ಕರ್ನಾಟಕ

karnataka

By

Published : Oct 5, 2022, 12:39 PM IST

ETV Bharat / state

ರಾಹುಲ್ ಪಾದಯಾತ್ರೆ ಬಳಿಕ ಸಿದ್ದರಾಮಯ್ಯ ರಥಯಾತ್ರೆ ಪ್ರಾರಂಭ?

ವಿಧಾನಸಭೆ ಚುನಾವಣೆ ಸಮೀಪಸುತ್ತಿದ್ದಂತೇ ಪ್ರತಿಪಕ್ಷ ಕಾಂಗ್ರೆಸ್‌ನಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಆಡಳಿತಾರೂಢ ಬಿಜೆಪಿ ವಿರುದ್ಧ ರಣಕಹಳೆ ಮೊಳಗಿಸಿರುವ ಕಾಂಗ್ರೆಸ್‌, ರಾಜ್ಯದಲ್ಲಿ ಪಕ್ಷದ ಪರ ಕಸರತ್ತು ಆರಂಭಿಸಿದೆ. ಈ ಬೆನ್ನಲ್ಲೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯದಲ್ಲಿ ರಥಯಾತ್ರೆ ನಡೆಸಲು ಚಿಂತನೆ ರೂಪಿಸಿದ್ದಾರೆ.

siddaramaiah
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ತಮ್ಮ ಬಲ ಪ್ರದರ್ಶನ ಹಾಗೂ ನಾಯಕತ್ವ ಸಾಬೀತುಪಡಿಸಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯದಲ್ಲಿ ರಥಯಾತ್ರೆ ನಡೆಸಲು ಚಿಂತನೆ ರೂಪಿಸಿದ್ದಾರೆ.

ಸದ್ಯಕ್ಕೆ ರಾಜ್ಯದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ನಡೆಯುತ್ತಿದ್ದು, ಇದು ರಾಜ್ಯದಿಂದ ತೆರಳಿದ ತಕ್ಷಣವೇ ತಮ್ಮ ರಥಯಾತ್ರೆ ಸಂಬಂಧ ಕಾರ್ಯ ಯೋಜನೆ ರೂಪಿಸಲಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಆಗುವ ಕನಸನ್ನು ಸಾಕಷ್ಟು ನಾಯಕರು ಹೊಂದಿದ್ದು, ಇವರಲ್ಲಿ ಪ್ರತಿಪಕ್ಷ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಸಹ ಮುಂಚೂಣಿಯಲ್ಲಿ ಇದ್ದಾರೆ. ಇವರಿಗೆ ಪ್ರಬಲ ಪ್ರತಿಸ್ಪರ್ಧಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್.

ರಥಯಾತ್ರೆ ಕುರಿತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ

ಡಿಕೆಶಿ ಈಗಾಗಲೇ ಮೇಕೆದಾಟು ಪಾದಯಾತ್ರೆ ನಡೆಸಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದು, ಇದನ್ನು ಮೀರುವ ಮಟ್ಟದಲ್ಲಿ ಹಾಗೂ ಜನಪ್ರಿಯರಾಗಲು ಸಿದ್ದರಾಮಯ್ಯ ಯೋಜನೆ ರೂಪಿಸುತ್ತಿದ್ದಾರೆ. ಈಗಾಗಲೇ ರಾಜ್ಯ ಕಾಂಗ್ರೆಸ್​ನಲ್ಲಿ ತಮ್ಮನ್ನು ಬೆಂಬಲಿಸುವ ಮಾಜಿ ಸಚಿವರು, ಮಾಜಿ ಶಾಸಕರು ಹಾಗೂ ಹಾಲಿ ಶಾಸಕರು ಸೇರಿದಂತೆ ಹಲವು ಮುಖಂಡರ ಜೊತೆ ಸಮಾಲೋಚನೆ ನಡೆಸಿದ್ದಾರೆ. ಅತ್ಯಂತ ವ್ಯವಸ್ಥಿತವಾಗಿ ಯೋಜನೆ ರೂಪಿಸಿ, ಬೆಳಗಾವಿಯಲ್ಲಿ ನಡೆಯುವ ವಿಧಾನಮಂಡಲ ಉಭಯ ಸದನಗಳ ಚಳಿಗಾಲದ ಅಧಿವೇಶನದ ಬಳಿಕ ರಥಯಾತ್ರೆ ನಡೆಸಿ ರಾಜ್ಯ ಸುತ್ತಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.

ಇದನ್ನೂ ಓದಿ:ಭಾರತ್ ಜೋಡೋ ಯಾತ್ರೆಗೆ ಪ್ರತಿತಂತ್ರವಾಗಿ ಬಿಜೆಪಿಯಿಂದ ಬೃಹತ್ ಒಬಿಸಿ ಸಮಾವೇಶ

ಪ್ರತಿಪಕ್ಷ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಆಗಿರುವ ಹಿನ್ನೆಲೆ ಸಾಕಷ್ಟು ಕಾಂಗ್ರೆಸ್ ನಾಯಕರ ಬೆಂಬಲ ಸಿದ್ದರಾಮಯ್ಯನವರಿಗೆ ಇದೆ. ಇದರ ಲಾಭ ಪಡೆದುಕೊಳ್ಳುವ ಮೂಲಕ ತಾವು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಅನಿವಾರ್ಯ ನಾಯಕ ಎನಿಸಿಕೊಳ್ಳಲು ಮುಂದಾಗಿದ್ದಾರೆ. ಸಿದ್ದರಾಮಯ್ಯಗೆ ಸಿಎಂ ಸ್ಥಾನಕ್ಕೆ ಪೈಪೋಟಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನೇರ ಸವಾಲು ಒಡ್ಡುತ್ತಿದ್ದು, ಈಗಾಗಲೇ ಮೇಕೆದಾಟು ಪಾದಯಾತ್ರೆ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಮೂಲ ಕಾಂಗ್ರೆಸ್ಸಿಗರೇ ಆಗಿರುವ ಜೊತೆಗೆ ಹೈಕಮಾಂಡ್ ನಾಯಕರ ಬೆಂಬಲವನ್ನು ಸಹ ಇವರು ಹೊಂದಿದ್ದು, ಅವಕಾಶ ಸಿಕ್ಕರೆ ಸಿದ್ದರಾಮಯ್ಯರನ್ನ ಮೀರಿ ಬೆಳೆಯುವ ಸೂಚನೆ ನೀಡುತ್ತಿದ್ದಾರೆ.

2013ರ ವಿಧಾನಸಭೆ ಚುನಾವಣೆಗೂ ಮುನ್ನ ಯಶಸ್ವಿಯಾಗಿ ಬಳ್ಳಾರಿಗೆ ಪಾದಯಾತ್ರೆ ನಡೆಸಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದಿತ್ತು. ಈ ಪಾದಯಾತ್ರೆಯ ನೇತೃತ್ವವನ್ನು ಸಿದ್ದರಾಮಯ್ಯ ವಹಿಸಿದ್ದರು. ಇದೀಗ ಮತ್ತೊಮ್ಮೆ ಬಿಜೆಪಿ ಸರ್ಕಾರದ ವಿರುದ್ಧ ಜನ ಬೆಂಬಲ ಪಡೆದು ಅಧಿಕಾರಕ್ಕೆ ಬರಲು ರಥಯಾತ್ರೆಯ ಸಿದ್ಧತೆಯನ್ನ ಸಿದ್ದರಾಮಯ್ಯ ಕೈಗೊಂಡಿದ್ದಾರೆ. ಇದು ಯಶಸ್ವಿಯಾದರೆ ಪಕ್ಷ ಅಧಿಕಾರಕ್ಕೆ ಬಂದು ತಮಗೆ ನಿರ್ಣಾಯಕ ಜವಾಬ್ದಾರಿ ಸಿಗಲಿದೆ ಎಂಬ ವಿಶ್ವಾಸ ಸಿದ್ದರಾಮಯ್ಯಗೆ ಇದೆ. ಯಶಸ್ಸಿನ ಆಧಾರದ ಮೇಲೆಯೇ ತಾವು ಉಳಿದೆಲ್ಲ ಸ್ಪರ್ಧಿಗಳಿಗಿಂತ ಸಿಎಂ ಸ್ಥಾನದ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿ ಇರಲು ತಯಾರಿ ನಡೆಸಿದ್ದಾರೆ.

ಇದನ್ನೂ ಓದಿ:ಕಾಂಗ್ರೆಸ್​ ಪೋಸ್ಟರ್ ಹರಿದರೆ ಬಿಜೆಪಿಗರು ತಿರುಗಾಡದಂತೆ ಮಾಡುತ್ತೇವೆ: ಸಿದ್ದು ವಾರ್ನಿಂಗ್

ರಾಜ್ಯದಲ್ಲಿ 21 ದಿನ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಪಾದಯಾತ್ರೆ ನಡೆಯುತ್ತಿದ್ದು, ಇದಾದ ಕೆಲ ದಿನಗಳ ಬಳಿಕ ಬೆಳಗಾವಿಯಲ್ಲಿ ವಿಧಾನ ಮಂಡಲ ಅಧಿವೇಶನ ನಡೆಯಲಿದೆ. ಅದರ ಬಳಿಕ ರಥಯಾತ್ರೆಗೆ ಸಿದ್ಧತೆ ಕೈಗೊಂಡಿರುವ ಸಿದ್ದರಾಮಯ್ಯ, ರಾಜ್ಯ ಸರ್ಕಾರದ ಭ್ರಷ್ಟಾಚಾರ ಹಾಗೂ ಲಂಚ ಬಾಕತನದ ವಿರುದ್ಧ ರಥಯಾತ್ರೆ ನಡೆಸಲು ನಿರ್ಧರಿಸಿದ್ದಾರೆ. ಜನರ ವಿಶ್ವಾಸ ಗಳಿಸುವ ಮೂಲಕ ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಆಡಳಿತ ನಡೆಸುವ ಇಚ್ಛೆ ಅವರದ್ದಾಗಿದೆ. ಅದಕ್ಕಾಗಿ ಈ ರಥಯಾತ್ರೆ ಅವರಿಗೆ ಸಹಕಾರಿಯಾಗಲಿದೆ ಎಂಬ ವಿಶ್ವಾಸದಲ್ಲಿದ್ದಾರೆ.

ಇದನ್ನೂ ಓದಿ:ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ಅಂತರ.. ಬಾಂಧವ್ಯ ಹೆಚ್ಚಿಸಲು ಹಿರಿಯ ಕಾಂಗ್ರೆಸಿಗರ ಪ್ರಯತ್ನ

ಸೆ. 30ಕ್ಕೆ ರಾಜ್ಯಕ್ಕೆ ಆಗಮಿಸಿರುವ ರಾಹುಲ್ ಗಾಂಧಿ 21 ದಿನ ರಾಜ್ಯದಲ್ಲಿ ಪಾದಯಾತ್ರೆ ನಡೆಸಲಿದ್ದು, ಅದಾದ ಬಳಿಕ ರಥಯಾತ್ರೆ ನಡೆಸುವ ಚಿಂತನೆ ಇದೆ. ಅದ್ರೆ, ದಿನಾಂಕ ಇನ್ನೂ ನಿಗದಿಯಾಗಿಲ್ಲ.

ABOUT THE AUTHOR

...view details