ಹುಬ್ಬಳ್ಳಿ:ನಾವು ಶ್ರದ್ಧೆ, ನಿಷ್ಠೆಯಿಂದ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಡುವ ಕೆಲಸ ಮಾಡಿದ್ದೇವೆ. ಈ ಮೂಲಕ ನೊಂದ ಹಿಂದುಳಿದ, ದೀನ ದಲಿತರಿಗೆ ಶಾಶ್ವತ ಪರಿಹಾರ ಕೊಡುವ ಕೆಲಸವನ್ನು ಮಾಡಿದ್ದೇವೆ. ಇದನ್ನು ಸಹಿಸದೇ ಕಾಂಗ್ರೆಸ್ ಪಕ್ಷದವರು ಹತಾಶೆಯಿಂದ ಮೀಸಲಾತಿ ವಿರೋಧಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಬಿಜೆಪಿಯವರಿಗೆ ಮೀಸಲಾತಿ ಮರು ಹಂಚಿಕೆ ತಿರುಗುಬಾಣ ಆಗುತ್ತದೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಈವರೆಗೆ ಕಾಂಗ್ರೆಸ್ ಪಕ್ಷದವರಿಗೆ ಎಲ್ಲ ವಿಷಯದಲ್ಲಿ ತಿರುಗುಬಾಣ ಆಗಿದೆ. ಹೀಗಾಗಿ ಎಲ್ಲರಿಗೂ ತಿರುಗುಬಾಣ ಆಗುತ್ತದೆ ಎಂದು ತಿಳಿದು ಕೊಂಡಿದ್ದಾರೆ. ನಾವು ಶ್ರದ್ಧೆಯಿಂದ ನಿಷ್ಠೆಯಿಂದ ಮೀಸಲಾತಿ ಕೊಟ್ಟಿದ್ದೇವೆ. ಹೀಗಾಗಿ ಕಾಂಗ್ರೆಸ್ನವರು ಮಾಡಲಾಗದ ಕೆಲಸವನ್ನು ನಾವು ಮಾಡಿದ್ದೇವೆ. ಅವರಿಗೆ ರಾಜಕೀಯ ಇಚ್ಛಾಶಕ್ತಿ ಇರಲಿಲ್ಲ. ಡೋಂಗಿತನ ಇತ್ತು. ನಾವು ಇಚ್ಛಾಶಕ್ತಿ ಪ್ರದರ್ಶನ ಮಾಡಿದ್ದೇವೆ. ಹೀಗಾಗಿ ಅವರು ಹತಾಶೆಯಿಂದ ಮಾತನಾಡುತ್ತಾರೆ ಎಂದರು.
ಇದನ್ನು ಓದಿ:ಕ್ಷೇತ್ರ ಉಳಿಸಿಕೊಂಡ ವಿನಯ್: ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಕುಲಕರ್ಣಿ ಫೈನಲ್
ಕಾಂಗ್ರೆಸ್ ಪಕ್ಷದ ಎರಡನೇ ಪಟ್ಟಿ ಬಿಡುಗಡೆ ವಿಚಾರವಾಗಿ ಮಾತನಾಡಿ, ಈಗಾಗಲೇ ನಿನ್ನೆ ನಮ್ಮ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆ ಆಗಿದೆ. ಬರುವ ಏ. 8 ರಂದು ಮತ್ತೊಂದು ಸುತ್ತಿನ ಸಭೆ ನಡೆಸಿ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದರು. ಸ್ಟಾರ್ ನಟರ ಪ್ರಚಾರದ ವಿಚಾರವಾಗಿ ಮಾತನಾಡಿ, ಪವನ್ ಕಲ್ಯಾಣ ಪ್ರಚಾರಕ್ಕೆ ಆಗಮಿಸುವ ವಿಷಯ ಗೊತ್ತಿಲ್ಲ. ಆದರೆ ಅವರು ನಮ್ಮ ರಾಷ್ಟ್ರೀಯ ನಾಯಕರನ್ನು ಭೇಟಿ ಆಗಿದ್ದಾರೆ. ಹೀಗಾಗಿ ಕಾದು ನೋಡಿ ಎಂದು ತಿಳಿಸಿದರು.