ಕರ್ನಾಟಕ

karnataka

ETV Bharat / state

ಮೂರನೇ ಬಾರಿ ಜಾಮೀನು ಮಂಜೂರು: ಕರವೇ ನಾರಾಯಣಗೌಡ ಬಿಡುಗಡೆ

ಮೂರನೇ ಬಾರಿ ಜಾಮೀನು ದೊರೆತ ಹಿನ್ನೆಲೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ ಎ ನಾರಾಯಣಗೌಡ ಅವರು ಬಿಡುಗಡೆಯಾಗಿದ್ದಾರೆ.

By ETV Bharat Karnataka Team

Published : Jan 10, 2024, 10:28 PM IST

pro-kannada-activist-narayana-gowda-released-on-bail
ಮೂರನೇ ಬಾರಿ ಜಾಮೀನು ಮಂಜೂರು: ಕರವೇ ನಾರಾಯಣಗೌಡ ಬಿಡುಗಡೆ

ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ ಎ ನಾರಾಯಣಗೌಡ ಅವರಿಗೆ ಮೂರನೇ ಬಾರಿ ಜಾಮೀನು ಮಂಜೂರಾಗಿದೆ. ಎನ್​ಡಿಎಂಎ ಉಲ್ಲಂಘನೆ ಪ್ರಕರಣವೊಂದರಲ್ಲಿ ಹಲಸೂರು ಗೇಟ್ ಪೊಲೀಸರು ವಶಕ್ಕೆ ಪಡೆದುಕೊಂಡು ವೈದ್ಯಕೀಯ ಪರೀಕ್ಷೆಗೆ ನಡೆಸಿ ಒಂದನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು, ವಿಚಾರಣೆ ನಡೆಸಿದ ನ್ಯಾಯಾಲಯವು ನಾರಾಯಣಗೌಡ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತು.

ನಾಮಫಲಕದಲ್ಲಿ ಶೇ.60 ರಷ್ಟು ಕನ್ನಡ ಬಳಕೆ ಕಡ್ಡಾಯ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದ ನಾರಾಯಣಗೌಡ ಅವರನ್ನ ಡಿಸೆಂಬರ್ 27ರಂದು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ದೇವನಹಳ್ಳಿಯ 5ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯವು ಜನವರಿ 6ರಂದು ಜಾಮೀನು ಮಂಜೂರು ಮಾಡಿತ್ತು. ಬಿಡುಗಡೆ ಪ್ರಕ್ರಿಯೆ ಮುಗಿದ ಹಿನ್ನೆಲೆ ಜನವರಿ 9ರಂದು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ 2017 ರಲ್ಲಿ ದಾಖಲಾಗಿದ್ದ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಪ್ರಕರಣದಡಿ ಕುಮಾರಸ್ವಾಮಿ ಲೇಔಟ್ ಪೊಲೀಸರು ವಶಕ್ಕೆ‌ ಪಡೆದುಕೊಂಡಿದ್ದರು.‌

ನಾರಾಯಣಗೌಡ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ ಹಿನ್ನೆಲೆಯಲ್ಲಿ ನಿನ್ನೆ(ಮಂಗಳವಾರ) ವಶಕ್ಕೆ ಪಡೆದುಕೊಂಡಿಕೊಂಡು ನಗರದ 30ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಇಂದು ಜಾಮೀನು‌‌ ಪುರಸ್ಕರಿಸಿತು. ಎರಡನೇ ಬಾರಿ ಬಿಡುಗಡೆಯಾಗುತ್ತಿದ್ದಂತೆ ಹಲಸೂರು ಗೇಟ್ ಠಾಣೆ ಪೊಲೀಸರು ರಾಷ್ಟ್ರೀಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಕಾಯ್ದೆಯಡಿ (ಎನ್​ಡಿಎಂಎ) ವಶಕ್ಕೆ ಪಡೆದುಕೊಂಡಿದ್ದರು.

2020ರಲ್ಲಿ ಕೊರೊನಾ ಬಿಕ್ಕಟ್ಟು ಎದುರಾಗಿದ್ದರೂ ಮೈಸೂರು ಬ್ಯಾಂಕ್ ವೃತ್ತದಲ್ಲಿ ನಾರಾಯಣಗೌಡ ಅವರು ಪ್ರತಿಭಟನೆ ಮಾಡುವ ಮೂಲಕ ಎನ್​ಡಿಎಂಎ ಕಾಯ್ದೆ ಉಲ್ಲಂಘಿಸಿದ್ದರು. ಈ ಸಂಬಂಧ ಹಲಸೂರು ಗೇಟ್ ಪೊಲೀಸರು ನಾರಾಯಣಗೌಡ ಅವರನ್ನ ವಶಕ್ಕೆ ಪಡೆದುಕೊಂಡರು. ಸೆಂಟ್ ಮಾರ್ಥಾಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದರು.
ವಿಚಾರಣೆ ನಡೆಸಿದ ನ್ಯಾಯಾಲಯವು ಐದು ಸಾವಿರ ನಗದು ಒಬ್ಬರ ಶ್ಯೂರಿಟಿ ಮೇರೆಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತು.

ನಿನ್ನೆ ಜಾಮೀನು ಕೋರಿ ಅರ್ಜಿ:ನಿನ್ನೆ(ಮಂಗಳವಾರ) ನಾರಾಯಣ ಗೌಡ ಪರ ವಕೀಲರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಕೋರ್ಟ್​ನಲ್ಲಿ ನಾರಾಯಣ ಗೌಡ ಪರ ವಕೀಲರು, ಪೊಲೀಸರ ನಿರ್ಲಕ್ಷ್ಯದಿಂದ ವಾರಂಟ್‌ ಜಾರಿಯಾಗಿದೆ. ಅರ್ಜಿದಾರರು ಪ್ರತಿ ದಿನ ಎಲ್ಲರಿಗೂ ಸಿಗುವಂತಹ ವ್ಯಕ್ತಿ. ಅವರು ತಲೆಮರೆಸಿಕೊಂಡು ಹೋಗುವವರಲ್ಲ. ವಾರಂಟ್‌ ಜಾರಿಯಾದ ಬಗ್ಗೆ ಅವರಿಗೆ ಮಾಹಿತಿ ಇಲ್ಲ. ಮಾಹಿತಿ ತಿಳಿದಿದ್ದರೆ ಸ್ವತಃ ಅವರೇ ನ್ಯಾಯಾಲಯಕ್ಕೆ ತಪ್ಪದೇ ಹಾಜರಾಗುತ್ತಿದ್ದರು. ಅವರಿಗೆ ಆರೋಗ್ಯ ಸರಿಯಿಲ್ಲದ ಕಾರಣ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದ್ದರು.

ಇದನ್ನೂ ಓದಿ:ದಾವಣಗೆರೆ: ಹೆಚ್ಚು ನೀರು ಹರಿಸುವಂತೆ ಬೀದಿಗಿಳಿದ ರೈತರು

ABOUT THE AUTHOR

...view details