ಬೆಂಗಳೂರು: ಸುಮಲತಾ ಮತ್ತು ಬಿ.ಎಸ್.ಯಡಿಯೂರಪ್ಪ ಭೇಟಿ ವೇಳೆ ರಮೇಶ್ ಜಾರಕಿಹೊಳಿ ಮತ್ತು ಶಾಸಕ ಸುಧಾಕರ್ ಅವರು ಎಸ್.ಎಂ.ಕೃಷ್ಣರ ಮನೆಯಲ್ಲಿ ಹಾಜರಿದ್ದಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿದೆ. ಆಪರೇಷನ್ ಕಮಲದ ಭೀತಿ ಈಗಾಗಲೇ ಮೈತ್ರಿ ಸರ್ಕಾರಕ್ಕೆ ತಲೆ ನೋವಾಗಿದ್ದು, ಇದರ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಹಾಗೂ ಡಾ.ಸುಧಾಕರ್ ಎಸ್.ಎಂ.ಕೃಷ್ಣ ಮನೆಗೆ ಭೇಟಿ ನೀಡಿರುವುದು ಕುತೂಹಲ ಕೆರಳಿಸಿದೆ.
ಈ ಕುರಿತು ಸ್ಪಷ್ಟನೆ ನೀಡಿದ ಶಾಸಕ ಡಾ. ಸುಧಾಕರ್ ಎಸ್.ಎಂ ಕೃಷ್ಣ ನನ್ನ ಗುರುಗಳು. ಸೌಜನ್ಯಯುತವಾಗಿ ಬೇಟಿ ಮಾಡಿದ್ದೇವೆ. ನಮಗೆ ಯಾವುದೇ ಅತೃಪ್ತಿ ಇಲ್ಲ. ಯಾವುದೇ ರಾಜಕೀಯ ಚರ್ಚೆಯಾಗಿಲ್ಲ. ನಮಗೆ ಬಿಜೆಪಿ ನಾಯಕರು ಬರೋದು ಗೊತ್ತಿರಲಿಲ್ಲ. ನಾವು ಕೇವಲ ಎಸ್.ಎಮ್ ಕೃಷ್ಣರನ್ನು ಭೇಟಿ ಮಾಡಿದ್ದಷ್ಟೇ. ಈ ವೇಳೆ ಬಿ.ಎಸ್.ವೈ ಕಾಣಸಿಕ್ಕರು, ಸರ್ ಚೆನ್ನಾಗಿದೀರಾ ಅಂತ ಕೇಳಿದೆ ಅಷ್ಟೇ ಎಂದು ಶಾಸಕ ಸುಧಾಕರ್ ತಿಳಿಸಿದರು.
ಎಸ್ ಎಂ ಕೃಷ್ಣ ಭೇಟಿ ಮಾಡಿದ ರೆಬಲ್ ಶಾಸಕ ಇನ್ನೂ ಇದೇ ವೇಳೆ ಎಸ್.ಎಂ.ಕೃಷ್ಣ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ವೇಳೆ ರೆಬಲ್ ಶಾಸಕ ರಮೇಶ್ ಜಾರಕಿಹೊಳಿ, ನೀವು ಸ್ಟಿಂಗ್ ಆಪರೇಷನ್ ಹೇಳಿ ಮಾಡ್ತೀರಾ? ಹಾಗೆ ನಾವೂ ಕೂಡಾ ಎಂದು ಪರೋಕ್ಷವಾಗಿ ತಿಳಿಸಿದರು. ಎಸ್ ಎಂ ಕೃಷ್ಣ ಹಿರಿಯ ರಾಜಕಾರಣಿ. ಅವರ ಆರೋಗ್ಯ ವಿಚಾರಿಸಲು ಬಂದಿದ್ದೆ ಬೇರೆ ರಾಜಕೀಯ ವಿಚಾರ ಚರ್ಚೆ ಆಗಿಲ್ಲ. ಎಸ್.ಎಂ ಕೃಷ್ಣ ಯಾವುದೇ ಪಕ್ಷದಲ್ಲಿರಲಿ ಅವರು ನಮ್ಮ ನಾಯಕರು. ಎಸ್.ಎಂ.ಕೃಷ್ಣ ಮೊದಲು ನಮ್ಮನ್ನು ಶಾಸಕ ಮಾಡಿದ್ದಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಡಿ. ನಾನು ಬಂದಿದ್ದು ಎಸ್.ಎಂ.ಕೃಷ್ಣರ ಆರೋಗ್ಯ ವಿಚಾರಿಸುವುದಕ್ಕಾಗಿ ಎಂದು ತಿಳಿಸಿದರು.
ಎಸ್.ಎಂ. ಕೃಷ್ಣ ನಮ್ಮ ನಾಯಕರು. ಈ ವೇಳೆ ಯಡಿಯೂರಪ್ಪ ಆಗಮಿಸಿರುವುದು ಕಾಕತಾಳೀಯವಾಗಿದೆ. ರಾಜೀನಾಮೆ ಕೊಡುವ ಬಗ್ಗೆ ನಾನು ಮಾಧ್ಯಮದ ಮುಂದೆ ರಾಜೀನಾಮೆ ನೀಡುವುದಿಲ್ಲ. ನಮ್ಮ ಟೀಂ ಇದೆ. ಅವರ ಜತೆ ಗೂಡಿ ತೀರ್ಮಾನ ಕೈಗೊಳ್ಳಲಿದ್ದೇವೆ. ಎಷ್ಟು ಜನ ಇದ್ದಾರೆ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ರಾಜೀನಾಮೆ ಕೊಡ್ತೀವಿ. ಯಾವಾಗ ಕೊಡ್ತೀವಿ ಅಂತ ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲ. ಎಷ್ಟು ಜನ ರಾಜೀನಾಮೆ ಕೊಡ್ತೀವಿ ಅಂತ ಲೆಕ್ಕ ಹೇಳೋದಕ್ಕೆ ಆಗೋದಿಲ್ಲ ಎಂದು ತಿಳಿಸಿದರು. ನನಗೆ ಸಿಎಂ ಭೇಟಿ ಮಾಡಿ ಮಾತುಕತೆ ಮಾಡಿಲ್ಲ. ನಾನು ಕಾಂಗ್ರೆಸ್ನಲ್ಲಿದ್ದೀನಿ. ನಾನು ಕಾಂಗ್ರೆಸ್ ಪಕ್ಷದ ಶಾಸಕ ಎಂದು ಇದೇ ವೇಳೆ ತಿಳಿಸಿದರು.