ಬೆಂಗಳೂರು: ಕೆರೆ ಬಳಕೆದಾರರ ಸಂಘಗಳ ಬಲವರ್ಧನೆಯ ನಿಟ್ಟಿನಲ್ಲಿ ಮಾರ್ಗಸೂಚಿ ಸಿದ್ಧಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಸದ್ಯದಲ್ಲೇ ಕರ್ನಾಟಕ ಕೆರೆ ಸಂರಕ್ಷಣಾ ಮತ್ತು ಪ್ರಾಧಿಕಾರದ ಅಧ್ಯಕ್ಷರಾಗಿರುವ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜು ತಿಳಿಸಿದರು.
ವಿಕಾಸಸೌಧದಲ್ಲಿಂದು ಕೆರೆ ಬಳಕೆದಾರರ ಸಂಘಗಳ ಕಾರ್ಯ ಚಟುವಟಿಕೆಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರಕಾರ 2023-24ನೇ ಸಾಲಿನ ಬಜೆಟ್ನಲ್ಲಿ ಸಂಘಗಳ ಬಲವರ್ಧನೆಗೊಳಿಸುವುದಾಗಿ ಘೋಷಣೆ ಮಾಡಿದೆ. ಈ ಕೆರೆ ಬಳಕೆದಾರರ ಸಂಘಗಳನ್ನು ಬಲವರ್ಧನೆಗೊಳಿಸಿದಲ್ಲಿ ಕೆರೆಗಳನ್ನು ಅಭಿವೃದ್ದಿಗೊಳಿಸುವುದು ಹಾಗೂ ಅಂತರ್ಜಲ ವೃದ್ಧಿಗೊಳಿಸುವುದು ಸಾಧ್ಯವಿದೆ. ರೈತರಿಗೆ ಕೆರೆ ಸಂಘಗಳಲ್ಲಿ ಹೆಚ್ಚಿನ ಆದ್ಯತೆ ನೀಡುವ ಜೊತೆಯಲ್ಲಿಯೇ, ಕೆರೆ ಸಂಘಗಳನ್ನು ಆರ್ಥಿಕವಾಗಿ ಸದೃಢಗೊಳಿಸುವುದು ನಮ್ಮ ಪ್ರಮುಖ ಉದ್ದೇಶ. ಸಣ್ಣ ನೀರಾವರಿ ಇಲಾಖೆ ಅಷ್ಟೇ ಅಲ್ಲದೇ, ಗ್ರಾಮೀಣಾಭಿವೃದ್ದಿ ವ್ಯಾಪ್ತಿಯಲ್ಲಿ 28,345 ಹಾಗೂ ಬೃಹತ್ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ 2082 ಕೆರೆಗಳಿವೆ. ಈ ಕೆರೆಗಳಲ್ಲಿ ಕೇವಲ ಕೆರೆ ಬಳಕೆದಾರರ ಸಂಘಗಳ ರಚನೆಯಿಂದ ಮಾತ್ರ ಅವುಗಳ ಬಲವರ್ಧನೆ ಸಾಧ್ಯವಿಲ್ಲ ಎಂದರು.
ಕೆರೆ ಸಂಘಗಳನ್ನು ಆರ್ಥಿಕವಾಗಿ ಬಲವರ್ಧನೆಗೊಳಿಸುವ ಉದ್ದೇಶದಿಂದ ಹಲವಾರು ಅಂಶಗಳನ್ನ ಅಳವಡಿಸುವ ಅಗತ್ಯತೆಯಿದೆ. ಈ ನಿಟ್ಟಿನಲ್ಲಿ ಕೆರೆಗೆ ಸೇರಿದ ನೀರು ನಿಲ್ಲುವ ಅಂಗಳ ಹೊರತುಪಡಿಸಿ ಇತರೆ ಪ್ರದೇಶದಲ್ಲಿ ಹುಲ್ಲು ಬೆಳೆದು ಮಾರಾಟ ಮಾಡುವುದು, ಕೆರೆ ಅಂಚು ಹಾಗೂ ಕೆಳಭಾಗದಲ್ಲಿ ಹಣ್ಣು ಅಥವಾ ತೆಂಗಿನ ಗಿಡಗಳನ್ನ ನೆಟ್ಟು ಅದರಿಂದ ಆದಾಯ ಬರುವಂತೆ ಮಾಡುವುದು, ಮೀನುಗಾರಿಕೆ ಉತ್ಪನ್ನದಲ್ಲಿ ಶೇಕಡಾವಾರು ಸಂಘಗಳಿಗೆ ಆದಾಯ ಹಂಚಿಕೆ, ಜಲಕ್ರೀಡೆ/ಬೋಟಿಂಗ್ ಆದಾಯದಲ್ಲಿ ಕೆರೆ ಸಂಘಕ್ಕೆ ಪಾಲು, ಜಾಹೀರಾತು ಫಲಕಗಳ ಆದಾಯದಲ್ಲಿ ಪಾಲು ಹೀಗೆ ಹಲವಾರು ಆರ್ಥಿಕ ಮೂಲಗಳ ಬಗ್ಗೆ ಸಭೆಯಲ್ಲಿ ವ್ಯಾಪಕವಾಗಿ ಚರ್ಚಿಸಲಾಯಿತು.