ಕರ್ನಾಟಕ

karnataka

'ಗಣೇಶ ದೇವರಲ್ಲ' ಎಂದಿದ್ದ ಸಾಣೇಹಳ್ಳಿ ಶ್ರೀಗಳ ವಿರುದ್ಧ ದೂರು ದಾಖಲಿಸಿದ ಪ್ರಶಾಂತ್ ಸಂಬರಗಿ

By ETV Bharat Karnataka Team

Published : Nov 11, 2023, 10:49 PM IST

Updated : Nov 11, 2023, 11:03 PM IST

ಹಿಂದೂ ಪರ ಹೋರಾಟಗಾರ ಪ್ರಶಾಂತ್ ಸಂಬರಗಿ ಗಣೇಶನನ್ನು ಕಾಲ್ಪನಿಕ ದೇವರು ಎಂದು ಹೇಳಿದ್ದ ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳ ವಿರುದ್ಧ ದೂರು ನೀಡಿದ್ದಾರೆ.

ಪ್ರಶಾಂತ್ ಸಂಬರಗಿ
ಪ್ರಶಾಂತ್ ಸಂಬರಗಿ

ಸಾಣೇಹಳ್ಳಿ ಶ್ರೀಗಳ ವಿರುದ್ಧ ಪ್ರಕರಣ ದಾಖಲಿಸಿ ಹೇಳಿಕೆ ನೀಡಿರುವ ಪ್ರಶಾಂತ್ ಸಂಬರಗಿ

ಬೆಂಗಳೂರು:ಗಣೇಶನನ್ನು ಕಾಲ್ಪನಿಕ ದೇವರು, ಪೂಜೆ ಮಾಡುವ ಅಗತ್ಯವಿಲ್ಲ ಎಂದು ಕೆಲ ದಿನಗಳ ಹಿಂದೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳ ವಿರುದ್ಧ ಹಿಂದೂ ಪರ ಹೋರಾಟಗಾರ ಪ್ರಶಾಂತ್ ಸಂಬರಗಿ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕೋಟ್ಯಂತರ ಜನ ಅನುಯಾಯಿಗಳನ್ನು ಹೊಂದಿರುವ ಪಂಡಿತಾರಾಧ್ಯ ಶ್ರೀಗಳು ಸಮಾಜದ ಒಂದು ವರ್ಗವನ್ನು ಓಲೈಸುವ ಭರದಲ್ಲಿ, ದೇಶದ ಬಹುಸಂಖ್ಯಾತರ ಆರಾಧನೆಯ, ನಂಬಿಕೆಯ ಕೇಂದ್ರ ಬಿಂದುವಾಗಿರುವ, ಶತಮಾನಗಳಿಂದ ಪೂಜಿಸಲ್ಪಡುತ್ತಿರುವ ಗಣಪತಿ ದೇವರ ಕುರಿತು ಅತ್ಯಂತ ಕೀಳು ಹೇಳಿಕೆ ನೀಡಿದ್ದಾರೆ. ಸರ್ವಧರ್ಮೀಯರು ಪೂಜಿಸುವ ಗಣೇಶನ ಭಕ್ತವರ್ಗದ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಹಿಂದೂ ಧರ್ಮದ ಪ್ರಮುಖ ದೇವತೆಗಳಲ್ಲಿ ಅಗ್ರ ಸ್ಥಾನ ಪಡೆದಿರುವ ವಿಘ್ನ ನಿವಾರಕನ ಬಗ್ಗೆ, ಹಾಗೂ ಹಿಂದೂ ಧರ್ಮದ ನಂಬಿಕೆಗಳನ್ನು ಅವಹೇಳನ ಮಾಡಿದ್ದು, ಇದರಿಂದ ಭಕ್ತರ ಧಾರ್ಮಿಕ ಭಾವನೆಗಳಿಗೆ ತೀವ್ರ ಕುಂದುಂಟಾಗಿದೆ. ಸಾರ್ವಜನಿಕವಾಗಿ ಹೀಗೆ ಹಿಂದೂ ದೇವರ ವ್ಯಂಗ್ಯದ ಹಿಂದೆ ಸಮಾಜದ ಸಾಮರಸ್ಯಕ್ಕೆ ಹಾಳು ಮಾಡುವ ಕುತಂತ್ರ ಅಡಗಿರುವುದು ಸ್ಪಷ್ಟವಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಗಣೇಶನ ಆರಾಧನೆ, ಆರಾಧಕರ ಆಚಾರ ವಿಚಾರಗಳ ಬಗ್ಗೆ ಸಾಣೇಹಳ್ಳಿ ಸ್ವಾಮೀಜಿಯವರು ಮಾತುಗಳಿಂದ ನಿಂದಿಸಿರುವುದೂ ಅಕ್ಷಮ್ಯ. ಹಿಂದೂ ಧಾರ್ಮಿಕ ಆಚರಣೆಗಳ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ಬಹಿರಂಗವಾಗಿಯೇ ನೀಡಿದ್ದು, ಹಿಂದೂಗಳ ಭಾವನೆ ಕೆರಳಿಸಲು ಹೊರಟಿರುವ ಸಾಣೇಹಳ್ಳಿ ಸ್ವಾಮೀಜಿ ಅವರ ವಿರುದ್ಧ 295 ಎ ಅಡಿಯಲ್ಲಿ ದೂರು ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.

ನವೆಂಬರ್ 2ರಂದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಸಾಣೇಹಳ್ಳಿಯಲ್ಲಿ ರಾಷ್ಟ್ರೀಯ ನಾಟಕೋತ್ಸವಕ್ಕೂ ಮುನ್ನ ಶಿವಧ್ವಜಾರೋಹಣ ನೆರವೇರಿಸಿ ಮಾತನಾಡಿದ್ದ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ''ಗಣಪತಿ ಕಾಲ್ಪನಿಕ ದೇವರು. ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ನೆಪ ಮಾತ್ರಕ್ಕೆ ಹುಟ್ಟಿಕೊಂಡ ದೇವರದು. ಬಾಹ್ಯ ವಸ್ತುಗಳಿಂದ ಮಾಡಿದ ದೇವರುಗಳು ದೇವರಲ್ಲ. ಗಣಪತಿಯನ್ನು ವಿಘ್ನ ನಿವಾರಕ ಎಂದು ಪೂಜಿಸುವುದು ಅಥವಾ ಪ್ರಾರ್ಥನೆ ಸಲ್ಲಿಸುವುದು ಲಿಂಗಾಯತ ಸಂಸ್ಕೃತಿಯಲ್ಲ. ಗಣಪತಿ ಸ್ತುತಿಸುವುದು ಮೌಢ್ಯದ ಆಚರಣೆ, ಅದರ ಬದಲು ವಾಸ್ತವಕ್ಕೆ ತಕ್ಕುದಾದ ವಚನಗಳನ್ನು ಪಠಿಸಬೇಕು. ಸ್ವಸಾಮರ್ಥ್ಯ, ಉತ್ತಮ ನಡವಳಿಕೆ ಹೊಂದಿದವರೇ ನಿಜವಾದ ದೇವರು. ನಮ್ಮನ್ನು ನಾವು ನಂಬಬೇಕು. ಶರಣರ ಆಶಯಗಳಂತೆ ಬದುಕಬೇಕು. ಈ ನಿಟ್ಟಿನಲ್ಲಿ ಆತ್ಮಾವಲೋಕನ ಅಗತ್ಯವಿದೆ" ಎಂದು ಹೇಳಿದ್ದರು.

ಇದನ್ನೂ ಓದಿ:'ದಾಖಲೆ ಇದ್ದರೆ ಕೊಡ್ರೋ, ಸುಮ್ಮನೆ ಹೇಳೋದಲ್ಲ': ಮಾಧ್ಯಮದವರ ಮೇಲೆ ಸಿಟ್ಟಾದ ಆರೋಪಿ ಆರ್​ಡಿ ಪಾಟೀಲ್​

Last Updated : Nov 11, 2023, 11:03 PM IST

ABOUT THE AUTHOR

...view details