ಕರ್ನಾಟಕ

karnataka

ETV Bharat / state

ಬಿಬಿಎಂಪಿ ಕಾಯ್ದೆ 2020 ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ: ಸರ್ಕಾರಕ್ಕೆ ನೋಟಿಸ್ ಜಾರಿ - ETV Bharat Kannada News

ಸಿಟಿಜನ್ ಆಕ್ಷನ್ ಫೋರಂ ಸಂಸ್ಥೆ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​ ಸರ್ಕಾರಕ್ಕೆ ನೋಟಿಸ್​ ಜಾರಿ ಮಾಡಿದೆ.

High Court
ಹೈಕೋರ್ಟ್​

By

Published : Feb 28, 2023, 9:54 PM IST

ಬೆಂಗಳೂರು :ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಕಾಯ್ದೆ 2020ರ ವಿವಿಧ ಸೆಕ್ಷನ್​ಗಳನ್ನು ಸಂವಿಧಾನ ಆಶಯಗಳಿಗೆ ವಿರುದ್ಧವಾಗಿವೆ ಎಂದು ಆರೋಪಿಸಿ ಹೈಕೋರ್ಟ್​ಗೆ ಅರ್ಜಿಯನ್ನು ಸಲ್ಲಿಸಲಾಗಿತ್ತು. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಸಿಟಿಜನ್ ಆಕ್ಷನ್ ಫೋರಂ ಎಂಬ ಸರ್ಕಾರೇತರ ಸಂಘ ಸಂಸ್ಥೆ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಆಶೋಕ್ ಎಸ್.ಕಿಣಗಿ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು. ನಂತರ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿದೆ. ಬಿಬಿಎಂಪಿ ಕಾಯಿದೆ 2020ರ ಸೆಕ್ಷನ್​ಗಳಾದ 75, 76, 77, 78, 79 ಮತ್ತು 86 ಸಂವಿಧಾನದ ಮೂಲ ಆಶಯಗಳನ್ನು ಉಲ್ಲಂಘಿಸಿವೆ. ಹೀಗಾಗಿ ಕಾಯ್ದೆಯನ್ನು ರದ್ದು ಮಾಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಬಿಬಿಎಂಪಿ ಕಾಯಿದೆಯ ಸೆಕ್ಷನ್ 75 ಮತ್ತು 77ರ ಪ್ರಕಾರ ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚುವರಿಯಾಗಿ ರಚನೆ ಮಾಡಿರುವ ಕ್ಷೇತ್ರ ಸಮಾಲೋಚನಾ ಸಮಿತಿ ಮತ್ತು ವಲಯ ಸಮಿತಿಗಳು ಸಂವಿಧಾನ ಅಡಿಯಲ್ಲಿ ರಚನೆ ಮಾಡಿರುವ ವಾರ್ಡ್ ಸಮಿತಿಗೆ ನೀಡಿರುವ ಅಧಿಕಾರವನ್ನು ಕಿತ್ತುಕೊಳ್ಳಲಿದೆ. ಸಂವಿಧಾನದ ಪರಿಚ್ಛೇದ 243- ಎಸ್ನಲ್ಲಿ ಮೂರು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಪುರಸಭೆಗಳಲ್ಲಿ ವಾರ್ಡ್ ಸಮಿತಿಗಳನ್ನು ರಚನೆ ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೆ, ಬಿಬಿಎಂಪಿ ಕಾಯಿದೆ ಪ್ರಕಾರ ರಚನೆ ಮಾಡಿರುವ ಸಮಿತಿಗಳ ಸಂವಿಧಾನದ ಬಾಹಿರವಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಅಲ್ಲದೆ, ಬಿಬಿಎಂಪಿ ಕಾಯ್ದೆಯ ಸೆಕ್ಷನ್ 76 ಸಮಾಲೋಚನಾ ಸಮಿತಿ ಮತ್ತು ಸೆಕ್ಷನ್ 78 ವಲಯ ಸಮಿತಿ ರಚನೆ ಮತ್ತು ಅಧಿಕಾರ ನೀಡುತ್ತದೆ. ಈ ಸಮಿತಿಗಳು ವಾರ್ಡ್ ಸಮಿತಿಗಳ ಮೇಲೆ ಅಧಿಕಾರ ಚಲಾವಣೆ ಮಾಡಿದಂತಾಗುತ್ತದೆ, ಈ ಬೆಳವಣಿಗೆ ಕಾನೂನು ಬಾಹಿರವಾಗಿದೆ. ಬಿಬಿಎಂಪಿ ಕಾಯ್ದೆ ಈ ಸೆಕ್ಷನ್​ಗಳ ಸಂವಿಧಾನದ ಭಾಗ 9ಎ ಗೆ ತದ್ವಿರುದ್ಧವಾಗಿವೆ. ಹಾಗೂ ಈ ಸೆಕ್ಷನ್‌ಗಳ ಮೂಲಕ ವಾರ್ಡ್ ಸಮಿತಿಯ ಅಧಿಕಾರವನ್ನು ಕಿತ್ತುಕೊಂಡಂತಾಗುತ್ತದೆ. ಬಿಬಿಎಂಪಿ ಕಾಯ್ದೆಯಲ್ಲಿನ ಈ ಸೆಕ್ಷನ್​ಗಳು ಜಾರಿಯಾದಲ್ಲಿ ವಾರ್ಡ್ ಸಮಿತಿಗಳಿಗೆ ಯಾವುದೇ ಅಧಿಕಾರ ಇರಲ್ಲ. ಹೀಗಾಗಿ ಕಾಯಿದೆ ರದ್ದು ಮಾಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ತೀರ್ಪು ಕನ್ನಡೀಕರಿಸಲು ಕೃತಕ ಬುದ್ದಿಮತ್ತೆ:ಇಂಗ್ಲಿಷ್ ಭಾಷೆಯಲ್ಲಿರುವ ಕರ್ನಾಟಕ ಹೈಕೋರ್ಟ್ ತೀರ್ಪುಗಳನ್ನು ಕೃತಕ ಬುದ್ದಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಬಳಸಿ ಕನ್ನಡಕ್ಕೆ ಅನುವಾದಿಸಲು ಪ್ರಕ್ರಿಯೆ ಆರಂಭಿಸಲಾಗಿದೆ. ಈ ಸಂಬಂಧ ಹೈಕೋರ್ಟ್ ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಸಿ.ಎಂ. ಜೋಶಿ ಅವರ ನೇತೃತ್ವದಲ್ಲಿ ಸಲಹಾ ಸಮಿತಿ ರಚನೆ ಮಾಡಲಾಗಿದೆ.

ಕಳೆದ ತಿಂಗಳು ಸಲಹಾ ಸಮಿತಿ ರಚಿಸಲಾಗಿದ್ದು, ಸಮಿತಿಯು ಈಗಾಗಲೇ ಸಭೆ ನಡೆಸಿದೆ. ಕೃತಕ ಬುದ್ದಿಮತ್ತೆ ನೆರವಿನಿಂದ ಇಂಗ್ಲಿಷ್‌ನಲ್ಲಿರುವ ತೀರ್ಪುಗಳನ್ನು ಕನ್ನಡಕ್ಕೆ ಅನುವಾದ ಮಾಡಲು ಉದ್ದೇಶಿಸಲಾಗಿದೆ. ಆ ಮೂಲಕ ಜನ ಸಾಮಾನ್ಯರಿಗು ಕನ್ನಡದಲ್ಲಿ ತೀರ್ಪುಗಳನ್ನು ಸಿಗುವಂತೆ ಮಾಡುವ ಗುರಿಯನ್ನು ಹೊಂದಲಾಗಿದೆ.

ಹೈಕೋರ್ಟ್‌ನಲ್ಲಿ ಲಭ್ಯವಿರುವ ಕಂಪ್ಯೂಟರ್‌ಗಳಲ್ಲಿ ಸುವಾಸ್ (ಸುಪ್ರೀಂ ಕೋರ್ಟ್ ವಿಧಿಕ್ ಅನುವಾದ್ ಸಾಫ್ಟ್ವೇರ್) ತಂತ್ರಾಂಶವನ್ನು ಅಳವಡಿಸಿ, ತೀರ್ಪುಗಳನ್ನು ಅನುವಾದ ಮಾಡಲು ಈಗಾಗಲೇ ಅನುವಾದಕರನ್ನು ನಿಯೋಜಿಸಲಾಗಿದೆ. ಅನುವಾದಕರಿಗೆ ಬುದ್ಧಿಮತ್ತೆ ತಜ್ಞರು ತರಬೇತಿ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸುವಾಸ್‌ನಲ್ಲಿ ಕನ್ನಡದ ಪದಗಳನ್ನು ಸೇರಿಸುವ ಕೆಲಸ ನಡೆಯುತ್ತಿದೆ. ಇದು ಆರಂಭಿಕ ಹಂತದಲ್ಲಿದೆ ಎಂದು ಹೈಕೋರ್ಟ್ ಕಂಪ್ಯೂಟರ್ ವಿಭಾಗದ ಅಧಿಕಾರಿಗಳು ವಿವರಿಸಿದ್ದಾರೆ.

ಇದನ್ನೂ ಓದಿ :ಪೋಷಕರಿಗೆ ಮಕ್ಕಳನ್ನು ಭೇಟಿ ಮಾಡುವ ಹಕ್ಕು ಕಲ್ಪಿಸುವ ಅಧಿಕಾರ ಮಕ್ಕಳ ಆಯೋಗಕ್ಕಿಲ್ಲ: ಹೈಕೋರ್ಟ್

ABOUT THE AUTHOR

...view details