ಕರ್ನಾಟಕ

karnataka

ಒಎಲ್ಎಕ್ಸ್​ನಲ್ಲಿ ಪೋಸ್ಟ್ ನೋಡಿ ಮಾತುಕತೆ ನೆಪದಲ್ಲಿ ಭೇಟಿಯಾದ: ಫೋನ್ ಪೇ ನಂಬರ್ ತಿಳ್ಕೊಂಡು ಅಕೌಂಟ್​ಗೆ ಕನ್ನ

By

Published : Dec 14, 2022, 4:07 PM IST

Updated : Dec 15, 2022, 10:02 AM IST

ಒಎಲ್ಎಕ್ಸ್ ಮೂಲಕ ಸೈಟು ಕೊಂಡುಕೊಳ್ಳುತ್ತೇನೆ ಎಂದು ಹೇಳಿ ವಂಚಿಸುತ್ತಿದ್ದ ಖತರ್ನಾಕ್ ವಂಚಕನನ್ನ ಈಶಾನ್ಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

ವಿನೋದ್ ಕುಮಾರ್ ರೆಡ್ಡಿ
ವಿನೋದ್ ಕುಮಾರ್ ರೆಡ್ಡಿ

ಬೆಂಗಳೂರು:ಒಎಲ್ಎಕ್ಸ್ ಮೂಲಕ ಸೈಟು ಕೊಂಡುಕೊಳ್ಳುತ್ತೇನೆ ಎಂದು ಹೇಳಿ ವಂಚಿಸುತ್ತಿದ್ದ ಖತರ್ನಾಕ್ ವಂಚಕನನ್ನ ಈಶಾನ್ಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶ ಮೂಲದ ವಿನೋದ್ ಕುಮಾರ್ ರೆಡ್ಡಿ ಬಂಧಿತ ಆರೋಪಿಯಾಗಿದ್ದಾನೆ.

ಎರಡು ತಿಂಗಳ ಹಿಂದೆ ಒಎಲ್ಎಕ್ಸ್ ನಲ್ಲಿ ಪೀಣ್ಯ ನಿವಾಸಿಯೊಬ್ಬರು ತಮ್ಮ ಸೈಟ್ ಮಾರಾಟಕ್ಕಿದೆ ಎಂದು ಒಎಲ್ಎಕ್ಸ್​ನಲ್ಲಿ ಪೋಸ್ಟ್ ಹಾಕಿದ್ದರು. ಇದನ್ನು ಗಮನಿಸಿದ ಆರೋಪಿ ವಿನೋದ್ ಸೈಟ್ ಮಾರಾಟಕ್ಕಿಟ್ಟವರನ್ನು ಫೋನ್ ಮೂಲಕ ಸಂಪರ್ಕಿಸಿದ್ದ. ತದನಂತರ ನೇರವಾಗಿ ಮಾತನಾಡಬೇಕು ಎಂದು ಬೆಂಗಳೂರಿಗೆ ಬಂದು ಭೇಟಿಯಾಗಿ ಸೈಟ್ ಕೊಳ್ಳುತ್ತೇನೆ ಎಂದು ನಂಬಿಸಿದ್ದ.

ಸೈಟ್ ಕೊಳ್ಳಲು ಹಣ ವರ್ಗಾವಣೆ ಮಾಡುವುದಾಗಿ ಪುಸಲಾಯಿಸಿ ಪೋಸ್ಟ್ ಹಾಕಿದವರ ಮೊಬೈಲ್ ನಂಬರ್ ಪಡೆದು ಮೊಬೈಲ್ ಲಾಕ್ ಪಾಸ್​ವರ್ಡ್ ತಿಳಿದುಕೊಂಡಿದ್ದ. ಫೋನ್​ಪೇನಲ್ಲಿ ಲಿಂಕ್ ಆಗಿದ್ದ ದೂರುದಾರರ ಮೊಬೈಲ್ ನಂಬರ್ ಖಚಿತಪಡಿಸಿಕೊಂಡಿದ್ದ ಈತ ಮತ್ತೆ ಸಂಪರ್ಕಿಸುವುದಾಗಿ ಅಲ್ಲಿಂದ ಕಾಲ್ಕಿತ್ತಿದ್ದ. ಇದಾದ ಅರ್ಧ ಗಂಟೆಯಲ್ಲಿ ದೂರುದಾರರ ಅಕೌಂಟ್​ನಿಂದ ಹಂತ ಹಂತವಾಗಿ 1.40 ಲಕ್ಷ ವರ್ಗಾವಣೆಯಾಗಿತ್ತು‌. ಹೀಗಾಗಿ ಬ್ಯಾಂಕ್​​ಗೆ ಹೋಗಿ ಪರಿಶೀಲಿಸಿದಾಗ ಮೋಸವಾಗಿರುವುದಾಗಿ ಗೊತ್ತಾಗಿದೆ.

ತಕ್ಷಣ ಪೊಲೀಸರನ್ನ ಸಂಪರ್ಕಿಸಿದ ನೊಂದವರು ಈ ಬಗ್ಗೆ ದೂರು ಈ ದಾಖಲಿಸಿದ್ದರು. ದೂರು ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಪೊಲೀಸರು ಸದ್ಯ ಆರೋಪಿ ವಿನೋದನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಇದೇ ರೀತಿ ಆರೋಪಿ ವಿನೋದ್ ಗೋವಾ, ಆಂಧ್ರ, ಕರ್ನಾಟಕದಲ್ಲಿ ಹಲವರಿಗೆ ವಂಚಿಸಿರುವ ಬಗ್ಗೆ ಮಾಹಿತಿ ದೊರೆತಿದೆ. ಸದ್ಯ ಬಂಧಿತನಿಂದ ಕೃತ್ಯಕ್ಕೆ ಬಳಸಿದ್ದ ಮೊಬೈಲ್, ಸಿಮ್, ಎಟಿಎಂ ಕಾರ್ಡ್ ಸೀಜ್ ಮಾಡಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಓದಿ:ಅಮೆರಿಕದಂತೆ ಬೆಂಗಳೂರಲ್ಲೂ ಕಳ್ಳನೋಟಿನ ಜಾಲ: ಸಿಸಿಬಿ ಪೊಲೀಸರಿಗೇ ಶಾಕ್

Last Updated : Dec 15, 2022, 10:02 AM IST

ABOUT THE AUTHOR

...view details