ಕರ್ನಾಟಕ

karnataka

By

Published : Jul 26, 2023, 3:48 PM IST

Updated : Jul 26, 2023, 5:19 PM IST

ETV Bharat / state

ಪ್ರಕರಣಗಳ ಶೀಘ್ರ ವಿಚಾರಣೆಗೊಳಪಡಿಸಲು ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ರವಿ ಪೂಜಾರಿ..

ಹಸ್ತಾಂತರ ಆದೇಶದಲ್ಲಿ ಉಲ್ಲೇಖಿಸಿರುವ ಪ್ರಕರಣಗಳನ್ನು ಶೀಘ್ರ ವಿಚಾರಣೆಗೊಳಪಡಿಸಲು ನಿರ್ದೇಶನ ನೀಡುವಂತೆ ಕೋರಿ ರವಿ ಪೂಜಾರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

High Court
ಹೈಕೋರ್ಟ್‌

ಬೆಂಗಳೂರು:ತಮ್ಮನ್ನು ಸೆನೆಗಲ್‌ನಿಂದ ಹಸ್ತಾಂತರಿಸುವ ಸಂದರ್ಭದಲ್ಲಿ, ಸೆನೆಗಲ್ ನ್ಯಾಯಾಲಯ ಉಲ್ಲೇಖಿಸಿರುವ ಪ್ರಕರಣಗಳನ್ನು ಮಾತ್ರ ಶೀಘ್ರದಲ್ಲಿ ವಿಚಾರಣೆಗೊಳಪಡಿಸಿ ವಿಲೇವಾರಿ ಮಾಡುವಂತೆ ಕೋರಿ ಭೂಗತ ಪಾತಕಿ ರವಿ ಪೂಜಾರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಸೆನೆಗಲ್‌ನಿಂದ ಭಾರತಕ್ಕೆ ಹಸ್ತಾಂತರಿಸಿದ ಬಳಿಕ ಮಹಾರಾಷ್ಟ್ರದ ಜೈಲಿನಲ್ಲಿರುವ ಭೂಗತ ಪಾತಕಿ ರವಿ ಪೂಜಾರಿ ಅಲಿಯಾಸ್ ರವಿಪ್ರಕಾಶ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಅವರಿದ್ದ ಏಕ ಸದಸ್ಯ ಪೀಠ, ಹಸ್ತಾಂತರ ಆದೇಶದಲ್ಲಿ ಉಲ್ಲೇಖಿಸದ ಪ್ರಕರಣಗಳ ವಿಚಾರಣೆ ಒಳಪಡಿಸಬಹುದೇ ಎಂಬುದರ ಕುರಿತು ಸ್ಪಷ್ಟನೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.

ಹಸ್ತಾಂತರ ಕಾಯಿದೆ ಸೆಕ್ಷನ್ 21 ಉಲ್ಲಂಘಿಸುವ ಕುರಿತು ವಿವರಣೆ:ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಹಸ್ತಾಂತರ ಕಾಯಿದೆ ಸೆಕ್ಷನ್ 21ರ ಪ್ರಕಾರ, ವಿದೇಶದಿಂದ ಹಸ್ತಾಂತರಿಸಲ್ಪಟ್ಟ ವ್ಯಕ್ತಿಯನ್ನು ಹಸ್ತಾಂತರ ಆದೇಶದಲ್ಲಿ ಉಲ್ಲೇಖಿಸಿರುವ ಪ್ರಕರಣಗಳನ್ನು ಮಾತ್ರ ವಿಚಾರಣೆಗೆ ಒಳಪಡಿಸಬಹುದು. ಆದರೆ, ಇತರ ಪ್ರಕರಣಗಳ ವಿಚಾರಣೆಗೆ ಅವಕಾಶವಿಲ್ಲ. ಹಸ್ತಾಂತರ ಆದೇಶದಲ್ಲಿ ನಮೂದಿಸಿರುವ ಪ್ರಕರಣಗಳು ಹೊರತುಪಡಿಸಿ ಪೂಜಾರಿ ಅವರನ್ನು ವಿಚಾರಣೆಗೆ ಒಳಪಡಿಸುವುದು ಮತ್ತು ವಿಚಾರಣೆ ನಡೆಸುವುದು ಹಸ್ತಾಂತರ ಕಾಯಿದೆ ಸೆಕ್ಷನ್ 21ರನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

107 ಪ್ರಕರಣಗಳ ವಿಚಾರಣೆ:ಹಸ್ತಾಂತರ ಆದೇಶದಲ್ಲಿ 37 ಪ್ರಕರಣಗಳ ವಿಚಾರಣೆಗೆ ಅರ್ಜಿದಾರರು ಬೇಕಾಗಿತ್ತು ಎಂಬುದಾಗಿ ಹೇಳಲಾಗಿದೆ. ಆದರೆ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗುಜರಾತ್ ಮತ್ತು ರಾಜಸ್ಥಾನದಲ್ಲಿ 107 ಪ್ರಕರಣಗಳ ವಿಚಾರಣೆ ನಡೆಸಲಾಗುತ್ತಿದೆ. ಆದರೂ ಹಸ್ತಾಂತರ ಆದೇಶದಲ್ಲಿನ ಪ್ರಕರಣಗಳ ವಿಚಾರಣೆ ನಡೆಸದಿರುವುದು ಹಸ್ತಾಂತರ ಮಾಡಿರುವ ನ್ಯಾಯಾಲಯ ಆದೇಶ ಉಲ್ಲಂಘನೆಯಾಗಲಿದೆ ಎಂದು ಅರ್ಜಿಯಲ್ಲಿ ಕೋರಿದ್ದಾರೆ.

ಅರ್ಜಿದಾರರಾದ ರವಿ ಪೂಜಾರಿ ಅವರು ಕಳೆದ ಮೂರು ವರ್ಷಗಳಿಂದ ನ್ಯಾಯಾಂಗ ಬಂಧನದಲ್ಲಿದ್ದರೂ, ಹಸ್ತಾಂತರಕ್ಕೆ ಕಾರಣವಾಗಿರುವ ಪ್ರಕರಣಗಳ ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಲು ಸರ್ಕಾರಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಇದೇ ರೀತಿಯಲ್ಲಿ ಮುಂದುವರೆದಲ್ಲಿ ಅವರ ಹಕ್ಕುಗಳಿಗೆ ಧಕ್ಕೆಯಾಗಲಿದ್ದು, ಸೆರೆವಾಸದಿಂದ ಹೊರ ಬರುವುದಕ್ಕೆ ಯಾವುದೇ ಭರವಸೆ ಇಲ್ಲದಂತಾಗಲಿದೆ. ಜೊತೆಗೆ, ಮಾನಸಿಕ ನೋವು ಅವಮಾನಗಳನ್ನು ಅನುಭವಿಸುವಂತಾಗಲಿದ್ದು, ಮಾನಸಿಕ ಕಿರುಕುಳಕ್ಕೆ ಒಳಗಾಗಲಿದ್ದಾರೆ ಎಂದರು.

ಒಂದು ದೇಶದಿಂದ ಒಬ್ಬ ವ್ಯಕ್ತಿಯನ್ನು ಹಸ್ತಾಂತರ ಮಾಡುವುದು ಎರಡೂ ರಾಷ್ಟ್ರಗಳ ನಡುವಿನ ಪರಸ್ಪರ ನಂಬಿಕೆ ಆಧರಿಸುತ್ತದೆ. ಅಲ್ಲದೇ, ಅರ್ಜಿದಾರರನ್ನು ಹಸ್ತಾಂತರ ಒಪ್ಪಂದ ಭಾಗವಾಗಿರುವ ಪ್ರಕರಣಗಳ ವಿಚಾರಣೆ ನಡೆಸಿ ತನಿಖೆ ಮತ್ತು ವಿಚಾರಣೆಗೆ ಪ್ರೋತ್ಸಾಹಿಸದಿರುವುದು ಹಸ್ತಾಂತರ ಮಾಡಿದ ದೇಶದ ಭರವಸೆ ಉಲ್ಲಂಘಿಸಿದಂತಾಗಲಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಅಲ್ಲದೆ, ಮಹಾರಾಷ್ಟ್ರದಲ್ಲಿ ದಾಖಲಾಗಿರುವ ಪ್ರಕರಣಗಳ ತನಿಖಾ ಹಂತದಲ್ಲಿವೆ. ಥಾಣೆಯಲ್ಲಿ ದಾಖಲಾಗಿರುವ ಆರು ಪ್ರಕರಣಗಳು ತನಿಖೆ ಪ್ರಾರಂಭವಾಗಿಲ್ಲ. ಅಲ್ಲದೇ, ಅರ್ಜಿದಾರರ ವಿರುದ್ಧದ ಪ್ರಕರಣಗಳ ವಿಚಾರಣೆಗೆ ಕಳೆದ ಮೂರು ವರ್ಷಗಳಿಂದ ಪೊಲೀಸರು ವಶಕ್ಕೆ ಕೇಳಿ ನ್ಯಾಯಾಲಯಕ್ಕೆ ಅರ್ಜಿ ಸಲಿಸಿಲ್ಲ. ಹೀಗಾಗಿ ರವಿ ಪೂಜಾರಿ ವಿರುದ್ಧ ದಾಖಲಾಗಿರುವ ಇತರ ಪ್ರಕರಣಗಳನ್ನು ಶೀಘ್ರವಾಗಿ ವಿಚಾರಣೆ ನಡೆಸಿ ಶೀಘ್ರದಲ್ಲಿ ವಿಲೇವಾರಿ ಮಾಡಬೇಕು ಎಂದು ಪ್ರತಿವಾದಿಗಳಿಗೆ ಸೂಚನೆ ನೀಡಬೇಕು ಎಂದು ಎಂದು ಅರ್ಜಿಯಲ್ಲಿ ಕೋರಿದ್ದಾರೆ.

ಪ್ರಕರಣದ ಹಿನ್ನೆಲೆ ಏನು?:ನಗರದ ೧ನೇ ಎಸಿಎಂಎಂ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಆರೋಪಿಯನ್ನು ಸೆನೆಗಲ್​ನಿಂದ ಭಾರತಕ್ಕೆ ಹಸ್ತಾಂತರಿಸಿದ್ದರು. ಆ ಬಳಿಕ ತಿಲಕ್ ನಗರ ಪೊಲೀಸ್ ಸ್ಟೇಷನ್ ಸೇರಿದಂತೆ ಇತರ ಠಾಣೆಗಳಿಗೆ ಕರೆದೊಯ್ದು ವಿಚಾರಣೆಗೆ ಒಳಪಡಿಸಿದ್ದರು. ಅದಾದ ಬಳಿಕ ಆರೋಪಿ ವಿರುದ್ಧ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಪ್ರಕರಣಗಳಲ್ಲಿ ಕೆಲವು ವಿಚಾರಣೆ ಪ್ರಾರಂಭವಾಗಿದ್ದು, ಆದೇಶಗಳು ಹೊರ ಬಂದಿವೆ. ಇನ್ನೂ ಹಲವು ಪ್ರಕರಣಗಳು ವಿಚಾರಣೆಯಿಂದ ಬಾಕಿ ಉಳಿದಿವೆ.

ಇದನ್ನೂ ಓದಿ:Bengaluru riot case: ಡಿ.ಜೆ ಹಳ್ಳಿ ಕೆ.ಜಿ ಹಳ್ಳಿ ಗಲಭೆ ಕೇಸ್: ಗೃಹ ಸಚಿವರ ನಿರ್ದೇಶನಕ್ಕೆ ಬಿಜೆಪಿ ಆಕ್ಷೇಪ, ಹೋರಾಟದ ಎಚ್ಚರಿಕೆ

Last Updated : Jul 26, 2023, 5:19 PM IST

ABOUT THE AUTHOR

...view details