ಬೆಂಗಳೂರು: ಕಾಂಗ್ರೆಸ್ನವರು ಖಾಲಿಯಾಗಿರುವ ಅಡುಗೆ ಮನೆಯ ಡಬ್ಬ ಅಲ್ಲಾಡಿಸಿ, ಪಕ್ಕದ ಮನೆಯಿಂದ ಹೊರಬರುವ ಅಡುಗೆ ಪರಿಮಳ ನಮ್ಮ ಮನೆಯದ್ದೇ ಎಂದು ಹೇಳಿಕೊಂಡು ಓಡಾಡುತ್ತಾರೆ. ನಿಮ್ಮದು ಬರೀ ಯೋಚನೆ. ನಮ್ಮ ಸರ್ಕಾರದ್ದು ಯೋಜನೆ ಮತ್ತು ಜನಪರ ಕಾರ್ಯಾಚರಣೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಕಂದಾಯ ಸಚಿವ ಆರ್.ಅಶೋಕ್ ಟಾಂಗ್ ಕೊಟ್ಟರು.
ಸಿದ್ದರಾಮಯ್ಯನವರು ಇತ್ತೀಚೆಗೆ ನಾಮಕರಣ ಮಾಡಿಸುವ ಅಥವಾ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ ಅನಿಸುತ್ತಿದೆ. ನಮ್ಮ ಸರ್ಕಾರ ಯಾವುದೇ ಜನಪರ ಕಾರ್ಯಕ್ರಮ ಮಾಡಿದ್ರೂ ಅದನ್ನು ನಾನು ಅಧಿಕಾರದಲ್ಲಿ ಇದ್ದಾಗಲೇ ಯೋಚನೆ ಮಾಡಿದ್ದೆ, ಈ ಬಿಜೆಪಿ ಸರ್ಕಾರ ಕಾರ್ಯರೂಪಕ್ಕೆ ತಂದಿದೆ ಅಷ್ಟೇ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ. ನಿಮ್ಮ ಸರ್ಕಾರವಿದ್ದಾಗ ಯೋಚನೆ ಮಾಡಿದ್ದು ಸರಿ. ಆದರೆ, ಯಾಕೆ ಕಾಯ್ದೆ ಜಾರಿಗೆ ತಂದಿಲ್ಲ ಎಂದು ಪತ್ರಕರ್ತರು, ಜನಸಾಮಾನ್ಯರು ಕೇಳಿದ್ರೆ ಏ, ಸುಮ್ನಿರಪ್ಪ ನಾನು ಹೇಳೊದಷ್ಟೇ ಕೇಳು ಎಂದು ಬಾಯಿ ಮುಚ್ಚಿಸೋಕೆ ಬರುತ್ತಾರೆ. ಅಲ್ಲಿಗೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ನವರು ಖಾಲಿಯಾಗಿರುವ ಅಡುಗೆ ಮನೆಯ ಡಬ್ಬ ಅಲ್ಲಾಡಿಸಿ, ಪಕ್ಕದ ಮನೆಯಿಂದ ಹೊರಬರುವ ಅಡುಗೆ ಪರಿಮಳ ನಮ್ಮ ಮನೆಯದ್ದೇ ಎಂದು ಹೇಳಿಕೊಂಡು ಓಡಾಡುತ್ತಾರೆ ಅಂತಾ ಪತ್ರಿಕಾ ಹೇಳಿಕೆಯಲ್ಲಿ ವ್ಯಂಗ್ಯವಾಡಿದ್ದಾರೆ.
ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಕೇವಲ ಘೋಷಣೆ ಮಾಡದೇ ಅವರ ಕೈಗೆ ಪ್ರಧಾನಿ ಮೋದಿಯವರ ಸಮ್ಮುಖದಲ್ಲೇ 52,072 ತಾಂಡಾದಲ್ಲಿ ವಾಸಿಸುವ ಕುಟುಂಬಕ್ಕೆ ಹಕ್ಕುಪತ್ರ ನೀಡುವ ಮೂಲಕ ಐತಿಹಾಸಿಕ ಕ್ರಮಕ್ಕೆ ಇಡೀ ಕಲ್ಯಾಣ ಕರ್ನಾಟಕ ಜಿಲ್ಲೆಯ ಜನ ಸಾಕ್ಷಿಯಾಗಿದ್ದಾರೆ. ಆದರೆ ಎಂದಿನಂತೆ ಸಿದ್ದರಾಮಯ್ಯನವರು ತಾಂಡಾಗಳನ್ನು ಕಂದಾಯ ಗ್ರಾಮ ಮಾಡುವ ಯೋಚನೆ ಮಾಡಿದ್ದು ಕಾಂಗ್ರೆಸ್ ಸರ್ಕಾರ, ಈಗ ಬಿಜೆಪಿ ಸರ್ಕಾರ ನಾವು ಮಾಡಿದ ಅಡುಗೆಯಲ್ಲಿ ಊಟ ಮಾಡುತ್ತಿದೆ ಎಂದು ಹೇಳಿ ಜನರ ದಾರಿತಪ್ಪಿಸುವ ಹೇಳಿಕೆ ನೀಡಿದ್ದಾರೆ ಎಂದು ಸಚಿವ ಅಶೋಕ್ ಟೀಕಿಸಿದರು.