ಕರ್ನಾಟಕ

karnataka

By

Published : Jan 26, 2023, 3:49 PM IST

Updated : Jan 26, 2023, 5:55 PM IST

ETV Bharat / state

ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಸಂಗೊಳ್ಳಿ ರಾಯಣ್ಣ, ಸುಭಾಷ್ ಚಂದ್ರ ಬೋಸ್ ಭಾವಚಿತ್ರ: ಸಿಎಂ ಬೊಮ್ಮಾಯಿ ಆದೇಶ

ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಕಹಳೆ ಊದಿದ ಸೇನಾನಿಗಳನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

192nd Commemoration of Krantivira Sangolli Rayanna
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ 192ನೇ ಸ್ಮರಣೋತ್ಸವ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ 192ನೇ ಸ್ಮರಣೋತ್ಸವ

ಬೆಂಗಳೂರು: ಸಂಗೊಳ್ಳಿ ರಾಯಣ್ಣ ಮಹಾ ಸೇನಾನಿ. ಅವರ ಸ್ಮರಣೆ ಮಾಡುವುದು ನಮ್ಮ ಕರ್ತವ್ಯ. ಸುಭಾಷ್ ಚಂದ್ರ ಬೋಸ್ ಹಾಗೂ ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರವನ್ನು ಪ್ರತಿಯೊಂದು ಸರ್ಕಾರಿ ಶಾಲಾ ಕಾಲೇಜಿನಲ್ಲಿ ಕಡ್ಡಾಯವಾಗಿ ಇಡಬೇಕು ಎಂದು ಇಂದಿನಿಂದಲೇ ಆದೇಶ ಮಾಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನ ವತಿಯಿಂದ ದೇವರಾಜ ಅರಸು ವೃತ್ತದ (ಖೋಡೆ ಸರ್ಕಲ್) ಬಳಿ ಇಂದು ಆಯೋಜಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ 192ನೇ ಸ್ಮರಣೋತ್ಸವದ ನಿಮಿತ್ತ ಸಂಗೊಳ್ಳಿ ರಾಯಣ್ಣ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಮೊದಲ ಸ್ವಾತಂತ್ರ್ಯ ಕಹಳೆಯನ್ನು ಊದಿದ ಮಹಾ ಸೇನಾನಿ ಸಂಗೊಳ್ಳಿ ರಾಯಣ್ಣ. ಸ್ವಾತಂತ್ರ್ಯ ಬಂದ ದಿನ ಅವರು ಹುಟ್ಟಿದ್ದು, ಗಣರಾಜ್ಯೋತ್ಸವದ ದಿನ ಅವರನ್ನು ನೇಣಿಗೆ ಹಾಕಿದ್ದು. ಈ ಎರಡು ದಿನ ಬಹಳ ವಿಶೇಷವಾದ ದಿನ. ರಾಯಣ್ಣನ ಹೆಸರಿನಲ್ಲಿ 184 ಕೋಟಿ ರೂ. ವೆಚ್ಚದಲ್ಲಿ ರೆಸಿಡೆನ್ಸಿಯಲ್ ಶಾಲೆ ಮಾಡಿದ್ದೇವೆ. ಬೆಳಗಾವಿ ಸುವರ್ಣಸೌಧದಲ್ಲಿ ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆಯನ್ನು ನಿರ್ಮಿಸಲಾಗುತ್ತಿದೆ ಎಂದರು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ 192ನೇ ಸ್ಮರಣೋತ್ಸವ

ಆ ಧೈರ್ಯ, ಶೌರ್ಯ, ವೀರಾವೇಷ ಎಂಬುದು ರಾಯಣ್ಣನಿಗೆ ಹುಟ್ಟಿನಿಂದಲೇ ಬಂದಿರುವಂಥದ್ದು. ಕಿತ್ತೂರು ರಾಣಿ ಚೆನ್ನಮ್ಮ ಅವರಿಗೆ ಬ್ರಿಟಿಷರು ಕಪ್ಪ ಕೊಡಬೇಕು ಎಂದಾಗ, ನಾವು ಯಾವುದೇ ಕಪ್ಪ ಕೊಡುವುದಿಲ್ಲ. ದೇಶ ಬಿಟ್ಟು ತೊಲಗಿ ಎಂದಿದ್ದರು. ರಾಣಿ ಚೆನ್ನಮ್ಮನವರಿಗೆ ಬೆಂಬಲವಾಗಿ ನಿಂತಿದ್ದವರು ಸಂಗೊಳ್ಳಿ ರಾಯಣ್ಣ ಮತ್ತು ಬಾಳಪ್ಪ. ಮೋಸದಿಂದ ಸೋತ ಸಮಯದಲ್ಲಿ ಸಂಗೊಳ್ಳಿ ರಾಯಣ್ಣ ಹಳ್ಳಿಗಳಲ್ಲಿ ಸಂಘಟನೆ ಮಾಡಿ ಬ್ರಿಟಿಷರನ್ನು ಹೆದರಿಸಿದ್ದರು ಎಂದು ಹೇಳಿದರು.

ಸಂಗೊಳ್ಳಿ ರಾಯಣ್ಣ ಪ್ರತಿ ಮನೆಯಲ್ಲೂ ಹುಟ್ಟಬೇಕು. ಅವರ ಸಾಹಸ ದಕ್ಷತೆ ಗಾಂಭೀರ್ಯತೆ, ಅವರ ಹೋರಾಟದ ಹಾದಿಯನ್ನು ನಮ್ಮ ಮಕ್ಕಳಿಗೆ, ಮುಂದಿನ ಪೀಳಿಗೆಗೆ ಹೇಳಬೇಕು. ರಾಯಣ್ಣ ಸತ್ತಿಲ್ಲ ಇಂದಿಗೂ ಕೂಡ ನಮ್ಮ ಜೊತೆಯಲ್ಲಿದ್ದಾರೆ. ಅವರ ಧೈರ್ಯ, ಆದರ್ಶ, ತತ್ವ ಸಿದ್ಧಾಂತ ನಮ್ಮ ಜೊತೆಯಲ್ಲಿದೆ. ಸಂಗೊಳ್ಳಿ ರಾಯಣ್ಣ ವಿಶೇಷವಾಗಿ ಆಶೀರ್ವಾದದಿಂದ ಹುಟ್ಟಿದವರು. ಕೆಚ್ಚೆದೆ ಧೈರ್ಯ, ದೇಶಭಕ್ತಿ ಒಬ್ಬರಲ್ಲಿ ಇರಬೇಕಾದರೇ ದೇವರ ಆಶೀರ್ವಾದ ಬಹಳ ಮುಖ್ಯ.

ರಾಯಣ್ಣನನ್ನು ಮೋಸದಿಂದ ಗಲ್ಲಿಗೇರಿಸಿದರು:ಬಡತನದಲ್ಲಿ ಹುಟ್ಟಿದರೂ ಸಂಗೊಳ್ಳಿ ರಾಯಣ್ಣ ಸ್ವಾವಲಂಬಿಯಾಗಿ ಜೀವಿಸಿದ್ದರು. ಭಯ ಮುಕ್ತವಾಗಿ ಬದುಕು ನಡೆಸಿದವರು ಸಂಗೊಳ್ಳಿ ರಾಯಣ್ಣ, ರಾಣಿ ಚೆನ್ನಮ್ಮ ಕಿಚ್ಚಿಗೆ ಸಂಪೂರ್ಣವಾಗಿ ಬೆಂಬಲಕ್ಕೆ ನಿಂತರು. ರಾಜ ಮನೆತನದಲ್ಲಿ ಬ್ರಿಟಿಷರನ್ನು ಎದುರಿಸಬೇಕಾದರೇ ಕಷ್ಟ ಸಾಧ್ಯ. ಆದರೂ ಸೈನ್ಯವನ್ನು ಕಟ್ಟಿ ಬ್ರಿಟಿಷ್ ಸಾಮ್ರಾಜ್ಯವನ್ನು ಎದುರಿಸಿ ಕಿತ್ತೂರು ಯುದ್ಧ ಗೆದ್ದರು.

ದೇಶದಲ್ಲಿ ಬ್ರಿಟಿಷರನ್ನು ಅತ್ಯಂತ ಯಶಸ್ವಿಯಾಗಿ ಎದುರಿಸಿದವರು ಇಬ್ಬರೇ. ಒಬ್ಬರು ಸಂಗೊಳ್ಳಿ ರಾಯಣ್ಣ, ಇನ್ನೊಬ್ಬರು ಛತ್ರಪತಿ ಶಿವಾಜಿ. ರಾಯಣ್ಣ ಅವರನ್ನು ಮೋಸದಿಂದ ನೇಣಿಗೆ ಏರಿಸಿದರು. ಸಾಧಕನಿಗೆ ಸಾವು ಇಲ್ಲ. ಸಾವಿನ ನಂತರವೂ ಸಾಧನೆ ಅಜರಾಮರವಾಗಿರುತ್ತದೆ ಎಂದು ವಿವೇಕಾನಂದ ಅವರು ಹೇಳಿದ್ದಾರೆ ಎಂದರು.

ಬಸವರಾಜ ಬೊಮ್ಮಾಯಿ ಹಾಗೂ ವಾಟಾಳ್​ ನಾಗರಾಜ್​

ಬೊಮ್ಮಾಯಿ ಯಾವತ್ತೂ ಕೋಪಿಸಿಕೊಂಡಿಲ್ಲ:ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಮಾತನಾಡಿ, ಸಿಎಂ ಬಸವರಾಜ ಬೊಮ್ಮಾಯಿ‌ ಯಾವತ್ತೂ ಕೋಪಿಸಿಕೊಂಡಿಲ್ಲ. ಯಾವಾಗ ಸಿಕ್ಕರು ನಗ್ತಾನೆ ಇರ್ತಾರೆ. ನಗು ಮುಖದ ಮುಖ್ಯಮಂತ್ರಿ ಅಂದರೆ ಬಸವರಾಜ ಬೊಮ್ಮಾಯಿ‌. ಯಾವುದಕ್ಕೂ ತಲೆಕಡೆಸಿಕೊಂಡಿಲ್ಲ. ಆಕಾಶವೇ ಬಿಳುತ್ತೆ ಅಂದ್ರು ತಲೆಕಡೆಸಿಕೊಂಡಿಲ್ಲ. ಹಗಲು ರಾತ್ರಿ ಎನ್ನದೇ ಒಡಾಡುತ್ತಿದ್ದಾರೆ. ಯಾರ ಮೇಲೂ ದ್ವೇಷ ಮಾಡುವ ವ್ಯಕ್ತಿಯಲ್ಲ.

ಬಸವರಾಜ ಬೊಮ್ಮಾಯಿ ಅವರು ಅಜಾತ ಶತ್ರು. ಎಸ್.ಆರ್. ಬೊಮ್ಮಾಯಿ‌ ನನ್ನ ಜೊತೆ ಶಾಸನ ಸಭೆಯಲ್ಲಿ ಇದ್ದವರು. ಸಿದ್ದರಾಮಯ್ಯ ಒಬ್ಬರು ಪ್ರಬುದ್ಧ ರಾಜಕಾರಣಿ. ಹಿಂದೆ ಒಳ್ಳೆಯ ಅಭ್ಯರ್ಥಿಗಳು ಪಾರ್ಲಿಮೆಂಟ್​ನಲ್ಲಿ ಇರಬೇಕು ಎಂದು ಅಭ್ಯರ್ಥಿಗಳನ್ನೇ ಹಾಕುತ್ತಿರಲಿಲ್ಲ. ಆ ರೀತಿಯ ವಾತಾವರಣದ ಅವಶ್ಯಕತೆ ಇದೆ. ಶಾಸನ ಸಭೆಗೆ ಪ್ರಬುದ್ಧರು ಬರಬೇಕು ಎಂದು ಅಭಿಪ್ರಾಯಪಟ್ಟರು.

ಸದನದಲ್ಲಿ 10 ಜನ ಅವಿರೋಧವಾಗಿ ಆಯ್ಕೆಯಾಗಬೇಕು:ಬೊಮ್ಮಾಯಿ, ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಬೇಕು. ರಾಜಕೀಯ ಏನೇ ಇರಲಿ ಕೆಲವರ ವಿರುದ್ಧ ಅಭ್ಯರ್ಥಿಗಳನ್ನು ಹಾಕಬಾರದು. ಪ್ರಬುದ್ದರು ಸದನಕ್ಕೆ ಬೇಕಾಗಿದೆ. ಬೊಮ್ಮಾಯಿ‌ ನೇತೃತ್ವದಲ್ಲಿ ಒಂದು ಚರ್ಚೆ ಮಾಡಿ ಒಂದು 7- 8 ಜನರ ಮೇಲೆ ಅಭ್ಯರ್ಥಿಯನ್ನೇ ಹಾಕದೇ ಗೆಲ್ಲಿಸಬೇಕು. ಆಗ ಸದನದ ಗಾಂಭೀರ್ಯ ಉಳಿಯುತ್ತದೆ. ಇದು ನನ್ನ ಸಲಹೆ ಎಂದು ವೇದಿಕೆಯಲ್ಲಿ ಸಿಎಂ ಎದುರು ಮನವಿ ಮಾಡಿದರು.

ಅಂಗನವಾಡಿ ಕಾರ್ಯಕರ್ತರ ಸಮಸ್ಯೆ ಬಗೆಹರಿಸಿ:ಅಂಗನವಾಡಿ ಕಾರ್ಯಕರ್ತರು ಹಗಲು ರಾತ್ರಿ ಕುಳಿತು ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರಿಗೆ ಶೌಚಾಲಯವಿಲ್ಲ, ಏನು ಇಲ್ಲ. ಅವರನ್ನು ಕರೆದು ಮಾತನಾಡಿಸಿ, ನಿಮ್ಮ ಸರ್ಕಾರದಲ್ಲಿ ಅವರಿಗೆ ಸಹಾಯ ಮಾಡಿ ಎಂದು ವಾಟಾಳ್ ನಾಗರಾಜ್ ಮನವಿ ಮಾಡಿಕೊಂಡರು.

ಸಚಿವ ಎಂ.ಟಿ.ಬಿ. ನಾಗರಾಜ್, ಮಾಜಿ ಸಚಿವ ಹೆಚ್.ಎಂ. ರೇವಣ್ಣ, ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ:ಹೋರಾಟಗಾರರ ಬಲಿದಾನ ವ್ಯರ್ಥ ಮಾಡಲು ಬಿಡಲ್ಲ: ಸಿಎಂ ಬಸವರಾಜ ಬೊಮ್ಮಾಯಿ

Last Updated : Jan 26, 2023, 5:55 PM IST

ABOUT THE AUTHOR

...view details