ಕರ್ನಾಟಕ

karnataka

By ETV Bharat Karnataka Team

Published : Sep 24, 2023, 6:13 PM IST

ETV Bharat / state

ಲೋಕ ಸಮರಕ್ಕೆ ಮೂರು ಪಕ್ಷಗಳಿಂದ ತಯಾರಿ; ಬಿಜೆಪಿ-ಜೆಡಿಸ್ ಮೈತ್ರಿ ತಂತ್ರ.. ಇತ್ತ ಕಾಂಗ್ರೆಸ್ ನಿಂದ 28 ಕ್ಷೇತ್ರಗಳಿಗೆ ವೀಕ್ಷಕರ ನೇಮಿಸಿ ಮುಂದಡಿ

ಕಮಲ ದಳ ಮೈತ್ರಿ ಬೆನ್ನಲ್ಲೇ ಕಾಂಗ್ರೆಸ್ ಅಲರ್ಟ್:ರಾಜ್ಯದ ಎಲ್ಲ 28 ಎಂಪಿ ಕ್ಷೇತ್ರಗಳಿಗೆ ವೀಕ್ಷಕರನ್ನು ನೇಮಿಸಿ ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಡಿ ಕೆ ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.

bjp jds congress
ಕಮಲ ದಳ ಮೈತ್ರಿ ಬೆನ್ನಲ್ಲೇ ಕಾಂಗ್ರೆಸ್ ಅಲರ್ಟ್

ಬೆಂಗಳೂರು:ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಈಗಿನಿಂದಲೇ ತಯಾರಿ ಆರಂಭಿಸಿವೆ.‌ ಮೈತ್ರಿ ಮೂಲಕ ಬಿಜೆಪಿ ಜೆಡಿಎಸ್ ಸೇರಿ ಕಾಂಗ್ರೆಸ್​​ಗೆ ಟಕ್ಕರ್‌ ಕೊಡಲು ಮುಂದಾಗಿದ್ದರೆ, ಇತ್ತ ಕಾಂಗ್ರೆಸ್ ಪಂಚ ಗ್ಯಾರಂಟಿ, ಆಪರೇಷನ್ ಹಸ್ತದ ಮೂಲಕ ಮೈತ್ರಿಗೆ ಕೌಂಟರ್ ಕೊಡಲು ಮುಂದಾಗಿದೆ. ಈ ಸಂಬಂಧ ಮುಂದಡಿ ಇಟ್ಟಿರುವ ರಾಜ್ಯ ಕಾಂಗ್ರೆಸ್ ಲೋಕಸಭೆ ಚುನಾವಣೆ ಹಿನ್ನೆಲೆ 28 ಕ್ಷೇತ್ರಗಳಿಗೆ ವೀಕ್ಷಕರನ್ನು ನೇಮಿಸಿದೆ.

ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಈಗಾಗಲೇ ವೇದಿಕೆ ಸಜ್ಜಾಗುತ್ತಿದೆ. ಮೂರು ರಾಜಕೀಯ ಪಕ್ಷಗಳು ಲೋಕಸಮರಕ್ಕೆ ಕಾರ್ಯತಂತ್ರಗಳನ್ನು ರೂಪಿಸುತ್ತಿವೆ. ಇತ್ತ ಆಡಳಿತಾರೂಢ ಕಾಂಗ್ರೆಸ್​​​ಗೆ ಲೋಕಸಭೆ ಸಮರದಲ್ಲಿ ಏಟು ನೀಡಲು ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಮೈತ್ರಿ ಮೂಲಕ ಮತ ಕ್ರೋಢೀಕರಣ ಮಾಡುವ ಮೂಲಕ ಕಾಂಗ್ರೆಸ್​​​ಗೆ ಟಕ್ಕರ್ ಕೊಡಲು ಮುಂದಾಗಿದೆ. ಪ್ರಮುಖವಾಗಿ ಒಕ್ಕಲಿಗರ ಪ್ರಾಬಲ್ಯದ ಹಳೆಮೈಸೂರು ಭಾಗದಲ್ಲಿ ಕಾಂಗ್ರೆಸ್​ಗೆ ಏಟು ನೀಡಲು ಕಮಲ ದಳ ಮೈತ್ರಿ ತಂತ್ರಗಾರಿಕೆ ರೂಪಿಸಿದೆ.

ಇತ್ತ ರಾಜ್ಯ ಕಾಂಗ್ರೆಸ್ ಕಮಲ-ದಳ ಮೈತ್ರಿ ಬೆನ್ನಲ್ಲೇ ಅಲರ್ಟ್ ಆಗಿದ್ದು, ರಾಜ್ಯದ ಎಲ್ಲ 28 ಕ್ಷೇತ್ರಗಳಿಗೆ ವೀಕ್ಷಕರನ್ನು ನೇಮಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಡಿ ಕೆ ಶಿವಕುಮಾರ್ ವೀಕ್ಷಕರನ್ನಾಗಿ ನೇಮಕ ಮಾಡಲಾಗಿರುವ ಸಚಿವರು, ಕ್ಷೇತ್ರಗಳಿಗೆ ಭೇಟಿ ನೀಡಿ, ಸ್ಥಳೀಯ ನಾಯಕರೊಂದಿಗೆ ಚರ್ಚೆ ನಡೆಸಿ ಸಮರ್ಥ ಅಭ್ಯರ್ಥಿಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಲು ಸೂಚನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ವೀಕ್ಷಕರು ತಮಗೆ ನೀಡಲಾದ ಲೋಕಸಭೆ ಕ್ಷೇತ್ರಗಳಲ್ಲಿ ಸಭೆಗಳನ್ನು ನಡೆಸಿ, ಸಂಭಾವ್ಯ, ಸಮರ್ಥ ಅಭ್ಯರ್ಥಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಿದ್ದು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ವರದಿಗಳನ್ನು ಸಲ್ಲಿಸಲಿದ್ದಾರೆ.

28 ಕ್ಷೇತ್ರಗಳಿಗೆ ವೀಕ್ಷಕರ ನೇಮಕ:ಅದರಂತೆ ಬೆಂಗಳೂರು ಉತ್ತರಕ್ಕೆ ಸಚಿವ ಡಾ. ಜಿ ಪರಮೇಶ್ವರ್, ಬೆಂಗಳೂರು ಗ್ರಾಮಾಂತರಕ್ಕೆ ಕೆ ವೆಂಕಟೇಶ್, ಬೆಂಗಳೂರು ದಕ್ಷಿಣಕ್ಕೆ ಡಾ. ಶರಣ್ ಪ್ರಕಾಶ್ ಪಾಟೀಲ್, ಬೆಂಗಳೂರು ಕೇಂದ್ರಕ್ಕೆ ಎನ್ ಎಸ್ ಬೋಸರಾಜು, ಬಾಗಲಕೋಟೆ ಕ್ಷೇತ್ರಕ್ಕೆ ಪ್ರಿಯಾಂಕ್ ಖರ್ಗೆ, ಬೆಳಗಾವಿಯಲ್ಲಿ ಶಿವರಾಜ್ ತಂಗಡಗಿ, ವಿಜಯಪುರಕ್ಕೆ ಸತೀಶ್ ಜಾರಕಿಹೊಳಿ, ಚಿಕ್ಕಬಳ್ಳಾಪುರಕ್ಕೆ ಜಮೀರ್ ಅಹ್ಮದ್ ಖಾನ್, ಧಾರವಾಡಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್, ಉಡುಪಿ-ಚಿಕ್ಕಮಗಳೂರಿಗೆ ಮಂಕಾಳ ವೈದ್ಯ, ಶಿವಮೊಗ್ಗಕ್ಕೆ ಕೆ ಎನ್​ ರಾಜಣ್ಣ ಅವರನ್ನು ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ.

ಕಲಬುರಗಿಗೆ ಸಚಿವ ಬಿ. ನಾಗೇಂದ್ರ, ಬೀದರ್ - ಸಂತೋಷ್‌ ಎಸ್‌ ಲಾಡ್‌, ಚಾಮರಾಜನಗರ - ದಿನೇಶ್‌ ಗುಂಡೂರಾವ್‌, ಚಿಕ್ಕೋಡಿ - ಡಿ ಸುಧಾಕರ್, ಚಿತ್ರದುರ್ಗ - ಹೆಚ್‌ ಸಿ ಮಹದೇವಪ್ಪ, ದಕ್ಷಿಣ ಕನ್ನಡ - ಮಧು ಬಂಗಾರಪ್ಪ, ದಾವಣಗೆರೆ - ಈಶ್ವರ್‌ ಖಂಡ್ರೆ, ಬಳ್ಳಾರಿ - ಶಿವಾನಂದ ಪಾಟೀಲ್‌, ಹಾಸನ - ಎನ್‌ ಚಲುವರಾಯಸ್ವಾಮಿ, ಹಾವೇರಿ - ಎಸ್‌ ಎಸ್‌ ಮಲ್ಲಿಕಾರ್ಜುನ, ಕೋಲಾರ - ರಾಮಲಿಂಗಾರೆಡ್ಡಿ, ಕೊಪ್ಪಳ - ಆರ್‌ ಬಿ ತಿಮ್ಮಾಪುರ, ಮಂಡ್ಯ - ಡಾ. ಎಂ ಸಿ ಸುಧಾಕರ್, ಮೈಸೂರು - ಬೈರತಿ ಸುರೇಶ್‌, ರಾಯಚೂರು - ಕೆ ಹೆಚ್‌ ಮುನಿಯಪ್ಪ, ತುಮಕೂರು - ಕೃಷ್ಣ ಬೈರೇಗೌಡ, ಉತ್ತರ ಕನ್ನಡ - ಹೆಚ್ ಕೆ ಪಾಟೀಲ್‌ ರನ್ನು ವೀಕ್ಷಕರಾಗಿ ನೇಮಕ ಮಾಡಲಾಗಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು, 28 ಲೋಕಸಭಾ ಕ್ಷೇತ್ರಗಳ ಪೈಕಿ ಕೇವಲ ಎರಡು ಸ್ಥಾನ ಮಾತ್ರ ಗೆದ್ದಿತ್ತು. ಆದರೆ ಬಿಜೆಪಿ 25 ಕ್ಷೇತ್ರಗಳಲ್ಲಿ ಗೆದ್ದು ಬೀಗಿತ್ತು. ಈ ಬಾರಿ ರಾಜ್ಯದ ಚುನಾವಣಾ ರಾಜಕೀಯ ಅಖಾಡ, ಲೆಕ್ಕಾಚಾರ ಬದಲಾಗಿದೆ.

2024 ಲೋಕಸಭೆ ಸಮರದಲ್ಲಿ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಹೆಚ್ಚಿನ ಸ್ಥಾನ ಗೆಲ್ಲುವ ತಂತ್ರಗಾರಿಕೆ ರೂಪಿಸುತ್ತಿದೆ. ಇತ್ತ ಕಾಂಗ್ರೆಸ್ ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಮತ ಬ್ಯಾಂಕ್ ಒಡೆದು ಪಕ್ಷಕ್ಕೆ ಹೆಚ್ಚಿನ ಲಾಭವಾಗುವ ವಿಶ್ವಾಸದಲ್ಲಿದೆ. ಬದಲಾದ ರಾಜಕೀಯ ಲೆಕ್ಕಾಚಾರದ ಹಿನ್ನೆಲೆ ಆಡಳಿತಾರೂಢ ಕಾಂಗ್ರೆಸ್ ಈ ಬಾರಿ ಬೇರೆಯದ್ದೇ ಕಾರ್ಯತಂತ್ರ ರೂಪಿಸಲು ಮುಂದಾಗಿದೆ.

ಇದನ್ನೂಓದಿ:'ಲೋಕ'ಸಮರಕ್ಕೆ ಬಿಜೆಪಿ-ಜೆಡಿಎಸ್ ದೋಸ್ತಿ: ಕಮಲ ಟಿಕೆಟ್ ಆಕಾಂಕ್ಷಿಗಳಲ್ಲಿ ತಳಮಳ, ದಳ ವಿರೋಧಿಗಳಿಗೆ ಇರಿಸುಮುರಿಸು

ABOUT THE AUTHOR

...view details