ಕರ್ನಾಟಕ

karnataka

By

Published : Jun 8, 2021, 5:29 PM IST

ETV Bharat / state

ಮಂಗಗಳಿಗೆ ಅರಣ್ಯದಲ್ಲಿ ಪುನರ್ವಸತಿ ಕೋರಿ PIL : ಯೋಜನೆ ರೂಪಿಸಲು ಹೈಕೋರ್ಟ್ ನಿರ್ದೇಶನ

ಜನರಿಗೆ ತೊಂದರೆ ಆಗುತ್ತಿರುವ ವಿಷಯದ ಬಗ್ಗೆ ಗಮನಹರಿಸುವ ಜೊತೆಗೆ ಮಂಗಗಳ ಬಗ್ಗೆಯೂ ಗಮನಹರಿಸುವ ಅಗತ್ಯವಿದೆ. ಮನುಷ್ಯರಿಗೆ ಇರುವಂತೆ ಮಂಗಗಳಿಗೆ ಮೂಲಭೂತ ಹಕ್ಕು ಇಲ್ಲದಿದ್ದರೂ ಬದುಕುವ ಹಕ್ಕಂತೂ ಇದ್ದೇ ಇದೆ ಎಂದು ಅಭಿಪ್ರಾಯಪಟ್ಟಿತು..

monkeys
ಯೋಜನೆ ರೂಪಿಸಲು ಹೈಕೋರ್ಟ್ ನಿರ್ದೇಶನ

ಬೆಂಗಳೂರು :ರಾಜಧಾನಿ ಬೆಂಗಳೂರಿನಲ್ಲಿ ಮಂಗಗಳ ಉಪಟಳ ತಗ್ಗಿಸಲು ಹಾಗೂ ಅವುಗಳಿಗೆ ಅರಣ್ಯದಲ್ಲಿ ಪುನರ್ ವಸತಿ ಕಲ್ಪಿಸಲು ದೆಹಲಿ ಹೈಕೋರ್ಟ್ ಹೊರಡಿಸಿರುವ ಮಾರ್ಗಸೂಚಿಯಂತೆ ಯೋಜನೆ ರೂಪಿಸಿ ಎಂದು ಹೈಕೋರ್ಟ್, ಅರಣ್ಯ ಇಲಾಖೆ ಮತ್ತು ಬಿಬಿಎಂಪಿಗೆ ನಿರ್ದೇಶನ ನೀಡಿದೆ.

ನಗರದಲ್ಲಿ ಮಂಗಗಳ ಕಾಟ ಹೆಚ್ಚುತ್ತಿದೆ. ಅವುಗಳಿಗೆ ಅರಣ್ಯದಲ್ಲಿ ಪುನರ್ವಸತಿ ಕಲ್ಪಿಸಲು ಸರ್ಕಾರಕ್ಕೆ ಹಾಗೂ ಪಾಲಿಕೆಗೆ ನಿರ್ದೇಶನ ನೀಡಬೇಕೆಂದು ಕೋರಿ ವಕೀಲ ರಾಧಾನಂದನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯಪೀಠ ಈ ನಿರ್ದೇಶನ ನೀಡಿದೆ.

ವಿಚಾರಣೆ ವೇಳೆ ಅರ್ಜಿದಾರರು ವಾದ ಮಂಡಿಸಿ, ಮಂಗಗಳು ಆಹಾರಕ್ಕಾಗಿ ಜನವಸತಿ ಪ್ರದೇಶಕ್ಕೆ ನುಗ್ಗುತ್ತಿವೆ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಅವುಗಳಿಗೆ ಅರಣ್ಯಗಳಲ್ಲಿ ಪುನರ್ವಸತಿ ಕಲ್ಪಿಸುವಂತೆ ನಿರ್ದೇಶಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ನಗರದ ಬಳಿಯೇ ಅರಣ್ಯ ಪ್ರದೇಶವಿದೆ. ಪ್ರಾಣಿಗಳ ವಸತಿ ಪ್ರದೇಶವನ್ನು ಜನರು ಅತಿಕ್ರಮಿಸುತ್ತಿದ್ದಾರೆ. ಹೀಗಾಗಿ, ಅವು ಜನವಸತಿ ಪ್ರದೇಶಗಳಿಗೆ ಬರುವುದು ಅಚ್ಚರಿಯ ಸಂಗತಿಯೇನಲ್ಲ.

ಜನರಿಗೆ ತೊಂದರೆ ಆಗುತ್ತಿರುವ ವಿಷಯದ ಬಗ್ಗೆ ಗಮನಹರಿಸುವ ಜೊತೆಗೆ ಮಂಗಗಳ ಬಗ್ಗೆಯೂ ಗಮನಹರಿಸುವ ಅಗತ್ಯವಿದೆ. ಮನುಷ್ಯರಿಗೆ ಇರುವಂತೆ ಮಂಗಗಳಿಗೆ ಮೂಲಭೂತ ಹಕ್ಕು ಇಲ್ಲದಿದ್ದರೂ ಬದುಕುವ ಹಕ್ಕಂತೂ ಇದ್ದೇ ಇದೆ ಎಂದು ಅಭಿಪ್ರಾಯಪಟ್ಟಿತು.

ಅಲ್ಲದೆ, ಇದೇ ವಿಚಾರದಲ್ಲಿ ದೆಹಲಿ ಹೈಕೋರ್ಟ್ ವಿವರವಾದ ಮಾರ್ಗಸೂಚಿಯನ್ನು ಹೊರಡಿಸಿದೆ. ಜನರಿಗೆ ತೊಂದರೆ ಆಗುವುದನ್ನು ತಪ್ಪಿಸುವ ಜೊತೆಗೆ ಮಂಗಗಳ ಹಿತವನ್ನೂ ಕಾಪಾಡಬೇಕಿದೆ. ಎರಡರ ನಡುವೆ ಸಮತೋಲನ ಕಾಯ್ದುಕೊಳ್ಳಬೇಕಿದೆ.

ಹೀಗಾಗಿ, ಮಂಗಗಳಿಗೆ ಆಹಾರ ಮತ್ತು ನೆಲೆಗೆ ದೆಹಲಿ ಹೈಕೋರ್ಟ್ ನೀಡಿರುವ ತೀರ್ಪಿನ ಆಧಾರದಲ್ಲಿ ಅರಣ್ಯ ಇಲಾಖೆ ಹಾಗೂ ಬಿಬಿಎಂಪಿ ಜುಲೈ 12ರೊಳಗೆ ಸಭೆ ನಡೆಸಬೇಕು. ಸೂಕ್ತ ಯೋಜನೆ ರೂಪಿಸಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಜುಲೈ 15ಕ್ಕೆ ಮುಂದೂಡಿತು.

ABOUT THE AUTHOR

...view details