ಬೆಂಗಳೂರು:ಅತೃಪ್ತ ಶಾಸಕರ ರಾಜೀನಾಮೆಯಿಂದಾಗಿ ಸ್ಪೀಕರ್ ಕೂಡ ಬಹುಮತ ಕಳೆದುಕೊಂಡಿದ್ದು, ಅವರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕೆಂದು ಶಾಸಕ ಎಂ ಪಿ ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.
ಡಾಲರ್ಸ್ ಕಾಲನಿಯಲ್ಲಿರುವ ಬಿಎಸ್ವೈ ನಿವಾಸದೆದುರು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ಪೀಕರ್ ವಿರುದ್ಧವೂ ಅವಿಶ್ವಾಸ ನಿರ್ಣಯ ಮಂಡನೆ ಕುರಿತು ಬಿಜೆಪಿ ಚಿಂತನೆ ನಡೆಸಲಿದೆ ಎಂದರು.
ರಮೇಶ್ ಕುಮಾರ್ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ರೇಣುಕಾಚಾರ್ಯ ಸಭಾಧ್ಯಕ್ಷರಿಗೆ ಸಂಖ್ಯಾಬಲ ಕಡಿಮೆಯಾಗಿದೆ. ಸಿಎಂಗೆ ಸಂಖ್ಯಾಬಲ ಕಡಿಮೆಯಾಗಿರುವಾಗ ಸಭಾಧ್ಯಕ್ಷರಿಗೆ ಕಡಿಮೆಯಾಗದಿರುತ್ತದೆಯೇ? ಅವರು ಬಹಳ ಗೌರವದಿಂದ ಆ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಅವಿರೋಧವಾಗಿ ಸರ್ವಾನುಮತದಿಂದ ಸ್ಪೀಕರ್ ಆಯ್ಕೆ ಮಾಡಿದ್ದು ನಿಜ. ಆದರೆ ಅವರು ಈಗ ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಪಕ್ಷದ ಕಾರ್ಯಕರ್ತರಂತೆ ಕೆಲಸ ಮಾಡುತ್ತಿದ್ದಾರೆ ಎಂದು ರೇಣುಕಾಚಾರ್ಯ ಆರೋಪಿಸಿದರು.
ಶಾಸಕರ ರಾಜೀನಾಮೆಯನ್ನು ಪಡೆದುಕೊಳ್ಳುವ ವೇಳೆ ಸ್ಪೀಕರ್ ನಡೆದುಕೊಂಡಿರುವ ರೀತಿ, ತಂಡವಾಗಿ ವಿವರಣೆ ನೀಡಲು ಬರುವಂತೆ ಹೇಳಿದ್ದು, ಸರ್ಕಾರ ಉಳಿಸುವ ಪ್ರಯತ್ನ ಆಗಿದೆ. ನಿನ್ನೆ ನಡೆದ ಘಟನಾವಳಿಗೆ ಸ್ಪೀಕರ್ ನೇರ ಹೊಣೆ ಎಂದು ಶಾಸಕ ರೇಣುಕಾಚಾರ್ಯ ಗಂಭೀರ ಆರೋಪ ಮಾಡಿದರು.
ಮೊದಲೇ ಸ್ಪೀಕರ್ ಅವರು ಶಾಸಕರ ರಾಜೀನಾಮೆ ಅಂಗೀಕಾರ ಮಾಡಿದ್ದರೆ, ಇಂತಹ ಸನ್ನಿವೇಶ ನಿರ್ಮಾಣ ಆಗುತ್ತಿರಲಿಲ್ಲ ಎಂದು ಮಾಜಿ ಸಚಿವ ಅಭಿಪ್ರಾಯಪಟ್ಟರು.