ಕರ್ನಾಟಕ

karnataka

By ETV Bharat Karnataka Team

Published : Oct 10, 2023, 12:34 PM IST

Updated : Oct 10, 2023, 8:52 PM IST

ETV Bharat / state

ಶಾಲಾ ಸಮಯ ಬದಲಾವಣೆಗೆ ಆಡಳಿತ ಮಂಡಳಿ-ಪೋಷಕರ ವಿರೋಧ: ಈಗಿರುವ ಶಾಲಾ ಸಮಯ ಮುಂದುವರಿಕೆಗೆ ಮನವಿ

ಶಾಲಾ ಸಮಯ ಬದಲಾವಣೆಗೆ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಮತ್ತು ಪೋಷಕರ ಒಕ್ಕೂಟ ವಿರೋಧ ವ್ಯಕ್ತಪಡಿಸಿವೆ. ಈಗಿರುವ ಶಾಲಾ ಸಮಯ ಮುಂದುವರಿಕೆಗೆ ಮನವಿ ಮಾಡಿವೆ. ಇನ್ನು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ''ಇವರ ಮನವಿಯನ್ನು ಕೊರ್ಟ್​ಗೆ ಮನವರಿಕೆ ಮಾಡಿಕೊಡಲಾಗುವುದು. ಕೋರ್ಟ್ ನಿರ್ಧಾರದಂತೆ ಮುಂದಿನ ಕ್ರಮವಹಿಸಲಾಗುವುದು'' ಎಂದು ತಿಳಿಸಿದ್ದಾರೆ.

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು:ನಗರದ ಸಂಚಾರ ದಟ್ಟಣೆ ನಿವಾರಣೆಗೆ ಶಾಲೆಗಳ ಸಮಯ ಬದಲಾವಣೆ ಮಾಡುವ ಕುರಿತು ಹೈಕೋರ್ಟ್ ನೀಡಿರುವ ಸಲಹೆಯನ್ನು ಒಪ್ಪಿಕೊಳ್ಳಲು ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಹಾಗೂ ಪೋಷಕರ ಒಕ್ಕೂಟ ನಿರಾಕರಿಸಿದ್ದು, ಪ್ರಸ್ತುತ ಇರುವ ಸಮಯವನ್ನೇ ಮುಂದುವರೆಸಬೇಕು ಎನ್ನುವ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿವೆ.

ರಾಜ್ಯ ರಾಜಧಾನಿಯಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಶಾಲಾ ಸಮಯದಲ್ಲಿ ಬದಲಾವಣೆ ಮಾಡುವ ಕುರಿತ ಹೈಕೋರ್ಟ್ ಸಲಹೆ ಮೇರೆಗೆ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಸೋಮವಾರ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ, ಪೋಷಕರ ಒಕ್ಕೂಟ, ಪೊಲೀಸ್ ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದರು. ಸಭೆಯಲ್ಲಿ ಎಲ್ಲರೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸಂಚಾರ ದಟ್ಟಣೆ ಕಾರಣಕ್ಕೆ ಶಾಲೆಗಳ ಸಮಯ ಬದಲಾವಣೆ ಪರ್ಯಾಯ ಮಾರ್ಗವಲ್ಲ ಎನ್ನುವ ಸಲಹೆಯನ್ನು ಶಾಲಾ ಪಾಲುದಾರರು ಸರ್ಕಾರಕ್ಕೆ ತಿಳಿಸಿದರು. ಒಟ್ಟಾರೆ ಶಾಲಾ ಸಮಯ ಬದಲಾವಣೆ ಮಾಡದಂತೆ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಆತಂಕ ವ್ಯಕ್ತಪಡಿಸಿದ ಪೋಷಕರು:ಪೋಷಕರ ಸಂಘಟನೆ ಶಾಲಾ ಸಮಯದ ಬದಲಾವಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿತು. ಪ್ರಾಥಮಿಕ ಶಾಲೆಯ ಮಕ್ಕಳಿಗೆ 9 ರಿಂದ 10ಗಂಟೆ ನಿದ್ದೆ ಅವಶ್ಯವಾಗಿದೆ. ಶಾಲಾ ಸಮಯ ಬದಲಾವಣೆಯಿಂದ ಮಕ್ಕಳ ನಿದ್ದೆ ಮತ್ತು ಆರೋಗ್ಯದ ಮೇಲೆ ಕೆಟ್ಟ ಪರಿಣಾಮವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿತು. ಬಿಎಂಟಿಸಿ ಬಸ್​ಗಳ ವ್ಯವಸ್ಥೆಗೂ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಣ್ಣ ಮಕ್ಕಳ ಸಂಚಾರದ ಸಂದರ್ಭದಲ್ಲಿ ಹೆಚ್ಚಿನ ಜಾಗರೂಕತೆ ಇರಬೇಕಾಗುತ್ತದೆ. ಆದರೆ, ಬಿಎಂಟಿಸಿ ಚಾಲಕರ ಅಜಾಗರೂಕ ಚಾಲನೆಯ ಬಗ್ಗೆ ಈಗಾಗಲೇ ಹಲವು ದೂರುಗಳಿವೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದರು.

ಶಾಲಾ ಒಕ್ಕೂಟವು ಈ ನಿರ್ಧಾರವನ್ನು ವಿರೋಧಿಸಿದೆ. ಟ್ರಾಫಿಕ್ ಪೊಲೀಸರು ಬೆಳಗ್ಗೆ 7ರಿಂದಲೇ ಟ್ರಾಫಿಕ್ ನಿರ್ವಹಣೆ ನಡೆಸಬೇಕು. ನೆರೆಹೊರೆ ಶಾಲೆ, ಪರಿಕಲ್ಪನೆ ಜಾರಿಗೊಳಿಸಬೇಕು. ವಿದ್ಯಾರ್ಥಿಗಳು ಪ್ರವೇಶ ಪಡೆಯುವಾಗಲೇ ಸಮೂಹ ಸಾರಿಗೆ ಸಾರ್ವಜನಿಕ ಸಾರಿಗೆ ಅಥವಾ ಶಾಲಾ ಬಸ್ ಅನ್ನು ಮಾತ್ರ ಬಳಸುತ್ತೇವೆ ಎಂಬ ಮುಚ್ಚಳಿಕೆಯನ್ನು ಶಿಕ್ಷಣ ಸಂಸ್ಥೆಗೆ ನೀಡಬೇಕು ಎಂಬ ಸಲಹೆಯನ್ನು ನೀಡಿದೆ.

ಕೋರಿಕೆ ಮೇರೆಗೆ ಬಸ್ ವ್ಯವಸ್ಥೆ:ಸಭೆಯ ಸಲಹೆಗಳು ನಗರದ ಮುಖ್ಯ ಪ್ರದೇಶಗಳಿಂದ ಶಾಲೆಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವುದು. ಪ್ರತಿ ಐದು ನಿಮಿಷಕ್ಕೆ ಒಂದರಂತೆ ಐದರಿಂದ 10 ಬಸ್ ಒದಗಿಸಿದರೆ, 50ರಿಂದ ಎಪ್ಪತ್ತು ಕಾರುಗಳ ಸಂಚಾರ ಸ್ಥಗಿತವಾಲಿದೆ. ನೆರೆ ಹೊರೆಯ ಶಾಲೆಗಳಲ್ಲೇ ಮಕ್ಕಳಿಗೆ ಪ್ರವೇಶ ಪಡೆಯಲು ಸೂಚನೆ ನೀಡಬೇಕು. ಸಾಧ್ಯವಾದಷ್ಟು ಸಮೂಹ ಸಾರಿಗೆ ಬಳಕೆ ಮಾಡುವುದು ಒಳ್ಳೆಯದು ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಬಿಎಂಟಿಸಿಯಿಂದ ಶಾಲಾ ಮಕ್ಕಳು ಮತ್ತು ಬೋಧಕರಿಗೆ ಅಗತ್ಯ ಪ್ರತ್ಯೇಕ ಬಸ್​ಗಳ ವ್ಯವಸ್ಥೆ ಕಲ್ಪಿಸಲು ಸಿದ್ಧವಿದೆ. ಕೋರಿಕೆ ಮೇರೆಗೆ ಬಸ್ ವ್ಯವಸ್ಥೆ ನೀಡಲಿದ್ದೇವೆ ಎಂದು ಬಿಎಂಟಿಸಿ ಅಧಿಕಾರಿಗಳ ಸಭೆಗೆ ಮಾಹಿತಿ ನೀಡಿದರು.

ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹೇಳಿದ್ದೇನು?:ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ರಿತೇಶ್ ಕುಮಾರ್ ಸಿಂಗ್, ''ಹಾಲಿ ಇರುವ ಶಾಲಾ ಸಮಯವನ್ನೇ ಮುಂದುವರಿಸಬೇಕು ಎನ್ನುವ ಒಮ್ಮತದ ಅಭಿಪ್ರಾಯವನ್ನು ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಮತ್ತು ಪೋಷಕರ ಒಕ್ಕೂಟ ವ್ಯಕ್ತಪಡಿಸಿವೆ. ಸಮಯ ಬದಲಾವಣೆ ಮಾಡದಂತೆ ಮನವಿಯನ್ನು ಮಾಡಿದ್ದು, ಈ ಸಂಬಂಧ ಹೈಕೋರ್ಟಿಗೆ ಮನವರಿಕೆ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಇದನ್ನೇ ನಾವು ಹೈಕೋರ್ಟ್ ಗಮನಕ್ಕೆ ತರುತ್ತೇವೆ. ಹೈಕೋರ್ಟ್​ಗೆ ಎಲ್ಲರ ಅಭಿಪ್ರಾಯದ ವರದಿ ನೀಡುತ್ತೇವೆ. ಎಲ್ಲರ ಸಲಹೆಗಳು ಕೂಡ ಒಂದೇ ರೀತಿಯಾಗಿವೆ. ಟ್ರಾಫಿಕ್ ಪೊಲೀಸ್ ಅಧಿಕಾರಿಗಳ ಜೊತೆಗೂ ಚರ್ಚಿಸಿದ್ದೇವೆ. ಕೋರ್ಟ್ ಏನೂ ಆದೇಶ ಕೊಡುತ್ತದೆಯೋ ಅದನ್ನು ಅನುಸರಿಸುತ್ತೇವೆ'' ಎಂದರು.

ಟ್ರಾಫಿಕ್ ವಾರ್ಡನ್ ನೇಮಿಸುವ ಅಗತ್ಯವಿದೆ:''ವಿದೇಶಗಳಲ್ಲಿ ಸ್ಥಳೀಯವಾಗಿ ಸಂಚಾರ ದಟ್ಟಣೆಯನ್ನು ಟ್ರಾಫಿಕ್ ವಾರ್ಡನ್​ಗಳು ನಿರ್ವಹಣೆ ಮಾಡುತ್ತಾರೆ. ಆ ಮಾದರಿಯಲ್ಲಿಯೇ ಇಲ್ಲಿಯೂ ಯೋಜನೆ ರೂಪಿಸಲು ಪೊಲೀಸ್ ಇಲಾಖೆ ಆಸಕ್ತಿ ತೋರಿದೆ. ಇದಕ್ಕೆ ಪೋಷಕರು ಒಪ್ಪಿಗೆ ಸೂಚಿಸಿದ್ದಾರೆ. ಬೆಂಗಳೂರಿನ ಕೇಂದ್ರ ಭಾಗ ಹಾಗೂ ಇತರ ಸಂಚಾರ ದಟ್ಟಣೆ ಬಡಾವಣೆಗಳಾದ ಸರ್ಜಾಪುರ, ಹೆಬ್ಬಾಳ, ಆಡುಗೋಡಿ ಮತ್ತು ಸಿಲ್ಕ್ ಬೋರ್ಡ್ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಚಾರ ದಟ್ಟಣೆ ಕಂಡು ಬರುತ್ತಿದೆ. ಈ ಸುತ್ತಲಿನ ಶಾಲೆಗಳ ವ್ಯಾಪ್ತಿಯಲ್ಲಿ ಟ್ರಾಫಿಕ್ ವಾರ್ಡನ್ ನೇಮಿಸುವ ಅಗತ್ಯತೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ'' ಎಂದರು.

ಇದನ್ನೂ ಓದಿ:ಜಾತಿ ಸಮೀಕ್ಷೆ ಬಗ್ಗೆ ರಾಜ್ಯ ಸರ್ಕಾರಕ್ಕೆ ಸ್ಪಷ್ಟತೆಯೇ ಇಲ್ಲ, ಸರ್ಕಾರ ತನ್ನ ಸ್ಪಷ್ಟ ನಿಲುವು ಬಹಿರಂಗಪಡಿಸಲಿ: ಮಾಜಿ ಸಿಎಂ ಬೊಮ್ಮಾಯಿ ಸವಾಲು

Last Updated : Oct 10, 2023, 8:52 PM IST

ABOUT THE AUTHOR

...view details