ಕರ್ನಾಟಕ

karnataka

ETV Bharat / state

ಇಸ್ರೋ ವಿಜ್ಞಾನಿಗಳಿಗೆ ಅಭಿನಂದಿಸಲು ಆಗಮಿಸುವ ಮೋದಿಗೆ ಅದ್ಧೂರಿ ಸ್ವಾಗತ.. ರೋಡ್ ಶೋ ಆಯೋಜನೆ : ಆರ್ ಅಶೋಕ್

ಚಂದ್ರಯಾನ 3 ಯಶಸ್ವಿ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಿ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಲಿದ್ದಾರೆ. ಈ ಸಂಬಂಧ ಮೋದಿ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಗುತ್ತದೆ ಎಂದು ಮಾಜಿ ಡಿಸಿಎಂ ಆರ್​ ಅಶೋಕ್​ ಹೇಳಿದ್ದಾರೆ.

By ETV Bharat Karnataka Team

Published : Aug 24, 2023, 4:16 PM IST

pm-modi-visits-bengaluru-to-congratulate-isro-scientist
ಮಾಜಿ ಡಿಸಿಎಂ ಆರ್​ ಅಶೋಕ್​

ಮಾಜಿ ಡಿಸಿಎಂ ಆರ್​ ಅಶೋಕ್​ ಹೇಳಿಕೆ

ಬೆಂಗಳೂರು: ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗ್ ಯಶಸ್ವಿಯಾದ ಬೆನ್ನಲ್ಲೇ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಖುದ್ದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಗುತ್ತಿದ್ದು, ರೋಡ್ ಶೋ ಕೂಡ ಆಯೋಜನೆ ಮಾಡಲಾಗುತ್ತದೆ ಎಂದು ಮಾಜಿ ಡಿಸಿಎಂ ಆರ್ ಅಶೋಕ್ ಹೇಳಿದ್ದಾರೆ.

ಪದ್ಮನಾಭನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಂದ್ರಯಾನ-3ಗೆ ಸರಿಸಾಟಿಯಾದ ಸಾಧನೆಯನ್ನು ಜಗತ್ತಿನಲ್ಲಿ ಬೇರೆ ಯಾರೂ ಮಾಡಿಲ್ಲ. ಈ ಸಾಧನೆಯಿಂದ ನಮಗೆಲ್ಲ ಬಹಳ ಹೆಮ್ಮೆ ಇದೆ. ಮೋದಿಯವರು ನಾಡಿದ್ದು (ಆಗಸ್ಟ್​ 26) ಬೆಳಗ್ಗೆ ಬರುತ್ತಿದ್ದಾರೆ. ಎಚ್‌ಎಎಲ್ ನಲ್ಲಿ ಪ್ರಧಾನಿಯವರನ್ನು ನಾವು ಸ್ವಾಗತಿಸುತ್ತಿದ್ದೇವೆ ಎಂದು ಹೇಳಿದರು.

ಪ್ರಧಾನಿಯವರ ಸ್ವಾಗತಕ್ಕೆ ಐದು ಸಾವಿರ ಜನ ಸೇರುತ್ತೇವೆ. ಅಲ್ಲಿ ಮೋದಿಯವರು ಎಲ್ಲರನ್ನು ಉದ್ದೇಶಿಸಿ ಮಾತಾಡಬಹುದು. ಇಸ್ರೋ ಸಂಸ್ಥೆ ಇರುವ ಪ್ರದೇಶದಲ್ಲಿ ಮೋದಿಯವರು ಬಂದಾಗ ರೋಡ್ ಶೋ ಮಾಡುತ್ತೇವೆ. ರೋಡ್ ಶೋ ನಡೆಸಲು ಕೇಂದ್ರ ಬಿಜೆಪಿಯಿಂದ ಸೂಚನೆ ಬಂದಿದೆ. ಮೋದಿಯವರನ್ನು ಅದ್ಧೂರಿಯಾಗಿ ಸ್ವಾಗತಿಸುತ್ತೇವೆ. ದಾಸರಹಳ್ಳಿ ಕ್ಷೇತ್ರದಲ್ಲಿ ಇಸ್ರೋ ಸಂಸ್ಥೆ ಇದೆ. ಅಲ್ಲಿ ಒಂದು ಕಿ.ಮೀವರೆಗೆ ರೋಡ್ ಶೋ‌ ಮಾಡುತ್ತೇವೆ. ರೋಡ್ ಶೋ ಬಗ್ಗೆ ದಾಸರಹಳ್ಳಿ ಶಾಸಕ ಮುನಿರಾಜು ಜತೆ ಚರ್ಚೆ ಮಾಡಿದ್ದೇವೆ. ಇಂದು ಸಂಜೆ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸುತ್ತಿದ್ದು, ಮೋದಿಯವರ ಭೇಟಿ ದಿನದ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸುತ್ತೇವೆ ತಿಳಿಸಿದರು.

ಚಂದ್ರಯಾನ-3 ಸಕ್ಸಸ್ ಆಗಿದೆ. ಸಕ್ಸಸ್ ಆಗಲು ಇಡೀ ಮನುಕುಲದ ಆಶೀರ್ವಾದ ಇತ್ತು. ಪ್ರಾರಂಭದಲ್ಲೇ ದೇವರು ನಮಗೆ ವರ ಕೊಟ್ಟಿದ್ದ. ವರ ಕೊಟ್ಟ ನಂತರವೂ ದೇವರನ್ನು ಸ್ಮರಿಸಿಕೊಳ್ಳಬೇಕು. ಅದಕ್ಕಾಗಿ ಇವತ್ತು ನಮ್ಮ ಕ್ಷೇತ್ರದ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸಿದ್ದೇವೆ. ಒಂದು ಸಾವಿರಕ್ಕೂ ಹೆಚ್ಚು ಇಸ್ರೋ ವಿಜ್ಞಾನಿಗಳು ನಮ್ಮ ಪದ್ಮನಾಭ ನಗರದಲ್ಲಿ ವಾಸ ಮಾಡುತ್ತಿದಾರೆ. ಇವತ್ತು ಅವರನ್ನೂ ಕರೆದು ಸನ್ಮಾನ ಮಾಡಿದ್ದೇವೆ ಎಂದರು.

ಮನಮೋಹನ್ ಸಿಂಗ್ ಅವರು ಚಂದ್ರಯಾನ ಯೋಜನೆಗೆ ಹಣಕಾಸು ಸಮಸ್ಯೆ ಎಂದು ಅನುಮತಿ ಕೊಡಲಿಲ್ಲ. ಆಗಲೇ ಅನುಮತಿಸಿರುತ್ತಿದ್ದರೆ 2018-19ರ ವೇಳೆಯಲ್ಲೇ ಚಂದ್ರಯಾನ 3 ಯಶಸ್ವಿಯಾಗಿರುತ್ತಿತ್ತು. ಕಾಂಗ್ರೆಸ್ ಸರ್ಕಾರ ಇದ್ದಾಗ ವಿಜ್ಞಾನಿಗಳಿಗೂ ತೊಂದರೆ ಕೊಡಲಾಯಿತು. ಕೇರಳದ ಇಸ್ರೋ ವಿಜ್ಞಾನಿ ಮಾಧವನ್ ನಾಯರ್ ಅವರನ್ನು ಕಾಂಗ್ರೆಸ್ ನವರು ಹೇಗೆ ನಡೆಸಿಕೊಂಡರೆಂಬುದು ಎಲ್ಲರಿಗೂ ಗೊತ್ತಿದೆ ಎಂದು ಕಾಂಗ್ರೆಸ್​ಗೆ ತಿರುಗೇಟು ನೀಡಿದರು. ಕಾಂಗ್ರೆಸ್ ಬರಿ ಗರೀಬಿ ಹಠಾವೊ ಎಂದರು. ಮಗ, ಸೊಸೆ, ಮೊಮ್ಮಗ ಎಲ್ಲರೂ 70 ವರ್ಷ ಬರಿ ಗರೀಬಿ ಹಠಾವೊ ಎಂದರು. ವಿಜ್ಞಾನ ಕ್ಷೇತ್ರಕ್ಕೆ ಕಾಂಗ್ರೆಸ್ ಏನು ಮಾಡಲೇ ಇಲ್ಲ‌. ಈಗ ನಮ್ಮ ಹೆಮ್ಮೆಯ ಮೋದಿ ಮಾಡಿದ್ದಾರೆ. ಕಾಂಗ್ರೆಸ್​ನವರು ಇನ್ನಾದರೂ ಬುದ್ಧಿ ಕಲಿಯಲಿ ವಾಗ್ದಾಳಿ ನಡೆಸಿದರು.

ಮಾಜಿ ಸಚಿವ ಎಸ್​ ಟಿ ಸೋಮಶೇಖರ್ ಅವರು ಕಾಂಗ್ರೆಸ್ ಗೆ ಹೋಗಲ್ಲ. ಮಾಧ್ಯಮಗಳಲ್ಲಿ ಅವರು ಹೋಗುತ್ತಾರೆ ಅನ್ನೋ ವಾತಾವರಣ ನಿರ್ಮಿಸಲಾಗಿದೆ. ಆದರೆ ಅವರು ನಮ್ಮ ಪಕ್ಷದಲ್ಲೇ ಇರುತ್ತಾರೆ. ಪಕ್ಷ ಬಿಡುವುದು ಬರೀ ಊಹಾಪೋಹ. ಈಗಲೂ ಸೋಮಶೇಖರ್ ಜತೆ ಮಾತನಾಡಿ ಭೇಟಿ ಮಾಡುವಂತೆ ಹೇಳಿದ್ದೇನೆ. ನಾನೇ ಅವರನ್ನು ಪಕ್ಷಕ್ಕೆ ಕರೆತಂದದ್ದು. ಒಟ್ಟು ಐದು ಜನರನ್ನು ನಾನು ಪಕ್ಷಕ್ಕೆ ಕರೆದುಕೊಂಡು ಬಂದಿದ್ದೆ. ಅದರಲ್ಲಿ ಸೋಮಶೇಖರ್ ಕೂಡಾ ಒಬ್ಬರು ಎಂದು ಅಶೋಕ್​ ಹೇಳಿದ್ರು.

ಸರ್ಕಾರ ರಚನೆ ಸಂದರ್ಭದಲ್ಲಿ ಯಡಿಯೂರಪ್ಪ ಅವರು 10 ಜನರನ್ನು ಕರೆತಂದರು. ನಾನು ಐದು ಜನರನ್ನು ಕರೆದು ತಂದೆ. ಎಲ್ಲರಿಗಿಂತ ಚೆನ್ನಾಗಿ ಸೋಮಶೇಖರ್ ಬಗ್ಗೆ ನನಗೆ ಗೊತ್ತು. ಅವರ ಕ್ಷೇತ್ರದ ಭಾಗದಲ್ಲಿ ನಾನು ಮೂರು ಬಾರಿ ಶಾಸಕ‌ ಆಗಿದ್ದವನು. ಅವರ ಜತೆ ಮಾತನಾಡಿದ್ದೇನೆ, ಏನಾಗುತ್ತದೆ ಕಾದು‌ ನೋಡೋಣ ಎಂದರು.

ಇದನ್ನೂ ಓದಿ :Chandrayaan 3: ಕೌತುಕದಿಂದ ಕೂಡಿರುವ ಚಂದ್ರನ ದಕ್ಷಿಣ ತುದಿಯನ್ನೇ ಇಸ್ರೋ ಆಯ್ಕೆ ಮಾಡಿಕೊಂಡಿದ್ದೇಕೆ? ವೈಜ್ಞಾನಿಕ ಕಾರಣ ನೀಡಿದ ಮುಖ್ಯಸ್ಥ

ABOUT THE AUTHOR

...view details