ಕರ್ನಾಟಕ

karnataka

ಕೇಂದ್ರದ ವಿರುದ್ಧ ರಾಜ್ಯ ಕಾಂಗ್ರೆಸ್‌ ನಾಯಕರ ಸಾಂಘಿಕ ಶಕ್ತಿ.. 'ಕೈ'ಗೊಂದಿಷ್ಟು ಕಸುವು, ಹೊಸ ಹುರುಪು..

By

Published : Jan 20, 2021, 8:00 PM IST

ಬಹು ದಿನಗಳ ನಂತರ ಪ್ರತಿಪಕ್ಷ ಕಾಂಗ್ರೆಸ್ ತನ್ನ ದೊಡ್ಡಮಟ್ಟದ ಬಲ ಪ್ರದರ್ಶನ ತೋರುವಲ್ಲಿ ಇಂದು ಸಫಲವಾಯಿತು. ಪಕ್ಷದ ನಾಯಕರೆಲ್ಲ ಒಂದೆಡೆ ಸೇರುವ ಅವಕಾಶ ಕೂಡಿ ಬಂದ ಹಿನ್ನೆಲೆ ಹಾಗೂ ಭಾರಿ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಳ್ಳುವ ಮೂಲಕ ರಾಜ್ಯ ಕಾಂಗ್ರೆಸ್​​ಗೆ ನವಚೈತನ್ಯ ಮೂಡಿಸಿತು..

Raj Bhavan Chalo
ಕೇಂದ್ರದ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರ ಶಕ್ತಿಪ್ರದರ್ಶನ ಯಶಸ್ಸು

ಬೆಂಗಳೂರು :ರಾಜ್ಯ ಕಾಂಗ್ರೆಸ್ ನಾಯಕರು ಇಂದು ಕರೆ ಕೊಟ್ಟಿದ್ದ ರಾಜಭವನ ಚಲೋ ಅತ್ಯಂತ ಯಶಸ್ಸು ಕಾಣುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಹೋರಾಟದ ಹೊಸ ಹುರುಪು ನೀಡಿತು.

ಕೇಂದ್ರ ಸರ್ಕಾರ ರೈತ ವಿರೋಧಿ ನಿಲುವು ತಾಳಿದೆ. ಪ್ರತಿಪಕ್ಷದ ವಿರೋಧದ ನಡುವೆಯೂ ಸಾಕಷ್ಟು ಕಾನೂನುಗಳನ್ನು ಜಾರಿಗೆ ತರುತ್ತಿದೆ. ಇದನ್ನು ಖಂಡಿಸುವಂತೆ ಕಾಂಗ್ರೆಸ್ ಹೈಕಮಾಂಡ್ ಕರೆಕೊಟ್ಟ ಮೇರೆಗೆ ದೇಶದ ಎಲ್ಲಾ ರಾಜ್ಯಗಳಲ್ಲಿಯೂ ರಾಜಭವನ ಚಲೋ ಜ.15ರಂದು ನಡೆದಿತ್ತು.

ಇಲ್ಲಿ ಮಾತ್ರ ಪೂರ್ವನಿಯೋಜಿತ ಕಾರ್ಯಕ್ರಮಗಳಿದ್ದ ಹಿನ್ನೆಲೆ ರಾಜ್ಯ ಕಾಂಗ್ರೆಸ್ ನಾಯಕರು ಇಂದು ರಾಜಭವನ ಚಲೋ ಹಮ್ಮಿಕೊಂಡಿದ್ದರು. ಕಿಸಾನ್ ಅಧಿಕಾರ ದಿವಸ್ ಹೆಸರಿನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆ ಸಭೆ ಹಾಗೂ ರಾಜಭವನ ಚಲೋ ಕಾರ್ಯಕ್ರಮದಲ್ಲಿ ಕೊನೆಯದಾಗಿ ರಾಜಭವನ ಚಲೋ ಮಾತ್ರ ಪೊಲೀಸರ ಮದ್ಯಸ್ಥಿಕೆಯಿಂದಾಗಿ ತಡೆ ಬಿತ್ತು.

ಬೆಳಗ್ಗೆ ಆರಂಭ :ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾರ್ಗದರ್ಶನ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ರಾಜಭವನ ಚಲೋಗೆ ಕಾರ್ಯಕರ್ತರನ್ನು ಒಗ್ಗೂಡಿಸಲು ಕೆಪಿಸಿಸಿ ಕಿಸಾನ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಚಿನ್ ಮೀಗಾ ಪ್ರಯತ್ನ ಮಾಡಿದ್ದರು.

ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಮುಂದೆ ಬೆಳಗ್ಗೆ 9ಕ್ಕೆ ಜಮಾವಣೆಗೊಂಡ ಕಾಂಗ್ರೆಸ್ ಕಾರ್ಯಕರ್ತರು, ಹೆಗಲ ಮೇಲೆ ಹಸಿರು ಶಾಲು ಹಾಗೂ ಕೈಯಲ್ಲಿ ಕಾಂಗ್ರೆಸ್ ಪಕ್ಷದ ಬಾವುಟ ಹಿಡಿದು ಪ್ರತಿಭಟನೆಗೆ ಚಾಲನೆ ನೀಡಿದರು.

ಓದಿ:ಕಾಂಗ್ರೆಸ್​ ‘ರಾಜಭವನ ಚಲೋ’ಗೆ ತಡೆ: ಸಿದ್ದರಾಮಯ್ಯ, ಡಿಕೆಶಿ ಪೊಲೀಸ್ ವಶಕ್ಕೆ

ಬೆಳಗ್ಗೆ 10 ಗಂಟೆಗೆೆ ಡಿಕೆಶಿ ಹಾಗೂ ಸಿದ್ದರಾಮಯ್ಯ ಆಗಮಿಸಿದರು. ಇದಕ್ಕೂ ಮುನ್ನ ಕಾರ್ಯಕರ್ತರು ರೈಲ್ವೆ ನಿಲ್ದಾಣ ಮುಂಭಾಗದಲ್ಲಿಯೇ ಸ್ನಾನ ಮಾಡಿ, ತಿಂಡಿ ಸಿದ್ಧಪಡಿಸಿಕೊಂಡು ತಿನ್ನುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು.

ಪಕ್ಷದ ಹಿರಿಯ ನಾಯಕರ ಆಗಮನದ ನಂತರ ಸಾವಿರಾರು ಕಾರ್ಯಕರ್ತರನ್ನು ಒಳಗೊಂಡ ಮೆರವಣಿಗೆ ರೈಲು ನಿಲ್ದಾಣದಿಂದ ಹೊರಟು ಖೋಡೆ ವೃತ್ತ, ಆನಂದರಾವ್ ವೃತ್ತದಲ್ಲಿರುವ ಸಂಗೊಳ್ಳಿ ರಾಯಣ್ಣ ಮೇಲುರಸ್ತೆ ಮೂಲಕ ಸಾಗಿ ಸ್ವಾತಂತ್ರ್ಯಉದ್ಯಾನ ತಲುಪಿತು.

ಸಂಚಾರ ದಟ್ಟಣೆ :ಬೆಳಗ್ಗೆ 9ರಿಂದ ಪ್ರತಿಭಟನೆ ಆರಂಭವಾಗುವ ಸಮಯದವರೆಗೂ ವಾಹನ ಸಂಚಾರಕ್ಕೆ ಯಾವುದೇ ತಡೆಯಿರಲಿಲ್ಲ. ಪ್ರತಿಭಟನಾ ಮೆರವಣಿಗೆ ಆರಂಭವಾಗುತ್ತಿದ್ದಂತೆ ಮುಖ್ಯ ರಸ್ತೆಯ ವಾಹನ ಸಂಚಾರವನ್ನು ತಡೆಯಲಾಯಿತು. ಪರ್ಯಾಯ ಮಾರ್ಗ ಕಲ್ಪಿಸಿದ ಹಿನ್ನೆಲೆ ಕಾರ್ಯಕರ್ತರ ಮೆರವಣಿಗೆಗೆ ಅಡೆತಡೆ ಎದುರಾಗಲಿಲ್ಲ.

ಬೆಳಗ್ಗೆ 11ಕ್ಕೆ ಪ್ರತಿಭಟನಾ ಮೆರವಣಿಗೆ ತಡೆ ಹಿಡಿದ ವಾಹನ ಸಂಚಾರವನ್ನು ಸಂಜೆ 3 ಗಂಟೆಗೆ ಕಾರ್ಯಕರ್ತರ ಬಂಧನದವರೆಗೂ ಮುಂದುವರಿಸಲಾಯಿತು. ಈ ಹಿನ್ನೆಲೆ ನಗರ ಕೇಂದ್ರ ಭಾಗದಲ್ಲಿ ಇಂದು ಸುದೀರ್ಘ ಅವಧಿಗೆ ವಾಹನ ಸಂಚಾರವಿಲ್ಲದೆ ಸ್ತಬ್ಧವಾಗಿರುವುದು ಗೋಚರಿಸಿತು.

ರಾಜ್ಯ ಕಾಂಗ್ರೆಸ್ ನಾಯಕರಿಂದ ರಾಜಭವನ ಚಲೋ

ವೇದಿಕೆ ಕಾರ್ಯಕ್ರಮ :ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನವನಕ್ಕೆ ಆಗಮಿಸಿದ ಕಾಂಗ್ರೆಸ್ ನಾಯಕರು ಬೃಹತ್ ಪ್ರತಿಭಟನಾ ಸಭೆ ನಡೆಸಿದರು. ಸಿದ್ದರಾಮಯ್ಯ, ಡಿಕೆಶಿ, ಜಿ.ಪರಮೇಶ್ವರ್, ಎಸ್ ಆರ್ ಪಾಟೀಲ್ ಸೇರಿದಂತೆ ಹಲವು ನಾಯಕರು ಭಾಷಣ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕೊನೆಯದಾಗಿ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕಾರ್ಯಕರ್ತರು ರಾಜಭವನ ಚಲೋಗೆ ಮುಂದಾಗಬೇಕು ಎಂದು ಕರೆ ನೀಡಿದರು.

ಬಂಧನ :ಕಾರ್ಯಕರ್ತರ ಜೊತೆ ಕಾಂಗ್ರೆಸ್ ನಾಯಕರು ರಾಜಭವನದತ್ತ ಪ್ರಯಾಣ ಬೆಳೆಸುತ್ತಿದ್ದಂತೆ ಮಹಾರಾಣಿ ಕಾಲೇಜು ವೃತ್ತದ ಬಳಿ ಪೊಲೀಸರು ಅವರನ್ನು ತಡೆದರು. ಬಲವಂತವಾಗಿ ರಾಜಭವನದತ್ತ ಮುನ್ನುಗ್ಗಲು ಯತ್ನಿಸಿದ ಕಾರ್ಯಕರ್ತರು ಹಾಗೂ ಮುಖಂಡರನ್ನು ಬಂಧಿಸಿದ ಚಾಮರಾಜಪೇಟೆ ಪೊಲೀಸರು ಮೈದಾನದತ್ತ ಕರೆದೊಯ್ದರು.

ಓದಿ: ಮಾರಕ ಕಾಯ್ದೆ ಹಿಂಪಡೆಯದಿದ್ದರೆ ರೈತರು ದಂಗೆ ಏಳುವುದು ಖಚಿತ : ಸಿದ್ದರಾಮಯ್ಯ ಎಚ್ಚರಿಕೆ

ಬಂಧನದ ವೇಳೆ ಕೆಲ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಬೀಸಿದರು. ಶಾಸಕಿ ಸೌಮ್ಯ ರೆಡ್ಡಿ ಮಹಿಳಾ ಪೊಲೀಸ್ ಕಾನ್ಸ್​ಟೇಬಲ್​ ಮೇಲೆ ಹಲ್ಲೆ ನಡೆಸಿದ ಘಟನೆಯೂ ಜರುಗಿತು. ಕೊನೆಯಲ್ಲಿ ನಿರೀಕ್ಷೆಯಂತೆ ಪೊಲೀಸರು ರಾಜಭವನ ಮುತ್ತಿಗೆಗೆ ಅವಕಾಶ ನೀಡದೆ ಬಂಧಿಸಲು ಮುಂದಾದಾಗ ಕಾರ್ಯಕರ್ತರಿಂದ ದೊಡ್ಡ ಮಟ್ಟದ ಪ್ರತಿರೋಧ ಎದುರಾಯಿತು.

ರಾಜ್ಯಪಾಲರಿಗೆ ಮನವಿ :ಕಾಂಗ್ರೆಸ್ ಮುಖಂಡರು ಸಂಜೆ 4:30ಕ್ಕೆ ರಾಜಭವನಕ್ಕೆ ಭೇಟಿ ನೀಡಿ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಕೇಂದ್ರ ಸರ್ಕಾರ ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತರುತ್ತಿದ್ದು, ಈ ಸಂಬಂಧ ತಾವು ನೀಡಿರುವ ಮನವಿ ಪತ್ರವನ್ನು ರಾಷ್ಟ್ರಪತಿಗಳಿಗೆ ತಲುಪಿಸುವಂತೆ ಕೋರಿದರು.

ಬಹು ದಿನಗಳ ನಂತರ ಪ್ರತಿಪಕ್ಷ ಕಾಂಗ್ರೆಸ್ ತನ್ನ ದೊಡ್ಡಮಟ್ಟದ ಬಲ ಪ್ರದರ್ಶನ ತೋರುವಲ್ಲಿ ಇಂದು ಸಫಲವಾಯಿತು. ಪಕ್ಷದ ನಾಯಕರೆಲ್ಲ ಒಂದೆಡೆ ಸೇರುವ ಅವಕಾಶ ಕೂಡಿ ಬಂದ ಹಿನ್ನೆಲೆ ಹಾಗೂ ಭಾರಿ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಳ್ಳುವ ಮೂಲಕ ರಾಜ್ಯ ಕಾಂಗ್ರೆಸ್​​ಗೆ ನವಚೈತನ್ಯ ಮೂಡಿಸಿತು.

ABOUT THE AUTHOR

...view details