ಬೆಂಗಳೂರು:ಕಾಲಾಸಿಪಾಳ್ಯ ಬಳಿ ಕಾರ್ಪೋರೇಟರ್ ಪತಿ ಮತ್ತು ಮಗನ ಮೇಲೆ ಸೆಗಣಿ ಎರಚಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸದ್ಯ ಕಲಾಸಿಪಾಳ್ಯದಲ್ಲಿ ಫುಲ್ ಹೈಡ್ರಾಮಾ ನಡೆದಿದೆ. ಕಾರ್ಪೊರೇಟರ್ ಪತಿ ಧನರಾಜ್ ವಿರುದ್ಧ ಧಿಕ್ಕಾರ ಕೂಗುತ್ತಾ ಬಂದ ಮತ್ತೊಂದು ಗ್ಯಾಂಗ್ ಧನರಾಜ್ ವಿರುದ್ಧ ಪ್ರತಿಭಟನೆ ನಡೆಸಿದೆ.
ಪ್ರತಿಭಟನೆ ವೇಳೆ 119ನೇ ವಾರ್ಡ್ನ ಕಾರ್ಪೋರೇಟರ್ ಪತಿ ಧನರಾಜ್, ಕಲಾಸಿಪಾಳ್ಯ, ಕೆ ಆರ್ ಮಾರ್ಕೆಟ್ ಬೀದಿ ಬದಿ ವ್ಯಾಪಾರಿಗಳ ಬದಕು ದುಃಸ್ಥಿತಿಯಲ್ಲಿದ್ದರೂ, ಪ್ರತಿ ಅಂಗಡಿಯಿಂದ 200 ರಿಂದ 300 ಬಡ್ಡಿಗೆ ಹಣವನ್ನು ಬಲವಂತವಾಗಿ ತೆಗೆದುಕೊಳ್ಳುತ್ತಿದ್ದಾರೆ. ನಿತ್ಯ ಹಫ್ತಾದಂತೆ ವಸೂಲಿ ಮಾಡುತ್ತಿದ್ದಾರೆ. ಹೀಗಾಗಿ ನಮಗೆ ಕಿರುಕುಳ ಉಂಟಾಗಿದೆ. ಇದನ್ನ ತಡೆಯದಿದ್ದಲ್ಲಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪ್ರತಿಭಟನಾಕಾರರು ಬೆದರಿಕೆ ಹಾಕಿದ್ದಾರೆ.
ಅಲ್ಲದೇ ಈ ಹಿಂದೆ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಹೀಗಾಗಿ ಸ್ಥಳಕ್ಕೆ ಪೊಲೀಸ್ ಆಯುಕ್ತರು ಬರುವವರೆಗೂ ಪ್ರತಿಭಟನೆ ನಿಲ್ಲಿಸಲ್ಲ ಎಂದಿದ್ದಾರೆ. ಸ್ಥಳದಲ್ಲಿ ಸ್ವಲ್ಪ ಮಟ್ಟಿಗೆ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಪರಿಸ್ಥಿತಿ ನಿಭಾಯಿಸಲು ಹರಸಾಹಸಪಟ್ಟಿದ್ದಾರೆ.