ಕರ್ನಾಟಕ

karnataka

ETV Bharat / state

ಸ್ಪರ್ಧಾತ್ಮಕ ‌ಪರೀಕ್ಷೆಗಳಿಗೆ ಫ್ರೀ ಕೋಚಿಂಗ್​: ಬಡ, ಆಸಕ್ತ ಅಭ್ಯರ್ಥಿಗಳಿಗೆ ಆಶಾಕಿರಣ ಈ ಪಿಎಸ್ಐ - PSI Tipu Sultan Naik Latest News

ತುಂಬಾ ಜನರಿಗೆ ‌ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಬೇಕು ಅನ್ನೋ ಆಸೆ - ಹಂಬಲ ಇರುತ್ತದೆ. ಆದರೆ, ಹಣಕಾಸಿನ ಕೊರತೆ, ಸಮಯದ ಅಭಾವ, ವೃತ್ತಿಯ ಒತ್ತಡ, ಹೀಗೆ ವಿವಿಧ ಕಾರಣಗಳಿಂದ‌ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಸಾಧ್ಯವಾಗುವುದಿಲ್ಲ. ಇಂತಹ ಆಭ್ಯರ್ಥಿಗಳಿಗೆ ಆಶಾಕಿರಣವಾಗಿದ್ದಾರೆ ಓರ್ವ ಪಿಎಸ್​ಐ. ಇವರ ಬಳಿ ಉಚಿತವಾಗಿ ತರಬೇತಿ ಪಡೆಯಬಹುದು. ಕರ್ತವ್ಯ ಬಳಿಕ ಬಿಡುವಿನ ವೇಳೆ ಆಕಾಂಕ್ಷಿಗಳಿಗೆ ತರಬೇತಿ‌ ನೀಡಲಾಗುತ್ತಿದೆ.‌ ಆಸಕ್ತ ಹಾಗೂ ಬಡ ಆಭ್ಯರ್ಥಿಗಳು ನಮ್ಮನ್ನು ಸಂಪರ್ಕಿಸಬಹುದಾಗಿದೆ.

PSI provides free training for competitive exams
ಸಬ್​ಇನ್ಸ್​ಪೆಕ್ಟರ್ ಟಿಪ್ಪು ಸುಲ್ತಾನ್ ನಾಯ್ಕವಾಡಿ

By

Published : Oct 30, 2020, 4:57 PM IST

Updated : Oct 30, 2020, 7:05 PM IST

ಬೆಂಗಳೂರು: ಸರ್ಕಾರಿ ಕೆಲಸಕ್ಕಾಗಿ ಅದೆಷ್ಟೋ ಮಂದಿ ಕನಸು ಕಟ್ಟಿಕೊಂಡು ತಮ್ಮದೇ ಆದಂತಹ ರೀತಿಯಲ್ಲಿ ಪರೀಕ್ಷೆಗೆ ವರ್ಷಾನುಗಟ್ಟಲೇ ಸಿದ್ಧತೆ ಮಾಡಿಕೊಳ್ಳುತ್ತಾರೆ. ಆದರೆ, ಸ್ಪರ್ಧಾತ್ಮಕ ಪರೀಕ್ಷೆಗೆ ಹೇಗೆ ಸಿದ್ಧರಾಗಬೇಕು? ಹೇಗೆ ಎದುರಿಸಬೇಕು? ಯಾವ ರೀತಿಯ‌ ಪ್ರಶ್ನೆಗಳು ಬರಲಿವೆ? ಎಂಬುದರ ಸೂಕ್ತ ತರಬೇತಿ ಇಲ್ಲದೆ ಪರೀಕ್ಷೆಯಲ್ಲಿ‌ ಅನುತ್ತೀರ್ಣರಾಗಿ ನಿರಾಸೆ ಅನುಭವಿಸುತ್ತಾರೆ. ಇಂತಹ ಬಡ ಆಸಕ್ತ ಆಭ್ಯರ್ಥಿಗಳಿಗಾಗಿ ಸಬ್​ಇನ್ಸ್​ಪೆಕ್ಟರ್​​ರೊಬ್ಬರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುತ್ತಿದ್ದಾರೆ.

ಹೌದು, ಹೈಕೋರ್ಟ್​ನ ಭದ್ರತಾ ವಿಭಾಗದ ಸಬ್​ಇನ್ಸ್​ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಟಿಪ್ಪು ಸುಲ್ತಾನ್ ನಾಯ್ಕವಾಡಿ ಅವರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಭ್ಯರ್ಥಿಗಳಿಗೆ ಸೂಕ್ತ ತರಬೇತಿ‌ ನೀಡಿ ಪರೀಕ್ಷೆಗೆ ಅಣಿಗೊಳಿಸುವ ಮೂಲಕ‌‌ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಾಗಿ ಅಭ್ಯರ್ಥಿಗಳಿಗೆ ತರಬೇತಿ ನೀಡಲು ನಗರದಲ್ಲಿ ಹಲವು ಕೋಚಿಂಗ್ ಸೆಂಟರ್​​ಗಳಿವೆ. ಇಲ್ಲಿಂದ ತರಬೇತಿ ಪಡೆದವರು ಸರ್ಕಾರಿ ಕೆಲಸಗಳಿಗೆ‌ ನೇಮಕ ಸಹ ಆಗಿದ್ದಾರೆ. ಆದರೆ, ಬಡ ಅಭ್ಯರ್ಥಿಗಳಿಗೆ ಕೋಚಿಂಗ್ ಸೆಂಟರ್​ಗಳಿಗೆ ಹಣ ನೀಡಲು ಸಾಧ್ಯವಾಗದೆ ಎಷ್ಟೋ ಮಂದಿ ತಮ್ಮ ಆಸೆಯನ್ನು ನುಚ್ಚು ನೂರಾಗಿಸಿಕೊಂಡಿದ್ದಾರೆ.

ಸಬ್​ಇನ್ಸ್​ಪೆಕ್ಟರ್ ಟಿಪ್ಪು ಸುಲ್ತಾನ್ ನಾಯ್ಕವಾಡಿ (ಸಂಗ್ರಹ ಚಿತ್ರ)

ಇಂತಹ ಆಸಕ್ತ ಬಡ ಆಭ್ಯರ್ಥಿಗಳಿಗಾಗಿ ಸಂಜೆ ವೇಳೆ‌ ಹತ್ತಾರು ಆಭ್ಯರ್ಥಿಗಳಿಗಾಗಿ ಕಳೆದ ಒಂದು ವರ್ಷದಿಂದ ಪಿಎಸ್ಐ ಪರೀಕ್ಷಾ ತರಬೇತಿ ನೀಡುತ್ತಿದ್ದಾರೆ ಟಿಪ್ಪು ಸುಲ್ತಾನ್​. ಖುಷಿಯ ಸಂಗತಿಯೆಂದರೆ ತಮ್ಮ ಜೊತೆ ಸಹದೋಗ್ಯಿಗಳಾಗಿ ಕೆಲಸ ಮಾಡುತ್ತಿದ್ದ ಐವರು ಸಿಬ್ಬಂದಿ ಪಿಎಸ್ಐಗಳಾಗಿ ನೇಮಕವಾಗಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಭ್ಯರ್ಥಿಗಳನ್ನು‌‌‌ ಪರೀಕ್ಷೆಯಲ್ಲಿ ಉತ್ತೀರ್ಣಗೊಳಿಸುವ ಗುರಿ ಪಿಎಸ್ಐ ಅವರದ್ದಾಗಿದೆ.

ಈ ಹಿಂದೆ ಚೆನ್ನಮ್ಮನ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಪಿಎಸ್ಐ ಟಿಪ್ಪು ಸುಲ್ತಾನ್, ಸುಮಾರು 20 ರಿಂದ 25 ಪೊಲೀಸ್ ಆಭ್ಯರ್ಥಿಗಳನ್ನು ಸ್ಪರ್ಧಾತ್ಮಕ‌ ಪರೀಕ್ಷೆಗೆ ತರಬೇತಿ ನೀಡುತ್ತಿದ್ದರು. ಅಲ್ಲಿಂದ ವರ್ಗಾವಣೆಯಾದ ಬಳಿಕ ಕೊರೊನಾ ಹಿನ್ನೆಲೆಯಲ್ಲಿ ಆನ್​ಲೈನ್‌ ಮೂಲಕ ಟ್ರೈನಿಂಗ್ ನೀಡಲು ಸಿದ್ಧತೆ ನಡೆಸುತ್ತಿದ್ದಾರೆ.

ಸ್ನೇಹಿತರೊಂದಿಗೆ ಸಬ್​ಇನ್ಸ್​ಪೆಕ್ಟರ್ ಟಿಪ್ಪು ಸುಲ್ತಾನ್ ನಾಯ್ಕವಾಡಿ (ಸಂಗ್ರಹ ಚಿತ್ರ)

ಟಾರ್ಗೆಟ್ ಹೆಸರಿನಲ್ಲಿ ವಾಟ್ಸಾಪ್ ಗ್ರೂಪ್ ರಚನೆ:

ಕೊರೊನಾ ಹಿನ್ನೆಲೆಯಲ್ಲಿ ಏಕಕಾಲಕ್ಕೆ ಹೆಚ್ಚು ಸಂಖ್ಯೆಯಲ್ಲಿ ಸೇರಲು ಸಾಧ್ಯವಾಗದ ಪರಿಣಾಮ ಟಾರ್ಗೆಟ್ ಹೆಸರಿನಲ್ಲಿ ವಾಟ್ಸಾಪ್ ಗ್ರೂಪ್ ರಚಿಸಲಾಗಿದೆ. ಕೆಎಎಸ್, ಎಫ್​ಡಿಎ, ಪೊಲೀಸ್ ನೇಮಕಾತಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯ ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳ ಅಭ್ಯಾಸ, ಅಣಕು‌ ಪರೀಕ್ಷೆ ನಡೆಸುವುದು, ಮುಖ್ಯ ಪರೀಕ್ಷೆಯಲ್ಲಿ ಯಾವ ರೀತಿಯ ಪ್ರಶ್ನೆಗಳು ಬರಲಿವೆ ಹಾಗೂ ಯಾವ ವಿಷಯಕ್ಕೆ ಎಷ್ಟು ಒತ್ತು ನೀಡಬೇಕು ಎಂಬುದು ಸೇರಿದಂತೆ ಪರೀಕ್ಷೆಗೆ‌ ಪೂರಕವಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ ಪಿಎಸ್ಐ ಟಿಪ್ಪು ಸುಲ್ತಾನ್.

ತುಂಬಾ ಜನರು ‌ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಬೇಕು ಎಂದು ಆಸೆ - ಹಂಬಲ ಇರುತ್ತದೆ. ಆದರೆ, ಹಣಕಾಸಿನ ಕೊರತೆ, ಸಮಯದ ಅಭಾವ, ವೃತ್ತಿಯ ಒತ್ತಡ, ಹೀಗೆ ವಿವಿಧ ಕಾರಣಗಳಿಂದ‌ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಸಾಧ್ಯವಾಗುವುದಿಲ್ಲ. ಇಂತಹ ಆಭ್ಯರ್ಥಿಗಳು ನಮ್ಮಲ್ಲಿ ತರಬೇತಿ ಪಡೆಯಬಹುದು. ಯಾವುದೇ ರೀತಿಯ ಶುಲ್ಕ ವಿಧಿಸುವುದಿಲ್ಲ. ಕರ್ತವ್ಯ ಬಳಿಕ ಬಿಡುವಿನ ವೇಳೆ ತರಬೇತಿ‌ ನೀಡಲು ನೀಡಲಾಗುತ್ತಿದೆ.‌ ಆಸಕ್ತ ಹಾಗೂ ಬಡ ಆಭ್ಯರ್ಥಿಗಳು ನಮ್ಮನ್ನು ಸಂಪರ್ಕಿಸಬಹುದಾಗಿದೆ ಎಂದು‌ 'ಈಟಿವಿ ಭಾರತ'ಕ್ಕೆ ಪಿಎಸ್​ಐ ಟಿಪ್ಪು ಸುಲ್ತಾನ್ ತಿಳಿಸಿದ್ದಾರೆ.

ತಾನಾಯಿತು ತನ್ನ ಕೆಲಸವಾಯಿತು ಎಂಬ ಜನಗಳ ಮಧ್ಯೆ ಪಿಎಸ್ಐ ಅವರ ನಿಸ್ವಾರ್ಥದ ಕೆಲಸ ನಿಜಕ್ಕೂ‌ ಮಾದರಿ ಹಾಗೂ ಶಾಘ್ಲನೀಯವಾದದ್ದು. ಇವರ ಕಾರ್ಯಕ್ಕೆ ಇಲಾಖೆಯ ಹಿರಿಯ ಅಧಿಕಾರಿಗಳು ಮೆಚ್ಚುಗೆಯ ಜೊತೆ ಬೆಂಬಲ ವ್ಯಕ್ತಪಡಿಸಿದ್ದಾರೆ.

Last Updated : Oct 30, 2020, 7:05 PM IST

ABOUT THE AUTHOR

...view details