ಕರ್ನಾಟಕ

karnataka

By

Published : May 29, 2023, 8:43 PM IST

ETV Bharat / state

9 ದಶಕಗಳು ಕಳೆದರೂ ಕನ್ನಡ ಚಿತ್ರರಂಗಕ್ಕಾಗಿ ನಿರ್ಮಾಣವಾಗದ ಫಿಲ್ಮ್ ಸಿಟಿ: ಏಕೆ ಗೋತ್ತಾ?

ಕನ್ನಡ ಚಿತ್ರರಂಗದ ಹಲವು ದಿನಗಳ ಬೇಡಿಕೆಯಾಗಿರುವ ಫಿಲ್ಮ್ ಸಿಟಿ ನಿರ್ಮಾಣ ಕಾರ್ಯ ಇಂದಿಗೂ ಅನುಷ್ಠಾನಕ್ಕೆ ಬರದಿವುದಕ್ಕೆ ಕಾರಣಗಳು ಇಲ್ಲಿದೆ.

reasons-why-not-constructed-film-city-in-karnataka
9 ದಶಕಗಳು ಕಳೆದರು ಕನ್ನಡ ಚಿತ್ರರಂಗಕ್ಕಾಗಿ ನಿರ್ಮಾಣವಾಗದ ಫಿಲ್ಮ್ ಸಿಟಿ: ಏಕೆ ಗೋತ್ತಾ?

ಕನ್ನಡ ಚಿತ್ರರಂಗ 90 ವರ್ಷಗಳನ್ನು ಪೂರೈಸಿದೆ. ಕನ್ನಡ ಚಿತ್ರರಂಗ ಇಂದು ವಿಶ್ವಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ವರ್ಷವೊಂದಕ್ಕೆ ನೂರಾರು ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ನಿರ್ಮಾಣಗೊಳ್ಳುತ್ತಿವೆ. ಸಾವಿರಾರು ಕೋಟಿ ಮಾರುಕಟ್ಟೆ ಮೌಲ್ಯವುಳ್ಳ ಚಿತ್ರರಂಗವಾಗಿ ಸ್ಯಾಂಡಲ್​ವುಡ್ ಬೆಳೆದು ನಿಂತಿದೆ. ವಿಪರ್ಯಾಸವೆಂದರೆ ರಾಜ್ಯದಲ್ಲಿ ಅನೇಕ ಸರ್ಕಾರಗಳು ಬಂದು ಹೋದರೂ ಕರ್ನಾಟಕದಲ್ಲಿ ಒಂದು ಫಿಲ್ಮ್ ಸಿಟಿ ನಿರ್ಮಿಸಲು ಸಾಧ್ಯವಾಗಿಲ್ಲ.

ಇಂದಿಗೂ ನಮ್ಮವರು ಪಕ್ಕದ ರಾಜ್ಯ ತೆಲಂಗಾಣದಲ್ಲಿರುವ ರಾಮೋಜಿರಾವ್ ಫಿಲ್ಮ್ ಸಿಟಿಯನ್ನೇ ಅವಲಂಬಿಸಿದ್ದೇವೆ. ಇದಕ್ಕೆ ಕನ್ನಡ ಚಿತ್ರರಂಗದಲ್ಲಿನ ನಾಯಕತ್ವದ ಕೊರತೆ ಒಂದು ಕಾರಣವಾದರೆ, ಸರ್ಕಾರದ ಅಸಡ್ಡೆ ಮನೋಭಾವ ಇನ್ನೊಂದು ಕಾರಣ ಎಂಬುದರಲ್ಲಿ ಯಾವುದೇ ಅನುಮಾನವೂ ಇಲ್ಲ. ಕ್ರೇಜಿ ಸ್ಟಾರ್​ ರವಿಚಂದ್ರನ್ ಕನ್ನಡ ಚಿತ್ರರಂಗಕ್ಕೆ ಫಿಲ್ಮ್ ಸಿಟಿ ನಿರ್ಮಾಣ ಮಾಡಬೇಕೆಂಬ ಮನವಿ ಪತ್ರವನ್ನ ಹಿಂದೆ ಅನೇಕ ಬಾರಿ ಸರ್ಕಾರಗಳಿಗೆ ಸಲ್ಲಿಸಿದ್ದರು. ರೂಪು -ರೇಷೆಯನ್ನು ಸಿದ್ಧಪಡಿಸಿ ಕೊಟ್ಟಿದ್ದರು.

ಕಾಲ ಕಾಲಕ್ಕೆ ಸರ್ಕಾರಗಳೂ ಬದಲಾದವೇ ಹೊರತು ರವಿಚಂದ್ರನ್ ಮನವಿಗೆ ಮನ್ನಣೆ ಸಿಗಲಿಲ್ಲ. ಹೀಗಾಗಿಯೇ ಬಳಲಿ, ಬೇಸತ್ತು ಹೋದ ರವಿಚಂದ್ರನ್ ಈಗ ಫಿಲ್ಮ್ ಸಿಟಿಯ ಬಗ್ಗೆ ಮಾತನಾಡುವುದನ್ನೇ ಬಿಟ್ಟಿದ್ದಾರೆ. ರವಿಚಂದ್ರನ್​ಗೂ ಮುನ್ನ ಇಂಥಹದ್ದೊಂದು ಕನಸನ್ನ ಶಂಕರ್ ನಾಗ್ ಕಂಡಿದ್ದರು. ಆದರೆ, ಶಂಕರ್ ನಾಗ್ ಅವರ ಅಕಾಲಿಕ ಅಗಲಿಕೆಯ ಜೊತೆಯಲ್ಲಿ ಆ ಕನಸು ಕೂಡ ಕಮರಿ ಹೋಯ್ತು.

2013ರಲ್ಲಿ ಮೊದಲ ಬಾರಿಗೆ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮೈಸೂರಿನಲ್ಲಿ ಚಲನಚಿತ್ರ ನಗರಿ ನಿರ್ಮಾಣ ಮಾಡಲು ಸಮ್ಮತಿಸಿದ್ದರು. ಹಣಕಾಸು ಸಚಿವರು ಕೂಡ ಆಗಿದ್ದ ಸಿದ್ಧರಾಮಯ್ಯ ಬಜೆಟ್​ನಲ್ಲಿ 116 ಎಕರೆ ಭೂಮಿಯನ್ನೂ ಮಂಜೂರು ಮಾಡಿದ್ದರು. ಮೈಸೂರಿನ ತಮ್ಮ ವರುಣ ಕ್ಷೇತ್ರದಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದರು. ಆದರೆ, ಆ ಘೋಷಣೆ ಕೇವಲ ಘೋಷಣೆಯಾಗಿಯೇ ಉಳಿಯಿತು.

2018ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಹೆಚ್.ಡಿ.ಕುಮಾರಸ್ವಾಮಿ ಫಿಲ್ಮ್ ಸಿಟಿ ನಿರ್ಮಾಣವನ್ನು ಮೈಸೂರಿನಿಂದ ರಾಮನಗರಕ್ಕೆ ಸ್ಥಳಾಂ ತರಿಸಿದ್ದರು. ರಾಮನಗರದಲ್ಲಿಯೇ 500 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಫಿಲ್ಮ್ ಸಿಟಿ ನಿರ್ಮಾಣ ಮಾಡುವ ಭರವಸೆಯನ್ನ ನೀಡಿದ್ದರು. ಇದಕ್ಕಾಗಿ 40 ಕೋಟಿ ರೂಪಾಯಿ ಅನುದಾನವನ್ನೂ ಕೂಡ ಬಿಡುಗಡೆ ಮಾಡಿದ್ದರು. ಆದರೆ ಇಲ್ಲಿಯೂ ರಾಜಕಾರಣ ಆರಂಭವಾಯಿತು. ಮೈಸೂರಿನಿಂದ ರಾಮನಗರಕ್ಕೆ ಫಿಲ್ಮ್ ಸಿಟಿಯನ್ನ ವರ್ಗಾವಣೆ ಮಾಡಿದ್ದಕ್ಕೆ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದರು.

ಮೈಸೂರು ಹಾಗೂ ಸುತ್ತಮುತ್ತಲಿನ ತಾಣ ಕನ್ನಡ ಮಾತ್ರವಲ್ಲದೇ ಹಿಂದಿ, ತೆಲುಗು, ತಮಿಳು ಸೇರಿದಂತೆ ಹಲವಾರು ಭಾಷೆಗಳ ಚಿತ್ರ ನಿರ್ಮಾಪಕರ ನೆಚ್ಚಿನ ತಾಣ. ಇಲ್ಲಿನ ಸುತ್ತಮುತ್ತಲಿನ ಪರಿಸರ ಚಿತ್ರೀಕರಣಕ್ಕೆ ಹೇಳಿ ಮಾಡಿಸಿದಂತಿದೆ, 16 ಅರಮನೆಗಳು, 250ಕ್ಕೂ ಹೆಚ್ಚು ಲೊಕೇಷನ್‌ಗಳು, ನದಿ, ನಾಲೆ, ಕಾಲುವೆ, ಬೆಟ್ಟಗುಡ್ಡಗಳೊಂದಿಗೆ ಚಿತ್ರೀಕರಣಕ್ಕೆ ಉತ್ತಮ ತಾಣವಾಗಿದೆ. ಇದೀಗ ವಿಮಾನ ಸೌಲಭ್ಯವೂ ಇದೆ. ಇದೆಲ್ಲದಕ್ಕಿಂತ ಮೈಸೂರಿನಲ್ಲಿಯೇ ಚಿತ್ರನಗರಿ ಸ್ಥಾಪನೆಯಾಗಬೇಕು ಎಂದು ದಿ. ಡಾ. ರಾಜಕುಮಾರ್ ಕನಸು ಕಂಡಿದ್ದರು. ಹಾಗಿರುವಾಗ ಮೈಸೂರಿನಿಂದ ರಾಮನಗರಕ್ಕೆ ಚಿತ್ರನಗರಿ ವರ್ಗ ಮಾಡಿರುವುದು ಸಮಂಜಸವಲ್ಲ ಎಂದು ಪತ್ರವನ್ನೂ ಬರೆದು ಅಸಮಾಧಾನವನ್ನೂ ಹೊರ ಹಾಕಿದ್ದರು.

ಮೈತ್ರಿ ಸರ್ಕಾರ ಪತನವಾಗಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂತು, ಫಿಲ್ಮ್ ಸಿಟಿಯನ್ನ ಕನಕಪುರ ರಸ್ತೆಯಲ್ಲಿರುವ ರೋರಿಚ್ ಎಸ್ಟೇಟ್ ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಫಿಲ್ಮ್ ಸಿಟಿ ನಿರ್ಮಾಣ ಮಾಡುವುದಾಗಿ ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದರು. ಆದರೆ, ಹೀಗೇ ಮಾಡಿದ್ದೇ ಆದಲ್ಲಿ ಜೀವ ವೈವಿಧ್ಯ ಉಳಿಸಿಕೊಂಡಿರುವ ರೋರಿಚ್ ಎಸ್ಟೇಟ್ ಸಂಪೂರ್ಣ ನಾಶವಾಗುತ್ತೆ ಎಂದು ಕುಮಾರಸ್ವಾಮಿ ವಿರೋಧಿಸಿದ್ದರು. ಪರಿಸರ ನಾಶದ ಜೊತೆಗೆ ಮಾನವ ವನ್ಯಮೃಗಗಳ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಂತೆ ಆಗುತ್ತೆ ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದರು. ಪರಿಸರವಾದಿಗಳೂ ಕೂಡ ಬಿ.ಎಸ್.ವೈ ಸರ್ಕಾರದ ನಿಲುವನ್ನ ಪ್ರಶ್ನೆ ಮಾಡಿದ್ದರು.

ಹೀಗೆ ರಾಜಕೀಯ ಹಾಗೂ ಆಸಕ್ತಿಯ ಕೊರತೆಯ ಕಾರಣಕ್ಕೆ ಯಾವತ್ತೋ ನಿರ್ಮಾಣವಾಗಬೇಕಿದ್ದ ಫಿಲ್ಮ್ ಸಿಟಿ ಇನ್ನೂ ನಿರ್ಮಾಣವಾಗಿಲ್ಲ. ಯಡಿಯೂರಪ್ಪ ಅಧಿಕಾರ ತ್ಯಜಿಸಿದಾಗ ಮುಖ್ಯಮಂತ್ರಿಯಾದ ಬಸವರಾಜ್ ಬೊಮ್ಮಾಯಿ ಕನ್ನಡ ಚಿತ್ರರಂಗದ ಕಾರ್ಯಕ್ರಮಕ್ಕೆ ಬಂದರೆ ಹೊರತು, ಕನ್ನಡ ಚಿತ್ರರಂಗದ ಕಷ್ಟ, ನಷ್ಟವನ್ನ ಒಂದು ದಿನವೂ ಸಮಾಧಾನದಿಂದ ಕೇಳಲಿಲ್ಲ. ಫಿಲ್ಮ್ ಸಿಟಿ ನಿರ್ಮಾಣ ಮಾಡುವ ಉತ್ಸಾಹವನ್ನೂ ತೋರಿಸಲಿಲ್ಲ ಎಂದು ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್. ವಿ.ರಾಜೇಂದ್ರ ಸಿಂಗ್ ಬಾಬು ಆರೋಪಿಸಿದ್ದರು.

ಈಗ ಮೊತ್ತೊಮ್ಮೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು, ಕನ್ನಡ ಚಿತ್ರರಂಗದಲ್ಲಿ ಫಿಲ್ಮ್ ಸಿಟಿ ನಿರ್ಮಾಣದ ಆಸೆ ಮತ್ತೆ ಚಿಗುರೊಡೆದಿದೆ. ಸಿದ್ಧರಾಮಯ್ಯ ಸರ್ಕಾರ ಫಿಲ್ಮ್ ಸಿಟಿಯನ್ನ ನಿರ್ಮಾಣ ಮಾಡುತ್ತೆ ಎಂಬ ವಿಶ್ವಾಸ ಕೂಡ ಕನ್ನಡ ಚಿತ್ರರಂಗಕ್ಕೆ ಇದೆ. ಇತ್ತೀಚಿಗೆ ಶಿವರಾಜ್ ಕುಮಾರ್ ಫಿಲ್ಮ್ ಸಿಟಿ ಯೋಜನೆ ಜಾರಿಗೆ ಬರುತ್ತೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದರು.

ಈ ಹಿಂದೆ 1980 ರಲ್ಲಿ ರಾಮಕೃಷ್ಣ ಹೆಗಡೆ ಸರ್ಕಾರ ಹೆಸರಘಟ್ಟ ಬಳಿ 200 ಎಕರೆ ಪ್ರದೇಶವನ್ನು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಮಜೂರು ಮಾಡಿತ್ತು.
2004ರಲ್ಲಿ ಎಸ್. ಎಮ್ ಕೃಷ್ಣ ಸರ್ಕಾರ ಈ ಯೋಜನೆಗೆ ಪುನರುದ್ಧಾರ ನೀಡಿದ್ದರು. 2017ರಲ್ಲಿ ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣದ ಘೋಷಣೆಯನ್ನು ಸಿದ್ದರಾಮಯ್ಯ ಸರ್ಕಾರ ಮಾಡಿತ್ತು. 2018ರಲ್ಲಿ ಮೈಸೂರಿನಿಂದ ರಾಮನಗರಕ್ಕೆ ಫಿಲ್ಮ್ ಸಿಟಿ ವರ್ಗಾಯಿಸಿ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಆದೇಶಿದ್ದರು. 2019ರಲ್ಲಿ ಕನಕಪುರದ ರೋರಿಚ್ ಎಸ್ಟೇಟ್​ನ 468 ಎಕರೆ ಪ್ರದೇಶದಲ್ಲಿ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ಧರಿಸಿದ್ದರು.

2021ರಲ್ಲಿ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹಿಮ್ಮಾವು ಗ್ರಾಮದಲ್ಲಿ ಚಿತ್ರನಗರಿ ನಿರ್ಮಾಣಕ್ಕೆ 110 ಎಕರೆ ಮಂಜೂರು ಮಾಡಲಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವರಾಗಿದ್ದ ಸಿ.ಸಿ.ಪಾಟೀಲ್ ಹೇಳಿದ್ದರು. ಈಗ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್​ ಸರ್ಕಾರ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಮುಂದಾಗುತ್ತಾ ಅಥವಾ ಇಲ್ಲವೋ ಎಂದು ಕಾದು ನೋಡಬೇಕಾಗಿದೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ಫಿಲ್ಮ್ ಸಿಟಿ ಸ್ಥಾಪನೆಗೆ ನಟ ರಿಷಬ್ ಶೆಟ್ಟಿ ಮನವಿ

ABOUT THE AUTHOR

...view details