ಕರ್ನಾಟಕ

karnataka

By

Published : Jul 5, 2023, 7:06 AM IST

Updated : Jul 5, 2023, 7:22 AM IST

ETV Bharat / state

High Court: ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿ ಖುಲಾಸೆಯಾದ ತಕ್ಷಣ ಪಾಸ್‌ಪೋರ್ಟ್ ಹಿಂದಿರುಗಿಸಬೇಕು: ಹೈಕೋರ್ಟ್

ಕ್ರಿಮಿನಲ್​ ಪ್ರಕರಣದಲ್ಲಿ ಆರೋಪಿಯು ವಿಚಾರಣಾ ನ್ಯಾಯಾಲಯದಿಂದ ಖುಲಾಸೆಯಾದ ನಂತರ ಆತನ ಪಾಸ್​ಪೋರ್ಟ್​ ಮರಳಿಸಬೇಕೆಂದು ಹೈಕೋರ್ಟ್ ತಿಳಿಸಿದೆ.

Etv Bharat
Etv Bharat

ಬೆಂಗಳೂರು:ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿ ವಿಚಾರಣಾ ನ್ಯಾಯಾಲಯದಿಂದ ಖುಲಾಸೆಯಾದ ಬಳಿಕ ಆತನಿಗೆ ಪಾಸ್​​ಪೋರ್ಟ್‌ ಮರಳಿಸಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ. ಕ್ರಿಮಿನಲ್ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಬೆಂಗಳೂರಿನ ಫ್ರಾನ್ಸಿಸ್ ಝೇವಿಯರ್ ಕ್ರಾಸ್ಟೋ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ವಿಚಾರಣೆ ನಡೆಸಿತು.

ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿ ಖುಲಾಸೆಯಾದರೆ, ಅದರ ವಿರುದ್ಧ ಮೇಲ್ಮನವಿ ಸಲ್ಲಿಸುವ ಅವಧಿಯ ಮುಗಿಯುವವರೆಗೆ ಕಾಯದೆ, ಅದೇ ಆಧಾರದ ಮೇಲೆ ವಿಚಾರಣಾ ನ್ಯಾಯಾಲಯ ಪಾಸ್​​ಪೋರ್ಟ್ ತಮ್ಮ ಬಳಿಯೇ ಇಟ್ಟುಕೊಳ್ಳಬಾರದು ಎಂದು ನ್ಯಾಯಪೀಠ ಆದೇಶಿಸಿದೆ.

ಅರ್ಜಿದಾರ ಫ್ರಾನ್ಸಿಸ್ ಝೇವಿಯರ್‌ಗೆ ಪಾಸ್‌ಪೋರ್ಟ್ ಮರಳಿಸುವಂತೆ ಸಂಬಂಧಿಸಿದ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ವಿಚಾರಣಾ ನ್ಯಾಯಾಲಯದ ಆದೇಶವನ್ನು ಪರಿಶೀಲಿಸಿದ ನ್ಯಾಯಪೀಠ, ಪ್ರಕರಣದಲ್ಲಿ ಆರೋಪಿ ಖುಲಾಸೆಯಾಗಿದ್ದಾನೆ. ಆದರೆ ವಿಚಾರಣಾ ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಬಹುದು ಎಂಬ ಕಾರಣಕ್ಕೆ ವಶಪಡಿಸಿಕೊಂಡಿದ್ದ ಪಾಸ್‌ಪೋರ್ಟ್​​ಅನ್ನು ತಮ್ಮ ಬಳಿಯೇ ಇಟ್ಟುಕೊಳ್ಳುವಂತಿಲ್ಲ ಎಂದು ತಿಳಿಸಿದೆ.

ಪ್ರಕರಣದ ಹಿನ್ನೆಲೆ:2015ರಲ್ಲಿ ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್​ ಠಾಣೆಯಲ್ಲಿ ಮುಂಬೈ ಮೂಲದ ಫ್ರಾನ್ಸಿಸ್ ಝೇವಿಯರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಆರೋಪಿಯಾಗಿದ್ದ ಆತನ ಪಾಸ್​​ಪೋರ್ಟ್​ ಅನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯವು ವಶಕ್ಕೆ ಪಡೆದಿತ್ತು. ಬಳಿಕ 2023ರ ಏಪ್ರಿಲ್​ 12ರಂದು ಪ್ರಕರಣದಲ್ಲಿ ಆರೋಪಿಯನ್ನು ನಿರಪರಾಧಿ ಎಂದು ಘೋಷಿಸಿ ಪ್ರಕರಣದಿಂದ ಖುಲಾಸೆಗೊಳಿಸಿತ್ತು. ಆದರೆ, ಖುಲಾಸೆ ನಂತರ ಸಿಆರ್‌ಪಿಸಿ ಸೆಕ್ಷನ್ 452ರ ಪ್ರಕಾರ (ವಶಪಡಿಸಿಕೊಂಡು ವಸ್ತುಗಳನ್ನು ಮರಳಿಸುವುದು) ಪಾಸ್​​ಪೋರ್ಟ್ ಮರಳಿಸಲು ನಿರಾಕರಿಸಿತ್ತು. ಪ್ರಕರಣ ಕುರಿತ ಮೇಲ್ಮನವಿ ಅವಧಿ ಮುಗಿಯುವವರೆಗೆ ಪಾಸ್​​ಪೋರ್ಟ್ ಮರಳಿಸುವುದಿಲ್ಲ ಎಂದು ವಿಚಾರಣಾ ನ್ಯಾಯಾಲಯ ಹೇಳಿತ್ತು. ಈ ಆದೇಶ ಪ್ರಶ್ನಿಸಿದ್ದ ಫ್ರಾನ್ಸಿಸ್ ಹೈಕೋರ್ಟ್ ಮೊರೆ ಹೋಗಿದ್ದರು.

ಇದನ್ನೂ ಓದಿ:ವಿಚ್ಛೇದನ ಅರ್ಜಿಗೆ ಆಕ್ಷೇಪಣೆ ಸಲ್ಲಿಸದ ಕಾರಣ ನೀಡಿ ಅರ್ಜಿ ವಜಾಗೊಳಿಸುವಂತಿಲ್ಲ: ಹೈಕೋರ್ಟ್

ಪ್ರತ್ಯೇಕ ಪ್ರಕರಣ- ಜಿಂಕೆ ಮಾಂಸ ಸೇವನೆ ಪ್ರಕರಣದ ಆರೋಪಿಗಳ ಶಿಕ್ಷೆ ಎತ್ತಿಹಿಡಿದ ಹೈಕೋರ್ಟ್: ಜಿಂಕೆ ಮಾಂಸ ಸೇವನೆ ಪ್ರಯತ್ನದಲ್ಲಿ ನಾಲ್ವರು ಆರೋಪಿಗಳಿಗೆ ವಿಧಿಸಿರುವ ಶಿಕ್ಷೆಯನ್ನು ಹೈಕೋರ್ಟ್ ಎತ್ತಿ ಹಿಡಿಯಿತು. ಅಲ್ಲದೆ, ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಮೂರು ವರ್ಷ ಶಿಕ್ಷೆಯನ್ನು ಕಡಿತಗೊಳಿಸಿ ಆದೇಶಿಸಿದೆ.

ವನ್ಯಜೀವಿ (ಸಂರಕ್ಷಣಾ) ಕಾಯಿದೆ ವಿವಿಧ ಸೆಕ್ಷನ್‌ಗಳ ಅಡಿ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಮೂರು ವರ್ಷಗಳ ಜೈಲು ಶಿಕ್ಷೆ ಪ್ರಶ್ನಿಸಿ ಶಿವಮೊಗ್ಗ ಸೊರಬ ತಾಲೂಕಿನ ನಾಲ್ವರು ಆರೋಪಿಗಳು ಸಲ್ಲಿಸಿದ್ದ ಕ್ರಿಮಿನಲ್ ಮರುಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಜೊತೆಗೆ, ವಶಪಡಿಸಿಕೊಳ್ಳಲಾದ ಮಾಂಸವು ವಾಸ್ತವದಲ್ಲಿ ಜಿಂಕೆಯದ್ದೇ ಅಥವಾ ಇಲ್ಲವೇ ಎಂಬ ವಿವಾದಕ್ಕೆ ಸಂಬಂಧಿಸಿದಂತೆ ಪೀಠವು ಅದು ಕುರಿ ಮಾಂಸವಾಗಿದ್ದರೆ ಆರೋಪಿಗಳು ನಿರ್ಜನ ಪ್ರದೇಶದಲ್ಲಿ ಬೆಂಕಿ ಹಾಕಿ ಬೇಯಿಸುವ ಅಗತ್ಯ ಬೀಳುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟಿತು. ಆರೋಪಿಗಳು 60 ಮತ್ತು 70 ವರ್ಷದವರಾಗಿದ್ದು, ಈವರೆಗೂ ಅನುಭವಿಸಿರುವ ಜೈಲುವಾಸಕ್ಕೆ ಮಿತಿಗೊಳಿಸಿ, ತಲಾ 25 ಸಾವಿರ ರೂ. ದಂಡ ವಿಧಿಸಿ ಆದೇಶಿಸಿತು.

ಪ್ರಕರಣದ ಹಿನ್ನೆಲೆ:ಕೆಲವರು ಪ್ರಾಣಿಯೊಂದನ್ನು ಬೇಟೆಯಾಡಿ ನಿರ್ಜನ ಪ್ರದೇಶದಲ್ಲಿ ಸೇವಿಸಲು ಮುಂದಾಗಿದ್ದಾರೆ ಎಂಬ ಮಾಹಿತಿಯು ಅರಣ್ಯ ಇಲಾಖೆಗೆ ಲಭ್ಯವಾಗಿತ್ತು. ಈ ಮಾಹಿತಿ ಆಧರಿಸಿ ಅಧಿಕಾರಿಗಳು ದಾಳಿ ನಡೆಸಿದ್ದಾಗ ಅರೆಬೆಂದ ಮಾಂಸ, ಪ್ರಾಣಿಯ ತಲೆ ಮತ್ತು ಕೆಲವು ಮೂಳೆಗಳು ಸ್ಥಳದಲ್ಲಿ ಪತ್ತೆಯಾಗಿದ್ದವು ಎಂದು ಆರೋಪ ಪಟ್ಟಿಯಲ್ಲಿ ವಿವರಿಸಲಾಗಿತ್ತು. ಇದನ್ನು ಆಧರಿಸಿ ವಿಚಾರಣಾಧೀನ ನ್ಯಾಯಾಲಯವು ಆರೋಪಿಗಳನ್ನು ದೋಷಿಗಳು ಎಂದು ತಿಳಿಸಿ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.

Last Updated : Jul 5, 2023, 7:22 AM IST

ABOUT THE AUTHOR

...view details