ಬೆಂಗಳೂರು: 2015ನೇ ಸಾಲಿನ ಕೆಪಿಎಎಸ್ಸಿ ನೇಮಕಾತಿ ಸಂಬಂಧ ಕೂಡಲೇ ಸಂದರ್ಶನ ದಿನಾಂಕವನ್ನು ಪ್ರಕಟಿಸುವಂತೆ ಆಗ್ರಹಿಸಿ ಜುಲೈ ಮೂರರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 2015ನೇ ಸಾಲಿನ ಕೆಪಿಎಸ್ಸಿ ನೇಮಕಾತಿ ಪ್ರಕ್ರಿಯೆ ವಿಳಂಬ ಸಂಬಂಧ ನಾನು ಕಳೆದ ಏಳು ತಿಂಗಳಲ್ಲಿ ಕನಿಷ್ಠ ಇಪ್ಪತೈದು ಬಾರಿಯಾದರೂ ಲೋಕಸೇವಾ ಆಯೋಗದ ಕಚೇರಿಗೆ ಹೋಗಿ ಸಂತ್ರಸ್ತ ಅಭ್ಯರ್ಥಿಗಳ ಸಮಸ್ಯೆಗಳ ಪರಿಹಾರ ಕುರಿತು ಆಗ್ರಹಿಸಿದ್ದೇನೆ. ಡಿಸೆಂಬರ್ 27, 2018ರಲ್ಲಿ ಒಮ್ಮೆ ಕೆಪಿಎಸ್ಸಿ ಕಟ್ಟಡದ ಕದ ತಟ್ಟುವ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದ್ದೆ. 2015ರ ಸಾಲಿನ ಕೆಎಎಸ್ ನೇಮಕಾತಿ ಸಂಬಂಧ ಆಗಸ್ಟ್ 18, 2017ಕ್ಕೆ ಪೂರ್ವಭಾವಿ ಪರೀಕ್ಷೆ ನಡೆದಿತ್ತು. ಮುಖ್ಯ ಪರೀಕ್ಷೆ ನಡೆದ ಕೊನೆಯ ದಿನಾಂಕ ಡಿಸೆಂಬರ್, 22, 2017. ಆದರೆ ಇನ್ನೂ ಫಲಿತಾಂಶ ಪ್ರಕಟವಾಗಲೇ ಇಲ್ಲ ಎಂದು ಕಿಡಿಕಾರಿದರು.