ಬೆಂಗಳೂರು: ಕಾರ್ಮಿಕ ಮತ್ತು ವಾರ್ತಾ ಇಲಾಖೆಯಿಂದ ಎತ್ತಂಗಡಿಯಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಪಿ.ಮಣಿವಣ್ಣನ್ ಗೆ ಇದೀಗ ಸರ್ಕಾರ ಸ್ಥಳ ನಿಯೋಜನೆ ಮಾಡಿ ಆದೇಶ ಹೊರಡಿಸಿದೆ.
ಪಿ.ಮಣಿವಣ್ಣನ್ ಅವರನ್ನು ಪಶುಸಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಿದೆ. ನಿನ್ನೆ ಏಕಾಏಕಿ ಪಿ.ಮಣಿವಣ್ಣನ್ ಅವರನ್ನು ಕಾರ್ಮಿಕ ಇಲಾಖೆ ಮತ್ತು ವಾರ್ತಾ ಇಲಾಖೆಗಳ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಎತ್ತಂಗಡಿ ಮಾಡಿ, ಯಾವುದೇ ಸ್ಥಳ ನಿಯೋಜನೆ ಮಾಡಿರಲಿಲ್ಲ. ಇತ್ತ ಆ ಎರಡು ಇಲಾಖೆಗಳ ಹೊಣೆಯನ್ನು ಮಹೇಶ್ವರ್ ರಾವ್ ಗೆ ಹೆಚ್ಚುವರಿಯಾಗಿ ಹೊರಿಸಲಾಗಿತ್ತು.
ಸರ್ಕಾರದಿಂದ ಹೊರಡಿಸಿದ ಆದೇಶ ಪ್ರತಿ ಪಿ.ಮಣಿವಣ್ಣನ್ ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ವೇತನ ನೀಡದ ಕೈಗಾರಿಕೋದ್ಯಮಿಗಳಿಗೆ ನೋಟಿಸ್ ಜಾರಿ ಮಾಡುವುದಾಗಿ ಟ್ವೀಟ್ ಮಾಡಿದ್ದರು. ಇದಕ್ಕೆ ಕೈಗಾರಿಕೋದ್ಯಮಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಕಾರ್ಮಿಕರು ದೂರು ಸಲ್ಲಿಸಲು ಸ್ವತಃ ಮಣಿವಣ್ಣನ್ ಪ್ರೇರೇಪಿಸುತ್ತಿದ್ದಾರೆ ಎಂದು ಕೈಗಾರಿಕೋದ್ಯಮಿಗಳು ಆರೋಪಿಸಿದ್ದರು. ಬಳಿಕ ಮಣಿವಣ್ಣನ್ ತಮ್ಮ ನಿಲುವಿನಿಂದ ಹಿಂದೆ ಸರಿದಿದ್ದರು.
ನೋಟಿಸ್ ನೀಡಿದ ಬಗ್ಗೆ ಕೈಗಾರಿಕೋದ್ಯಮಿಗಳೂ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಹಾಗೂ ಸಿಎಂಗೆ ದೂರು ನೀಡಿದ್ದರು. ಈ ಹಿನ್ನೆಲೆ ಮಣಿವಣ್ಣನ್ ಅವರನ್ನು ಸರ್ಕಾರ ಎರಡೂ ಇಲಾಖೆಯ ಹುದ್ದೆಯಿಂದ ಎತ್ತಂಗಡಿ ಮಾಡಿ ಯಾವುದೇ ಸ್ಥಳ ನಿಯೋಜನೆ ಮಾಡಿರಲಿಲ್ಲ ಎನ್ನಲಾಗಿತ್ತು.
ಇದೀಗ ಸರ್ಕಾರ ಮಣಿವಣ್ಣನ್ ಗೆ ಸ್ಥಳ ನಿಯೋಜನೆ ಮಾಡಿ ಆದೇಶಿಸಿದೆ. ಅದಕ್ಕೂ ಮುನ್ನ ಇಂದು ಬೆಳಗ್ಗೆ ಮಣಿವಣ್ಣನ್ ತಮ್ಮ ಟ್ವಿಟರ್ ಖಾತೆಯಲ್ಲಿ ಕಾರ್ಮಿಕ ಇಲಾಖೆ ಹಾಗೂ ವಾರ್ತಾ ಇಲಾಖೆಯ ಅಧಿಕಾರವನ್ನು ಹಸ್ತಾಂತರಿಸಿದ್ದೇನೆ. ನಿಮ್ಮ ಸಹಕಾರ ಮತ್ತು ಬೆಂಬಲಕ್ಕೆ ಅಭಿನಂದನೆ. ಮುಂದಿನ ಹೊಸ ಸವಾಲುಗಳನ್ನು ಎದುರು ನೋಡುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದರು.