ಕರ್ನಾಟಕ

karnataka

By

Published : May 8, 2021, 3:04 PM IST

ETV Bharat / state

ಲೆಕ್ಕ ಪರಿಶೀಲನೆ, ಸ್ಥಳ ಪರಿಶೀಲನೆ ಮೇಲಿನ ನಿರ್ಬಂಧ ಆದೇಶ ಹಿಂಪಡೆಯಿರಿ: ಸ್ಪೀಕರ್​ಗೆ ರಾಮಲಿಂಗಾ ರೆಡ್ಡಿ ಪತ್ರ

ವೆಂಟಿಲೇಟರ್​, ಆಕ್ಸಿಜನ್ ಸಿಲಿಂಡರ್‌ಗಳು ಆಸ್ಪತ್ರೆ ಬೆಡ್‌ಗಳು ಮತ್ತಿತರ ಉಪಕರಣಗಳ ಖರೀದಿಗಳ ಕುರಿತಂತೆ ಲೆಕ್ಕಪರಿಶೀಲನೆ, ಸ್ಥಳ ಪರಿಶೀಲನೆ ನಡೆಸುವ ಅಗತ್ಯ ಇದ್ದು, ನಿರ್ಬಂಧ ಆದೇಶವನ್ನು ಹಿಂಪಡೆಯುವಂತೆ ರಾಮಲಿಂಗಾ ರೆಡ್ಡಿ ಸ್ಪೀಕರ್ ವಿಶ್ವೇಶ್ವರ ಕಾಗೇರಿಯವರಿಗೆ ಪತ್ರ ಬರೆದಿದ್ದಾರೆ.

ramlingareddy
ramlingareddy

ಬೆಂಗಳೂರು:ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದ ವೆಂಟಿಲೇಟರ್​, ಆಕ್ಸಿಜನ್ ಸಿಲಿಂಡರ್‌ಗಳು ಆಸ್ಪತ್ರೆ ಬೆಡ್‌ಗಳು ಮತ್ತಿತರ ಉಪಕರಣಗಳ ಖರೀದಿಗಳ ಕುರಿತಂತೆ ಲೆಕ್ಕಪರಿಶೀಲನೆ, ಸ್ಥಳ ಪರಿಶೀಲನೆ ನಡೆಸುವ ಅಗತ್ಯ ಇದ್ದು, ನಿರ್ಬಂಧ ಆದೇಶವನ್ನು ಹಿಂಪಡೆಯುವಂತೆ ಲೆಕ್ಕಪತ್ರ ಸಮಿತಿ ಅಧ್ಯಕ್ಷ ರಾಮಲಿಂಗಾ ರೆಡ್ಡಿ ಸ್ಪೀಕರ್ ಕಾಗೇರಿಗೆ ಮನವಿ ಮಾಡಿದ್ದಾರೆ.

ರಾಮಲಿಂಗಾ ರೆಡ್ಡಿ, ಕಾಂಗ್ರೆಸ್​ ನಾಯಕ

ಈ ಸಂಬಂಧ ಸ್ಪೀಕರ್​ಗೆ ಪತ್ರ ಬರೆದಿರುವ ಅವರು, ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದ ವೆಂಟಿಲೇಟಲ್, ಆಕ್ಸಿಜನ್ ಸಿಲಿಂಡರ್‌ಗಳು ಆಸ್ಪತ್ರೆ ಬೆಡ್‌ಗಳು ಮತ್ತಿತರ ಉಪಕರಣಗಳ ಖರೀದಿಗಳ ಕುರಿತಂತೆ ಚರ್ಚಿಸಿ ಲೆಕ್ಕಪರಿಶೀಲನೆ ಮತ್ತು ಸ್ಥಳ ಪರಿವೀಕ್ಷಣೆ ನಡೆಸಿ ಸರ್ಕಾರಕ್ಕೆ ಶಿಫಾರಸು ನೀಡುವ ಅನಿವಾರ್ಯತೆ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಗಿದೆ ಎಂದು ವಿವರಿಸಿದ್ದಾರೆ.

ವಿಶ್ವಾದ್ಯಂತ ಮಹಾಮಾರಿ ಕೊರೊನಾ ವೈರೆಸ್‌ನಿಂದ ಅತ್ಯಂತ ಗಂಭೀರ, ಕಳವಳಕಾರಿ ಹಾಗೂ ಆತಂಕದ ಪರಿಸ್ಥಿತಿ ಎದುರಾಗಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮಹತ್ವದ ಹೊಣೆಗಾರಿಕೆ ಮತ್ತು ಜವಾಬ್ದಾರಿ ನಿರ್ವಹಿಸಬೇಕಾಗಿದೆ. ಪ್ರಸ್ತುತ ಕೊರೊನಾ 2ನೇ ಅಲೆ ನಿರೀಕ್ಷೆಗೂ ಮೀರಿ ವ್ಯಾಪಿಸುತ್ತಿದ್ದು, ದಿನೇ ದಿನೆ ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹಾಗೂ ಕೊರೊನಾ ಸೋಂಕಿತರ ಸಾವು ಹೆಚ್ಚಾಗುತ್ತಿದೆ. ಕೊರೊನಾ ನಿಯಂತ್ರಣ ವಿಚಾರದಲ್ಲಿ ಸರ್ಕಾರ ಪಾರದರ್ಶಕ, ಸಮಯೋಚಿತ ಜನಪರ ನಿರ್ಧಾರಗಳನ್ನು ಕಾಲಕಾಲಕ್ಕೆ ತೆಗೆದುಕೊಳ್ಳಬೇಕಾಗಿರುವುದು ಇಂದಿನ ಅವಶ್ಯಕತೆಯಾಗಿದೆ. ತಮಗೆ ತಿಳಿದಿರುವಂತೆ ನಮ್ಮ ರಾಜ್ಯದ ಆಸ್ಪತ್ರೆಗಳಲ್ಲಿ ದಾಖಲಾಗುತ್ತಿರುವ ಕೊರೊನಾ ಸೋಂಕಿತರ ಜೀವ ಉಳಿಸಲು ಅಗತ್ಯ ಔಷಧಗಳಲ್ಲಿ ಒಂದಾದ ರೆಮ್ಡೆಸಿವಿರ್ ಚುಚ್ಚುಮದ್ದಿನ ಕೊರತೆಯನ್ನು ರಾಜ್ಯದ ಬಹುತೇಕ ಜಿಲ್ಲೆಗಳು ಎದುರಿಸುತ್ತಿವೆ. ರೆಮ್ಡೆಸಿವಿರ್ ಬೇಡಿಕೆ ಹಿನ್ನೆಲೆಯಲ್ಲಿ ಕಾಳಸಂತೆಯಲ್ಲೂ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಪ್ರಕರಣಗಳು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದೆ ಎಂದು ತಿಳಿಸಿದ್ದಾರೆ.

ಇತ್ತೀಚಿಗೆ ಸರ್ಕಾರದ ವೈಫಲ್ಯ ಮತ್ತು ಅಧಿಕಾರಿಗಳ ಸಮನ್ವಯ ಕೊರತೆಯ ಕಾರಣ, ಜೀವರಕ್ಷಕ ಆಕ್ಸಿಜನ್‌ನ ಕೊರತೆಯುಂಟಾಗಿ ಚಾಮರಾಜನಗರ, ಅಫಜಲಪುರ ಮತ್ತು ಇತರ ಸ್ಥಳಗಳಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಬಹಳಷ್ಟು ಜನರು ಮೃತಪಟ್ಟಿರುತ್ತಾರೆ. ಬೆಂಗಳೂರು ನಗರದ ಆಸ್ಪತ್ರೆಗಳಲ್ಲಿ ಬೆಡ್, ವೆಂಟಿಲೇಟರ್ ಸಿಗದೇ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಮತ್ತೊಂದು ಕಡೆ ಖಾಸಗಿ ಆಸ್ಪತ್ರೆಗಳಲ್ಲಿನ ಬೆಡ್‌ಗಳನ್ನು ಬ್ಲಾಕ್ ಮಾಡಿ, ಅಕ್ರಮವಾಗಿ ಅವುಗಳನ್ನು ಮಾರಾಟ ಮಾಡುತ್ತಿರುವ ಕರಾಳ ದಂಧೆಯ ಆರೋಪ ಕೇಳಿ ಬರುತ್ತಿದೆ. ಬೆಂಗಳೂರು ನಗರದಲ್ಲಿ ಪ್ರಕರಣಗಳು ತೀವ್ರಗತಿಯಲ್ಲಿ ಹೆಚ್ಚುತ್ತಿರುವುದರಿಂದ ಲಘು ರೋಗ ಲಕ್ಷಣಗಳುಳ್ಳ ಸೋಂಕಿತರ ಚಿಕಿತ್ಸೆಗೆ ಸಂಬಂಧಪಟ್ಟ ಇಲಾಖೆಗಳು ಕೋವಿಡ್ ಆರೈಕೆ ಕೇಂದ್ರಗಳನ್ನು ಜರೂರಾಗಿ ಸ್ಥಾಪಿಸುವ ಅಗತ್ಯವಿದ್ದರೂ, ಸರ್ಕಾರವು ಈ ವಿಷಯದಲ್ಲಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಶಾಸನಸಭೆ, ಶಾಸನಸಭೆಯ ಸಮಿತಿಗಳು ತಮ್ಮ ಜವಾಬ್ದಾರಿಯುತ ಕರ್ತವ್ಯಗಳನ್ನು ನಿರ್ವಹಿಸುವುದು ಸಂವಿಧಾನಿಕ ಬಾದ್ಯತೆ ಹಾಗೂ ನಿಯಮಗಳನ್ವಯ ಕಾರ್ಯನಿರ್ವಹಿಸುವ ಉತ್ತರದಾಯಿತ್ವ ಸಮಿತಿಗಳದ್ದಾಗಿದೆ. ಈ ಹಿನ್ನೆಲೆಯಲ್ಲಿ, ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದ ವೆಂಟಿಲೇಟಲ್, ಆಕ್ಸಿಜನ್ ಸಿಲಿಂಡರ್‌ಗಳು, ಆಸ್ಪತ್ರೆ ಬೆಡ್‌ಗಳು ಮತ್ತಿತರ ಉಪಕರಣಗಳ ಖರೀದಿಗಳ ಕುತಂತೆ ಚರ್ಚಿಸಿ ಲೆಕ್ಕಪರಿಶೀಲನೆ ಮತ್ತು ಸ್ಥಳ ಪರಿವೀಕ್ಷಣೆ ನಡೆಸಿ ಸರ್ಕಾರಕ್ಕೆ ಶಿಫಾರಸು ನೀಡುವ ಅನಿವಾರ್ಯತೆ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಗಿದೆ. ಆದರೆ, ತಮ್ಮ ನಿರ್ಬಂಧ ಆದೇಶದಿಂದ ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಡ್​ಗಾಗಿ ಪರದಾಟ.. ಬಿಎಸ್​ವೈ ಮನೆಯೆದುರೇ ಸೋಂಕಿತನನ್ನು ಕರೆತಂದ ಕುಟುಂಬ!

ABOUT THE AUTHOR

...view details