ಬೆಂಗಳೂರು:ಬ್ಯಾಟರಾಯನಪುರ ಕ್ಷೇತ್ರದ ಹಲವು ಗ್ರಾಮದ ಜನರಿಗೆ 94 ಸಿಸಿ ಅರ್ಜಿಗಳ ಪ್ರಕಾರ ಹಕ್ಕು ಪತ್ರ ನೀಡುವುದು ಸೇರಿ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಸ್ಥಳೀಯ ಶಾಸಕರ ನೇತೃತ್ವದಲ್ಲಿ ನೂರಾರು ಜನರು ಪ್ರತಿಭಟನೆ ನಡೆಸಿದ್ರು.
ಹಕ್ಕುಪತ್ರ ವಿತರಣೆಗೆ ಆಗ್ರಹಿಸಿ ಶಾಸಕ ಕೃಷ್ಣ ಬೈರೇಗೌಡರ ನೇತೃತ್ವದಲ್ಲಿ ಪ್ರತಿಭಟನೆ.. - ಬ್ಯಾಟರಾಯನಪುರ ಕ್ಷೇತ್ರದ ಶಾಸಕ ಕೃಷ್ಣಬೈರೇಗೌಡ
ಬ್ಯಾಟರಾಯನಪುರ ಕ್ಷೇತ್ರದ ಹಲವು ಗ್ರಾಮದ ಜನರಿಗೆ 94 ಸಿಸಿ ಅರ್ಜಿಗಳ ಪ್ರಕಾರ ಹಕ್ಕು ಪತ್ರ ನೀಡಬೇಕು ಎಂದು ಒತ್ತಾಯಿಸಿ ಬೆಂಗಳೂರು ಉತ್ತರ ತಾಲೂಕಿನ ಬೆಳ್ಳಹಳ್ಳಿ ಸರ್ಕಲ್ ಬಳಿ ಪ್ರತಿಭಟನೆ ನಡೆಸಲಾಯ್ತು.

ಬೆಂಗಳೂರು ಉತ್ತರ ತಾಲೂಕಿನ ಬೆಳ್ಳಹಳ್ಳಿ ಸರ್ಕಲ್ ಬಳಿ ಬ್ಯಾಟರಾಯನಪುರ ಕ್ಷೇತ್ರದ ಶಾಸಕ ಕೃಷ್ಣಬೈರೇಗೌಡ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸ್ಥಳೀಯರು ಪ್ರತಿಭಟನೆ ನಡೆಸಿದ್ರು. ನಮ್ಮ ಕ್ಷೇತ್ರದ ಹಲವಾರು ಗ್ರಾಮದ ಜನರು 94 ಸಿಸಿ ಅರ್ಜಿಗಳನ್ನು ಸಲ್ಲಿಸಿದ್ದು, ಅವರಿಗೆ ಹಕ್ಕು ಪತ್ರವನ್ನು ನೀಡಿಲ್ಲ. ಸರ್ಕಾರ ಹಾಗೂ ಬಿಬಿಎಂಪಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿದ್ರು. ತಮ್ಮ ಕ್ಷೇತ್ರದ ಬಿಬಿಎಂಪಿಗೆ ಸೇರುವ ವಾರ್ಡ್ಗಳ ಅಭಿವೃದ್ಧಿಯ ಅನುದಾನವನ್ನು ಕಡಿಮೆ ಮಾಡಲಾಗಿದ್ದು ಏಕೆ? ಬೇರೆ ಕ್ಷೇತ್ರದ ವಾರ್ಡ್ಗಳಿಗೆ ಹೆಚ್ಚು ನಮ್ಮ ಕ್ಷೇತ್ರದ ವಾರ್ಡ್ಗೆ ಕಡಿಮೆ ಅನುದಾನ ಎಂದು ಅಧಿಕಾರಿಗಳಿಗೆ ಶಾಸಕರು ಪ್ರಶ್ನೆಗಳ ಸುರಿಮಳೆಗೈದರು.
ಅದೇ ರೀತಿ ಬಿಬಿಎಂಪಿ ಬೆಳ್ಳಹಳ್ಳಿ ಕಲ್ಲು ಕ್ವಾರಿಯಲ್ಲಿ ಕಸ ಹಾಕುವುದಕ್ಕೆ ಮಾತ್ರ ಈ ಗ್ರಾಮದ ಜಾಗ ಬೇಕು. ಅಭಿವೃದ್ಧಿ ವಿಚಾರದಲ್ಲಿ ಈ ಗ್ರಾಮಗಳು ಬೇಡ ಎಂದು ಬಿಬಿಎಂಪಿ ವಿರುದ್ಧ ಹಾಗೂ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ರು. ಇದೇ ವೇಳೆ ಸ್ಥಳಕ್ಕೆ ಬಂದ ಬಿಬಿಎಂಪಿ ಸ್ಪೆಷಲ್ ಕಮಿಷನರ್ ರಣದೀಪ್ ಅವರು ಸಮಸ್ಯೆಗಳನ್ನು ಆಲಿಸಿದ್ರು. ಹಾಗೇ ಸಮಸ್ಯೆಗಳನ್ನು ನಮ್ಮ ಕಮಿಷನರ್ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದರು. ಇದೇ ವೇಳೆ ಯಲಹಂಕ ತಹಶೀಲ್ದಾರ್ ರಘುಮೂರ್ತಿ ಕೂಡ ಹಕ್ಕು ಪತ್ರಗಳನ್ನು ಪರಿಶೀಲಿಸಿ ಅಕ್ಟೋಬರ್ 15ರವರೆಗೆ ಕಂಪ್ಲೀಟ್ ಮಾಡಿ ನಿಮಗೆ ವರದಿ ನೀಡುತ್ತೇವೆ. ಯಾರು ಫಲಾನುಭವಿಗಳಾಗಿದ್ದಾರೋ ಅವರಿಗೆ ನ್ಯಾಯಯುತವಾಗಿ ಹಕ್ಕುಪತ್ರ ವಿತರಿಸಲಾಗುವುದು ಎಂದು ಭರವಸೆ ನೀಡಿದ್ರು.