ಬೆಂಗಳೂರು :ನಗರದ ಕೋಲ್ಸ್ ಪಾರ್ಕ್ ಪ್ರದೇಶದಲ್ಲಿರುವ ಬಿಪಿಸಿಎಲ್ ಪೆಟ್ರೋಲ್ ಬಂಕ್ನಲ್ಲಿ ದರೋಡೆ ಮಾಡಿರುವ ಘಟನೆ ಶನಿವಾರ ಮುಂಜಾನೆ ನಡೆದಿದೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಿನೋದ್ ಆಟೋ ಸರ್ವೀಸ್ ಪೆಟ್ರೋಲ್ ಬಂಕ್ ಭಾರತಿ ನಗರ ಪೊಲೀಸ್ ಸ್ಟೇಷನ್ನಿಂದ ಕೇವಲ 150 ಮೀಟರ್ ದೂರದಲ್ಲಿದೆ. ಆದರೂ ಮೂರು ದ್ವಿಚಕ್ರ ವಾಹನದಲ್ಲಿ ಬಂದಿದ್ದ 7 ಜನರಿದ್ದ ದರೋಡೆಕೋರರ ತಂಡ ಪೆಟ್ರೋಲ್ ಹಾಕಿಸುವ ನೆಪದಲ್ಲಿ ಬಂಕ್ಗೆ ಬಂದು ಗ್ರಾಹಕರ ಎದುರೇ ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಮಾರಕಾಸ್ತ್ರ ತೋರಿಸಿ ಸಿಬ್ಬಂದಿಯ ಬಳಿಯಿದ್ದ 43 ಸಾವಿರ ರೂ.ಕಸಿದು ಪರಾರಿಯಾಗಿದ್ದಾರೆ.
ಪೆಟ್ರೋಲ್ ಬಂಕ್ನಲ್ಲಿ ದರೋಡೆ.. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯ ಪೆಟ್ರೋಲ್ ಬಂಕ್ ಬಳಿ ಮುಂಜಾನೆ 3:30ರ ತನಕ ಹೊಯ್ಸಳ ವಾಹನ ನಿಂತಿತ್ತು. ಆನಂತರ 4.25 ಸಮಯದಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳುವ ಸೋಗಿನಲ್ಲಿ 3 ಗಾಡಿಗಳಲ್ಲಿ 7 ಮಂದಿ ಬಂದಿದ್ದರು. ಗ್ರಾಹಕರು ಇದ್ದಾಗಲೇ ಏಕಾಏಕಿ ನಮ್ಮ ಸಿಬ್ಬಂದಿ ಮೇಲೆ ಲಾಂಗ್, ಮಚ್ಚು ತೋರಿಸಿ ಬೆದರಿಕೆಯೊಡ್ಡಿ 43 ಸಾವಿರ ರೂ. ದರೋಡೆ ಮಾಡಿ ಪರಾರಿಯಾಗಿದ್ದಾರೆ. ಘಟನೆಯಿಂದ ನಮ್ಮ ಸಿಬ್ಬಂದಿ ಭಯ ಭೀತರಾಗಿದ್ದಾರೆ ಎಂದು ವಿನೋದ್ ಪೆಟ್ರೋಲ್ ಬಂಕ್ ವ್ಯವಹಾರದ ಪಾಲುದಾರ ದಿವಾಕರ್ ತಿಳಿಸಿದ್ದಾರೆ.
ಮಧ್ಯರಾತ್ರಿಯ ನಂತರ ಪೆಟ್ರೋಲ್-ಡೀಸೆಲ್ ಹಾಕಿ ಸಂಗ್ರಹವಾದ ಹಣವನ್ನು ದರೋಡೆಕೋರರು ಬಲವಂತವಾಗಿ ತೆಗೆದುಕೊಂಡು ಹೋಗಿದ್ದಾರೆ. ಘಟನೆ ನಡೆದಾಗ ಒಬ್ಬ ಸಿಬ್ಬಂದಿ ಮಾತ್ರ ಪೆಟ್ರೋಲ್ ಹಾಕುತ್ತಿದ್ದರು. ಉಳಿದಿಬ್ಬರು ಆಫೀಸ್ ಒಳಗಿದ್ದರು. ಘಟನೆಯಾದ ಕೂಡಲೇ ದರೋಡೆಕೋರರನ್ನು ಹಿಡಿಯಲು ಪ್ರಯತ್ನಿಸಿದರೂ, ಅವರು ಪರಾರಿಯಾದರು.
ಈ ಘಟನೆಯ ದೃಶ್ಯ ಪೆಟ್ರೋಲ್ ಬಂಕ್ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಭಾರತಿನಗರ ಪೊಲೀಸ್ ಠಾಣೆಗೆ ದೂರು ನೀಡಿ ಸಿಸಿಟಿವಿ ದೃಶ್ಯವನ್ನ ಪೊಲೀಸರಿಗೆ ನೀಡಿದ್ದೇವೆ. ಆದಷ್ಟು ಶೀಘ್ರವೇ ದರೋಡೆ ಕೋರರನ್ನು ಬಂಧಿಸುವಂತೆ ಒತ್ತಾಯಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಕೋವಿಡ್ ಲಾಕ್ಡೌನ್ನಿಂದಾಗಿ ಪೆಟ್ರೋಲ್ ಡೀಲರ್ಗಳ ಆದಾಯ ಕಡಿಮೆಯಾಗಿದೆ. ಈ ಸಂದರ್ಭದಲ್ಲಿ ಪೆಟ್ರೋಲ್ ಬಂಕ್ ಮೇಲೆ ಈ ರೀತಿ ದಾಳಿಗಳಾದರೆ ವ್ಯವಹಾರ ನಡೆಸುವುದು ಕಷ್ಟ. ನಗರದಲ್ಲಿರುವ ನಮ್ಮ ಸಿಬ್ಬಂದಿ ಹಾಗೂ ಪೆಟ್ರೋಲ್ ಬಂಕ್ಗೆ ಪೊಲೀಸರು ಅಗತ್ಯ ಭದ್ರತೆ ಒದಗಿಸಿಬೇಕಿದೆ ಎಂದು ಅಖಿಲ ಕರ್ನಾಟಕ ಪೆಟ್ರೋಲ್ ವ್ಯಾಪಾರಿಗಳ ಮಹಾಮಂಡಲ (ಎಕೆಎಫ್ಪಿಟಿ) ಸರ್ಕಾರವನ್ನು ಆಗ್ರಹಿಸಿದೆ.
ಕೊರೊನಾ ಸೃಷ್ಟಿಸಿದ ಆರ್ಥಿಕ ಬಿಕ್ಕಟ್ಟಿನಿಂದ ಈಗಾಗಲೇ ಹಲವರು ನಿರುದ್ಯೋಗಿಗಳಾಗಿದ್ದಾರೆ. ಈ ಪರಿಣಾಮ ನಗರದಲ್ಲಿ ಸುಲಿಗೆ, ದರೋಡೆಯಂತಹ ಅಪರಾಧ ಕೃತ್ಯ ಆರಂಭವಾಗಿವೆ. ಈ ಘಟನೆ ಅದಕ್ಕೆ ಸಾಕ್ಷಿಯಾಗಿದೆ. ಉಳಿದ ಪೆಟ್ರೋಲ್ ಬಂಕ್ ಮಾಲೀಕರು ಈ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಬೇಕಿದೆ ಎಂದು ಎಕೆಎಫ್ಪಿಟಿಯ ಉಪಾಧ್ಯಕ್ಷ ಎ.ತಾರಾನಾಥ್ ಹೇಳಿದ್ದಾರೆ. ಜತೆಗೆ ಉಳಿದ ಅಸೋಸಿಯೇಷನ್ಗಳು ಸೂಕ್ತ ಭದ್ರತೆಗಾಗಿ ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸುವಂತೆ ತಿಳಿಸಿದ್ದಾರೆ.