ಕರ್ನಾಟಕ

karnataka

By

Published : Apr 28, 2022, 6:45 PM IST

ETV Bharat / state

ಪಿಎಸ್ಐ ನೇಮಕಾತಿ ಅಕ್ರಮ: ಸಿಐಡಿ ನೋಟಿಸ್​ಗೆ ಲಿಖಿತ ಉತ್ತರ ‌ನೀಡಿದ ಪ್ರಿಯಾಂಕ್ ಖರ್ಗೆ

ತನಿಖಾ ಸಂಸ್ಥೆ ಕಾನೂನು ಪ್ರಕಾರವಾಗಿಯೇ ಕಾರ್ಯನಿರ್ವಹಿಸಬೇಕು. ನೀವು ನನಗೆ ಸಿಆರ್​​​ಪಿಸಿ ಸೆಕ್ಷನ್ 91 ಅಡಿಯಲ್ಲಿ ನೋಟಿಸ್ ನೀಡಿದ್ದೀರಿ. ಈ ಸೆಕ್ಷನ್ ಅಡಿ ನೀವು ಯಾವ ನಿರ್ದಿಷ್ಟ ದಾಖಲೆಗಳನ್ನು ತನಿಖಾಧಿಕಾರಿ ಮುಂದೆ ಹಾಜರಿಪಡಿಸಬೇಕು ಎಂಬುವುದನ್ನು ಆ ವ್ಯಕ್ತಿಗೆ ತಿಳಿಸಬೇಕು ಹಾಗೂ ಆತ ಆ ದಾಖಲಾತಿಗಳನ್ನು ಹೊಂದಿದ್ದಾನೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಆದರೆ, ನೀವು ನೀಡಿರುವ ನೋಟಿಸ್ ಆಧಾರರಹಿತ ಹಾಗೂ ಗೊಂದಲದಿಂದ ಕೂಡಿದೆ ಎಂದು ಪ್ರಿಯಾಂಕ್‌ ಖರ್ಗೆ, ಸಿಐಡಿ ನೋಟಿಸ್​ಗೆ ಪತ್ರದಲ್ಲಿ ತಿಳಿಸಿದ್ದಾರೆ.

ಸಿಐಡಿ ನೋಟಿಸ್​ಗೆ ಲಿಖಿತ ಉತ್ತರ ‌ನೀಡಿದ ಪ್ರಿಯಾಂಕ್ ಖರ್ಗೆ
ಸಿಐಡಿ ನೋಟಿಸ್​ಗೆ ಲಿಖಿತ ಉತ್ತರ ‌ನೀಡಿದ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಪಿಎಸ್​ಐ ನೇಮಕಾತಿ ಪರೀಕ್ಷೆ ಅಕ್ರಮ ವಿಚಾರವಾಗಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ಸಿಐಡಿ ಡಿಜಿಪಿಗೆ ಲಿಖಿತ ಉತ್ತರ ಕಳುಹಿಸಿದ್ದಾರೆ. ಪತ್ರದಲ್ಲಿ ನಿಮ್ಮ ನೋಟಿಸ್ ಆಧಾರರಹಿತ ಮತ್ತು ಕ್ಷುಲ್ಲಕ ಎಂದು ಆಕ್ಷೇಪಿಸಿದ್ದಾರೆ.

ಪತ್ರದಲ್ಲಿ ಏನಿದೆ?:ತಮ್ಮ ನಾಲ್ಕು ಪುಟಗಳ ಲಿಖಿತ ಉತ್ತರದಲ್ಲಿ ಪ್ರಿಯಾಂಕ್ ಖರ್ಗೆ, ನೋಟಿಸ್ ನೀಡಿರುವ ಸಿಐಡಿಯ ಅಧಿಕಾರ ವ್ಯಾಪ್ತಿ ಹಾಗೂ ಉದ್ದೇಶದ ಬಗ್ಗೆ ಪ್ರಶ್ನಿಸಿದ್ದಾರೆ. ಈವರೆಗೆ ಪಿಎಸ್​​ಐ ನೇಮಕಾತಿ ಪರೀಕ್ಷೆ ಅಕ್ರಮದ ಸಂಬಂಧ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡಿಲ್ಲ. ಸಿಐಡಿ ನಿಜವಾದ ಸಾಕ್ಷಿ ಹಾಗೂ ಮಾಹಿತಿಯನ್ನು ಕಲೆ ಹಾಕಲು ಹೆಚ್ಚಿನ ಗಮನ ಕೊಡಬೇಕು. ಹೊರತಾಗಿ, ಆಡಳಿತ ಪಕ್ಷದ ಏಜೆಂಟರಾಗಿ ಕೆಲಸ ಮಾಡಬಾರದು. ಈ‌ ತರದ ಆಧಾರರಹಿತ, ರಾಜಕೀಯಪ್ರೇರಿತ ನೋಟಿಸ್​ಗಳನ್ನು ನೀಡಬಾರದು ಎಂದು ಮನವಿ ಮಾಡುತ್ತೇನೆ ಎಂದು ಉಲ್ಲೇಖಿಸಿದ್ದಾರೆ.

ನಾನು ಹಗರಣದ ಕೇಂದ್ರಬಿಂದುವಾಗಿರುವ ಕಲಬುರಗಿ ಜಿಲ್ಲೆಯ ಜನಪ್ರತಿನಿಧಿ ಆಗಿದ್ದೇನೆ. ಜನಪ್ರತಿನಿಧಿಯಾಗಿ ಸಾರ್ವಜನಿಕ ವಲಯದಲ್ಲಿ ಇರುವ ಹಲವು ಮಾಹಿತಿಗಳು ನನಗೆ ಲಭ್ಯವಾಗುತ್ತದೆ. ಅದನ್ನು ಸುದ್ದಿಗೋಷ್ಟಿಯಲ್ಲಿ ಬಹಿರಂಗಪಡಿಸಿದ್ದೇನೆ. ಈ ಮಾಹಿತಿಯನ್ನು ನೀವು ನೋಟಿಸ್ ಮೂಲಕ ತನ್ನಿಂದ ಪಡೆಯಲು ನಿರ್ಧಾರ ಮಾಡಿರುವುದು ಅಚ್ಚರಿ ಮೂಡಿಸಿದೆ. ತನಿಖಾ ಸಂಸ್ಥೆಯಾಗಿ ಈ ಮಾಹಿತಿ ಎಲ್ಲರಿಗಿಂತ ಮೊದಲೇ ನಿಮಗೆ ದೊರಕಬೇಕಾಗಿತ್ತು. ಆದರೆ, ಈಗಿರುವ ಸರ್ಕಾರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತನಿಖಾ ಸಂಸ್ಥೆ ಕಾನೂನು ಪ್ರಕಾರವಾಗಿಯೇ ಕಾರ್ಯನಿರ್ವಹಿಸಬೇಕು. ನೀವು ನನಗೆ ಸಿಆರ್​​​ಪಿಸಿ ಸೆಕ್ಷನ್ 91 ಅಡಿಯಲ್ಲಿ ನೋಟಿಸ್ ನೀಡಿದ್ದೀರಿ. ಈ ಸೆಕ್ಷನ್ ಅಡಿ ನೀವು ಯಾವ ನಿರ್ದಿಷ್ಟ ದಾಖಲೆಗಳನ್ನು ತನಿಖಾಧಿಕಾರಿ ಮುಂದೆ ಹಾಜರಿಪಡಿಸಬೇಕು ಎಂಬುವುದನ್ನು ಆ ವ್ಯಕ್ತಿಗೆ ತಿಳಿಸಬೇಕು ಹಾಗೂ ಆತ ಆ ದಾಖಲಾತಿಗಳನ್ನು ಹೊಂದಿದ್ದಾನೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಆದರೆ, ನೀವು ನೀಡಿರುವ ನೋಟಿಸ್ ಆಧಾರ ರಹಿತವಾಗಿದೆ ಹಾಗೂ ಗೊಂದಲದಿಂದ ಕೂಡಿದೆ. ನಿಮ್ಮ ಈ ನಡೆ ಅಧಿಕಾರದಲ್ಲಿರುವವರನ್ನು ತೃಪ್ತಿ ಪಡಿಸುವ ಉದ್ದೇಶದಂತೆ ಕಾಣುತ್ತಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ:ಪಿಎಸ್​ಐ ಭ್ರಷ್ಟಾಚಾರಿ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ: ರಮೇಶ್ ​ಕುಮಾರ್​

ನಿಮ್ಮ ನೋಟಿಸ್ ಮುಕ್ತ ಹಾಗೂ ಪಾರದರ್ಶಕ ತನಿಖೆಯ ಉದ್ದೇಶ ಹೊಂದಿಲ್ಲ. ಈ ನಡೆ ಕೇವಲ ಕಾನೂನು ಬಾಹಿರ ಮಾತ್ರವಲ್ಲ, ಕಾನೂನಿನ ದುರುಪಯೋಗವಾಗಿದೆ. ಈ ನೋಟಿಸ್ ನಿಮ್ಮ ವ್ಯಾಪ್ತಿ‌ ಮೀರಿದ್ದಾಗಿದೆ. ಈ ಪ್ರಕರಣವನ್ನು ಮೊದಲಿಗೆ ಪ್ರಸ್ತಾಪ ಮಾಡಿದ್ದು ಸಚಿವ ಪ್ರಭು ಚಹ್ಹಾಣ್. ಅವರು ಫೆಬ್ರವರಿ 3 ಕ್ಕೆ ಹಗರಣ ನಡೆದಿರುವ ಬಗ್ಗೆ ಸಿಎಂಗೆ ಪತ್ರ ಬರೆದಿದ್ದರು. ಜೊತೆಗೆ ಬಿಜೆಪಿ ಎಂಎಲ್​​​ಸಿ ಸಂಕನೂರು ಕೂಡಾ ಇದೇ ಸಂಬಂಧವಾಗಿ ಗೃಹ ಸಚಿವರಿಗೆ ಪತ್ರವನ್ನು ಬರೆದಿದ್ದರು. ಈ ಪತ್ರಗಳ ಬಗ್ಗೆ ತನಿಖಾ ಸಂಸ್ಥೆ ತನಿಖೆಯನ್ನು ನಡೆಸಿದ್ಯಾ? ಪತ್ರ ಬರೆದವರನ್ನು ನನ್ನಂತೆ ತನಿಖೆಗೆ ಹಾಜರಾಗುವಂತೆ ನೋಟಿಸ್ ನೀಡಿದೆಯಾ ಎಂದು ಪ್ರಶ್ನಿಸಿದ್ದಾರೆ.

ಹಗರಣವನ್ನು ತನಿಖೆ ಮಾಡುವ ಉದ್ದೇಶಕ್ಕಿಂತ ನನ್ನ ಮೂಲಭೂತ ಹಕ್ಕನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದೀರಿ. ನಿಜವಾದ ಆರೋಪಿಗಳನ್ನು ಪತ್ತೆಹಚ್ಚುವ ಕೆಲಸವನ್ನು ತನಿಖಾ ಸಂಸ್ಥೆಗಳು ಮಾಡಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ. ನಿಮ್ಮ ಎಲ್ಲ ತನಿಖಾ ಪ್ರಕ್ರಿಯೆಗಳು ಸಾರ್ವಜನಿಕರ ಗಮನವನ್ನು ಬೇರೆ ಕಡೆ ಸೆಳೆಯುವತ್ತ ಕೇಂದ್ರೀಕೃತವಾಗಿದೆ ಮತ್ತು ವಿರೋಧ ಪಕ್ಷಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವಲ್ಲಿ ಕೇಂದ್ರೀಕೃತವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details