ಕರ್ನಾಟಕ

karnataka

ಆರ್​ ಅಶೋಕ್​ಗೆ ಪ್ರತಿಪಕ್ಷ ನಾಯಕನ ಪಟ್ಟ: ಪರಿಷತ್ ವಿಪಕ್ಷ ನಾಯಕನ ಆಯ್ಕೆ ಮುಂದೂಡಿಕೆ

By ETV Bharat Karnataka Team

Published : Nov 17, 2023, 8:06 PM IST

Updated : Nov 17, 2023, 10:27 PM IST

ಮಾಜಿ ಉಪ ಮುಖ್ಯಮಂತ್ರಿ ಆರ್​. ಅಶೋಕ್​ಗೆ ವಿಧಾನಸಭೆ ಪ್ರತಿಪಕ್ಷ ನಾಯಕನ ಸ್ಥಾನ ಒಲಿದಿದೆ.

R Ashok appointed as opposition leader in Karnataka
ಮಾಜಿ ಡಿಸಿಎಂ ಆರ್​ ಅಶೋಕ್​ಗೆ ಪ್ರತಿಪಕ್ಷ ನಾಯಕನ ಪಟ್ಟ

ಬೆಂಗಳೂರು:ವಿಧಾನಸಭೆ ಪ್ರತಿಪಕ್ಷ ನಾಯಕರನ್ನಾಗಿ ಪಕ್ಷದ ಹಿರಿಯ ಶಾಸಕ ಆರ್ ಅಶೋಕ್ ಅವರನ್ನು ಬಿಜೆಪಿ ಶಾಸಕಾಂಗ ಪಕ್ಷವು ಸರ್ವಾನುಮತದಿಂದ ಆಯ್ಕೆ ಮಾಡಿದೆ. ಕೇಂದ್ರದಿಂದ ಬಂದಿದ್ದ ವೀಕ್ಷಕರ ಸಮ್ಮುಖದಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ನಾಯಕನ ಆಯ್ಕೆ ನಡೆದಿದೆ. ವಿಧಾನಪರಿಷತ್ ಪ್ರತಿಪಕ್ಷ ನಾಯಕರ ಆಯ್ಕೆಯನ್ನು ಮುಂದೂಡಿಕೆ ಮಾಡಲಾಗಿದೆ.

ನಗರದ ಐಟಿಸಿ ಗಾರ್ಡೇನಿಯಾ ಹೋಟೆಲ್​ನಲ್ಲಿ ನಡೆದ ರಾಜ್ಯ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದೆ. ಶಾಸಕರ ಅಭಿಪ್ರಾಯ ಆಲಿಸಿದ ನಂತರ ಕೇಂದ್ರದಿಂದ ವೀಕ್ಷಕರಾಗಿ ಬಂದಿದ್ದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಶೋಕ್ ಹೆಸರನ್ನು ಪ್ರಕಟಿಸಿದರು.‌ ಶಾಸಕಾಂಗ ಪಕ್ಷದ ಸಭೆ ಈ ಹೆಸರಿಗೆ ಸರ್ವಾನುಮತದಿಂದ ಅಂಗೀಕಾರ ನೀಡಿತು. ನಂತರ ನೂತನ ಶಾಸಕಾಂಗ ಪಕ್ಷದ ನಾಯಕ ಅಶೋಕ್ ಅವರನ್ನು ಸನ್ಮಾನಿಸಿ ಅಭಿನಂದನೆ ಸಲ್ಲಿಸಿ, ಗೌರವಿಸಲಾಯಿತು. ಹಿರಿಯ ನಾಯಕ ಯಡಿಯೂರಪ್ಪ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್. ಅಶೋಕ್​ಗೆ ಶುಭ ಕೋರಿದರು.

ಇಂದು ಕೇವಲ ವಿಧಾನಸಭೆ ಪ್ರತಿಪಕ್ಷ ನಾಯಕರ ಆಯ್ಕೆ ನಡೆಸಿದ್ದು, ವಿಧಾನ ಪರಿಷತ್ ಪ್ರತಿಪಕ್ಷ ನಾಯಕರ ಆಯ್ಕೆಯನ್ನು ಮುಂದೂಡಲಾಗಿದೆ. ಯಾವುದೇ ನಿರ್ಧಾರ ಪ್ರಕಟಿಸಲಿಲ್ಲ, ಕೋಟಾ ಶ್ರೀನಿವಾಸ ಪೂಜಾರಿ, ಛಲವಾದಿ ನಾರಾಯಣಸ್ವಾಮಿ ಹೆಸರು ಕೇಳಿಬಂದಿದ್ದು, ಶಶಿಲ್ ನಮೋಶಿ ಕೂಡ ಅವಕಾಶಕ್ಕೆ ಬೇಡಿಕೆ ಇಟ್ಟಿದ್ದಾರೆ. ಸದ್ಯಕ್ಕೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದು, ತಾತ್ಕಾಲಿಕವಾಗಿ ಆಯ್ಕೆ ಪ್ರಕ್ರಿಯೆ ಮುಂದೂಡಲಾಗಿದೆ. ರಾಜ್ಯ ಘಟಕವೇ ಈ ಆಯ್ಕೆ ಪ್ರಕ್ರಿಯೆ ನಡೆಸಲಿ ಎಂದು ಹೈಕಮಾಂಡ್​ನಿಂದ ಸಂದೇಶ ಕಳಿಸಲಾಗಿದೆ ಎನ್ನಲಾಗಿದೆ.

ಡಿಸೆಂಬರ್ 4ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಅಷ್ಟರ ಒಳಗೆ ಪರಿಷತ್ ಪ್ರತಿಪಕ್ಷ ನಾಯಕರ ಆಯ್ಕೆ ಪ್ರಕ್ರಿಯೆ ಮಾಡಲಾಗುತ್ತದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾಹಿತಿ ನೀಡಿದ್ದಾರೆ.

ಸಭೆಗೆ ಕೆಲ ನಾಯಕರು ಗೈರು:ಅಸಮಾಧಾನಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಭೆ ನಡೆಯುವ ಸ್ಥಳಕ್ಕೆ ಆಗಮಿಸಿದರಾದರೂ ಕೆಲವೇ ಸಮಯದಲ್ಲಿ ನಿರ್ಗಮಿಸಿದರು. ಅವರ ಜೊತೆ ರಮೇಶ್ ಜಾರಕಿಹೊಳಿ ಕೂಡ ನಿರ್ಗಮಿಸಿದರು. ಆದರೆ ಈ ಇಬ್ಬರು ನಾಯಕರು ಶಾಸಕಾಂಗ ಪಕ್ಷದ ಸಭೆಯ ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿ ನಿರ್ಗಮಿಸಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಶಾಸಕ ಎಸ್.ಟಿ ಸೋಮಶೇಖರ್ ದೆಹಲಿಗೆ ತೆರಳಿದ್ದು ನಿನ್ನೆಯೇ ಈ ಬಗ್ಗೆ ಮಾಹಿತಿ ನೀಡಿದ್ದರು, ಬಾಲಚಂದ್ರ ಜಾರಕಿಹೊಳಿ ಅನಾರೋಗ್ಯದ ಕಾರಣದಿಂದಾಗಿ ಮಾಹಿತಿ ನೀಡಿ ಗೈರಾಗಿದ್ದಾರೆ. ಶಾಸಕ ಶಿವರಾಮ್ ಹೆಬ್ಬಾರ್ ಮಾತ್ರ ನಿಗೂಢ ರೀತಿಯಲ್ಲಿ ದೂರ ಉಳಿದಿದ್ದರು.

ಏಳು ಬಾರಿ ಬಿಜೆಪಿ ಶಾಸಕರಾಗಿರುವ ಅಶೋಕ್ ಅವರು ಜುಲೈ 2012ರಿಂದ ಮೇ 2013 ರವರೆಗೆ ಬಿಜೆಪಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಆಗಿದ್ದರು. ಸಚಿವರಾಗಿ ಗೃಹ, ಕಂದಾಯ, ಪೌರಾಡಳಿತ, ಸಾರಿಗೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮುಂತಾದ ವಿವಿಧ ಖಾತೆಗಳನ್ನು ನಿರ್ವಹಿಸಿದ್ದಾರೆ.

ಧನ್ಯವಾದ ತಿಳಿಸಿದ ಅಶೋಕ್:ಆಯ್ಕೆ ಬಳಿಕ ಪ್ರತಿಕ್ರಿಯೆ ನೀಡಿರುವ ಆರ್​. ಅಶೋಕ್​, ''ನನ್ನನ್ನು ಪ್ರತಿಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳು. ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 28 ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲ್ಲಲಿದೆ,’’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೊಮ್ಮಾಯಿ ಹೇಳಿದ್ದೇನು?:''ಇದೊಂದು ಅವಿರೋಧ ಆಯ್ಕೆಯಾಗಿತ್ತು. ಅಶೋಕ್​ ಒಬ್ಬ ಹಿರಿಯ ನಾಯಕ. ನಾನು ಅವರನ್ನು ಅಭಿನಂದಿಸುತ್ತೇನೆ. ಅಶೋಕ್​ ಆಯ್ಕೆಯಿಂದ ನನಗೂ ಬಹಳ ಖುಷಿಯಾಗಿದೆ'' ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.

ಪ್ರತಿಪಕ್ಷ ನಾಯಕನ ಆಯ್ಕೆ ಸಂಬಂಧ ಮಾಜಿ ಡಿಸಿಎಂ ಸಿ ಎನ್ ಅಶ್ವತ್ಥ ನಾರಾಯಣ ಪ್ರತಿಕ್ರಿಯಿಸಿ, ''ಹೈಕಮಾಂಡ್ ಮತ್ತು ನಮ್ಮ ಶಾಸಕರು ಆರ್ ಅಶೋಕ್ ಅವರನ್ನು ಬಿಜೆಪಿ ಶಾಸಕಾಂಗ ಪಕ್ಷ ಮತ್ತು ಪ್ರತಿಪಕ್ಷದ ನಾಯಕನಾಗಿ ಅವಿರೋಧ ಆಯ್ಕೆ ಮಾಡಿದ್ದಾರೆ. ನಾವು ಯಾವುದೇ ಭಿನ್ನಾಭಿಪ್ರಾಯ ಇಲ್ಲದೆ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ಮುಂಬರುವ ಅಧಿವೇಶನದಲ್ಲಿ ನಾವು ಹೇಗೆ ಇರುತ್ತೇವೆ ಎಂಬುದನ್ನು ನೋಡಬಹುದು'' ಎಂದು ಹೇಳಿದ್ದಾರೆ.

ಇದನ್ನೂ ಓದಿ:ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಆರಂಭಕ್ಕೂ ಮುನ್ನ ಹೋಟೆಲ್​ನಿಂದ ನಿರ್ಗಮಿಸಿದ ಯತ್ನಾಳ್​, ಜಾರಕಿಹೊಳಿ

Last Updated : Nov 17, 2023, 10:27 PM IST

ABOUT THE AUTHOR

...view details