ಕರ್ನಾಟಕ

karnataka

By

Published : May 25, 2023, 1:59 PM IST

Updated : May 25, 2023, 4:07 PM IST

ETV Bharat / state

'ದಯವಿಟ್ಟು ನನಗೆ ದಯಾಮರಣ ನೀಡಿ': ಆಟೋ ಚಾಲಕನ ಅಳಲು

ಆಟೋ ಚಾಲಕ ಟ್ಯಾಗ್​ ಮಾಡಿರುವ ಟ್ವೀಟ್​ಗೆ ಬೆಂಗಳೂರು ನಗರ ಪೊಲೀಸ್​ ಪ್ರತಿಕ್ರಿಯೆ ನೀಡಿದೆ. ಹೆಚ್ಚಿನ ತನಿಖೆಗಾಗಿ ದೂರನ್ನು ಡಿಸಿಪಿಗೆ ರವಾನಿಸಲಾಗಿದೆ ಎಂದು ತಿಳಿಸಿದೆ.

Please give me euthanasia: said a auto driver
ದಯವಿಟ್ಟು ನನಗೆ ದಯಾಮರಣ ನೀಡಿ ಎಂದ ಆಟೋ ಚಾಲಕ

ಬೆಂಗಳೂರು: ಪೊಲೀಸ್ ಸಿಬ್ಬಂದಿ ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿರುವ ವ್ಯಕ್ತಿಯೊಬ್ಬರು, ತನಗೆ ದಯಾಮರಣ ನೀಡಿ ಎಂದು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಹರ್ಷ ಎಂಬಾತ ದಯಾಮರಣ ಕೋರಿ ಪತ್ರ ಬರೆದಿದ್ದು, ಟ್ವಿಟರ್​ನಲ್ಲಿ ನಗರ ಪೊಲೀಸ್ ಆಯುಕ್ತರಿಗೆ ಟ್ಯಾಗ್ ಮಾಡಿದ್ದಾರೆ.

"ಕಳೆದ ವರ್ಷ ಪತ್ನಿ ವರದಕ್ಷಿಣೆ ಕಿರುಕುಳ ಆರೋಪದಡಿ ತನ್ನ ಹಾಗೂ ತಾಯಿಯ ವಿರುದ್ಧ ಪ್ರಕರಣ ದಾಖಲಿಸಿದ್ದಳು. ಮಹಿಳಾ ಠಾಣೆ ಇನ್​ಸ್ಪೆಕ್ಟರ್ ಹಾಗೂ ಸಿಬ್ಬಂದಿ ಸರಿಯಾಗಿ ತನಿಖೆ ಕೈಗೊಂಡಿಲ್ಲ. ಪೊಲೀಸರ ಕೃತ್ಯದಿಂದ ನಾವು 20% ಬಡ್ಡಿಗೆ ಸಾಲ ಪಡೆದು ಜಾಮೀನು ಪಡೆದಿದ್ದೇವೆ. ಪುನಃ 5% ಬಡ್ಡಿಗೆ ಸಾಲ ಪಡೆದು, ನಮಗೆ ನ್ಯಾಯ ಕೊಡಿಸಿ ಎಂದು ಪೊಲೀಸ್ ಕಚೇರಿಗೆ ಅಲೆದಾಡುತ್ತಿದ್ದೇವೆ. ಆರು ತಿಂಗಳಿನಿಂದ ನನ್ನ ಕೆಲಸವೂ ಹಾಳಾಗಿದೆ. ಸಾಲ ಕೊಟ್ಟವರು ವಾಪಸ್ ಕೇಳುತ್ತಿದ್ದಾರೆ.

ಬಸವನಗುಡಿ ಠಾಣೆಯ ಸಿಬ್ಬಂದಿ ಕೀರ್ತಿ, ಆಶಾರಾಣಿ, ಎಎಸ್ಐ ಕುಮಾರ್, ಹಾಗೂ ಇನ್​ಸ್ಪೆಕ್ಟರ್ ಸೂಕ್ತ ತನಿಖೆ ಮಾಡದೇ ದೋಷಾರೋಪಣ ಪಟ್ಟಿ ಸಲ್ಲಿಕೆ ಮಾಡಿದ್ದಾರೆ. ನನ್ನ ಮೇಲೆ ಮಾಡಿರುವ ಆರೋಪ ಸುಳ್ಳು ಎಂಬುದಕ್ಕೆ ನನ್ನ ಬಳಿ ಸಾಕ್ಷಿಯಿದೆ. ಆದ್ದರಿಂದ ಪ್ರಕರಣದ ಮರು ತನಿಖೆಗೆ ಆದೇಶಿಸಿ, ಬಸವನಗುಡಿ ಮಹಿಳಾ ಠಾಣೆಯ ಅಂದಿನ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಜರುಗಿಸಿ, ಮತ್ತು ನನ್ನ ಸಾಲವನ್ನು ಅವರುಗಳಿಂದಲೇ ಕಟ್ಟಿಸಿ ಕೊಡಿ. ಇಲ್ಲವಾದಲ್ಲಿ ದಯಾಮರಣ ನೀಡಿ" ಎಂದು ಪತ್ರದಲ್ಲಿ ಬರೆದಿದ್ದಾರೆ.

ಕುಡಿದ ನಶೆಯಲ್ಲಿ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಬೇಸತ್ತ ವ್ಯಕ್ತಿ ಕುಡಿದ ನಶೆಯಲ್ಲಿ ಚಾಕುವಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ದೊಡ್ಡಬಳ್ಳಾಪುರ ತಾಲ್ಲೂಕಿನ ಕಂಚಿಗನಾಳ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಆಂಜಿನಪ್ಪ (54) ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕುಡಿತದ ಚಟ ಹತ್ತಿಸಿಕೊಂಡಿದ್ದ ಆಂಜಿನಪ್ಪ ಸದಾ ಕುಡಿದು ಮನೆಗೆ ಬರುತ್ತಿದ್ದ, ಎಂದು ತಿಳಿದು ಬಂದಿದೆ.

ಆಂಜಿನಪ್ಪ ಇಂದು ಬೆಳಗ್ಗೆ ಕುಡಿದು ಬಂದಿದ್ದರಿಂದ ಮನೆಯಲ್ಲಿ ಜಗಳವಾಗಿದೆ. ಕುಡಿದ ನಶೆಯಲ್ಲಿದ್ದ ಆಂಜಿನಪ್ಪ ಚಾಕುವಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಆತನನ್ನು ನಗರದ ಖಾಸಗಿ ಆಸ್ಫತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಚಿಕ್ಕಮಗಳೂರು: ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ರೈತರು

ಪ್ರಯಾಣಿಕನ ಮೇಲೆ ಆಟೋ ಹತ್ತಿಸಲು ಯತ್ನ:ಬೆಂಗಳೂರಿನಲ್ಲಿ ಕೆಲ ಆಟೋ ಚಾಲಕರ ದುರ್ವರ್ತನೆ ಮಿತಿ ಮೀರಿದೆ. ಕೆಲ ಆಟೋ ಚಾಲಕರು ಮೀಟರ್ ಹಾಕಲ್ಲ, ಮನಸೋ ಇಚ್ಛೆ ಹಣ ಕೇಳುವುದು ಸಾಮಾನ್ಯವಾಗಿದೆ. ಇದ್ಯಾವುದೂ ಬೇಡ ಅಂತಾ ಪ್ರಯಾಣಿಕರು ಪರ್ಯಾಯ ಆಯ್ಕೆ ಆಯ್ದುಕೊಂಡರೆ ಮಾತ್ರ ಆಟೋ ಚಾಲಕರಿಗೆ ಕೋಪ. ಹೀಗೆ ಆಟೋ ಬೇಡ ಅಂತ ರ‍್ಯಾಪಿಡೋ ಬೈಕ್ ಬುಕ್ ಮಾಡಿ ಕಾಯುತ್ತಿದ್ದ ಟೆಕ್ಕಿಯ ಮೇಲೆ ಆಟೋ ಹರಿಸಲು ಯತ್ನಿಸಿರುವ ಘಟನೆ ಇಂದು ಬೆಳಗ್ಗಿನ ಜಾವ ಹೆಚ್ಎಸ್ಆರ್ ಲೇಔಟಿನ ಸೆಕ್ಟರ್ 1ರಲ್ಲಿ ನಡೆದಿದೆ.

3.30ರ ಸುಮಾರಿಗೆ ಟೆಕ್ಕಿಯೊಬ್ಬ ಆಟೋ ಬಿಟ್ಟು ರ‍್ಯಾಪಿಡೋ ಬುಕ್ ಮಾಡಿ ಕಾಯುತ್ತಿದ್ದ. ಈ ವೇಳೆ ಆಟೋ ಚಾಲಕ ಏಕಾಏಕಿ ಟೆಕ್ಕಿಯ ಮೇಲೆ ಆಟೋ ನುಗ್ಗಿಸಲು ಯತ್ನಿಸಿದ್ದಾನೆ. ಆಟೋ ಡಿಕ್ಕಿಯಾದ ರಭಸಕ್ಕೆ ಟೆಕ್ಕಿ ರಸ್ತೆ ಬದಿಯಲ್ಲಿ‌ ಬಿದ್ದು ಗಾಯಗೊಂಡಿದ್ದಾನೆ. ಇದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಒಂದು ತಿಂಗಳ ಹಿಂದೆಯೂ ಸಹ ರ‍್ಯಾಪಿಡೋ ಕ್ಯಾಪ್ಟನ್​ನನ್ನು ತಡೆದ ಆಟೋ ಚಾಲಕನೊಬ್ಬ ಆತನ ಕೈಯಲ್ಲಿದ್ದ ಹೆಲ್ಮೆಟ್ ಒಡೆದು, ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ದಬ್ಬಾಳಿಕೆ ಮೆರೆದಿರುವ ಘಟನೆ ಇಂದಿರಾನಗರ ಮೆಟ್ರೋ ನಿಲ್ದಾಣದ ಬಳಿ ನಡೆದಿತ್ತು. ಆಟೋ ನಿಲ್ದಾಣದ ಬಳಿ ಗ್ರಾಹಕರನ್ನು ತನ್ನ ಸ್ಕೂಟರಿಗೆ ಹತ್ತಿಸಿಕೊಂಡ ಎಂಬ ಕಾರಣಕ್ಕೆ ರೊಚ್ಚಿಗೆದ್ದ ಆಟೋ ಚಾಲಕ ಪುಡಿ ರೌಡಿಯಂತೆ ತನ್ನ ಪುಂಡಾಟಿಕೆ ಮೆರೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

Last Updated : May 25, 2023, 4:07 PM IST

ABOUT THE AUTHOR

...view details