ಬೆಂಗಳೂರು: ನಗರದ ಕೊರೊನಾ ಸೋಂಕಿತರ ಸಂಖ್ಯೆ 1505 ಕ್ಕೆ ಏರಿಕೆಯಾಗಿದೆ. ಕೋವಿಡ್ ಆಸ್ಪತ್ರೆಗಳ ಹಾಸಿಗೆಗಳು ಕೊರತೆಯಾದ ಹಿನ್ನೆಲೆಯಲ್ಲಿ ರೋಗಲಕ್ಷಣ ಇಲ್ಲದ ಸೋಂಕಿತರಿಗಾಗಿ ಬಿಬಿಎಂಪಿ ಕೋವಿಡ್ ಆರೈಕೆ ಕೇಂದ್ರಗಳನ್ನು ಸಿದ್ಧಗೊಳಿಸಿದೆ.
ಆರೈಕೆ ಕೇಂದ್ರಗಳನ್ನು ಸಜ್ಜುಗೊಳಿಸಿದ ಬಿಬಿಎಂಪಿ ನಗರದಲ್ಲಿ ಏಳು ಆರೈಕೆ ಕೇಂದ್ರಗಳನ್ನು ಗುರುತಿಸಿದ್ದು, ಸದ್ಯ ಮೂರನ್ನು ಸಜ್ಜುಗೊಳಿಸಲಾಗಿದೆ. ಆಯುಕ್ತರು ಹಾಗೂ ಅಧಿಕಾರಿಗಳ ತಂಡ ತಣಿಸಂದ್ರದ ಹಜ್ ಭವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಇಂದಿನಿಂದಲೇ ಎಸಿಮ್ಟಮ್ಯಾಟಿಕ್ ಸೋಂಕಿತರನ್ನು ರವಾನಿಸಲು ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ತಿಳಿಸಿದ್ದಾರೆ. ವೈದ್ಯರು, ಶುಶ್ರೂಷಕಿಯರು, ಮಾರ್ಷಲ್ಸ್, ಮೆಡಿಸಿನ್ ಹಾಗೂ ಅಗತ್ಯ ಸಿಬ್ಬಂದಿಗಳನ್ನು ಈ ಕೆಲಸಕ್ಕಾಗಿ ನಿಯೋಜಿಸಲಾಗಿದೆ.
ನಗರದಲ್ಲಿ ಏಕಕಾಲಕ್ಕೆ 20 ಸಾವಿರ ಮಂದಿಯನ್ನು ಆರೈಕೆ ಮಾಡಲು ಬೇಕಾಗುವಷ್ಟು ಸಿದ್ಧತೆ ನಡೆದಿದೆ. ತಣಿಸಂದ್ರದ ಹಜ್ ಭವನ, ಕನಕಪುರ ರಸ್ತೆಯ ರವಿಶಂಕರ್ ಗುರೂಜಿ ಆಶ್ರಮದಲ್ಲಿ ತಲಾ 400 ಹಾಸಿಗೆಗಳು, ಕೆಂಗೇರಿ ಜ್ಞಾನಭಾರತಿ ಬಡಾವಣೆಯ ಮೆಡ್ ಸೋಲ್ ಆಸ್ಪತ್ರೆಯಲ್ಲಿ 200 ಹಾಸಿಗೆಗಳನ್ನು ಸಿದ್ಧತೆ ಮಾಡಲಾಗಿದೆ ಎಂದು ಕೋವಿಡ್ ಆರೈಕೆ ಕೇಂದ್ರಗಳ ಕಾರ್ಯತಂಡದ ಮುಖ್ಯಸ್ಥ ರಾಜೇಂದ್ರ ಸಿಂಗ್ ಕಠಾರಿಯ ಮಾಹಿತಿ ನೀಡಿದ್ದಾರೆ.
ಆರೈಕೆ ಕೇಂದ್ರಗಳಲ್ಲಿ ಪ್ರತಿ ನೂರು ಜನರಿಗೆ ಒಬ್ಬರು ವೈದ್ಯರು ಹಾಗು ಇಬ್ಬರು ಶುಶ್ರೂಷಕಿಯರನ್ನು ನೇಮಿಸಲಾಗಿದೆ.
ಇದಲ್ಲದೆ, ಕ್ವಾರಂಟೈನ್ಗೆ ಬಳಸಿದ್ದ ಹೋಟೆಲ್ಗಳ 1500 ಬೆಡ್ ಹಾಗೂ ವಿವಿಧ ಕಾಲೇಜುಗಳ ಹಾಸ್ಟೆಲ್ಗಳನ್ನು 3,000 ಮಂದಿ ಎಸಿಮ್ಟಮ್ಯಾಟಿಕ್ ಸೋಂಕಿತರಿಗೆ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಇದಲ್ಲದೆ ಅರಮನೆ ಮೈದಾನ, ಕಂಠೀರವ ಸ್ಟೇಡಿಯಂ, ಕೋರಮಂಗಲ ಒಳಾಂಗಣ ಕ್ರೀಡಾಂಗಣ, ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರವನ್ನೂ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ.