ಕರ್ನಾಟಕ

karnataka

By

Published : Jul 2, 2023, 8:36 AM IST

ETV Bharat / state

ಫ್ರೀಡಂ ಪಾರ್ಕ್​ನಲ್ಲಿ ಮೊಳಗಿದ ಮಳಖೇಡ ಜಯತೀರ್ಥರ ಘೋಷಣೆ: ಇತಿಹಾಸ ರಕ್ಷಣೆಗೆ ಭಕ್ತರ ಧ್ವನಿ

ಕಲಬುರಗಿಯ ಸೇಡಂ ತಾಲೂಕಿನ ಮಳಖೇಡದಲ್ಲಿರುವುದೇ ಜಯತೀರ್ಥರ ಮೂಲ ವೃಂದಾವನ. ಆದ್ರೆ, ಕೆಲವರು ಆನೆಗುಂದಿಯಲ್ಲಿರುವ ರಘುವರ್ಯರ ವೃಂದಾವನವನ್ನು ಜಯತೀರ್ಥರ ವೃಂದಾವನವೆಂದು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಶನಿವಾರ ಭಕ್ತರು ಪ್ರತಿಭಟಿಸಿದರು.

protest
ಪ್ರತಿಭಟನೆ

ಬೆಂಗಳೂರು : ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಕ್ಷೇತ್ರದಲ್ಲಿರುವ ಶ್ರೀ ಜಯತೀರ್ಥರ ಮೂಲ ವೃಂದಾವನವು ಮಳಖೇಡದಲ್ಲಿಲ್ಲ ಎಂದು ಅಪಪ್ರಚಾರ ಮಾಡುತ್ತಾ ನವ ವೃಂದಾವನದಲ್ಲಿರುವ ಉತ್ತರಾಧಿಮಠದ ಶ್ರೀ ರಘುವರ್ಯತೀರ್ಥರ ಮೂಲ ವೃಂದಾವನವನ್ನೇ ಶ್ರೀ ಜಯತೀರ್ಥರ ಮೂಲ ವೃಂದಾವನವೆಂದು ಪ್ರಚಾರ ಮಡುತ್ತಿರುವುದನ್ನು ನಗರದ ಫ್ರೀಡಂ ಪಾರ್ಕ್​ನಲ್ಲಿ ಒಗ್ಗೂಡಿದ ಭಕ್ತಸಾಗರ ವಿರೋಧಿಸಿತು.

ಬೆಂಗಳೂರಿನ ಶ್ರೀಜಯತೀರ್ಥ ಭಕ್ತವೃಂದ ಕರೆ ನೀಡಿದ್ದ ಜಯತೀರ್ಥ ಜಾಗೃತಿ ಸಭೆಯಲ್ಲಿ ಅನೇಕ ಗಣ್ಯರು, ವಿದ್ವಾಂಸರು ಭಾಗವಹಿಸಿದ್ದರು. ನೆರೆದ ಭಕ್ತರೆಲ್ಲ ಮಳಖೇಡ ನಿವಾಸ ಜಯತೀರ್ಥರಿಗೆ ಜಯಘೋಷಣೆ ಕೂಗಿದರು. "ನೂರಾರು ದಾಖಲೆಗಳು, ಪ್ರಮಾಣಗಳು ಶ್ರೀ ಜಯತೀರ್ಥರು ಮಳಖೇಡದಲ್ಲಿಯೇ ಇದ್ದಾರೆ ಎಂದು ಹೇಳುತ್ತಿದ್ದರೂ ಅದನ್ನು ಲೆಕ್ಕಿಸದೆ ಅಪಪ್ರಚಾರ ಮಾಡುವುದು ಸರಿಯಲ್ಲ. ಈ ರೀತಿಯಾದ ಅಪಪ್ರಚಾರದಿಂದ ಲಕ್ಷಾಂತರ ಭಕ್ತರ ಮನದಲ್ಲಿ ಗೊಂದಲ ಮೂಡಿಸುವ ಜೊತೆಗೆ ಸಮಾಜದಲ್ಲಿ ಕ್ಷೋಭೆ ಉಂಟು ಮಾಡಿದ್ದಾರೆ. ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ. ಅಪಪ್ರಚಾರ ಮಾಡುವುದನ್ನು ನಿಲ್ಲಿಸುವವರೆಗೂ ಶಾಂತಿಯುತವಾದ ನಮ್ಮ ಪ್ರತಿಭಟನೆ ಮುಂದುವರಿಸಲಾಗುವುದು" ಎಂದು ಸತ್ಯಧ್ಯಾನ ವಿದ್ಯಾಪೀಠದ ಕುಲಪತಿ ಪಂ. ಮಾಹುಲೀ ವಿದ್ಯಾಸಿಂಹಾಚಾರ್ಯರು ಹೇಳಿದರು.

"ಅತಿಯಾದ ಶಾಂತಿ ನಮ್ಮ ಅಸ್ತಿತ್ವನ್ನೇ ಹಾಳು ಮಾಡುತ್ತದೆ. ನಮ್ಮ ಧ್ವನಿ ದೃಢವಾಗಿರಬೇಕು. ಸತ್ಯಕ್ಕೆ ಎಂದಿಗೂ ಅಂಟಿಕೊಂಡು ಇರಬೇಕು. ಪರಸ್ಪರ ಸೌಹಾರ್ದದ ಮಾತುಕತೆ ನಡೆಯಲು ಬೇಕಾದ ವಾತಾವರಣ ನಿರ್ಮಾಣ ಆಗದ ಹೊರತು ಮಾತುಕತೆ ಫಲಿಸುವುದಿಲ್ಲ. ಶ್ರೀ ರಘುವರ್ಯರ ವೃಂದಾವನಕ್ಕೆ ಜಯತೀರ್ಥರು ಎಂದು ಮಾಡುವ ಪೂಜೆ ಮತ್ತು ಅಪಪ್ರಚಾರ ನಿಲ್ಲಿಸುವವರೆಗೂ ಸೌಹಾರ್ದದ ಮಾತುಕತೆ ನಡೆಯಲಾರದು. ನಡೆದರೂ ಅದು ಫಲಿಸಲಾರದು. ರಘುವರ್ಯರ ವೃಂದಾವನಕ್ಕೆ ಜಯತೀರ್ಥರ ವೃಂದಾವನ ಎಂದು ಪೂಜೆ ಮಾಡುವುದನ್ನು ನಿಲ್ಲಿಸಿದ ಮರುದಿನವೇ ಸೌಹಾರ್ದದ ಮಾತುಕತೆಗೆ ಸಿದ್ಧ" ಎಂದು ವಿದ್ಯಾಧೀಶಾಚಾರ್ಯರು ತಿಳಿಸಿದರು.

ಶ್ರೀ ಜಯತೀರ್ಥರ ಭಕ್ತರೆಲ್ಲರೂ ಮೂಲ ವೃಂದಾವನದ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಅಸಹಕಾರ ಚಳುವಳಿ ಮಾಡಬೇಕು. ಇದು ನಾವು ಜಯತೀರ್ಥರಿಗೆ ತೋರುವ ಗೌರವ ಎಂದು ಇದೇ ವೇಳೆ ಅವರು ಕರೆ ನೀಡಿದರು.

ಜಯತೀರ್ಥ ವಿದ್ಯಾಪೀಠದ ಕುಲಪತಿ ಪಂ. ಸತ್ಯಧ್ಯಾನಾಚಾರ್ಯ ಕಟ್ಟಿ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, "ಸತ್ಯಮೇವ ಜಯತೆ, ಸತ್ಯಕ್ಕೆ ಜಯ ನಿಶ್ಚಿತ, ಅಪಪ್ರಚಾರ ಮಾಡುತ್ತಿರುವವರಿಗೂ ಸತ್ಯ ಏನು ಅಂತ ಗೊತ್ತು. ಆದರೂ, ಯಾವುದೋ ಗೂಢವಾದ ಸ್ವಾರ್ಥಕ್ಕಾಗಿ ಈ ರೀತಿ ಹೊಸವಿವಾದವನ್ನು ಸೃಷ್ಟಿ ಮಾಡಿದ್ದಾರೆ. ಅದನ್ನು ಅವರು ನಿಲ್ಲಿಸಲೇ ಬೇಕು. ಇಲ್ಲಿದಿದ್ದರೆ ಸಮಾಜ ವಿಘಟಿತವಾಗುತ್ತದೆ' ಎಂದು ಮನವಿ ಮಾಡಿದರು.

"700 ವರ್ಷದ ಸತ್ಯವಾದ ಇತಿಹಾಸವನ್ನು ಸಂರಕ್ಷಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ" ಎಂದು ಪಂ. ಧೀರೇಂದ್ರಾಚಾರ್ಯ ಸತ್ತಿಗೇರಿ ತಿಳಿಸಿದರು. ಬಳಿಕ ಸಭೆಯ ವಿಷಯವನ್ನು ತಿಳಿದ ಸಚಿವ ದಿನೇಶ್ ಗುಂಡೂರಾವ್ ಆಯೋಜಕರನ್ನು ಸಂಪರ್ಕಿಸಿ, ಭೇಟಿಯಾಗಿ ಸೂಕ್ತ ಪರಿಹಾರಕ್ಕಾಗಿ ಮಧ್ಯಸ್ಥಿಕೆ ವಹಿಸುವುದಾಗಿ ಭರವಸೆ ನೀಡಿದರು.

ಪಂ. ರಂಗಾಚಾರ್ಯ ಗುತ್ತಲ, ಪಂ. ಶ್ರೀನಿವಾಸಾಚಾರ್ಯ ಆಲೂರು, ಪಂ. ಧೀರೇಂದ್ರಾಚಾರ್ಯ ಸತ್ತಿಗೆರಿ, ಪಂ. ಕೃಷ್ಣಾಚಾರ್ಯ ಬಿದರಹಳ್ಳಿ, ನರಹರಿ ಸುಮಧ್ವ ಮೊದಲಾದ ಅನೇಕ ವಿದ್ವಾಂಸರು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ :ಮತ್ತೆ ಜಲದಿಗ್ಬಂಧನಕ್ಕೆ ಒಳಗಾದ ಜಯತೀರ್ಥರ ಮೂಲವೃಂದಾವನ!

ABOUT THE AUTHOR

...view details