ಕೆ ಜಿಗಿದು ಕಿಟಕಿಯ ಸರಳುಗಳನ್ನ ಮುರಿದು ಒಳ ಪ್ರವೇಶಿಸಿದ್ದರು. ಬಳಿಕ ಮನೆಯಲ್ಲಿದ್ದ 5 ಕೆಜಿ ಚಿನ್ನಾಭರಣ ಮತ್ತು 6 ಲಕ್ಷ ರೂಪಾಯಿ ನಗದು ಕಳ್ಳತನ ಮಾಡಿ ಪರಾರಿಯಾಗಿದ್ದರು.