ಕರ್ನಾಟಕ

karnataka

ETV Bharat / state

ದುಬೈನಲ್ಲಿದ್ದ ಕನ್ನಡಿಗರಿಗೆ ವಿಮಾನ ಸೇವೆ ಕಲ್ಪಿಸಿದ ಉದ್ಯಮಿ ಪ್ರವೀಣ್ ಶೆಟ್ಟಿ.. - ಲಾಕ್​ಡೌನ್​​ ವೇಳೆ ಐದು ಸಾವಿರಕ್ಕೂ ಹೆಚ್ಚು ಕನ್ನಡಿಗರಿಗೆ ತೊಂದರೆ

ವಿದೇಶಗಳಿಂದ ತಾಯ್ನಾಡಿಗೆ ಮರಳುವವರನ್ನು ರಾಜ್ಯದ ಜನತೆ ದೂಷಿಸಬೇಡಿ. ಇಲ್ಲಿಂದ ಬರುವವರು ಸೋಂಕು ಹೊತ್ತು ತರುವುದಿಲ್ಲ. ಮುಂಜಾಗ್ರತೆ ಕ್ರಮವಾಗಿ ಸ್ವದೇಶಕ್ಕೆ ಮರಳುವ ಮುನ್ನ ಆರೋಗ್ಯ ತಪಾಸಣೆ ಮಾಡಿಸಿ, ಸೋಂಕು ಇಲ್ಲದಿರುವುದನ್ನು ಖಾತ್ರಿ ಪಡಿಸಿಕೊಳ್ಳುತ್ತಾರೆ. ಅವರನ್ನು ಪ್ರೀತಿಯಿಂದ ಸ್ವಾಗತಿಸಿ' ಎಂದು ಉದ್ಯಮಿ ಪ್ರವೀಣ್ ಶೆಟ್ಟಿ ಕನ್ನಡಿಗರಲ್ಲಿ ಮನವಿ ಮಾಡಿಕೊಂಡರು.

Praveen Shetty
ಉದ್ಯಮಿ ಪ್ರವೀಣ್ ಶೆಟ್ಟಿ

By

Published : May 31, 2020, 9:07 PM IST

ಬೆಂಗಳೂರು :ಕೊರೊನಾ ಸೋಂಕು ತಡೆಯುವ ಉದ್ದೇಶದಿಂದ ದುಬೈನಲ್ಲಿ ಹೋಟೆಲ್​ಗಳು ಮುಚ್ಚಿರುವ ಕಾರಣ, ಅಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯದ ಸಿಬ್ಬಂದಿಗೆ ಹೋಟೆಲ್ ಉದ್ಯಮಿಯಾಗಿರುವ ಕನ್ನಡಿಗ ಪ್ರವೀಣ್ ಶೆಟ್ಟಿ ಚಾರ್ಟರ್ಡ್ ವಿಮಾನದ ಮೂಲಕ ತಾಯ್ನಾಡಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ.

ಇವರ ನೆರವಿನಿಂದ ಜೂನ್ 1ರಂದು ದುಬೈನಿಂದ ಒಟ್ಟು 178 ಮಂದಿ ಕನ್ನಡಿಗರು ಮಂಗಳೂರಿಗೆ ಬಂದಿಳಿಯಲಿದ್ದಾರೆ. ಹೋಟೆಲ್​ಗಳ ಕಾರ್ಯಾಚರಣೆ ಸ್ಥಗಿತಗೊಂಡ ಪರಿಣಾಮ ಅಲ್ಲಿರುವ ಕನ್ನಡಿಗರಿಗೆ ಸಮಸ್ಯೆಯಾಗದಂತೆ ಸ್ವಂತ ಖರ್ಚಿನಲ್ಲಿ ವಿಮಾನ ಸೇವೆ ಕಲ್ಪಿಸಿದ್ದಾರೆ. ಇವರಲ್ಲಿ ಮಂಗಳೂರು, ಕುಂದಾಪುರ ಸೇರಿದಂತೆ ಕರಾವಳಿ ಭಾಗದ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೋಟೆಲ್ ಮುಚ್ಚಿದ್ದರೂ ರಜೆ ಸಹಿತ ವೇತನ ನೀಡಿ ಪ್ರವೀಣ್ ಶೆಟ್ಟಿ ಮಾನವೀಯತೆ ಮೆರೆದಿದ್ದಾರೆ.

ಲಾಕ್​ಡೌನ್​​ ವೇಳೆ ಐದು ಸಾವಿರಕ್ಕೂ ಹೆಚ್ಚು ಕನ್ನಡಿಗರಿಗೆ ತೊಂದರೆಯಾಗಿತ್ತು. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಕನ್ನಡ ಸಂಘದ ವತಿಯಿಂದ ದುಬೈನಲ್ಲಿರುವ ಅನಿವಾಸಿ ಕನ್ನಡಿಗರಿಗೂ ಸಹಾಯ ಹಸ್ತ ಚಾಚಿದ್ದಾರೆ. ಇವರ ನೆರವಿಗೆ ಕನ್ನಡ ಸಂಘದ ವತಿಯಿಂದ ಸಹಾಯವಾಣಿ ಆರಂಭಿಸಿದ್ದು, ಪ್ರವೀಣ್ ಅವರೇ ಇದರ ನೇತೃತ್ವ ವಹಿಸಿದ್ದಾರೆ. ಪ್ರತಿನಿತ್ಯ ಐದು ಸಾವಿರ ಕನ್ನಡಿಗರಿಗೆ ದುಬೈನಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ.

ಮೂಲತಃ ಉಡುಪಿ ಜಿಲ್ಲೆಯ ಪ್ರವೀಣ್ ಶೆಟ್ಟಿ, ದುಬೈಗೆ ತೆರಳಿ ಫಾರ್ಚೂನ್ ಎಂಬ ಹೋಟೆಲ್ ಉದ್ಯಮದಲ್ಲಿ ಯಶಸ್ಸು ಸಾಧಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಪ್ರವೀಣ್ ಶೆಟ್ಟಿ,'ವಿದೇಶಗಳಿಂದ ತಾಯ್ನಾಡಿಗೆ ಮರಳುವವರನ್ನು ರಾಜ್ಯದ ಜನತೆ ದೂಷಿಸಬೇಡಿ. ಇಲ್ಲಿಂದ ಬರುವವರು ಸೋಂಕು ಹೊತ್ತು ತರುವುದಿಲ್ಲ. ಮುಂಜಾಗ್ರತೆ ಕ್ರಮವಾಗಿ ಸ್ವದೇಶಕ್ಕೆ ಮರಳುವ ಮುನ್ನ ಆರೋಗ್ಯ ತಪಾಸಣೆ ಮಾಡಿಸಿ, ಸೋಂಕು ಇಲ್ಲದಿರುವುದನ್ನು ಖಾತ್ರಿ ಪಡಿಸಿಕೊಳ್ಳುತ್ತಾರೆ. ಅವರನ್ನು ಪ್ರೀತಿಯಿಂದ ಸ್ವಾಗತಿಸಿ' ಎಂದು ಕನ್ನಡಿಗರಲ್ಲಿ ಮನವಿ ಮಾಡಿಕೊಂಡರು.

'ಮೊದಲಿಗೆ 'ವಂದೇ ಭಾರತ್ ಮಿಷನ್‌ನಡಿ ಘೋಷಿಸಲಾದ ವಿಮಾನಗಳ ಪಟ್ಟಿಯಲ್ಲಿ ಯುಎಇಯಿಂದ ರಾಜ್ಯಕ್ಕೆ ಯಾವುದೇ ವಿಮಾನಗಳು ಇರಲಿಲ್ಲ. ಈ ವೇಳೆ ರಾಜ್ಯಕ್ಕೆ ವಿಮಾನ ಸೇವೆ ಕೋರಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿವಿಧ ಸಚಿವರು ಹಾಗೂ ಮಂತ್ರಿಗಳಿಗೆ ಮನವಿ ಮಾಡಲಾಯಿತು. ಮನವಿಗೆ ಸ್ಪಂದಿಸಿದ ಪರಿಣಾಮ ಮೇ 12 ಮತ್ತು 14ರಂದು ದುಬೈನಿಂದ ಮಂಗಳೂರಿಗೆ ಎರಡು ವಿಮಾನಗಳು ಹಾರಿದವು.

ಸಾವಿರಾರು ಸಂಖ್ಯೆಯಲ್ಲಿರುವ ಕನ್ನಡಿಗರು ಬೆಂಗಳೂರಿಗೆ ಬರಲು ಕಾತುರದಿಂದ ಕಾದಿದ್ದರು. ಈ ಕುರಿತು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಇತರ ನಾಯಕರಿಗೆ ಕೇಂದ್ರದ ಮೇಲೆ ಒತ್ತಡ ಹೇರುವಂತೆ ಮನವಿ ಮಾಡಿದೆವು. ಇವರ ನೆರವಿನಿಂದ ಮೇ 23ರಂದು ದುಬೈನಿಂದ ಬೆಂಗಳೂರಿಗೆ ಮೊದಲ ವಿಮಾನ ಸೇವೆ ಲಭಿಸಿತು. ಜೂನ್ 3ರಂದು ಮತ್ತೊಂದು ವಿಮಾನ ಬೆಂಗಳೂರಿಗೆ ಬರಲಿದೆ' ಎಂದರು.

ಪ್ರಯಾಣ ಬೆಳೆಸುವ 100 ಮಂದಿಗೆ ಟಿಕೆಟ್ ವೆಚ್ಚವನ್ನು ಕೆಎನ್ಆರ್​ಐ ಭರಿಸಿದೆ. ಹೋಟೆಲ್ ಸೌಲಭ್ಯ ಪಡೆಯಲು ಸಾಧ್ಯವಾಗದವರಿಗೆ ಉಚಿತವಾಗಿ ಕ್ವಾರಂಟೈನ್ ವ್ಯವಸ್ಥೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದು, ಸರ್ಕಾರ ಇದಕ್ಕೂ ಸ್ಪಂದಿಸಿದೆ' ಎಂದು ಸಂತಸ ವ್ಯಕ್ತಪಡಿಸಿದರು.

ಕನ್ನಡ ಸಂಘ ಹಾಗೂ ವಿವಿಧ ಸಂಘಗಳು ಒಗ್ಗೂಡಿ ಕನ್ನಡಿಗರಿಗೆ ನೆರವು ನೀಡಲು ಅನುಕೂಲವಾಗುವಂತೆ https://uaekannadahelpline.com ಸಹಾಯವಾಣಿ ಆರಂಭಿಸಿದ್ದು, ಪ್ರವೀಣ್ ಶೆಟ್ಟಿ ಅವರೇ ಇದರ ನೇತೃತ್ವ ವಹಿಸಿದ್ದಾರೆ.

ABOUT THE AUTHOR

...view details